Advertisement

ಬಾವಿಗೆ ಬಿದ್ದ ಕಾಡು ಕೋಣ: 20ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ

06:00 AM May 09, 2018 | Team Udayavani |

ಕೋಟ: ಕಾಡಿನಿಂದ ನಾಡಿಗೆ ಬಂದ ಕಾಡುಕೋಣವೊಂದು ಬಾವಿಗೆ ಬಿದ್ದು ಅನಂತರ ಸತತ 20 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಕೋಟದಲ್ಲಿ ಸೋಮವಾರ ನಡೆಯಿತು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಸಮೀಪದ ಸರಕಾರಿ ಬಾವಿಗೆ  ರವಿವಾರ ರಾತ್ರಿ 10 ಗಂಟೆಗೆ ಕಾಡು ಕೋಣ ಬಿದ್ದಿದ್ದು, ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು ಅವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಆರಂಭಿಸಿದರು.

Advertisement

ಸತತ ಕಾರ್ಯಾಚರಣೆ
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬಂದಿಗಳು ಪಂಪ್‌ಸೆಟ್‌ ಮೂಲಕ ಬಾವಿಯ ನೀರು ಖಾಲಿ ಮಾಡಿ, ಕ್ರೇನ್‌  ತರಿಸಿ ಬಾವಿಗಿಳಿದು ರಕ್ಷಣೆಗೆ ಪ್ರಯತ್ನಿಸಿದರು,  ಈ ಸಂದರ್ಭ ಪ್ರತಿರೋಧ ತೋರಿದ್ದರಿಂದ ರಕ್ಷಣೆ ಅಸಾಧ್ಯವಾಯಿತು. ಮತ್ತೆ ನೀರು ಖಾಲಿ ಮಾಡುವ ಕಾರ್ಯ ಮುಂದುವರಿಯಿತು ಹಾಗೂ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು.

ಅರಿವಳಿಕೆ  ನೀಡಲು ಹರಸಾಹಸ
ಮೊದಲು ಸ್ಥಳೀಯವಾಗಿ ಲಭ್ಯವಿರುವ ಅರಿವಳಿಕೆ ಮದ್ದು  ಪ್ರಯೋಗಿಸಿ ಪ್ರಜ್ಞೆ ತಪ್ಪಿಸಲು ಪ್ರಯತ್ನಿಸಲಾಯಿತು. ನಾಲ್ಕು  ಬಾರಿ ಅರಿವಳಿಕೆ ನೀಡಿದರೂ ಪ್ರಜ್ಞೆ ತಪ್ಪಿಸಲು ಸಾಧ್ಯವಾಗಲಿಲ್ಲ. ಅನಂತರ ಪಿಳಿಕುಳದಿಂದ ತಜ್ಞರನ್ನು ಸ್ಥಳಕ್ಕೆ  ಕರೆಸಿಕೊಂಡು ಕಾರ್ಯಾಚರಣೆ ಆರಂಭಿಸಲಾಯಿತು. ನಾಲ್ಕು ಬಾರಿ ಅರೆವಳಿಕೆ ನೀಡಿದ ಬಳಿಕ ಪ್ರಜ್ಞೆ ತಪ್ಪಿತು.

ಸ್ಥಳೀಯರ ನೆರವು
ಕಾಡುಕೋಣ ಪ್ರಜ್ಞೆ ತಪ್ಪುತ್ತಿದ್ದಂತೆ ಬಾವಿಗಿಳಿದ ಮುಳುಗು ತಜ್ಞ ಮಂಜುನಾಥ ನಾಯ್ಕ ಕೊಡ್ಲಾಡಿ, ಗೋಪಾಲ ಮಡಿವಾಳ, ಸುಧೀರ್‌, ನರಸಿಂಹ ನಾಯ್ಕ   ಬಾವಿಯಿಂದ ಮೇಲೆತ್ತಲು ಸಾಕಷ್ಟು ಶ್ರಮಿಸಿದರು. ಅನಂತರ ಕ್ರೇನ್‌ ಮೂಲಕ ಮೇಲಕ್ಕೆ ತಂದು ಲಾರಿಯಲ್ಲಿ ಸಾಗಿಸಿ ಸ್ಥಳೀಯ ಕಾಡಿಗೆ ಬಿಡಲಾಯಿತು.

ಕಾರ್ಯಾಚರಣೆ ಸಂದರ್ಭ ಕುಂದಾಪುರದ ಸಹಾಯಕ ಅರಣ್ಯಾ ಧಿಕಾರಿ ಅಚ್ಚಪ್ಪ, ಶಂಕರನಾರಾಯಣದ ವಲಯ ಅರಣ್ಯಾ ಧಿಕಾರಿ ಎ.ಎ.ಗೋಪಾಲ, ಅರಣ್ಯ ಇಲಾಖೆಯ ಗೌರವ ಹುದ್ದೆಯಲ್ಲಿರುವ ರವಿರಾಜ್‌ ನಾರಾಯಣ್‌, ಬ್ರಹ್ಮಾವರ ಉಪಅರಣ್ಯಾ ಧಿಕಾರಿ ಜೀವನ್‌ ಶೆಟ್ಟಿ, ಕುಂದಾಪುರದ ಉದಯ, ಅರಣ್ಯ ರಕ್ಷಕರಾದ ದೇವರಾಜ್‌ ಪಾಣ, ಶಿವಪ್ಪ ನಾಯ್ಕ, ಸುರೇಶ್‌, ಮಂಜುನಾಥ ನಾಯ್ಕ, ಮಂಜು, ಪರಶುರಾಮ್‌, ಜೀಪ್‌ ಚಾಲಕ ಸೂರ್ಯ,  ಸ್ಥಳೀಯ ಪಶು ವೈದ್ಯ ಅರುನ್‌ ಕುಮಾರ್‌,  ಕೋಟ ಗ್ರಾ.ಪಂ. ಅಧ್ಯಕ್ಷೆ ವನೀತಾ ಶ್ರೀಧರ ಆಚಾರ್ಯ, ಪಿ.ಡಿ.ಒ.  ಜ್ಯೋತಿಲಕ್ಷ್ಮೀ, ಕಾರ್ಯದರ್ಶಿ ಮಂಜು ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next