Advertisement

ಸುದುದ್ದೇಶಕ್ಕೆ ಸಮಾಜದ ಬೆಂಬಲ ಅಗತ್ಯ

07:29 AM Feb 23, 2019 | |

ಚಿಕ್ಕಬಳ್ಳಾಪುರ: ಸದುದ್ದೇಶಗಳಿಗೆ ಸಮಾಜದ ಸಹಕಾರ ಹಾಗೂ ಬೆಂಬಲ ದೊರೆತಾಗ ಮಾತ್ರ ಸಮಾಜದ ಸ್ವಾಸ್ಥ್ಯವು ಸುಧಾರಿಸುತ್ತದೆ. ಅಲ್ಲದೇ ಸಮಾಜದ ಸ್ವಾಸ್ಥ್ಯ ದೃಢವಾಗಿ ನೆ‌ಲೆಯೂರಿದಾಗ ಸುಭದ್ರ ರಾಷ್ಟ್ರ ನಿರ್ಮಾಣವಾಗುತ್ತದೆಯೆಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್‌.ಹೆಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಶುಕ್ರವಾರ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಅಧೀನ ಸಂಸ್ಥೆಯಾದ ಶ್ರೀ ಸತ್ಯಸಾಯಿ ಆರೋಗ್ಯ ಹಾಗೂ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸಾಯಿ ಶ್ಯೂರ್‌ನ ಬಹುವಿಧದ ಪೌಷ್ಟಿಕಾಂಶ ಪೂರಕ ಆಹಾರವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆರೋಗ್ಯವಂತ ಸಮಾಜಕ್ಕೆ ಅಪೌಷ್ಟಿಕತೆ ದೊಡ್ಡ ಸವಾಲಾಗಿದ್ದು, ಇದರ ನಿರ್ಮೂಲನೆಗೆ ಸರ್ಕಾರಗಳು ಪ್ರಯತ್ನಿಸುತ್ತಿವೆ. ರಾಜ್ಯ ಸರ್ಕಾರ ಕೂಡ ಮಕ್ಕಳ ಹಾಗೂ ಗರ್ಭಿಣಿ ಮಹಿಳೆಯಲ್ಲಿನ ಅಪೌಷ್ಟಿಕತೆಯನ್ನು ತೊಲಗಿಸಲು ಕ್ಷೀರಭಾಗ್ಯ, ಮಾತೃಪೂರ್ಣ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 

ಇಂತಹ ಸಂದರ್ಭದಲ್ಲಿ ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರವರ ಭಕ್ತರು ಬಹುವಿಧದ ಪೌಷ್ಟಿಕತೆವುಳ್ಳ ಆಹಾರವಾಗಿರುವ ಸಾಯಿಶ್ಯೂರ್‌ ಮೂಲಕ ಗರ್ಭಿಣಿ ಮಹಿಳೆಯರಿಗೆ, ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುತ್ತಿರುವುದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿದ್ದು, ಸಾಯಿಬಾಬಾ ಕಾಲದ ನಂತರವು ಅವರ ಭಕ್ತರು ಬಾಬಾರ ಜನ ಸೇವೆಯನ್ನು ಮುಂದುವರಿಸಿರುವುದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ತಜ್ಞರ ಸಲಹೆಯಂತೆ ತಯಾರಿ: ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸಾಯಿಶ್ಯೂರ್‌ ಇದೊಂದು ಬಹುವಿಧದ ಪೌಷ್ಟಿಕಾಂಶ ಪೋಷಣ ಪೂರಕ ಆಹಾರವಾಗಿದ್ದು, ಉಚಿತವಾಗಿಯೇ ಆಯಾ ಅಗತ್ಯವುಳ್ಳ ಮಹಿಳೆಯರಿಗೆ ಹಾಗೂ ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಜಾಗತಿಕ ಆಹಾರ ತಜ್ಞರ ಸಲಹೆಯಂತೆ ತಯಾರಿಸಲಾಗಿರುವ ಪೂರಕ ಆಹಾರವಾಗಿದೆ ಎಂದರು. 

Advertisement

ಉಚಿತವಾಗಿ ದೊರೆಯುವಂತಾಗಲಿ: ಸಾಯಿಶ್ಯೂರ್‌ ಪೌಷ್ಟಿಕ ಆಹಾರವನ್ನು ಸಮಾಜಕ್ಕೆ ಕೊಡ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಸತ್ಯಸಾಯಿ ಶಿಕ್ಷಣ ಮತ್ತು ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ತಾವು ಹಿಂದೆ ಕಂಡ ಕನಸು ಹಾಗೂ ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರ ರವರು ನೀಡಿದ ಆದೇಶ ನನಸಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಾಯಿಶ್ಯೂರ್‌ ಬಹು ಪೌಷ್ಟಿಕ ಆಹಾರವು ಬರುವ ದಿನಗಳಲ್ಲಿ ಅಗತ್ಯವುಳ್ಳ ಎಲ್ಲರಿಗೂ ಉಚಿತವಾಗಿಯೇ ದೊರೆಯುವಂತಾಗಲಿ ಎಂದರು.

ಸಾಯಿಶ್ಯೂರ್‌ ಬಹುಪೌಷ್ಟಿಕ ಆಹಾರದ ಮೂಲ ಶಕ್ತಿಗಳಲ್ಲಿ ಒಬ್ಬರಾದ ಸತೀಶ್‌ ಬಾಬು ಸಮಾರಂಭದಲ್ಲಿ ಅಂಕಿ, ಅಂಶಗಳನ್ನು ನೀಡಿ ಸಾಯಿಶ್ಯೂರ್‌ ಪೌಷ್ಟಿಕ ಆಹಾರದ ಮಹತ್ವ, ಅದು ವಹಿಸುವ ಪಾತ್ರ, ಇದರಿಂದ ಮಕ್ಕಳ ಹಾಗೂ ಮಹಿಳೆಯರಲ್ಲಿ ಉಂಟಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್‌.ಶಿವಣ್ಣರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ರವಿಶಂಕರ್‌, ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ನ ಅಧ್ಯಕ್ಷ  ಬಿ.ಎನ್‌.ನರಸಿಂಹಮೂರ್ತಿ, ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರವರ ಸಂವಹನಕಾರ ಮಧುಸೂಧನ್‌ ನಾಯ್ಡು ಸೇರಿದಂತೆ ಬಾಬಾ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

4 ಜಿಲ್ಲೆಗಲ್ಲಿ 5 ಲಕ್ಷ ಮಕ್ಕಳಿಗೆ ಸಾಯಿಶ್ಯೂರ್‌: ಲೋಕಾರ್ಪಣೆಗೊಂಡ ಬಹುವಿಧಧ ಪೌಷ್ಟಿಕಾಂಶವುಳ್ಳ ಪೂರಕ ಆಹಾರವಾದ ಸಾಯಿಶ್ಯೂರ್‌ನ್ನು ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಕ್ಷೀರಭಾಗ್ಯ ಯೋಜನೆಗೆ ಪೂರಕವಾಗಿ ಶ್ರೀ ಸತ್ಯಸಾಯಿ ಶಿಕ್ಷಣ ಹಾಗೂ ಆರೋಗ್ಯ ಪ್ರತಿಷ್ಠಾನವೂ ರಾಜ್ಯದ ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಹಾಗೂ ಕಲಬುರುಗಿ ಜಿಲ್ಲೆಯ ಸರ್ಕಾರಿ ಶಾಲೆಗಳ 5 ಲಕ್ಷ ಮಕ್ಕಳಿಗೆ ಉಚಿತವಾಗಿ ವಿತರಿಸಲು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ ನಿರ್ಧರಿಸಿದೆ. ಇದೇ ಸಾಂಕೇತಿಕವಾಗಿ ಸಾಯಿಶ್ಯೂರ್‌ನ್ನು ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ  ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ವಿತರಿಸಿದರು.

ವೈದ್ಯರಿಗೆ ಸನ್ಮಾನ:  ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ದಿವ್ಯಮಾತೆ ಹಾಗೂ ಶಿಶು ರಕ್ಷಾ ಆಂದೋಲನದಡಿಯಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವೈದ್ಯರಾದ ವಸಂತಶೆಟ್ಟಿ, ಡಾ.ಆನಂದ್‌, ಸಾಯಿಕುಮಾರ್‌, ಜಯಂತಿ, ಡಾ.ರವಿಶಂಕರ್‌ ಸೇರಿದಂತೆ ಮತ್ತಿತರರನ್ನು ಈ ಸಂದರ್ಭದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು. 

ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ವೈದ್ಯರಾದ ಹೆಲೆನ್‌ ವಿರಚಿತ ಕಂಪ್ಯಾಶನ್‌ ನರ್ಸಿಂಗ್‌ ಕೃತಿಯನ್ನು ಸಚಿವ ಶಿವಶಂಕರರೆಡ್ಡಿ ಲೋಕಾರ್ಪಣೆ ಮಾಡಿದರು. ಕಡೆಯಲ್ಲಿ ಭಗವಾನ್‌ ಬಾಬಾ ರವರ ಸಂವಹನಕಾರ ಮಧುಸೂಧನ್‌ ನಾಯ್ಡು ಬಾಬಾ ರವರ ಸಂದೇಶ ಬಿತ್ತರಿಸಿ ಮಾತೆ, ಮಾತೃಭೂಮಿಯ ಬಗೆಗೆ ಸಮಾಜ ತೋರಬೇಕಾದ ಕಳಕಳಿ ಬಗ್ಗೆ ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next