Advertisement

ಕಲ್ಯಾಣ ಕರ್ನಾಟಕದಿಂದಲೇ ರಾಜ್ಯ ಉನ್ನತಿ

10:53 AM Sep 10, 2019 | Suhan S |

ಕಲಬುರಗಿ: ಹೈದ್ರಾಬಾದ್‌-ಕರ್ನಾಟಕ ಸಂತರು, ಶರಣರ ನಾಡು. ಅವರ ಆಶಯದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಘೋಷಿಸಿದ್ದಾರೆ. ಕರ್ನಾಟಕ ಕಲ್ಯಾಣದಿಂದಲೇ ಕರ್ನಾಟಕದ ಕಲ್ಯಾಣವಾಗಲಿ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹೇಳಿದರು.

Advertisement

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರು, ಸೋಮವಾರ ನಗರದ ವೀರಶೈವ ಕಲ್ಯಾಣ ಮಂಪಟದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ದೇಶಕ್ಕೆ ಒಂದೇ ಸಂವಿಧಾನ, ಒಂದೇ ಬಾವುಟ ಎಂಬ ಸಂದೇಶದೊಂದಿಗೆ ಜಮ್ಮು-ಕಾಶ್ಮೀರಕ್ಕಾಗಿ ಶ್ಯಾಂ ಪ್ರಸಾದ ಮುಖರ್ಜಿ ಹೋರಾಟ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ 370ನೇ ಕಲಂ ತೆಗೆದು ಹಾಕುವ ಮೂಲಕ ಶ್ಯಾಂ ಪ್ರಸಾದ ಮುಖರ್ಜಿ ಹೋರಾಟಕ್ಕೆ ಜಯ ತಂದು ಕೊಟ್ಟಿದ್ದಾರೆ. ಹೈದ್ರಾಬಾದ್‌-ಕರ್ನಾಟಕದ ಕಲ್ಯಾಣಕ್ಕಾಗಿ ಯಡಿಯೂ ರಪ್ಪನವರು ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದ್ದು, ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ದೇಶದ ಪರಿವರ್ತನೆ ಮತ್ತು ದೇಶವನ್ನು ಜಗತ್‌ಗುರು ಮಾಡುವ ವಿಚಾರ ಹೊಂದಿರುವ ಪಕ್ಷ ಬಿಜೆಪಿ. ಅಧಿಕಾರ ನಡೆಸುವುದಕ್ಕೆ ಬಿಜೆಪಿ ಅಲ್ಲ. ಇಂತಹ ದೊಡ್ಡ ವಿಚಾರಧಾರೆಗಳನ್ನು ಬಿಜೆಪಿ ಹೊಂದಿದೆ. ನೆಹರೂ ಸರ್ಕಾರದಲ್ಲಿ ಶ್ಯಾಂ ಪ್ರಸಾದ ಮುಖರ್ಜಿ ಸಚಿವರಾಗಿದ್ದರು. ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಶ್ಯಾಂ ಪ್ರಸಾದ ಅವರು ಖಂಡಿಸಿ ಸಚಿವ ಸ್ಥಾನ ಬಿಟ್ಟು ಬಂದಿದ್ದರು. ಭಾರತೀಯ ಜನ ಸಂಘ ಕಟ್ಟಿದ ಅವರು, ಕಾಶ್ಮೀರಕ್ಕೆ ಹೋಗಿ ಪ್ರಾಣ ತ್ಯಾಗ ಮಾಡಿದರು. ಈಗ ಅವರ ಕನಸನ್ನು ಮೋದಿ ಸರ್ಕಾರ ನನಸು ಮಾಡಿದೆ ಎಂದು ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್‌ ಹೊರಗೂ, ಒಳಗೂ ಅತ್ಯಂತ ಜನಪ್ರಿಯರಾಗಿದ್ದರು. ಇದನ್ನು ಕಾಂಗ್ರೆಸ್‌ ಸಂಸದರೇ ಹೇಳುತ್ತಾರೆ. ಕಮ್ಯುನಿಸ್ಟ್‌ ಸಿದ್ಧಾಂತದ ಸೋಮನಾಥ ಚಟರ್ಜಿ ಸ್ಪೀಕರ್‌ ಸ್ಥಾನದಲ್ಲಿಕೊಂಡು ವಿರೋಧ ಪಕ್ಷದ ನಾಯಕ ವಾಜಪೇಯಿ ಅವರಿಗೆ ನಮಸ್ಕಾರ ಮಾಡುತ್ತಿದ್ದರು. ಅಂತಹ ಗಣ್ಯರನ್ನು ಬಿಜೆಪಿ ಕಂಡಿದೆ. ಬಿಜೆಪಿಯಲ್ಲಿ ನಿಜವಾದ ಪ್ರಜಾಪ್ರಭುತ್ವ ಇದೆ. ನಾನು ಬಿಜೆಪಿಯಲ್ಲಿ ಸಕ್ರಿಯನಾದಾಗ ವೆಂಕಯ್ಯ ನಾಯ್ಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಈಗ ಅನೇಕ ರಾಷ್ಟ್ರಾಧ್ಯಕ್ಷರನ್ನು ಕಂಡಿರುವ ಬಿಜೆಪಿಗೆ ಜೆ.ಪಿ. ನಡ್ಡಾ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಆದರೆ, ನಾನು ಬಿಜೆಪಿ ಸೇರಿದಾಗ ಸೋನಿಯಾ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ನಾನು ರಾಜ್ಯಾಧ್ಯಕ್ಷರಾಗಿದ್ದರೂ ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿದ್ದಾರೆ ಎಂದು ಲೇವಡಿ ಮಾಡಿದರು.

Advertisement

ಕಾರ್ಯಕರ್ತರ ಪ್ರತಿನಿಧಿ: ಬಿಜೆಪಿಯಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತಿದೆ. ನಾನು ಭಜರಂಗ ದಳದಲ್ಲಿದ್ದಾಗ ಪ್ರಖರ ಭಾಷಣ ಮಾಡುತ್ತಿದ್ದೆ. ಇದನ್ನು ಕಂಡ ಬಿಜೆಪಿ ನಾಯಕರು ಪಕ್ಷಕ್ಕೆ ಸೇರಿಕೋ ಎಂದರು. ಸಾಮಾನ್ಯ ಕಾರ್ಯಕರ್ತನಾಗಿ ಬೂತ್‌ಗಳಲ್ಲಿ ಕೆಲಸ ಮಾಡುತ್ತಿದ್ದೆ. ಸಾಮಾನ್ಯ ಕಾರ್ಯಕರ್ತರ ಪ್ರತಿನಿಧಿಯಾಗಿ ನನ್ನನ್ನು ಬಿಜೆಪಿ ರಾಜಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಕಟೀಲು ಹೇಳಿದರು.

ಬಿಜೆಪಿ ಸಂಘಟನಾ ಆಧಾರದಲ್ಲಿ ಬೆಳೆಯುತ್ತಿದೆ. ನನಗೆ ಈ ಮೊದಲು ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಪಕ್ಷ ಸಂಘಟನೆ ಜವಾಬ್ದಾರಿ ಕೊಟ್ಟರು. ಚುನವಾಣೆಗೆ ನಿಲ್ಲಲೂ ಟಿಕೆಟ್ ಕೊಟ್ಟಿದ್ದರು. ಆ ಸಮಯದಲ್ಲಿ ನನ್ನ ಪ್ರತಿಸ್ಪರ್ಧಿ ಜನಾರ್ದನ ಪೂಜಾರಿ ಅವರಿಗೆ ನಾನು ಯಾರೆಂದೇ ಗೊತ್ತಿರಲ್ಲ. ಆದರೆ, ನಮ್ಮ ಕಾರ್ಯಕರ್ತರು ತಾವೇ ನಳಿನಕುಮಾರ ಕಟೀಲು ಎಂದು ಪ್ರಚಾರ ಮಾಡಿದರು. 45 ಸಾವಿರ ಮತಗಳ ಅಂತರದಿಂದ ನನ್ನನ್ನು ಕಾರ್ಯಕರ್ತರು ಗೆಲ್ಲಿಸಿದರು. ಬಿಜೆಪಿ ತನ್ನ ವಿಚಾರಧಾರೆಯಲ್ಲಿ ಎಂದು ರಾಜೀ ಮಾಡಿಕೊಂಡಿಲ್ಲ. ಹೀಗಾಗಿ ಬಿಜೆಪಿ ಸದಸ್ಯರಾಗಲು ಜನರು ಕಾಯುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ, ಮಾಜಿ ಸಂಸ;ದೆ ತೇಜಸ್ವಿನಿ ರಮೇಶಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ನಗರಾಧ್ಯಕ್ಷ,

ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಸಂಸದ ಡಾ| ಉಮೇಶ ಜಾಧವ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಸುನೀಲ ವಲ್ಲಾಪುರೆ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ್‌, ಡಾ| ಅವಿನಾಶ ಜಾಧವ, ಮಾಜಿ ಶಾಸಕರಾದ ಅಮರನಾಥ ಪಾಟೀಲ, ವಾಲ್ಮೀಕಿ ನಾಯ್ಕ, ರವಿ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next