Advertisement

ವಾಹನ ಸಂಚಾರ ಸುಗಮಗೊಳಿಸಲು ವಾರದ ಗಡುವು

03:38 PM Jun 28, 2018 | Team Udayavani |

ಉಪ್ಪಿನಂಗಡಿ : ಪೇಟೆಯಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವುದು ಮಾಡುತ್ತಿದ್ದಾರೆ. ಬ್ಯಾಂಕ್‌ ರಸ್ತೆಯಲ್ಲಿ ವಾಹನ ನಿಲುಗಡೆ ನಿಯಮವನ್ನು ಗಾಳಿಗೆ ತೂರಲಾಗಿದೆ. ವರ್ತಕರೂ ತಮ್ಮ ಅಂಗಡಿಗಳ ಸಾಮಾನು, ಸರಂಜಾಮುಗಳನ್ನು ಗೊತ್ತುಗುರಿ ಇಲ್ಲದೆ ಇಳಿಸುತ್ತಿದ್ದಾರೆ. ಇದನ್ನು ಸರಿಪಡಿಸಲು ಕೆಲವು ನಿರ್ಣಯಗಳನ್ನು ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆ ಅಂಗೀಕರಿಸಿದೆ.

Advertisement

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯರು, ಪೇಟೆಯಲ್ಲಿ ಜನರಿಗೆ ನಡೆದಾಡಲು ಆಗುತ್ತಿಲ್ಲ. ಶಾಲೆ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಹೇಳತೀರದು. ಅಪಘಾತದ ಭೀತಿಯಿಂದಲೇ ನಡೆಯಬೇಕಾಗಿದೆ. ಈ ಹಿಂದೆ ರೂಪಿಸಿದ್ದ ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಮತ್ತೆ ಸಮಸ್ಯೆಯಾಗಿದೆ. ವರ್ತಕರು ಗ್ರಾಹಕರ ಬಗ್ಗೆ ಕನಿಷ್ಠ ಕಾಳಜಿ ವಹಿಸುತ್ತಿಲ್ಲ. ಅಂಗಡಿಗಳ ಸರಂಜಾಮುಗಳು ಚರಂಡಿ ಮೇಲೆ ಬಂದು ನಿಂತಿವೆ. ಅಂಗಡಿಗೆ ಬರುವ ಗ್ರಾಹಕರು ವಾಹನಗಳನ್ನು ಸರಿಯಾಗಿ ನಿಲ್ಲಿಸುವ ಬಗ್ಗೆ ಮಾಹಿತಿ ಕೊಡುವುದಿಲ್ಲ. ವರ್ತಕರು ಜವಾಬ್ದಾರಿ ವಹಿಸಿದರೆ ಪೇಟೆಯ ರಸ್ತೆಯಲ್ಲಿ ಸಮಸ್ಯೆ ಆಗಲಾರದು ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್‌ ರಸ್ತೆಯಲ್ಲಿ ಏಕಮುಖ ಸಂಚಾರ ಮಾಡುವುದು ಮಾತ್ರ ಸಮಸ್ಯೆ ನಿವಾರಣೆಗೆ ದಾರಿ. ವರ್ತಕರೇ ಸಂಚಾರಿ ವ್ಯವಸ್ಥೆ ಸರಿಪಡಿಸಲು ಸಹಕರಿಸಬೇಕು. ಒಂದು ವಾರದೊಳಗೆ ಸರಿಯಾಗದಿದ್ದರೆ ಬ್ಯಾಂಕ್‌ ರಸ್ತೆಯನ್ನು ಏಕಮುಖ ರಸ್ತೆಯಾಗಿ ಘೋಷಿಸುವಂತೆ ಜಿಲ್ಲಾಧಿಕಾರಿಯನ್ನು ಕೋರುವ ನಿರ್ಣಯವನ್ನು ಸದಸ್ಯರು ಅಂಗೀಕರಿಸಿದರು.

ಮಾಹಿತಿಯಿಲ್ಲದೆ ಅಗೆದಿದ್ದಾರೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ವಿಸ್ತರಣೆಗಾಗಿ ಭೂ ಸ್ವಾಧೀನ ಪ್ರಕ್ರಿಯೆಯಿಂದಾಗಿ ರಸ್ತೆ ಪಕ್ಕದಲ್ಲಿದ್ದ ಚರಂಡಿ, ತೋಡುಗಳವನ್ನು ಮುಚ್ಚಲಾಗಿದೆ. ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಕೃತಕ ನೆರೆಭೀತಿ ಕಾಡುತ್ತಿದೆ. ಮನೆ ಹಾಗೂ ತೋಟಗಳಿಗೂ ನೀರು ನುಗ್ಗಿ ಹಾನಿಯುಂಟು ಮಾಡುತ್ತಿದೆ ಎಂಬ ದೂರುಗಳು ಸಭೆಯಲ್ಲಿ ವ್ಯಕ್ತವಾದವು. 

ಚತುಷ್ಪಥ ಕಾಮಗಾರಿ ನಿರ್ವಹಿಸುವ ಅಧಿಕಾರಿಗಳು ಹಾಗೂ ಕಾರ್ಮಿಕರು ಹೊರ ರಾಜ್ಯದವರು. ಅವರಿಗೆ ಸ್ಥಳೀಯ ಮಾಹಿತಿ ಇಲ್ಲ. ಇಲ್ಲಿಯ ಮಳೆಯ ಪ್ರಮಾಣ, ಅದರ ಬಿರುಸಿನ ಬಗ್ಗೆ ಗೊತ್ತಿಲ್ಲ. ತಮಗೆ ತಿಳಿದಂತೆ ಅಗೆದು ಹಾಕಿದ್ದಾರೆ. ಹೀಗಾಗಿ, ಚರಂಡಿಗಳು ಬ್ಲಾಕ್‌ ಆಗಿ ಅಲ್ಲಲ್ಲಿ ಕೆರೆಯಂತಾಗಿದೆ. ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಮಾಹಿತಿ ನೀಡಬೇಕು ಎಂಬ ಸಲಹೆ ವ್ಯಕ್ತವಾಯಿತು.

Advertisement

ಫ್ಲೈಓವರ್‌ಗೆ ಮನವಿ
ಉಪ್ಪಿನಂಗಡಿ ಆದಿತ್ಯ ಹೊಟೇಲ್‌ ಬಳಿಯಿಂದ ನೆಕ್ಕಿಲಾಡಿ ತನಕ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಅಲ್ಲದೆ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ನಿತ್ಯ 4 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇಲ್ಲಿ ಸಂಚರಿಸುತ್ತಾರೆ. ಮುಂದೆ ಚತುಷ್ಪಥ ರಸ್ತೆ ದಾಟುವುದು ಸಮಸ್ಯೆ ಆಗಲಿದೆ. ಅಪಘಾತಗಳೂ ಸಂಭವಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆದಿತ್ಯ ಹೊಟೇಲ್‌ ಬಳಿಯಿಂದ ನೆಕ್ಕಿಲಾಡಿ ತನಕ ಫ್ಲೈಓವರ್‌ ನಿರ್ಮಿಸುವುದು ಒಳಿತು ಎಂದು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಮನವಿ ಮಾಡುವ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ ಮಡಿವಾಳ, ಗೋಪಾಲ ಹೆಗ್ಡೆ, ಯು.ಟಿ. ತೌಸೀಫ್, ಸುರೇಶ್‌ ಅತ್ರಮಜಲು, ಸುನೀಲ್‌ ದಡ್ಡು, ರಮೇಶ್‌ ಭಂಡಾರಿ, ಭಾರತಿ, ಸುಂದರಿ, ಝರೀನಾ ಇಕ್ಬಾಲ್‌ ಮಾತನಾಡಿದರು. ಸದಸ್ಯರಾದ ಉಮೇಶ್‌ ಗೌಡ, ಯೋಗಿನಿ, ಚಂದ್ರಾವತಿ, ಸುಶೀಲಾ, ಚಂದ್ರಾವತಿ ಹೆಗ್ಡೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲ ಅಸಾಫ್ ಸ್ವಾಗತಿಸಿ, ಕಾರ್ಯದರ್ಶಿ ಮರಿಯಮ್ಮ ವಂದಿಸಿದರು.

ಪೊಲೀಸರಿಂದ ಜನಪ್ರತಿನಿಧಿಗಳ ಕಡಗಣನೆ
ಪೊಲೀಸ್‌ ಠಾಣೆಯಲ್ಲಿ ಆಗಾಗ್ಗೆ ಶಾಂತಿ ಸಮಿತಿ ಸಭೆ ಕರೆಯಲಾಗುತ್ತದೆ. ಆದರೆ, ಜಿ.ಪಂ., ತಾಪಂ., ಗ್ರಾ.ಪಂ. ಸದಸ್ಯರನ್ನು ಕರೆಯುತ್ತಿಲ್ಲ. ಪೊಲೀಸರು ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಪೊಲೀಸರು ಅಕ್ರಮ ಮರಳುಗಾರಿಗೆ ನಡೆಸುವವರನ್ನು, ಹಲವು ಕೇಸುಗಳು ದಾಖಲಾಗಿ ಪರಿಚಯ ಇರುವವರನ್ನು, ಅಡ್ಡ ದಂಧೆಯಲ್ಲಿ ತೊಡಗಿದವರನ್ನು ಕರೆಯುತ್ತಾರೆ. ಯಾವುದೋ ಕೆಲಸಕ್ಕೆ ಠಾಣೆಗೆ ಬಂದವರನ್ನು ಸಭೆಯಲ್ಲಿ ಕೂರಿಸಿ, ಸಂಖ್ಯೆ ತೋರಿಸುತ್ತಿದ್ದಾರೆ. ಪೊಲೀಸರು ಮೊದಲು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next