Advertisement

ತೇರದಾಳದಲ್ಲಿ ಉಮಾಶ್ರೀ ಅವರಿಗೆ Congress Ticket ನೀಡಲು ನೇಕಾರ ಮುಖಂಡರ ಒತ್ತಾಯ

07:51 PM Apr 10, 2023 | Team Udayavani |

ಮಹಾಲಿಂಗಪುರ : ಈಗಾಗಲೇ ಚುನಾವಣ ದಿನಾಂಕ ಘೋಷಣೆಯಾಗಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯು ಜೋರಾಗಿ ನೆಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ವತಿಯಿಂದ ಅನೇಕರು ಅರ್ಜಿ ಸಲಿಸಿದ್ದು, ಮಾಜಿ ಸಚಿವೆ ಉಮಾಶ್ರೀ ಮತ್ತೊಂದು ಬಾರಿ ತೇರದಾಳದಿಂದ ಸ್ಪರ್ಧಿಸಬೇಕು. ಅವರಿಗೆ ಟಿಕೆಟ್ ನೀಡಬೇಕೆಂದು ತೇರದಾಳ ಮತಕ್ಷೇತ್ರದ ನೇಕಾರ ಸಮಾಜದ ಮುಖಂಡರು ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಎಐಸಿಸಿ ಮತ್ತು ಕೆಪಿಸಿಸಿ ಮುಖಂಡರುಗಳಿಗೆ ಒತ್ತಾಯಿಸಿದ್ದಾರೆ.

Advertisement

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇರದಾಳ ಮತಕ್ಷೇತ್ರದ ನೇಕಾರ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮಾಜಿ ಸಚಿವೆ ಉಮಾಶ್ರೀ ಅವರು ನೇಕಾರ ಮನೆತನದಲ್ಲಿ ಹುಟ್ಟಿ ಬೆಳೆದು, ಕಲಾವಿದೆಯಾಗಿ ನಾಡಿನಲ್ಲಿ ಹೆಸರು ಮಾಡಿರುತ್ತಾರೆ. ಹಾಗೆ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ರಾಜ್ಯಮಟ್ಟದ ಮಹಿಳಾ ನಾಯಕಿಯರಲ್ಲಿ ಓರ್ವರಾಗಿರುತ್ತಾರೆ. ಇವರು ತೇರದಾಳ ದಿಂದ 2008ರಲ್ಲಿ ಸ್ಪರ್ಧಿಸಿ ಸೋತರು, ಸೋತರೂ ಅಲ್ಲಿಯೇ ವಾಸವಿದ್ದು ಪಕ್ಷ ಸಂಘಟನೆಗಾಗಿ ನಿರಂತರ ಶ್ರಮವಹಿಸಿದರು. 2013ರಲ್ಲಿ ಗೆದ್ದು ಸಚಿವರಾದರು. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿರುತ್ತಾರೆ. ಮುಂದೆ 2018ರಲ್ಲಿ ಮತ್ತೆ ಸೋಲನ್ನು ಅನುಭವಿಸಿದರು.ಈಗ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರಸ್ ಪಕ್ಷದ ವರಿಷ್ಠರು ಟಿಕೆಟ್ ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

ನೇಕಾರ ಸಮುದಾಯದ ಉಮಾಶ್ರೀಯವರು 2001ರಲ್ಲಿ ವಿಧಾನಪರಿಷತ್ ಸದಸ್ಯರಾದಾಗಿನಿಂದ ಇಲ್ಲಿಯವರೆಗೂ ಅಂದರೆ ಸುಮಾರು 2 ದಶಕಗಳ ಕಾಲ ರಾಜ್ಯ ನೇಕಾರರ ಸಮಸ್ಯೆಗಳ ಬಗ್ಗೆ ಸ್ಪಂದಿಸಿರುತ್ತಾರೆ. ವಿದ್ಯುತ್ ಸಬ್ಸಿಡಿ, ನೇಕಾರಿಕೆ ಸಾಲದ ಅಸಲು ಮತ್ತು ಬಡ್ಡಿ ಮನ್ನಾ, ವಸತಿ ಸಾಲ ಮತ್ತು ಬಡ್ಡಿ ಮನ್ನಾ, ಕ್ಷೇತ್ರದಲ್ಲಿ ನೇಕಾರ ಭವನ, ಶ್ರೀ ದೇವರ ದಾಸಿಮಯ್ಯ ಭವನ, ಬನಹಟ್ಟಿ ನೂಲಿನ ಗಿರಣಿ ಅಭಿವೃದ್ಧಿಗೆ ಸಹಾಯ, ಕೈಮಗ್ಗ ನೇಕಾರರಿಗೆ ಹಕ್ಕುಪತ್ರ ಮತ್ತು ಆಸ್ತಿ ಮಾಲಿಕತ್ವದಲ್ಲಿ ಸಹಾಯ, ಸಮುದಾಯ ಭವನಗಳು, ಹೀಗೆ ಹಲವಾರು ಕೆಲಸಗಳನ್ನು ಮಾಡಿರುವುದು ನೇಕಾರ ಸಮುದಾಯಕ್ಕೆ ಇವರ ನಾಯಕತ್ವ ವರದಾನವಾಗಿದೆ ಎಂದರು.

ಇತ್ತಿಚಿಗೆ ಕೆಲವು ಜನರು ತಮ್ಮ ಸ್ವಾರ್ಥಕ್ಕಾಗಿ ನೇಕಾರರ ಒಗ್ಗಟ್ಟು ಒಡೆಯಲು ಹುನ್ನಾರ ನೆಡೆಸಿದ್ದಾರೆ. ನೇಕಾರರಲ್ಲಿ ಹಟಗಾರ, ಕುರುಹಿನಶೆಟ್ಟಿ, ದೇವಾಂಗ, ಸ್ವಕುಳಸಾಲಿ, ಪಟ್ಟಸಾಲಿ, ಪದ್ಮಸಾಲಿ, ಸಾಲಿ, ತೊಗಟವೀರ ಹೀಗೆ ಅನೇಕ ಜಾತಿಯ ಹೆಸರಿನಲ್ಲಿದರೂ ಇವರೆಲ್ಲರೂ ಅನುವಂಶಿಯವಾಗಿ ನೇಕಾರರೇ ಆಗಿರುತ್ತಾರೆ. ಇವೆಲ್ಲ ಜಾತಿ ಜನಾಂಗ ಮಾಡುವ ನೇಕಾರಿಕೆ ವೃತ್ತಿ ಸಮಸ್ಯೆಗಳಿಗೆ ಸರ್ಕಾರದಿಂದ ಕೆಲವೊಂದು ಪರಿಹಾರಗಳನ್ನು, ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಿಸಿರುತ್ತಾರೆ . ನೇಕಾರಿಕೆಯನ್ನು ಆಶ್ರಯಿಸಿ ಇತರೆ ಜಾತಿ ಜನಾಂಗದವರೂ ಪ್ರೀತಿಯಿಂದ ಕಾಣುವ ವ್ಯಕ್ತಿ ಮತ್ತು ಶಕ್ತಿಯಾಗಿದ್ದಾರೆ ನಮ್ಮ ಉಮಾಶ್ರೀ ಅವರು ಎಂದರು.

ಕಾಣದ ಕೈಗಳು ತೇರದಾಳ ಕ್ಷೇತ್ರದಲ್ಲಿ ನಮ್ಮ ನಮ್ಮಲ್ಲೆ ಒಡಕು ಮೂಡಿಸಿ ನೇಕಾರರಿಗೆ ಶಕ್ತಿಯಾಗಿರುವ ಉಮಾಶ್ರೀಯವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಕುತಂತ್ರ ನೆಡೆಸಿದ್ದಾರೆ. ನಮ್ಮ ಸಹೋದರರಂತೆ ಇರುವ ನೇಕಾರ ಜಾತಿಗೆ ಕುಮ್ಮಕ್ಕು ನೀಡಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ತೇರದಾಳ ಮತಕ್ಷೇತ್ರದ ಹಟಗಾರ ಮತ್ತು ಕುರುವಿನಶಟ್ಟಿ ಸಮುದಾಯ ನೇಕಾರರಾದ ನಾವು ಇವರ ನಾಯಕತ್ವವನ್ನು ಮೆಚ್ಚಿ ಅನುಸರಿಸಿರುತ್ತೇವೆ. ಇವರನ್ನು ಕೇವಲ ನೇಕಾರ ಸಮುದಾಯ ಅಷ್ಟೇ ಅಲ್ಲದೇ ಸರ್ವ ಸಮಾಜಗಳು ಸಹ ಗೌರವದಿಂದ ಕಾಣುತ್ತಿವೆ ಎಂದರು.

ಆ ಕಾರಣದಿಂದ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಉಮಾಶ್ರೀಯವರಿಗೇ ಟಿಕೆಟ್ ನೀಡಬೇಕು ಹಟಗಾರ, ಕುರುವಿನಶಟ್ಟಿ, ದೇವಾಂಗ ಎಂಬ ಭೇದವಿಲ್ಲದೇ ದುಡಿಯಬೇಕಾದ ಕ್ಷಣದಲ್ಲಿ ಭೇದ ಸೃಷ್ಠಿಸಿ ಮಾತನಾಡುವುದು ಸರಿಯಾದುದಲ್ಲ ಎಂದು ಸ್ಪಷ್ಟ ಪಡಿಸಲಿಚ್ಚಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೇಕಾರ ಸಮಾಜದ ಮುಖಂಡರು ಚನ್ನವೀರಪ್ಪ ಹಾದಿಮನಿ, ರಾಜೇಂದ್ರ ಬದ್ರನ್ನನವರ, ಬಸವರಾಜ ಗುಡೊಡಗಿ, ದಾನಪ್ಪ ಹುಲಜತ್ತಿ, ರಾಜು ಭಾವಿಕಟ್ಟಿ, ಈಶ್ವರ ಚಮಮಕೇರಿ, ಶೇಖರ ಹಕ್ಕಲದಡ್ಡಿ, ಈರಣ್ನ ಸೊನ್ನದ್, ಕಿರಣ್ ಕರಲಟ್ಟಿ, ಮಹಾಲಿಂಗ ಕಂದಗಲ್, ಪಕ್ಷದ ಮುಖಂಡರಾದ ನೀಲಕಂಠ ಮುತ್ತೂರ, ಚಿದಾನಂದ ಗಾಳಿ, ಸಂಗಪ್ಪ ಉಪ್ಪಲದಿನ್ನಿ, ಬ್ಲಾಕ್ ಅಧ್ಯಕರುಗಳಾದ ಲಕ್ಷಣ್ಮ ದೇಸಾರಟ್ಟಿ ಮತ್ತು ಮಲ್ಲಪ್ಪ ಸಿಂಗಾಡಿ, ಮುಖಂಡರಾದ ಸಂಜೀವ ಜೋತಾವರ, ರಾಜು ಮಟ್ಟಿಕಲಿ, ಗುರುನಾಥ ಬಕರೆ, ಹನುಮಂತ ಬರಗಾಲ, ಬಸವರಾಜ ಶಿಂಧೆ, ಸಾದಾಶಿವ ಗೋಂದಕರ್, ಮಹಾಲಿಂಗ ಮಾಯನ್ನವರ, ರಮೇಶ್ ಸವದಿ, ಶಂಕರ್ ಉಗಾರ, ಪೀಯೂಸ್ ಒಸ್ವಾಲ್, ವಿಠ್ಠಲ ಹೊಸಮನಿ, ತಮ್ಮಣಿ ಜೋಂಗನವರ, ಸಿದರೆಡ್ಡಿ, ಕಾಶಿರಾಯ ನಾಯಕ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next