ಬೆಂಗಳೂರು: ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿದ ಇಂಡಿಗೋ ವಿಮಾನದಲ್ಲಿ ಸೋಮವಾರದಂದು ನಡೆದಿರುವ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.
ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಪತ್ರಕರ್ತೆ ಸುಪ್ರಿಯಾ ಉಣ್ಣಿ ನಾಯರ್ ಮತ್ತು ಆಕೆಯ ವೃದ್ಧೆ ತಾಯಿಯನ್ನು ಅದರ ಪೈಲಟ್ ಜಯಕೃಷ್ಣ ಹಿಗ್ಗಾಮುಗ್ಗಾ ನಿಂದಿಸಿದ್ದಾರೆ. ಮತ್ತು ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಮತ್ತು ಇತರೇ ಸಿಬ್ಬಂದಿ ಮೂಕಪ್ರೇಕ್ಷಕರಾಗಿ ಈ ಘಟನೆಗೆ ಸಾಕ್ಷಿಯಾಗಿದ್ದಾರೆ.
ಇಷ್ಟಕ್ಕೂ ಪೈಲಟ್ ಜಯಕೃಷ್ಣ ಗರಂ ಆಗಲು ಕಾರಣ ಸುಪ್ರಿಯಾ ಅವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಾಯಿಗೆ ವ್ಹೀಲ್ ಚಯರ್ ಸಹಾಯವನ್ನು ಕೇಳಿದ್ದು.
‘ಶಿಷ್ಟಾಚಾರವನ್ನು ನಾವು ನಿಮಗೆ ಕಳಿಸುತ್ತೇವೆ ಮತ್ತು ನಿಮ್ಮನ್ನು ಪೊಲೀಸ್ ವಶಕ್ಕೊಪ್ಪಿಸಿ ಒಂದು ದಿನ ಜೈಲಿನಲ್ಲಿ ಕಳೆಯುವಂತೆ ಮಾಡುತ್ತೇನೆ’ ಎಂದು ಪೈಲಟ್ ಈ ಮಹಿಳಾ ಪ್ರಯಾಣಿಕರ ಮೇಲೆ ಹರಿಹಾಯ್ದಿದ್ದಾನೆ. ಮತ್ತು ಈ ಬೈಗುಳ ಪ್ರಹಸನ ವಿಮಾನದೊಳಗಿನಿಂದ ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ವರೆಗೂ ಮುಂದುವರೆದಿದೆ.
Related Articles
ಇಂಡಿಗೋ ವಿಮಾನ ಸಿಬ್ಬಂದಿಯಿಂದ ತನಗೆ ಮತ್ತು ತನ್ನ ತಾಯಿಗೆ ಆಗಿರುವ ಈ ಭಯಾನಕ ಅನುಭವವನ್ನು ಸುಪ್ರಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂದು ಬೆಳಿಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ.
‘ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ 6ಇ-806 ವಿಮಾನದ ಪೈಲಟ್ ಜಯಕೃಷ್ಣ ಅವರು ಜನವರಿ 13ರಂದು ನನ್ನನ್ನು ಹಾಗೂ 75 ವರ್ಷ ಪ್ರಾಯದ ಮಧುಮೇಹ ಪೀಡಿತ ನನ್ನ ತಾಯಿಯನ್ನು ವಿಮಾನದಿಂದ ಇಳಿಯದಂತೆ ತಡೆದಿದ್ದಾರೆ’ ಎಂದು ಅವರು ದೂರಿದ್ದಾರೆ.
ತನ್ನ ತಾಯಿಗೆ ವ್ಹೀಲ್ ಚಯರ್ ಕೊಡಿಸಲು ಸುಪ್ರಿಯಾ ಅವರು ಪ್ರಾರಂಭದಲ್ಲಿ ಕರೆಗಂಟೆಯನ್ನು ಒತ್ತಿದ್ದಾರೆ ಅದಕ್ಕೆ ಸ್ಪಂದನೆ ಸಿಗದಿದ್ದಾಗ ವಿಮಾನದಲ್ಲಿದ್ದ ಸಹಾಯಕ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ಆದರೆ ಮುಂಚಿತವಾಗಿ ಅನುಮತಿ ಪಡೆಯದಿದ್ದಲ್ಲಿ ಹಾಗೂ ಈ ಕುರಿತಾಗಿ ಟಿಕೆಟ್ ನಲ್ಲಿ ಮುದ್ರಣಗೊಂಡಿರದೇ ಇದ್ದಲ್ಲಿ ವ್ಹೀಲ್ ಚಯರ್ ಒದಗಿಸಲಾಗುವುದಿಲ್ಲ ಎಂದು ಸಿಬ್ಬಂದಿ ಸುಪ್ರಿಯಾ ಅವರಿಗೆ ಮನವರಿಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೈಲಟ್ ಏಕಾಏಕಿ ತನ್ನ ಮೇಲೆ ಹಾಗೂ ನನ್ನ ತಾಯಿಯ ಮೇಲೆ ಎಗರಾಡಿದ್ದಾರೆ ಎಂಬುದು ಸುಪ್ರಿಯಾ ಅವರ ಆರೋಪ. ‘ದಯವಿಟ್ಟು ಕಿರುಚಾಡಬೇಡಿ’ ಎಂದ ಸುಪ್ರಿಯಾ ಹೇಳಿದ ಬಳಿಕ ಇನ್ನಷ್ಟು ಉದ್ರಿಕ್ತಗೊಂಡ ಪೈಲಟ್ ಜಯಕೃಷ್ಣ ‘ನೀವು ಇಲ್ಲಿಂದ ಎಲ್ಲಿಗೂ ಹೋಗುವುದಿಲ್ಲ’, ಎಂದು ಹೇಳಿ ವ್ಹೀಲ್ ಚಯರ್ ತಂದ ಸಹಾಯಕ ಸಿಬ್ಬಂದಿಯನ್ನು ತಡೆದಿದ್ದಾನೆ ಮತ್ತು ‘ನಿಮ್ಮನ್ನು ಒಂದು ದಿನದ ಮಟ್ಟಿಗೆ ಜೈಲಿಗೆ ಕಳುಹಿಸುತ್ತೇನೆ’ ಎಂದು ಬೆದರಿಸಿದ್ದಾನೆ.
‘ನೀವು ನಮ್ಮನ್ನು ಹೀಗೆ ಬೆದಡಿಸುವಂತಿಲ್ಲ’ ಎಂದು ಸುಪ್ರಿಯಾ ಹೇಳಿದಾಗ ಅದಕ್ಕೆ ಪ್ರತಿಯಾಗಿ ಪೈಲಟ್ ‘ಹೌದು, ನಾನು ನಿಮ್ಮನ್ನು ಬೆದರಿಸಬಹುದು. ನಾನು ಕ್ಯಾಪ್ಟನ್. ನೀನು ನಮ್ಮನ್ನು ಮುಟ್ಟುವಂತಿಲ್ಲ’ ಎಂದು ಬೆದರಿಸಿದ್ದಾನೆ ಮಾತ್ರವಲ್ಲದೇ ಈ ಘಟನೆಯ ಕುರಿತಾಗಿ ಎಲ್ಲಿಯೂ ಮಾಹಿತಿ ನೀಡದಂತೆಯೂ ಬೆದರಿಕೆ ಒಡ್ಡಿದ್ದಾನೆ ಎಂದು ಸುಪ್ರಿಯಾ ದೂರಿದ್ದಾರೆ.
ತಮಗಾದ ಅನ್ಯಾಯದ ಕುರಿತಾಗಿ ಸುಪ್ರಿಯಾ ಅವರು ಟ್ವಿಟ್ಟರ್ ನಲ್ಲಿ ಬರೆಯುತ್ತಿದ್ದಂತೆ ಟ್ವೀಟಿಗರು ಅದನ್ನು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಸಚಿವರು ಈ ಘಟನೆಯ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳುವಂತೆ ತನ್ನ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೈಲಟ್ ಜಯಕೃಷ್ಣನ ವರ್ತನೆ ಸ್ವತಃ ಕೆಲವು ಇಂಡಿಗೋ ಸಿಬ್ಬಂದಿಗಳಿಗೂ ಅಚ್ಚರಿಯನ್ನುಂಟು ಮಾಡಿತ್ತು ಎಂಬ ವಿಚಾರವನ್ನು ಸುಪ್ರಿಯಾ ಉಣ್ಣಿ ನಾಯರ್ ಅವರು ಹೇಳಿಕೊಂಡಿದ್ದಾರೆ. ಮತ್ತು ಅವರಲ್ಲಿ ಕೆಲವರು ಇವರ ಕ್ಷಮೆಯನ್ನೂ ಕೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.