Advertisement

Politics: ಗ್ಯಾರಂಟಿ ಟೀಕೆಗಳಿಗೆ ತಲೆಕೆಡಿಸಿಕೊಳ್ಳೆವು: ಸಿಎಂ

11:55 PM Jan 13, 2024 | Team Udayavani |

ರಾಯಚೂರು: ನಮ್ಮ ಸರಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಟೀಕೆಗಳು ಬಂದವು. ಆದರೆ ಅದಕ್ಕೆಲ್ಲ ಕ್ಯಾರೇ ಎನ್ನುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ದೇವದುರ್ಗ ತಾಲೂಕಿನ ತಿಂಥಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಸಾಂಸ್ಕೃತಿಕ ವೈಭವದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಶೋಷಿತ ವರ್ಗದ ಪರವಾಗಿದ್ದೇವೆ. ಜನರಿಗೆ ಖರೀದಿಸುವ ಶಕ್ತಿ ಬರಬೇಕೆಂಬ ಕಾರಣಕ್ಕೆ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.

ಜಾತಿ ಹೆಸರಲ್ಲಿ ವರ್ಗೀಕರಣ ಅಪಾಯ
ಇಂದಿಗೂ ಜಾತಿ ಹೆಸರಿನಲ್ಲಿ ವರ್ಗೀಕರಣ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅಂಥವರ ಬಗ್ಗೆ ಎಲ್ಲರೂ ಎಚ್ಚರಿಕೆ ಯಿಂದ ಇರಬೇಕು. ಈ ಜಾತಿ ವ್ಯವಸ್ಥೆಯನ್ನು ದೇವರು ಮಾಡಿದ್ದಲ್ಲ. ವಿದ್ಯಾವಂತರೇ ತಮ್ಮ ಸ್ವಾರ್ಥಕ್ಕಾಗಿ ಮೇಲು-ಕೀಳು ಎಂಬುದನ್ನೆಲ್ಲ ಸೃಷ್ಟಿಸಿದ್ದಾರೆ. ಜಾತಿಯನ್ನು ಸೃಷ್ಟಿಸಿದವರೇ ಇಂದು ಜಾತಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಹಿಂದುಳಿದ ಸಮಾಜಗಳು ಸಂಘಟನೆಗಾಗಿ ಒಗ್ಗೂಡಿದರೆ ಅದು ಜಾತಿ ಸಮಾವೇಶವಲ್ಲ ಎಂದು ಲೋಹಿಯಾ ಹೇಳಿದ್ದರು. ನೀವೆಲ್ಲ ಸಂವಿಧಾನ ಓದಬೇಕು. ಇತಿಹಾಸ ತಿಳಿದುಕೊಂಡವರು ಮಾತ್ರ ಭವಿಷ್ಯ ರೂಪಿಸಲು ಸಾಧ್ಯ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆದವರು ಮೇಲ್ಜಾತಿಯವ ರಾದರು. ಅನಕ್ಷರಸ್ಥರೇ ಕೆಳವರ್ಗ ದವರಾದರು. ಯಾರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರೋ ಅವರೇ ಶೂದ್ರರಾದರು. ಜಾತಿ ಹೆಸರಲ್ಲಿ ಸಮಾಜ ವಿಂಗಡಣೆ ಮಾಡಿದ್ದನ್ನು ನಾವು ಮರೆಯಬಾರದು. ಹಿಂದೆ ನಾವು ಏನಾಗಿದ್ದೆವು, ಇಂದು ಏನಾಗಿದ್ದೇವೆ, ಮುಂದೆ ಏನಾಗಬೇಕು ಎಂಬುದನ್ನು ತಿಳಿಯದ ಹೊರತು ಅಭಿವೃದ್ಧಿ ಹೊಂದುವುದು ಅಸಾಧ್ಯ. ಕುರುಬ ಸಮಾಜದವರು ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಒತ್ತು ಕೊಡ ಬೇಕು. ಸಂವಿಧಾನದಲ್ಲಿ ಎಲ್ಲರಿಗೂ ಶಿಕ್ಷಣ ಕಡ್ಡಾಯ ಎಂದಿದೆ ಎಂದರು.

ಪೂಜಾರಿಗಳಿಗೆ ಮಾಸಾಶನ ಪರಿಗಣನೆ
ಪೂಜಾರಿಗಳಿಗೆ ಮಾಸಾಶನ ನೀಡುವ ಬೇಡಿಕೆಯಿದ್ದು, ಅದನ್ನು ಪರಿಶೀಲಿಸಲಾಗುವುದು ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಭೋಸರಾಜು, ಶಾಸಕರಾದ ಬಸನಗೌಡ ದದ್ದಲ್‌, ಬಸನಗೌಡ ತುರ್ವಿಹಾಳ ಹಾಗೂ ಪೀಠಾಧಿಪತಿ ಸಿದ್ಧರಾಮಾನಂದ ಸ್ವಾಮೀಜಿ ಸಹಿತ ವಿವಿಧ ಮಠಾ ಧೀಶರು ಪಾಲ್ಗೊಂಡಿದ್ದರು.

Advertisement

ಹೆಲಿಕಾಪ್ಟರ್‌ನಲ್ಲೇ ಸಿಎಂ ಊಟ

ತಿಂಥಿಣಿಯ ಕಾಗಿನೆಲೆ ಕನಕ ಗುರುಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ಉತ್ಸವಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅಲ್ಲಿಂದ ಕೂಡಲಸಂಗಮಕ್ಕೆ ತೆರಳಬೇಕಿತ್ತು. ಮಧ್ಯಾಹ್ನ ತಡವಾಗಿದ್ದರಿಂದ ಹೆಲಿಪಾಡ್‌ನ‌ಲ್ಲಿ ನಿಂತಿದ್ದ ಹೆಲಿಕಾಪ್ಟರ್‌ನಲ್ಲೇ ಊಟ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next