Advertisement

ಭಾರತಕ್ಕೆ ತಾಲಿಬಾನ್‌ ಭೀತಿ

12:12 AM Aug 04, 2021 | Team Udayavani |

ವಿಶ್ವಸಂಸ್ಥೆ: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರರ ಮೇಲುಗೈ ಭಾರತಕ್ಕೆ ಕಳವಳಕಾರಿ ವಿಚಾರ. ಆ ದೇಶದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುವುದೂ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿ ಟಿ.ಎಸ್‌. ತಿರುಮೂರ್ತಿ ಹೇಳಿದ್ದಾರೆ.

Advertisement

ಭಾರತವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಹಾಲಿ ತಿಂಗಳ ಅಧ್ಯಕ್ಷ ಸ್ಥಾನ ವಹಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗ್ರಸ್ತ ರಾಷ್ಟ್ರದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು. ಅದರ ಪರಿಣಾಮ ನೇರವಾಗಿ ಭಾರತಕ್ಕೇ ತಟ್ಟಲಿದೆ. ಸ್ವತಂತ್ರ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಅಫ್ಘಾನಿಸ್ಥಾನ ಸ್ಥಾಪನೆ ಭಾರತಕ್ಕೆ ಆದ್ಯತೆಯ ವಿಚಾರ ಎಂದಿದ್ದಾರೆ.

ಎಲ್ಲ ರೀತಿಯ ನಿಯಮಗಳ ಉಲ್ಲಂಘನೆ ಆ ದೇಶದಲ್ಲಿ ನಿಲ್ಲಬೇಕು ಎಂದು ಪ್ರತಿಪಾದಿಸಿದ ತಿರುಮೂರ್ತಿ, ಮಹಿಳೆಯರು, ಮಕ್ಕಳನ್ನು ಮತ್ತು ಅಲ್ಪಸಂಖ್ಯಾಕರನ್ನು ಗುರಿಯಾಗಿರಿಸಿಕೊಂಡು ಕೊಲ್ಲಲಾಗುತ್ತಿದೆ. ಇಂಥ ಹತ್ಯೆಗಳು ನಿಲ್ಲಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ. 20 ವರ್ಷಗಳಲ್ಲಿ ಅಫ್ಘಾನ್‌ ಸಾಧಿಸಿರುವುದನ್ನು ಈಗ ಕಳೆದುಕೊಳ್ಳುವಂತಾ ಗಬಾರದು ಎಂದೂ ಹೇಳಿದ್ದಾರೆ.

129 ತಾಲಿಬಾನಿಗಳ ಸಾವು: ಮತ್ತೂಂದೆಡೆ, ತಾಲಿಬಾನ್‌ ಉಗ್ರರು ಹಾಗೂ ಅಫ್ಘಾನ್‌ ಸೈನಿಕರ ನಡುವಿನ ಹೋರಾಟ ಮುಂದುವರಿದಿದೆ. ಆ ದೇಶದ ರಕ್ಷಣ ಸಚಿವಾಲಯದ ಸರಣಿ ಟ್ವೀಟ್‌ಗಳ ಪ್ರಕಾರ, ವಿವಿಧ ಭಾಗಗಳಲ್ಲಿ 129 ಉಗ್ರರನ್ನು ಅಫ್ಘಾನ್‌   ಪಡೆ ಸಂಹರಿಸಿದೆ.

ಪಿಒಕೆ ತೆರವುಗೊಳಿಸಿ: ಪಾಕ್‌ಗೆ ಭಾರತ :

Advertisement

ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಿಂದ ಪಾಕಿ ಸ್ಥಾನ ಕೂಡಲೇ ತನ್ನ ನಿಯಂತ್ರಣ ವಾಪಸ್‌ ಪಡೆದುಕೊಳ್ಳಬೇಕು ಎಂದು ತಿರುಮೂರ್ತಿ ಪಾಕಿಸ್ಥಾನ ಸರಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಮಾತುಕತೆ-ಸಂಧಾನಕ್ಕೆ ಸೂಕ್ತ ವಾತಾವರಣ ಸೃಷ್ಟಿಸುವುದು ಇಮ್ರಾನ್‌ ಖಾನ್‌ ಸರಕಾರದ ಆದ್ಯತೆಯಾಗಬೇಕಾಗಿದೆ ಎಂದೂ ಹೇಳಿದ್ದಾರೆ. ಪಾಕಿಸ್ಥಾನದ ಪತ್ರಕರ್ತನೊಬ್ಬನ ಕಿಡಿಗೇಡಿ ಪ್ರಶ್ನೆಗೆ ಉತ್ತರಿಸಿದ ಅವರು, ” ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂಬುದನ್ನು ಪುನರುಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next