Advertisement

ಮಾರುಕಟ್ಟೆ ವ್ಯವಸ್ಥೆ ಜತೆ ಮೂಲ ಸೌಕರ್ಯಗಳೂ ಬೇಕು

07:55 AM May 13, 2020 | mahesh |

ಮಾರುಕಟ್ಟೆ ಹಾಗೂ ಸಕಾಲದಲ್ಲಿ ಆರ್ಥಿಕ ನೆರವಿನ ಕೊರತೆ ಕೃಷಿಕರ ಎಂದಿನ ಸಮಸ್ಯೆಗಳು. ಬ್ಯಾಂಕುಗಳು ಅಗತ್ಯದಷ್ಟು ಸಾಲ ಕೊಟ್ಟರೆ ಕೃಷಿಕರು ಚಕ್ರಬಡ್ಡಿಯ ಲೇವಾದೇವಿದಾರರ ಹಿಂದೆ ಹೋಗುವುದು ತಪ್ಪುತ್ತದೆ. ಹಾಗೆಯೇ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು, ಸಂಘ ಸಂಸ್ಥೆಗಳು ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹಣ ಹೂಡಿದರೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ, ಒಳ್ಳೆಯ ಬೆಲೆ ಹಾಗೂ ಸ್ಥಳೀಯರಿಗೆ ಉದ್ಯೋಗ ಸಾಧ್ಯ. ಅದರಿಂದ ಸ್ಥಳೀಯ ಆರ್ಥಿಕತೆಗೂ ದುಪ್ಪಟ್ಟು ಲಾಭ. ಸರಕಾರ ಈಗಲಾದರೂ ಗಮನಹರಿಸಲಿ.

Advertisement

ಉಡುಪಿ: ಉಡುಪಿ ಜಿಲ್ಲೆಯ ಆರ್ಥಿಕತೆ ಕೃಷಿ ಮತ್ತು ಅದರ ಸಂಬಂಧಿ ವಲಯಗಳಿಂದಲೇ ರೂಪಿತ ವಾದದ್ದು. ಪ್ರಧಾನ ಬೆಳೆ ಭತ್ತದೊಂದಿಗೆ ತೋಟಗಾರಿಕೆ ಬೆಳೆಗಳು, ವಾಣಿಜ್ಯ ಬೆಳೆಗಳನ್ನೂ ಹಲವಾರು ಮಂದಿ ಬೆಳೆಯುತ್ತಿದ್ದಾರೆ. ಇದು ಉಳಿದೆಡೆಗಿಂತ ಕೊಂಚ ಭಿನ್ನ. ಇದರ ಮಧ್ಯೆ ಹಲವಾರು ತರಕಾರಿ ಬೆಳೆಗಾರರಿದ್ದಾರೆ. ಮಲ್ಲಿಗೆ ಬೆಳೆದು ಬದುಕು ಕಟ್ಟಿಕೊಂಡವರೂ ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಕೃಷಿ ಇಲ್ಲಿ ಏಕರೂಪಿಯಲ್ಲ. ಅದರಂತೆಯೇ ಕೃಷಿಕರು, ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯೂ ಅಷ್ಟೇ ವಿಭಿನ್ನ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಸಮಸ್ಯೆ ಇನ್ನೂ ಭಿನ್ನ. ಭತ್ತ ಬೆಳೆ ಪ್ರದೇಶ ಈ ಲೆಕ್ಕದ ಪ್ರಕಾರ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೆ ಕೃಷಿ ಇಲಾಖೆಯವರ ಮಾಹಿತಿ ಪ್ರಕಾರ, ದೊಡ್ಡ ವ್ಯತ್ಯಾಸವಿಲ್ಲ. ಈಗ ಬೆಳೆ ಸಮೀಕ್ಷೆ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದು, ಸರಿಯಾದ ಲೆಕ್ಕ ಸಿಗುತ್ತಿದೆ ಎನ್ನಲಾಗುತ್ತಿದೆ. ಆದರೆ ಇದೇ ಇಲಾಖೆಯ ಪ್ರಕಾರ 2013-14 ರಲ್ಲಿ ಜಿಲ್ಲೆಯಲ್ಲಿ 51 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶಗಳಲ್ಲಿ ಭತ್ತ ಬೆಳೆಯಲಾಗುತ್ತಿತ್ತು. 1998-1999 ರಲ್ಲಿ 69 ಸಾವಿರ ಹೆಕ್ಟೇರ್‌ ಇತ್ತು. ಈಗ ಪ್ರಮಾಣ ಕುಸಿದಿದೆ.

ವಾರ್ಷಿಕ ಸುಮಾರು 24388.5 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗಿನ ಬೆಳೆ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಉದ್ದಿನಕಾಳು, ಹೆಸರುಕಾಳು, ಹುರುಳಿ ಕಾಳು, ನೆಲಗಡಲೆ, ಎಳ್ಳು, ಕಬ್ಬುಗಳು ಇತರೆ ಬೆಳೆಗಳು. ತೋಟಗಾರಿಕೆ ಬೆಳೆಗಳ ಪೈಕಿ ಮಾವು, ಬಾಳೆಹಣ್ಣು, ಅನಾನಸು, ಕಲ್ಲಂಗಡಿ, ಹಲಸು, ಸಪೋಟಾ ಬೆಳೆಯಲಾಗುತ್ತಿದೆ. ತೆಂಗು, ಅಡಿಕೆ, ಗೋಡಂಬಿಯೂ ಸಾಕಷ್ಟು ಪ್ರಮಾಣದಲ್ಲಿದೆ. ಒಟ್ಟು 100 ತೋಟಗಾರಿಕೆ ಬೆಳೆಗಳನ್ನು ಸಮೀಕ್ಷೆ ಮಾಡಲಾಗಿದೆ. ತರಕಾರಿ ಗಳ ಪೈಕಿ ಮಟ್ಟುಗುಳ್ಳ, ಅಲಸಂಡೆ ಇತ್ಯಾದಿ ಹಲವು ಬೆಳೆಗಳಿವೆ. 2019/20ನೇ ಸಾಲಿನ ಬೆಳೆ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಒಟ್ಟು 116 ಹೆಕ್ಟೇರ್‌ (ಉಡುಪಿ 68, ಕುಂದಾಪುರ 3, ಕಾರ್ಕಳ 45 ) ಪ್ರದೇಶದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿದೆ. ಮಣಿಪುರ, ಅಲೆವೂರು, ಶಿರ್ವ, ಕಟಪಾಡಿ, ಕುರ್ಕಾಲು, ಇನ್ನಂಜೆ, ಮುದರಂಗಡಿ, ಎಲ್ಲೂರು, ಮಜೂರು, ಕೋಟೆ ಗ್ರಾ. ಪಂ.ವ್ಯಾಪ್ತಿಯಲ್ಲಿ ಹೆಚ್ಚು. ಇಷ್ಟೆಲ್ಲಾ ವೈವಿಧ್ಯಮಯ ಕೃಷಿ ಇರುವ ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳೇನು ಎಂದರೆ , ಕೃಷಿ ಮೂಲ ಸೌಕರ್ಯಗಳ ಕೊರತೆ (ಯಂತ್ರೋಪಕರಣ ಇತ್ಯಾದಿ), ಮಾರುಕಟ್ಟೆ, ಬೆಲೆಯ ಅಸ್ಥಿರತೆ, ಕಾರ್ಮಿಕರ ಕೊರತೆ, ಸಕಾಲದಲ್ಲಿ ಸಿಗದ ಆರ್ಥಿಕ ನೆರವು, ಸರಕಾರದ ಯೋಜನೆ-ಸೌಲಭ್ಯಗಳ ಅಸಮರ್ಪಕ ಮಾಹಿತಿ ಇತ್ಯಾದಿ.

ತೋಟಗಾರಿಕೆ ಬೆಳೆಗಳಿಗೆ ಪೂರಕವಾದ ವಾತಾವರಣ ವಿದ್ದರೂ ಬೆಳೆಗಾರರು ಹೆಚ್ಚು ತೊಡಗಿಸಿಕೊಳ್ಳದಿರಲು ಕಾರಣವೆಂದರೆ, ಹಣ್ಣು, ತರಕಾರಿಗಳನ್ನು ಕೆಡದಂತೆ ಇಡದಿರಲು ವ್ಯವಸ್ಥೆಯ ಕೊರತೆ, ಸಂಸ್ಕರಣಾ ಘಟಕಗಳ ಕೊರತೆ. ತೆಂಗಿನಕಾಯಿಯನ್ನು ಸಾಕಷ್ಟು ಬೆಳೆದರೂ ಸಂಸ್ಕರಣ ಘಟಕಗಳ ಕೊರತೆಯಿಂದ ಮೌಲ್ಯವರ್ಧನೆ ಆಗುವುದಿಲ್ಲ. ತೆಂಗಿನಕಾಯಿಯನ್ನು ಖರೀದಿಸುವ ಹೊರರಾಜ್ಯಗಳ ಉದ್ದಿಮೆಗಳು ಅವುಗಳ ವಿವಿಧ ಉತ್ನನ್ನಗಳ ಮೂಲಕ ಮೌಲ್ಯ ವರ್ಧಿಸಿ ವಿದೇಶಗಳಿಗೆ ರಫ್ತು ಮಾಡುತ್ತವೆ. ಈ ಕ್ಷೇತ್ರದಲ್ಲಿ ಹೆಚ್ಚು ಅವಕಾಶ ಹಾಗೂ ಉದ್ಯೋಗ
ಸೃಷ್ಟಿ ಸಾಧ್ಯವಿದೆ. ಆದರೆ, ಅದಕ್ಕೆ ಕೃಷಿ ಇಲಾಖೆ, ಜನಪ್ರತಿನಿಧಿಗಳು ಗಮನಹರಿಸಿದ್ದೇ ಕಡಿಮೆ. ಕೃಷಿ ಸಂಸ್ಕರಣಾ ಉತ್ಪನ್ನಗಳ ಘಟಕ ಗಳಿಗೆ ಅವಕಾಶ ನೀಡಿದರೆ, ರೈತರ ಬೆಳೆಗೆ ನಿಜವಾದ ಮೌಲ್ಯ ಸಿಗಲಿದೆ.

ಕೋವಿಡ್ ಲಾಕ್‌ಡೌನ್‌ ಕಾರಣದಿಂದ ತರಕಾರಿ-ಹಣ್ಣು ಬೆಳೆಗಾರರಿಗೆ ಬೆಳೆದ ಉತ್ಪನ್ನಗಳನ್ನು ಏನು ಮಾಡುವುದೆಂದೇ ತಿಳಿಯಲಿಲ್ಲ. ಸಿಕ್ಕಿದ ಬೆಲೆಗೆ ಕೊಟ್ಟು ನಷ್ಟ ಮಾಡಿಕೊಂಡರು. ಇಂಥ ಹೊತ್ತಿನಲ್ಲಿ ಅವುಗಳನ್ನು ಸಂರಕ್ಷಿಸಿಡುವ ವ್ಯವಸ್ಥೆ, ಸಂಸ್ಕರಣಾ ಘಟಕಗಳಿದ್ದರೆ ನಷ್ಟದ ಪ್ರಮಾಣ ತಡೆಯಬಹುದಿತ್ತು. ಇದೇ ಕೊರೊನಾ ಕಲಿಸಿದ ನಿಜವಾದ ಪಾಠ. ಈಗಲಾದರೂ ಜಿಲ್ಲಾಡಳಿತ, ಕೃಷಿ ಇಲಾಖೆ ಅರಿತು ಕ್ರಿಯಾಶೀಲವಾಗಬೇಕು. ಕೊರೊನಾದಿಂದ ಬೆಳೆಗಾರರು ಹೊಂದಿದ್ದ ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳೊಂದಿಗೆ ಸಂಪರ್ಕ ಜಾಲ ಕಡಿದು ಬಿದ್ದಿದೆ. ಆದ ಕಾರಣ ಹಣ್ಣು ಮತ್ತು ತರಕಾರಿ ಬೆಳೆಗಳು ನಿಖರ ಬೆಲೆ ಪಡೆಯುವಲ್ಲಿ ಸೋತವು. ತೋಟಗಾರಿಕೆ ಬೆಳೆಗಳ ಬೆಳೆಯಂತೂ ಕೇಳುವವರಿಲ್ಲ. ಲಾಕ್‌ಡೌನ್‌ ಕಾರಣದಿಂದ ಮಲ್ಲಿಗೆ ಕೃಷಿಕರೂ ನೆಲಕಚ್ಚಿ ಹೋದರು. ಈಗ ಮಳೆಗಾಲಕ್ಕೆ ಹತ್ತಿರವಾಗಿದೆ. ಆದರೆ ಕೃಷಿ ಕಾರ್ಮಿಕರು ತಮ್ಮ ತವರಿಗೆ ತೆರಳಿದ್ದು, ಮುಂಗಾರಿನ ಆರಂಭಕ್ಕೆ ಸಮಸ್ಯೆ ಎನ್ನುವಂತಾಗಿದೆ.

Advertisement

ಇದು ಒಂದು ಬಗೆಯಲ್ಲಾದರೆ, ಕೃಷಿ ಕಾರ್ಮಿಕರ ಕೂಲಿ ದರ ದುಬಾರಿ ಎನಿಸುತ್ತಿದೆ. ರೈತರು ಪಡೆಯುವ ಆದಾಯ ಕಡಿಮೆ ಇದ್ದರೂ ಹೆಚ್ಚು ಕೂಲಿ ಕೊಡುವಂಥ ಪರಿಸ್ಥಿತಿ. ಹಾಗಾಗಿ ನಷ್ಟವೆನಿಸುತ್ತಿದೆ. ಕೃಷಿ ಯಂತ್ರೋಪಕರಣಗಳು ಇಂದಿನ ಕೃಷಿಗೆ ತೀರಾ ಅನಿವಾರ್ಯ. ಹಾಗೆಂದು ಎಲ್ಲ ಕೃಷಿಕರೂ (ಯಾಕೆಂದರೆ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಹೆಚ್ಚು ಇದ್ದಾರೆ) ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಿಲ್ಲ. ಬಾಡಿಗೆ ಟಿಲ್ಲರ್‌ ಮತ್ತಿತರ ಯಂತ್ರೋಪಕರಣಗಳು ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿವೆ. ಸರಿಯಾದ ವ್ಯವಸ್ಥೆ ಇಲ್ಲ. ಕೃಷಿ ಇಲಾಖೆಯ ಸಬ್ಸಿಡಿ ಯಂತ್ರಗಳು ಅರ್ಹ ರೈತರಿಗೆ ಸಿಗುತ್ತಿಲ್ಲ ; ಪ್ರಭಾವಿಗಳು ನೀಡುವ ಪಟ್ಟಿಯ ಫ‌ಲಾನುಭವಿಗಳಿಗೆ ಸಿಗುತ್ತದೆ ಎಂಬ ಆಪಾದನೆ ಇದೆ. ಕೃಷಿ ಇಲಾಖೆ ಮತ್ತು ರೈತರಿಗೆ ನೇರ ಸಂಪರ್ಕ ಸಂಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ.

ಇದಲ್ಲದೆ ಕೃಷಿ ಇಲಾಖೆ ಜಿಲ್ಲೆಗೆ ಅಗತ್ಯವಿದ್ದಷ್ಟು ಟಿಲ್ಲರ್‌, ಕಟಾವು ಯಂತ್ರಗಳನ್ನು ಹೊಂದಿರದ ಕಾರಣ ಖಾಸಗಿಯವರಿಗೆ ಅನುಕೂಲವಾಗಿದೆ. ಖಾಸಗಿಯವ ಅವಲಂಬನೆ ಕೃಷಿ ಉತ್ಪಾದನಾ ವೆಚ್ಚವನ್ನು ಹೆಚ್ಚು ಮಾಡುತ್ತಿದೆ ಎಂಬುದು ಹಲವು ಕೃಷಿಕರ ಅಭಿಪ್ರಾಯ. ಮತ್ತೂಂದು ವಿನೂತನ ಸಮಸ್ಯೆಯೆಂದರೆ ಉಡುಪಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಉಪ್ಪು ನೀರಿನಾಂಶ ಹೆಚ್ಚಿರುವ ಪ್ರದೇಶಗಳೂ ಇವೆ. ಅಲ್ಲಿನ ಮಣ್ಣಿಗೆ ಪೂರಕವಾದ ತಳಿಗಳ ಬೀಜಗಳನ್ನೂ ಇಲಾಖೆ ವಿತರಿಸಬೇಕು. ಎಲ್ಲರಿಗೂ ಒಂದೇ ಬಗೆಯ ಬಿತ್ತನೆ ಬೀಜ ವಿತರಿಸಿದರೆ ಕಷ್ಟ ಎಂಬ ಅಭಿಪ್ರಾಯವೂ ಇದೆ.

ಕೋವಿಡ್ ದ ನೆವದಿಂದ ಸ್ಥಳೀಯ ಉತ್ಪಾದನೆ, ಸೂಕ್ತ ಮಾರುಕಟ್ಟೆ ಹಾಗೂ ಸೂಕ್ತ ಬೆಲೆಯ ವ್ಯಸ್ಥೆ ಜಾರಿಯಾದರೆ ಕೃಷಿ ಆರ್ಥಿಕತೆಯನ್ನು ಹೊಂದಿರುವ ಜಿಲ್ಲೆಯ ಲಾಭ ಉಳಿದ ಉದ್ಯಮಗಳಿಗೂ ಲಭಿಸುತ್ತದೆಂಬುದು ಸ್ಪಷ್ಟ.

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ?
1. ಜಿಲ್ಲೆಯಲ್ಲಿ ಅಧಿಕ ಮಳೆಯ ಕಾರಣದಿಂದ ಮಣ್ಣಿನಲ್ಲಿ ಫ‌ಲವತ್ತತೆ  ಕಡಿಮೆಯಾಗುತ್ತದೆ. ಆದ್ದರಿಂದ ರೈತರು ಕೃಷಿಗೆ ಹೆಚ್ಚಿನ ಹಣ ವ್ಯಯಿಸಬೇಕು. ಹಾಗಾಗಿ ಇತರೆ ಬೆಳೆಗಳಿಗೆ ಎಕ್ರೆಗೆ ಸರಕಾರ 25,000 ರೂ. ಪರಿಹಾರ ನೀಡಬೇಕು.
2. ಕೃಷಿ ಉತ್ಪನ್ನಗಳಿಗೆ ಎಲ್ಲೆಡೆ ಒಂದೇ ಬೆಲೆಯನ್ನು ನಿಗದಿ ಪಡಿಸ ಬೇಕು. ಅದರ ಸಂಪೂರ್ಣ ಲಾಭ ರೈತರಿಗೆ ಸಿಗಬೇಕು.
3. ಜಿಲ್ಲೆಗೆ ಉದ್ಯೋಗಕ್ಕೆ ಬರಲು ಬಯಸುವ ಕಾರ್ಮಿಕರನ್ನು ಕರೆ ತರುವ ಪ್ರಯತ್ನ ನಡೆಯಬೇಕು.
4. ಕೃಷಿ ಉತ್ಪನ್ನಗಳನ್ನು ಅಂತರ್‌ ರಾಜ್ಯ ಹಾಗೂ ಜಿಲ್ಲೆಗಳಿಗೆ ಮಾರಾಟಕ್ಕೆ ಯಾವುದೇ ತೊಂದರೆ ನೀಡಬಾರದು.
5. ಸರಕಾರವು ಮಲ್ಲಿಗೆ ಪರಿಹಾರ ಗಿಡವೊಂದಕ್ಕೆ 500ರೂ. ನಂತೆ ಘೋಷಿಸಬೇಕು.

ಕೃಷಿ ಕಾರ್ಮಿಕರ ಕೊರತೆ ಕಳೆಯಲಿ
ಕೊರೊನಾದಿಂದ ಕೃಷಿ ಹಾಗೂ ತೋಟಗಾರಿಕೆ ಬೆಳೆಯನ್ನು ನಂಬಿಕೊಂಡ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ಒಂದು ತಿಂಗಳೊಳಗಾಗಿ ಬೇಸಾಯ ಪ್ರಾರಂಭವಾಗುತ್ತಿದೆ. ಆದರೆ ಕಾರ್ಮಿಕರ ಕೊರತೆ ಇದೆ. ಅದನ್ನು ಕೂಡಲೇ ಬಗೆಹರಿಸಲು ಸರಕಾರ ಗಮನಿಸಬೇಕು. ಕೃಷಿ ಇನ್ನಷ್ಟು ಲಾಭದಾಯಕವಾಗಿ ಮಾಡಲು ಗಮನಹರಿಸಬೇಕು.
-ರಾಮಕೃಷ್ಣ ಶರ್ಮ. ಬಂಟಕಲ್ಲು, ಅಧ್ಯಕ್ಷರು, ಜಿಲ್ಲಾ ಕೃಷಿಕ ಸಂಘ, ಉಡುಪಿ

ಜಿಲ್ಲೆಯಲ್ಲಿ ಭತ್ತ ಕೃಷಿ (ಹೆಕ್ಟೇರ್‌ಗಳಲ್ಲಿ )
2017-18 - 47,095
2018-19 -  39,157
2019-20 -  38,702

ಮಲ್ಲಿಗೆ ಕೃಷಿ (ಹೆಕ್ಟೇರ್‌ಗಳಲ್ಲಿ )
2017-18 -  214
2018-19-  113
2019-20 -  116

ಮಟ್ಟು ಗುಳ್ಳ (ಹೆಕ್ಟೇರ್‌ಗಳಲ್ಲಿ )
2017-18- 77
2018-19 -90
2019-20 -31

2019-20 ಹಿಂಗಾರಿನದ್ದು ಮಾತ್ರ

ಉದಯವಾಣಿ ಅಧ್ಯಯನ ತಂಡ

Advertisement

Udayavani is now on Telegram. Click here to join our channel and stay updated with the latest news.

Next