Advertisement

“ದುಡಿಮೆಗಾಗಿ ಕುವೈಟ್‌ಗೆ ಬಂದು ಮೋಸ ಹೋದೆವು’!

12:37 AM May 26, 2019 | sudhir |

ಮಂಗಳೂರು: ನಮ್ಮದು ಬಡ ಕುಟುಂಬ. ಕುವೈಟ್‌ನಲ್ಲಿ ಕೆಲಸ ಸಿಕ್ಕಿದರೆ ಕೈ ತುಂಬಾ ಸಂಬಳ ಸಿಗಬಹುದೆಂದು ಮಂಗಳೂರು ಮೂಲದ ಕಂಪೆನಿಯವರೊಬ್ಬರು ನಂಬಿಸಿದ್ದರು. ಅದನ್ನು ನಂಬಿ ಮನೆಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿ ಆ ಹಣದಿಂದ ಇಲ್ಲಿಗೆ ಬಂದು ಈಗ ಕೆಲಸವಿಲ್ಲದೆ ಪರದಾಡುವ ಸ್ಥಿತಿ ಬಂದಿದೆ…

Advertisement

ಕುವೈಟ್‌ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ 35 ಮಂದಿ ಯುವಕರ ತಂಡದ ಬಜಾಲ್‌ ಮೂಲದ ಅಬೂಬಕ್ಕರ್‌ ಸಿದ್ದಿಕ್‌ ನೋವಿದು. “ಉದಯವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿರುವ ಅವರು, ಕುವೈಟ್‌ನಲ್ಲಿ “ಕ್ಯಾರೇಜ್‌’ ಎಂಬ ಆನ್‌ಲೈನ್‌ ಆಹಾರ ಪೂರೈಕೆ ಸಂಸ್ಥೆಯಲ್ಲಿ ಉದ್ಯೋಗಕ್ಕೆಂದು ನಮಗೆ 2018ರ ಸೆ.11ರಂದು ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸಂದರ್ಶನ ನಡೆದಿತ್ತು. ಆಯ್ಕೆಯಾದವರನ್ನು ತಿಂಗಳಲ್ಲಿ ಕುವೈಟ್‌ಗೆ ಕಳುಹಿಸುತ್ತೇವೆ ಎಂದಿದ್ದರು. 2019ರ ಜ.7ರಂದು ವಿಮಾನದ ಮುಖೇನ ಕುವೈಟ್‌ಗೆ ಕಳುಹಿಸಲಾಗಿತ್ತು ಎಂದರು.

ಆದರೆ ಕುವೈಟ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಇನೆಸ್ಕೋ ಎಂಬ ಸಂಸ್ಥೆಯಲ್ಲಿ ಕೆಲಸವಾಗಿದೆ ಎಂದು ನಂಬಿಸಿ, ಪತ್ರಕ್ಕೆ ಸಹಿ ಹಾಕಿಸಲಾಯಿತು. ಇನೆಸ್ಕೋ ಎನ್ನುವುದು ಕ್ಯಾರೇಜ್‌ ಸಂಸ್ಥೆಗೆ ಉದ್ಯೋಗಿಗಳನ್ನು ನೀಡುವ ಹೊರಗುತ್ತಿಗೆ ಸಂಸ್ಥೆಯಾಗಿದ್ದು, ಕೆಲವು ದಿನಗಳ ಬಳಿಕ ಕೆಲಸ ಲಭಿಸಿತ್ತು. ದಿನ ಕಳೆದಂತೆ ಊಟ, ರೂಂ ವ್ಯವಸ್ಥೆ ನಿಲ್ಲಿಸಿ, ಈಗ ಕೆಲವು ತಿಂಗಳಿನಿಂದ ಸಂಬಳ ಕೂಡ ನೀಡಿಲ್ಲ. ಊರಿಗೆ ಬರಲಾರದ ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಕುವೈಟ್‌ನ ಮಹ್‌ಬೌಲಾ ಎಂಬಲ್ಲಿ ಇದ್ದೇವೆ. ಇಲ್ಲಿರುವ ಕನ್ನಡಿಗರು ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇಲ್ಲಿನ ಯಾವುದೇ ಸಂಸ್ಥೆ ಉದ್ಯೋಗ ಕೊಡುತ್ತೇನೆ ಎಂದರೂ ನಾವು ಇಲ್ಲಿರುವುದಿಲ್ಲ. ನಮ್ಮನ್ನು ಊರಿಗೆ ಕರೆ ತರುವ ಪ್ರಯತ್ನವನ್ನು ಮಾಡಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.

ತಾಯ್ನಾಡಿಗೆ ಕರೆಸುವ ಪ್ರಯತ್ನ
ಈ 35 ಮಂದಿ ಯುವಕರನ್ನು ವಿದೇಶಾಂಗ ಸಚಿವಾಲಯದ ಸಹಾಯದಿಂದ ತಾಯ್ನಾಡಿಗೆ ಕರೆತರುವ ಕೆಲಸಗಳು ನಡೆಯುತ್ತಿದೆ.ಕುವೈಟ್‌ನಲ್ಲಿ ಸಂಕಷ್ಟದಲ್ಲಿದ್ದೇವೆ, ನೆರವಾಗಿ ಎಂದು ಮಂಗಳೂರು ಮೂಲದ ಯುವಕರು ಶುಕ್ರವಾರ ವಿಡಿಯೋವೊಂದರಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅವರಿಗೆ ಮನವಿ ಮಾಡಿದ್ದರು. ಆದರೆ ಯುವಕರು ಕುವೈಟ್‌ನ ಯಾವ ಪ್ರದೇಶದಲ್ಲಿದ್ದಾರೆ ಎಂಬ ಮಾಹಿತಿ ಇರಲಿಲ್ಲ.

Advertisement

ಶಾಸಕರು ಕುವೈಟ್‌ ಭಾರತೀಯ ಪ್ರವಾಸಿ ಪರಿಷತ್‌ ಪ್ರಮುಖರಾದ ರಾಜ್‌ ಭಂಡಾರಿ ಅವರನ್ನು ಸಂಪರ್ಕಿಸಿದ್ದು, ವಿಡಿಯೋ ವೈರಲ್‌ ಆದ ಎರಡು ಗಂಟೆ ಯೊಳಗೆ ಯುವಕರನ್ನು ಸಂಪರ್ಕಿಸುವ ಕೆಲಸ ಮಾಡಿದ್ದಾರೆ. ಯುವಕರ ಜತೆ ಮಾತನಾಡಿ ದೈರ್ಯ ತುಂಬಿದ್ದಾರೆ.

ಈ ಯುವಕರಿಗೆ ವೀಸಾ, ಪಾಸ್‌ಪೋರ್ಟ್‌ ಸಹಿತ ಉದ್ಯೋಗ ಪತ್ರಗಳನ್ನು ಒಂದೇ ಕಂಪೆನಿ ನೀಡದೆ, ಬೇರೆ ಬೇರೆ ಕಂಪೆನಿಗಳು ನೀಡಿವೆ. ಈಗ ದಾಖಲೆಗಳನ್ನು ಒಟ್ಟುಗೂಡಿಸುವ ಕೆಲಸ ನಡೆಯುತ್ತಿದೆ. ಸದ್ಯ 35 ಮಂದಿಯ ಪಾಸ್‌ಪೋರ್ಟ್‌ ಮಾಹಿತಿ ದೊರಕಿದ್ದು, ಇದರ ಜೆರಾಕ್ಸ್‌ ಪ್ರತಿಯನ್ನು ಸಂಸದರಾದ ನಳಿನ್‌, ಸದಾನಂದ ಗೌಡರ ಮುಖಾಂತರ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಮತ್ತೂಂದು ಪ್ರತಿಯನ್ನು ಶಾಸಕರು ನೇರವಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಿ, ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಕುವೈಟ್‌‌ ಕನ್ನಡಿಗರಿಂದ ಸಹಾಯ
ಯುವಕರಿಗೆ ರಾಜ್‌ ಭಂಡಾರಿ ಸೇರಿದಂತೆ ಮತ್ತಿತರ ಕನ್ನಡಿಗರು ಸಹಾಯ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲದ್ದರಿಂದ ಭಾರತಕ್ಕೆ ಕರೆತರಲು ಕೆಲವು ದಿನ ತಗುಲಬಹುದು. ಅಲ್ಲಿಯವರೆಗೆ ಸೂರು ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಸಹಕಾರ ನೀಡಲು ಸಿದ್ಧ: ಖಾದರ್‌
ಸಚಿವ ಖಾದರ್‌ ಪ್ರತಿಕ್ರಿಯಿಸಿ, ವೀಡಿಯೋದಲ್ಲಿರುವವರು ಶಾಸಕ ಕಾಮತ್‌ ನೆರವನ್ನು ಯಾಚಿಸಿದ್ದಾರೆ. ಈ ಬಗ್ಗೆ ಕಾಮತ್‌ ಅವರನ್ನು ಸಂಪರ್ಕಿಸಿ, ನೆರವು ನೀಡಲು ಸಿದ್ಧ ಎಂದು ತಿಳಿಸಿದ್ದೇನೆ ಎಂದಿದ್ದಾರೆ. ಯುವಕರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವಾಗ ಎಚ್ಚರಿಕೆಯಿಂದ ಇರಬೇಕು. ಏಜೆನ್ಸಿ ಪೂರ್ವಾಪರ ತಿಳಿಯಬೇಕು ಎಂದವರು ಸಲಹೆ ಮಾಡಿದ್ದಾರೆ.

“ಕುವೈಟ್‌ ಎಂಬೆಸಿಯಿಂದ ಮಾಹಿತಿ ಪಡೆದು ಕ್ರಮ’
ಮಂಗಳೂರು: ಉದ್ಯೋಗ ನಿಮಿತ್ತ ಕುವೈಟ್‌ಗೆ ತೆರಳಿ ಅಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ ಎನ್ನಲಾದವರ ಬಗ್ಗೆ ವಿದೇಶಾಂಗ ಇಲಾಖೆಯ ಮೂಲಕ ಕುವೈಟ್‌ ಎಂಬೆಸಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗು
ವುದು ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ವೀಡಿಯೋ ಒಂದು ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದರ ಸತ್ಯಾಸತ್ಯತೆ ಬಗ್ಗೆ ತಿಳಿಯಬೇಕಾಗಿದೆ. ಕುವೈಟ್‌ ಎಂಬೆಸಿಯನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲು ಯತ್ನ ನಡೆದಿದೆ. ಈ ಯುವಕರನ್ನು ತಲಾ 65,000 ರೂ. ನಂತೆ ಹಣ ಪಡೆದು ಕುವೈಟ್‌ಗೆ ಕಳುಹಿಸಿದ ಪ್ಲೇಸ್‌ಮೆಂಟ್‌ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಕ್ರಮ ಜರಗಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ದಾಖಲೆ ನೀಡಲಾಗಿದೆ
ಯುವಕರ ಜತೆ ನಾನು ಮಾತನಾಡಿದ್ದೇನೆ. ಪ್ರತಿಯೊಬ್ಬರೂ ಸುರಕ್ಷಿತವಾಗಿದ್ದಾರೆ. ಭಾರತೀಯ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದು, ಅಗತ್ಯ ದಾಖಲೆಗಳನ್ನು ನೀಡಲಾಗಿದೆ. ಶೀಘ್ರವೇ ಅವರು ತಾಯ್ನಾಡಿಗೆ ಮರಳುತ್ತಾರೆ.
– ಡಿ. ವೇದವ್ಯಾಸ ಕಾಮತ್‌, ಶಾಸಕರು

ಇದೊಂದು ಗಂಭೀರವಾದ ಸಮಸ್ಯೆ, ಶಾಸಕರು, ಸಂಸದರು ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದು ಸೂಕ್ತ. ಯುವಕರನ್ನು ಭೇಟಿಯಾಗಿದ್ದು, ಶಾಸಕ ಕಾಮತ್‌ ಅವರಿಗೆ ಮಾಹಿತಿ ನೀಡಿದ್ದೇನೆ. ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವವರು ಕಂಪೆನಿಗಳ ಪೂರ್ವಾಪರ ವಿಚಾರಿಸಿಕೊಳ್ಳುವುದು ಮುಖ್ಯ.
– ಎಂ. ಮೋಹನ್‌ದಾಸ್‌ ಕಾಮತ್‌
ಕುವೈಟ್‌ನ ಮಂಗಳೂರು ಮೂಲದ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next