Advertisement

ನಕ್ಸಲರ ಬಂದೂಕಲ್ಲಿ ಗೂಡು ಕಟ್ಟುತ್ತೇವೆ

11:25 AM Feb 03, 2018 | Team Udayavani |

ಧಾರವಾಡ: ಬಲಪಂಥೀಯ ರಾಷ್ಟ್ರೀಯವಾದಿಗಳ ಹತ್ಯೆಗಾಗಿ ಕೆಂಪು ಉಗ್ರರು ಹೊರ ತೆಗೆದ ಬಂದೂಕಿನ ನಳಿಕೆಯಲ್ಲಿ ಭಾರತಮಾತೆಯ ಗುಬ್ಬಿ ಗೂಡುಗಳನ್ನು ಕಟ್ಟುವ ಮೂಲಕ ಎಬಿವಿಪಿ ಅವರಿಗೆ ತಕ್ಕ ಉತ್ತರ ನೀಡಲಿದೆ ಎಂದು ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ|ಬಿ.ವಿ. ವಸಂತಕುಮಾರ್‌ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ನ 37ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಬಿವಿಪಿ ದೇಶವನ್ನು ಕಟ್ಟುವುದಕ್ಕಾಗಿ ಬೆಳೆದು ಬಂದ
ಸಂಘಟನೆ. ಇದು ಕೇವಲ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಮಾತ್ರ ಹೋರಾಟ ಮಾಡುತ್ತಿಲ್ಲ. ಬದಲಿಗೆ ಈ ದೇಶದ ಅಭಿವೃದ್ಧಿಗೆ, ಯುವ ಶಕ್ತಿಯನ್ನು ಜಾಗೃತಗೊಳಿಸಲು ಕೂಡ ಕೆಲಸ ಮಾಡಿಕೊಂಡು ಬಂದಿದೆ. ಆದರೆ ಕೆಲವರು ಈ ಸಂಘಟನೆ ಹೆಸರಿಗೆ ವಿನಾಕಾರಣ ಮಸಿ ಬಳಿಯುತ್ತಿದ್ದಾರೆ ಎಂದು ಆರೋಪಿಸಿದರು. 

ಅದರಲ್ಲೂ ಎಡಪಂಥೀಯರು ಎಬಿವಿಪಿಯನ್ನೇ ಗುರಿಯಾಗಿಸಿ ಆರೋಪಗಳನ್ನು ಮಾಡುತ್ತಿದ್ದಾರೆ. ಅಷ್ಟೇಯಲ್ಲ, ಕೇರಳ, ಕರ್ನಾಟಕ ಸೇರಿ ಅನೇಕ ಕಡೆಗಳಲ್ಲಿ ಈ ಸಂಘಟನೆಯ ಕಾರ್ಯಕರ್ತರನ್ನು ಕೊಲೆ ಕೂಡ ಮಾಡುತ್ತಿದ್ದಾರೆ. ಆದರೆ ಎಬಿವಿಪಿ ಇದಕ್ಕೆ ಅಂಜುವುದಿಲ್ಲ. ಕೆಂಪು ಉಗ್ರರು ಹಿಡಿದಿರುವ ಬಂದೂಕಿನ ನಳಿಕೆಯಲ್ಲಿ ಭಾರತಮಾತೆ ಎಂಬ ಪುಟ್ಟ ಗೂಡುಗಳನ್ನು ಕಟ್ಟಿ ಅವರಿಗೆ
ದಿಟ್ಟ ಉತ್ತರವನ್ನು ಕೊಡುತ್ತೇವೆ ಎಂದು ಹೇಳಿದರು. ಕರ್ನಾಟಕದಲ್ಲಿ ಜಾತಿ-ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆದು ಆಳುವ ನೀತಿಯನ್ನು ಇಲ್ಲಿನ ಸರ್ಕಾರ ಮಾಡುತ್ತಿದೆ. ಆದರೆ ಇದು ಬಹಳ ದಿನ ನಡೆಯುವದಿಲ್ಲ. ಇದಕ್ಕೆ ಮುಂಬರುವ ದಿನಗಳಲ್ಲಿ ಎಬಿವಿಪಿ ಮತ್ತು ಸಂಘ ಪರಿವಾರ ತಕ್ಕ ಉತ್ತರ ನೀಡುತ್ತದೆ ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್‌ ಅಂಬೇಕರ್‌, ಕರ್ನಾಟಕ ಶತಮಾನಗಳಿಂದಲೂ ಸಾಹಿತ್ಯ, ಸಂಗೀತ, ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸಿ ಹೆಸರು ಪಡೆದಿರುವ ನಾಡು. ಆದರೆ ಇಲ್ಲಿನ ವಿಚಾರವಾದಿಗಳು ಇದೀಗ ಹಿಂದೂಗಳನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ವಿನಾಕಾರಣ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. 
ಅಧಿಕಾರಕ್ಕಾಗಿ ಧರ್ಮವನ್ನು ಒಡೆದು ಆಳುವ ಪ್ರಯತ್ನಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಎಲ್ಲರೂ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

ಜೈಪುರ ಎಂಎನ್‌ಐಟಿ ನಿರ್ದೇಶಕ ಪ್ರೊ|ಉದಯಕುಮಾರ ಯರಗಟ್ಟಿ, ಎಬಿವಿಪಿ ರಾಜ್ಯಾಧ್ಯಕ್ಷ ಡಾ|ಅಲ್ಲಮಪ್ರಭು ಗುಡ್ಡ, ಪ್ರ. ಕಾರ್ಯದರ್ಶಿ ರಾಜೇಶ ಗುರಾಣಿ ಸೇರಿ ಪ್ರಾಂತೀಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಚ್ಚುಕಟ್ಟು ವ್ಯವಸ್ಥೆ ಎಬಿವಿಪಿ 37ನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಕಲಾಭವನ ಮೈದಾನವನ್ನು
ಅಚ್ಚುಕಟ್ಟಾಗಿ ಶೃಂಗರಿಸಲಾಗಿದ್ದು, ಕಲಾಭವನದ ಎದುರಿಗೆ ಎಬಿವಿಪಿ ಧ್ವಜಾರೋಹಣ ಮಾಡಲಾಗಿದೆ. ಶಿಬಿರದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ನಗರದ ವಿವಿಧೆಡೆ ವಸತಿ ವ್ಯವಸ್ಥೆ ಮಾಡಲಾಗಿದ್ದು, ಕಲಾಭವನದಲ್ಲಿಯೇ ಊಟ ಮತ್ತು ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನ ಹಿನ್ನೆಲೆಯಲ್ಲಿ ಕಲಾಭವನದ ಮೈದಾನದ ಸುತ್ತಲೂ ಬಟ್ಟೆಯ ಕವಾಟು ನಿರ್ಮಿಸಿ ಮೈದಾನಕ್ಕೆ ನೆಲಹಾಸು ಹಾಕಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next