Advertisement

ರಾಜಸ್ಥಾನ, ಮಧ್ಯಪ್ರದೇಶಗಳ ರಾಜಕೀಯ ಬೆಳವಣಿಗೆಗೆ ನಾವೇ ಮಾದರಿ: ಎಚ್. ವಿಶ್ವನಾಥ್

02:17 PM Jul 17, 2020 | keerthan |

ಮೈಸೂರು: ಸಿದ್ದರಾಮಯ್ಯ ಅವರಿಗೆ ಸಹಕಾರ ಕೇಳುವುದು ಮಾತ್ರ ಗೊತ್ತು. ಕೊಡುವುದು ಗೊತ್ತಿಲ್ಲ. ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡಿ. ಹಾಸಿಗೆ ಇಲ್ಲ, ದಿಂಬಿಲ್ಲ ಎಂದು ದೂರುವುದನ್ನು ಬಿಟ್ಟು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ ಸರ್ಕಾರಕ್ಕೆ ಸಹಕಾರ ನೀಡಿ ಎಂದು ಮಾಜಿ ಸಚಿವ ಎ.ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು.

Advertisement

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ, ಇದು ಲೆಕ್ಕ ಕೇಳುವ ಸಮಯವಲ್ಲ. ಲೆಕ್ಕ ಎಲ್ಲಿಯೂ ಹೋಗುವುದಿಲ್ಲ. ಈಗ ಜನರ ರಕ್ಷಣೆ ಸರ್ಕಾರದ ಆದ್ಯತೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎರಡೂ ಸೇರಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕು. ನೀವು ಜವಾಬ್ದಾರಿಯಿಂದ ವರ್ತಿಸುವುದನ್ನು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ, ಆದರೆ ಈಗ ಅದಕ್ಕೆ ಸಮಯವಲ್ಲ ಎಂದರು.

ಸಿದ್ದರಾಮಯ್ಯ ನಾಲ್ಕು ಬಾರಿ ಪಕ್ಷಾಂತರ ಮಾಡಿದ್ದಾರೆ, ರಮೇಶ್ ಕುಮಾರ್ ಹತ್ತು ಬಾರಿ ಪಕ್ಷಾಂತರ ಮಾಡಿದ್ದಾರೆ, ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ. ಇಂತಹವರೆಲ್ಲ ನಮ್ಮನ್ನು ಪಕ್ಷಾಂತರಿಗಳು ಎಂದು ಕರೆಯುತ್ತಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿ ಇನ್ನೂ ರಾಜಪ್ರಭುತ್ವವಿದೆ. ಜೆಡಿಎಸ್ ನಲ್ಲಿ ಅಪ್ಪನೇ ರಾಷ್ಟ್ರಾಧ್ಯಕ್ಷ, ಮಗನೇ ರಾಜ್ಯಾಧ್ಯಕ್ಷ. ಎರಡೂ ಪಕ್ಷಗಳ ರಾಜಪ್ರಭುತ್ವದ ವಿರುದ್ಧ ನಾವು ಸಿಡಿದೆದ್ದೆವು. ಈಗ ನಮ್ಮ ನಡೆಯನ್ನು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಅನುಸರಿಸಿದ್ದಾರೆ ಎಂದು ಹೇಳಿದರು.

ರಾಜಸ್ಥಾನದ ರಾಜಕೀಯ ಬೆಳವಣಿಗೆಗೆ ನಾವೇ ಮಾದರಿ: ರಾಜಸ್ಥಾನದಲ್ಲಿ ನಡೆದ ರಾಜಕೀಯ ಬೆಳವಣಿಗೆಗೆ ನಾವೇ ಕಾರಣ. ಅವರು ನಮ್ಮ ಮಾದರಿಯಲ್ಲಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಆಡಳಿತ ಪಕ್ಷದ ವಿರುದ್ದ ಸೆಡ್ಡು ಹೊಡೆದಿದ್ದು ಮೊದಲು ಕರ್ನಾಟಕದಲ್ಲಿ. ನಾವು ಹುಟ್ಟಿಹಾಕಿದ ಸಂಸ್ಕೃತಿಯಿಂದ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಐ ಫೀಲ್ ಪ್ರೌಡ್. ಅಲ್ಲದೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಆಡಳಿತ ಪಕ್ಷದ ಮುಖ್ಯಮಂತ್ರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಈ ಬಗ್ಗೆ ದೇಶದಾದ್ಯಂತ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನಲ್ಲಿ ಯುವ ನಾಯಕತ್ವದ ದಮನ: ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕತ್ವವನ್ನು ದಮನ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ವಯಸ್ಸಿನ ಯುವಕರನ್ನು ತುಳಿಯುವ ಕೆಲಸ ಆಗುತ್ತಿದೆ. ಮಧ್ಯಪ್ರದೇಶದಲ್ಲಿ ಸಿಂಧ್ಯಾ, ರಾಜಸ್ಥಾನದಲ್ಲಿ ಸಚಿನ್ ಪೈಲಟ್. ಈ ಇಬ್ಬರೂ ಯುವಕರು ಜಾತ್ಯಾತೀತ ಮನಸ್ಥಿತಿ ಉಳ್ಳವರು. ಕಾಂಗ್ರೆಸ್‌ಗಾಗಿ ದುಡಿದವರು. ಇವರನ್ನು ತುಳಿಯುವ ಕೆಲಸ ಪಕ್ಷದಲ್ಲಿ ನಡೆದಿದೆ. ಇದೇ ಅವರು ಸಿಡಿದೇಳಲು ಕಾರಣ. ಇಂತಹ ಬೆಳವಣಿಗೆಗಳಿಂದ ಕಾಂಗ್ರೆಸ್‌ನ ಪ್ರಭಾವ, ಅಧಿಕಾರ ದೇಶದಲ್ಲಿ ಕ್ಷೀಣಿಸುತ್ತಿದೆ ಎಂದರು.

Advertisement

ಒಬ್ಬ ಜನಪ್ರತಿನಿಧಿಯನ್ನು ಕಡೆಗಣಿಸಬಾರದು. ಇತ್ತೀಚೆಗೆ ವಿರೋಧ ಪಕ್ಷದಿಂದ ಯಾರೂ ಆಡಳಿತ ಪಕ್ಷಕ್ಕೆ ಹೋಗುತ್ತಿಲ್ಲ. ಬದಲಾಗಿ ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷದ ಕಡೆಗೆ ಹೋಗುತ್ತಿದ್ದಾರೆ. ಅದು ಪಕ್ಷಾಂತವರವೂ ಅಲ್ಲ, ಶಿಕ್ಷೆ ನೀಡುವಂತಹ ಅಪರಾಧವೂ ಅಲ್ಲ. ರಾಜಸ್ಥಾನದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗಬೇಕು. ಸಂವಿಧಾನಕ್ಕೆ ಗೌರವ ನೀಡುವವರು ಈ ಬಗ್ಗೆ ಮಾತನಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next