Advertisement

ದೇವೇಗೌಡ, ಕುಮಾರಸ್ವಾಮಿ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ- JDS ಶಾಸಕರು, ಮುಖಂಡರ ವಾಗ್ಧಾನ 

11:53 PM Oct 01, 2023 | Team Udayavani |

ಬೆಂಗಳೂರು/ರಾಮನಗರ: ರಾಜ್ಯದ ನೆಲ, ಜಲ ಭಾಷೆಯನ್ನು ಕಾಪಾಡುವ ನಿಟ್ಟಿನಲ್ಲಿ ಜೆಡಿಎಸ್‌ ಗಟ್ಟಿಗೊಳ್ಳಬೇಕು. ಪಕ್ಷ ಉಳಿಸುವ ನಿಟ್ಟಿನಲ್ಲಿ ಎಚ್‌.ಡಿ. ದೇವೇಗೌಡರು ಮತ್ತು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧªವಾಗಿರುತ್ತೇವೆ ಎಂದು ಬಿಡದಿಯ ಎಚ್‌.ಡಿ.ಕುಮಾರಸ್ವಾಮಿ ತೋಟದ ಮನೆ ಸಭೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಪ್ರಮುಖರು ಹೇಳಿದರು.

Advertisement

ಬಿಜೆಪಿ ಜತೆಗಿನ ಮೈತ್ರಿ ಬಳಿಕ ಜೆಡಿಎಸ್‌ ಪಾಳಯದಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಜಿಲ್ಲಾಧ್ಯಕ್ಷರು ಸಹಿತ ಪ್ರಮುಖರ ಸಭೆಯನ್ನು ಎಚ್‌. ಡಿ.ಕುಮಾರಸ್ವಾಮಿ ತಮ್ಮ ತೋಟದ ಮನೆಯಲ್ಲಿ ಕರೆದಿದ್ದರು.

ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಆರಂಭಗೊಂಡ ಜೆಡಿಎಸ್‌ ಸಭೆ ಸಂಜೆ 5.30ರ ವರೆಗೆ ನಡೆಯಿತು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇ ಗೌಡ ಮಾತನಾಡಿ, ಮೈತ್ರಿ ವಿಚಾರಕ್ಕೆ ಸಂಬಂಧಿಸಿ ನಾವು ಯಾರನ್ನೂ ಕತ್ತಲಲ್ಲಿ ಇಟ್ಟಿಲ್ಲ. ಆ ರೀತಿ ಇಡುವ ಅಗತ್ಯವೂ ಇಲ್ಲ ಎಂದರು. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಮೈತ್ರಿ ಸಂಬಂಧಿಸಿ ಯಾವುದೇ ಗೊಂದಲ ಬೇಡ. ನಾನು ಯಾವುದೇ ಅಧಿಕಾರದ ಆಸೆಗೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಜ್ವಲಂತ ಸಮಸ್ಯೆ ಹಾಗೂ ಪಕ್ಷದ ಸಂಘಟನೆಯ ದೃಷ್ಟಿಯಿಂದ ಮೈತ್ರಿ ಮಾಡಿಕೊಂಡಿದ್ದೇನೆ ಎಂದು ಸಭೆಗೆ ಸ್ಪಷ್ಟನೆ ನೀಡಿದರು.

ಶಾಸಕರ ಪ್ರಮಾಣ
ಸಭೆಯಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯ ಜಿ.ಟಿ.ದೇವೇಗೌಡರು ಪಕ್ಷದ ಎಲ್ಲ ಶಾಸಕರು ಮತ್ತು ಮುಖಂಡರಿಂದ ಪ್ರಮಾಣ ಮಾಡಿಸಿದರು. ಪಕ್ಷದ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಶಾಸಕರಾದ ಸಮೃದ್ಧಿ ಮಂಜುನಾಥ್‌, ಮಾಜಿ ಶಾಸಕರಾದ ಗುರು ಪಾಟೀಲ್‌, ರಾಜಾ ವೆಂಕಟಪ್ಪ ನಾಯಕ ಮುಂತಾದವರು ಮಾತನಾಡಿದರು.

Advertisement

ಎದ್ದು ಕಾಣುತ್ತಿದ್ದ ಇಬ್ರಾಹಿಂ ಗೈರು
ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಗೈರಾಗಿದ್ದುದು ಎದ್ದುಕಾಣುತಿತ್ತು. ಕೆಲವು ದಿನಗಳ ಹಿಂದಷ್ಟೇ ಎಲ್ಲರನ್ನು ಹೊರಗಿಟ್ಟು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಇಬ್ರಾಹಿಂ ಮಾಧ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು ಗೈರಾಗಿದ್ದರು.

ಪಕ್ಷ ಬಿಡಲಾರೆ: ಫಾರೂಕ್‌
ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಮಾತನಾಡಿ, ಅಲ್ಪಸಂಖ್ಯಾಕರಾದ ನಾವು ನಮ್ಮ ಆಚಾರ ವಿಚಾರ, ಆಹಾರ ಪದ್ಧತಿ ಇತ್ಯಾದಿಗಳಿಂದ ಕೆಲವು ಸಮಸ್ಯೆ ಎದುರಿಸುತ್ತಿದ್ದೇವೆ. ಆ ವಿಷಯದಲ್ಲಿ ಪಕ್ಷ ನಮ್ಮ ಜತೆ ನಿಂತಿದೆ. ಯಾರೇ ಪಕ್ಷ ಬಿಟ್ಟರೂ ನಾನು ಪಕ್ಷ ಬಿಡಲ್ಲ. ಇಪ್ಪತ್ತು ತಿಂಗಳ ಬಿಜೆಪಿ ಜೆಡಿಎಸ್‌ ಮೈತ್ರಿ ಸರಕಾರದ ಕಾಲದಲ್ಲಿ ಅಲ್ಪಸಂಖ್ಯಾಕರಿಗೆ ಏನಾ
ದರೂ ತೊಂದರೆ ಆಗಿದೆಯಾ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾಕರು ಪಕ್ಷ ಬಿಡುತ್ತಿಲ್ಲ
ಪಕ್ಷದ ಅಲ್ಪಸಂಖ್ಯಾಕ ವಿಭಾಗದ ಉಪಾಧ್ಯಕ್ಷ ಇಮ್ತಿಯಾಜ್‌ ರಫೀಕ್‌ ಮಾತನಾಡಿ, ನಾವು ಪಕ್ಷಕ್ಕೆ ನಿಷ್ಠರಾಗಿದೇವೆ. ಅಲ್ಪಸಂಖ್ಯಾಕರ್ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ಪಕ್ಷ ಮತ್ತು ವರಿಷ್ಠರು ಕೈಗೊಂಡ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಹೇಳಿದರು.

ಡಿಕೆಶಿ ವಿರುದ್ದ ದೇವೇಗೌಡ ಕಿಡಿ
ಡಿ. ಕೆ. ಶಿವಕುಮಾರ್‌ ಅವರ ಕೆಟ್ಟ ರಾಜಕೀಯ ಆಟ ನನ್ನ ಬಳಿ ನಡೆಯದು. ಅದು ನಿಮಗೆ ಗೊತ್ತಿರಲಿ, ನಮ್ಮ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ. ಆ ವ್ಯಕ್ತಿಗೆ ಉತ್ತರ ಕೊಡಬೇಕು, ಕೊಡುವ ಕೆಲಸ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಗುಡುಗಿದರು.

ಪಕ್ಷ ಸಂಘಟನೆ ನಿಟ್ಟಿನಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲು ನಡೆದ ಸಭೆ ಇದಾಗಿದೆ. ಯಾವುದೇ ಅಲ್ಪಸಂಖ್ಯಾಕ ಮುಖಂಡರು ಮೈತ್ರಿಯನ್ನು ವಿರೋಧಿಸಿಲ್ಲ. ಪಕ್ಷದ ಯಾವುದೇ ಶಾಸಕರು, ಮುಖಂಡರು ಕಾಂಗ್ರೆಸ್‌ ಸೇರುವುದಿಲ್ಲ. ಇಬ್ರಾಹಿಂ ಜತೆ ಮಾತನಾಡಿ ಅವರಿಗೆ ವಾಸ್ತವ ಸ್ಥಿತಿ ಬಗ್ಗೆ ಮನವರಿಕೆ ಮಾಡಲಾಗುವುದು.
-ಜಿ.ಟಿ.ದೇವೇಗೌಡ, ಜೆಡಿಎಸ್‌ ಕೋರ್‌ಕಮಿಟಿ ಅಧ್ಯಕ್ಷ

ದೇಶದಲ್ಲಿ ನಿಜವಾದ ಸೆಕ್ಯುಲರ್‌ ಎಂದು ಇದ್ದರೆ ಅದು ದೇವೇ ಗೌಡರು ಮಾತ್ರ. ಕಟ್ಟಾ ಆರೆಸ್ಸೆಸ್‌ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ನಾವು ಸೆಕ್ಯುಲರ್‌ ಎನ್ನುವುದು ಹಾಸ್ಯಾಸ್ಪದ. ಕುಮಾರ ಸ್ವಾಮಿ ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ್ದಾಗ ಬಿಜೆಪಿ ರಾಜ್ಯಾ ಧ್ಯಕ್ಷ ರನ್ನೇ ಬಂಧಿಸಿದ್ದರು. -ವೈ.ಎಸ್‌.ವಿ ದತ್ತಾ, ಮಾಜಿ ಶಾಸಕ

ಜ್ವಲಂತ ಸಮಸ್ಯೆ ಪರಿಹರಿಸದಿದ್ದರೆ ರಾಜಕೀಯ ನಿವೃತ್ತಿ: ಎಚ್‌ಡಿಕೆ
ಬೆಂಗಳೂರು: ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಜೆಡಿಎಸ್‌-ಬಿಜೆಪಿ ಮೈತ್ರಿ ಪರಿಹಾರವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಪಡೆಯದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಎಚ್‌. ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಮುಖಂಡರ ಸಭೆ ಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕೇಂದ್ರ ಸರಕಾರದ ನೆರವಿನಿಂದ ಎಲ್ಲ ಸಮಸ್ಯೆ, ಯೋಜನೆಗಳಿಗೆ ಪರಿಹಾರ ಮಾಡಿಸುತ್ತೇನೆ. ಒಂದು ವೇಳೆ ಮಾಡಿ ಸದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು. ನಮ್ಮ ನೀರನ್ನು ಉಳಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಕಾಂಗ್ರೆಸ್‌ನವರಂತೆ ಸುಳ್ಳು ಹೇಳುವುದಿಲ್ಲ. ದೇವೇಗೌಡರ ಮಾರ್ಗದರ್ಶನದಲ್ಲಿ ಈ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next