Advertisement

ನೀರುಣಿಸುತ್ತಿದ್ದ ಕಾಲುವೆ ಕಾಡುತ್ತಿದೆ

11:38 AM May 10, 2017 | Team Udayavani |

ಒಂದು ಕಾಲಕ್ಕೆ ಬೆಂಗಳೂರಿನಲ್ಲಿ ಸ್ವತ್ಛ ಶುಭ್ರವಾಗಿ ಹರಿಯುತ್ತಿದ್ದ ವೃಷಭಾವತಿ ನದಿ ಈಗ ತನ್ನ ಸ್ವರೂಪವನ್ನೇ ಕಳೆದುಕೊಂಡು ಮಲಿನಗೊಂಡಿದೆ. ಸದ್ಯ, ವೃಷಭಾವತಿ ಕಣಿವೆ ಹಳೇ ಬೆಂಗಳೂರಿನ ಕರ್ಮವನ್ನೆಲ್ಲ ಹೊತ್ತು ಸಾಗುತ್ತಿದೆ. ಹಿಂದೆ ನಗರದ ಜನರಿಗೆ ಕುಡಿಯುವ ನೀರು ಒದಗಿಸುತ್ತಿದ್ದ ವೃಷಭಾವತಿ ಕಣಿವೆ ಈಗ ಮಳೆಗಾಲದಲ್ಲಿ ತನ್ನ ಪಕ್ಕದಲ್ಲಿ ನೆಲೆಸಿರುವ ನಾಗರಿಕರ ನೆಮ್ಮದಿ ಕೆಡಿಸುತ್ತಾ ಸಾಗಿದೆ. ಅಷ್ಟಕ್ಕೂ ಸಮಸ್ಯೆ ಕಣಿವೆಯದ್ದಲ್ಲ, ಸೂಕ್ತ ಕ್ರಮ ಕೈಗೊಳ್ಳದ ಸಂಬಂಧಿಸಿದ ಆಡಳಿತದ್ದು. 

Advertisement

ಬೆಂಗಳೂರು: ನಗರದಲ್ಲಿ ಈ ಹಿಂದೆ ಹರಿಯುತ್ತಿದ್ದ ವೃಷಭಾವತಿ ನದಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಹಲವು ದಶಕಗಳೇ ಕಳೆದಿದ್ದು, ಸದ್ಯ ಕಣಿವೆ ಸ್ವರೂಪವನ್ನೂ ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆ. ರಾಜಧಾನಿಯ ಕೇಂದ್ರ ಭಾಗಗಳ ಮೂಲಕ ಹಾದು ಹೋಗಿರುವ ವೃಷಭಾವತಿ ಕಣಿವೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಣಿವೆಗೆ ವೈಜ್ಞಾನಿಕವಾಗಿ ರಾಜಕಾಲುವೆಯ ರೂಪ ನೀಡಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಕಾಲುವೆ ಬಹುತೇಕ ಕಡೆ ಒತ್ತುವರಿಯಾಗಿದ್ದು ವಿಸ್ತೀರ್ಣ  ಏಕಪ್ರಕಾರವಾಗಿಲ್ಲ.  

ಹಿಂದೆ ನಗರದ ಜನತೆಗೆ ಕುಡಿಯುವ ನೀರು ಒದಗಿಸುತ್ತಿದ್ದ ವೃಷಭಾವತಿ ಇಂದು ಕಲುಷಿತ ನೀರಿನಿಂದ ಕೂಡಿದೆ. ಮಳೆಗಾಲದಲ್ಲಿ ಅದೇ ಕಣಿವೆಯಿಂದಾಗಿ ಹಲವು ಪ್ರದೇಶಗಳ ಜನರು ತೊಂದರೆ ಅನುಭವಿಸುತ್ತಿರುವುದು ಇವತ್ತಿನ ವಾಸ್ತವ. ವೃಷಭಾವತಿಯು ನಗರದ ಪ್ರಮುಖ ಹಾಗೂ ಹಳೆಯ ಬೆಂಗಳೂರು ಪ್ರದೇಶಗಳ ಮೂಲಕ ಹರಿಯುತ್ತಿರುವುದರಿಂದ ಕಾಲುವೆಯ ಮೇಲಿನ ಒತ್ತಡ ಹೆಚ್ಚಿದೆ. 

ಪ್ಯಾಲೇಸ್‌ ಗುಟ್ಟಹಳ್ಳಿ, ಮಲ್ಲೇಶ್ವರ, ಕೆಂಪೇಗೌಡ ನಗರ, ರಾಜಾಜಿನಗರ, ಬಾಪೂಜಿ ನಗರ, ನಾಯಂಡಹಳ್ಳಿ ಸೇರಿದಂತೆ ಜನಸಾಂದ್ರತೆ ತೀವ್ರವಾಗಿರುವ ಹಳೆ ಬೆಂಗಳೂರು ಪ್ರದೇಶಗಳಲ್ಲಿ ಹಾದು ಹೋಗಿರುವ ಕಣಿವೆಯು ಕೆಲವೆಡೆ ಮೈಸೂರು ರಸ್ತೆ ಹೆದ್ದಾರಿಗೆ ಹೊಂದಿಕೊಂಡಂತೆ ಹರಿಯುತ್ತದೆ. ಹೆಚ್ಚಿನ ಜನಸಂದಣಿ ಪ್ರದೇಶಗಳಿಂದ ನಿತ್ಯ ನೂರಾರು ಎಂಎಲ್‌ಡಿ ತ್ಯಾಜ್ಯ ನೀರು ನೇರವಾಗಿ ಕಾಲುವೆಗೆ ಸೇರುತ್ತಿದೆ. ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ಕೂಡ ಕಾಲುವೆ ಸೇರುತ್ತಿರುವುದರಿಂದ ಮಾಲಿನ್ಯ ಪ್ರಮಾಣ ತೀವ್ರವಾಗಿದೆ. 

ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ಪೈಕಿ ಶೇ.40ರಷ್ಟು ಪ್ರಮಾಣದ ನೀರು ವೃಷಭಾವತಿ ಕಣಿವೆಯಲ್ಲಿ ಹರಿಯುತ್ತಿದೆ. ಇಷ್ಟಾದರೂ ಪಾಲಿಕೆಯ ಅಧಿಕಾರಿಗಳು ಕಣಿವೆಯ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ನಗರದ ವಸತಿ ಪ್ರದೇಶ ಹೊರತುಪಡಿಸಿದರೆ ಬಹುತೇಕ ಕಡೆ ಕಣಿವೆ ಕಚ್ಚಾ ಸ್ವರೂಪದಲ್ಲೇ ಇದೆ. ಜತೆಗೆ ತಡೆಗೋಡೆ, ತಂತಿಬೇಲಿಯಂಥ ಸುರಕ್ಷತಾ ಕ್ರಮಗಳಿಗೆ ಬಿಬಿಎಂಪಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿತ್ಯ ನೂರಾರು ಟನ್‌ ತ್ಯಾಜ್ಯ ಕಾಲುವೆ ಸೇರುತ್ತಿದೆ.

Advertisement

ಮುಖ್ಯಮಂತ್ರಿ  ಸೂಚನೆಗೂ ಜಗ್ಗದ ಪಾಲಿಕೆ
ಮೈಸೂರು ರಸ್ತೆ ಕವಿಕಾ ಕಾರ್ಖಾನೆ ಬಳಿ ಹಾದು ಹೋಗಿರುವ ನಾಲೆಯಲ್ಲಿ ಈ ಹಿಂದೆ 362 ಕ್ಯುಮೆಕ್ಸ್‌ (ಕ್ಯುಮೆಕ್ಸ್‌ ಎಂದರೆ ಪ್ರತಿ ಸೆಕೆಂಡ್‌ಗೆ ಹರಿಯುವ ಕ್ಯುಬಿಕ್‌ ಮೀಟರ್‌) ನೀರು ಹರಿಯುತ್ತಿತ್ತು. ಇಷ್ಟು ದೊಡ್ಡ ಪ್ರಮಾಣದ ನೀರು ಸರಾಗವಾಗಿ ಹರಿಯಲು 94 ಮೀಟರ್‌ನಷ್ಟು ವಿಶಾಲವಾದ ಕಾಲುವೆಯ ಅಗತ್ಯವಿದೆ. ಆದರೆ, ಕಾಲುವೆಯ ಅಗಲ 70 ಮೀಟರ್‌ ಪ್ರದೇಶವಿದ್ದ ಕಾರಣ ಆಗಾಗ್ಗೆ ಪ್ರವಾಹ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಾಲುವೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿತ್ತು. ಸ್ವತಃ ಮುಖ್ಯಮಂತ್ರಿಗಳು ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿ ಎರಡು ವರ್ಷ ಕಳೆದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಪರಿಣಾಮವಾಗಿ ಸಮಸ್ಯೆ ಜೀವಂತವಾಗಿಯೇ ಉಳಿದಿದೆ.

ಹೂಳೆತ್ತಲು ಮುಂದಾಗಿಲ್ಲ
ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಜಂಕ್ಷನ್‌ ಬಳಿಯಿಂದ ಕವಿಕಾ ಕಾರ್ಖಾನೆ ಹಿಂಭಾಗ ಹಾಗೂ ನಾಯಂಡಹಳ್ಳಿ ಜಂಕ್ಷನ್‌ವರೆಗೆ ವೃಷಭಾವತಿ ನಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿದೆ. ಸೇತುವೆಗೆಂದು ಕಾಲುವೆಯಲ್ಲಿ ಹಾಕಲಾದ ಪಿಲ್ಲರ್‌ ಸುತ್ತಲೂ ಸಾಕಷ್ಟು ಕಸ, ಪ್ಲಾಸ್ಟಿಕ್‌ ವಸ್ತುಗಳು ಶೇಖರಣೆಯಾಗಿ ನೀರಿನ ಹರಿಯುವಿಕೆಗೆ ಅಡ್ಡಿಯಾಗುತ್ತಿದೆ. ಆದರೆ ಈವರೆಗೆ ಕಾಲುವೆಯಲ್ಲಿನ ಹೂಳೆತ್ತಲು ಪಾಲಿಕೆಯ ಅಧಿಕಾರಿಗಳು ಮುಂದಾಗಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೂಳು ತೆಗೆಯಲು ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. 

ವೃಷಭಾವತಿ ಕಣಿವೆ ಹರಿಯುವ ಮಾರ್ಗ
ಸ್ಯಾಂಕಿ ಕೆರೆ ಭಾಗದಿಂದ ಆರಂಭವಾಗುವ ವೃಷಭಾವತಿ ಕಣಿವೆ ಮಲ್ಲೇಶ್ವರದ ಹಲವು ಭಾಗಗಳ ಮೂಲಕ ಎರಡು ಕವಲಾಗಿ ವಿಭಜನೆಯಾಗುತ್ತದೆ. ಒಂದು ಕಣಿವೆ ಪೀಣ್ಯ ಭಾಗದ ಪ್ರದೇಶದಲ್ಲಿ ಹಾದು ಮೈಸೂರು ರಸ್ತೆ ಸೇರಿದಂತೆ ಮತ್ತೂಂದು ಕಾಲುವೆ ರಾಜಾಜಿನಗರ, ಕೆಂಪೇಗೌಡನಗರ, ಬಾಪೂಜಿನಗರದ ಬಳಿ ಮೈಸೂರು ರಸ್ತೆ ಸೇರುತ್ತದೆ. ಬಳಿಕ ಮೈಸೂರು ರಸ್ತೆಯಲ್ಲಿ ರಾಜರಾಜೇಶ್ವರಿ ನಗರದ ಬಳಿಕ ಜಲಮಂಡಳಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆಗೊಂಡು ಕೆಂಗೇರಿ-ಕನಕಪುರದ ಮೂಲಕ ಹರಿದು ಕಾವೇರಿ ನದಿಯನ್ನು ಸೇರಿ ತಮಿಳುನಾಡಿಗೆ ಹರಿಯುತ್ತದೆ. 

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next