Advertisement

ಅವಸಾನದಂಚಿಗೆ ತಲುಪಿದ ಜಲಮೂಲಗಳು

12:00 PM Feb 28, 2019 | Team Udayavani |

ಮಧುಗಿರಿ: ಪುರಾತನ ರಾಜರ ಕಾಲದಲ್ಲಿ ಪಟ್ಟಣದಲ್ಲಿ ಕಟ್ಟಿಸಿದ್ದ ಎರಡು ಕಲ್ಯಾಣಿಗಳಿಗೆ ಹಾಗೂ ಹತ್ತಾರು ಬಾವಿಗಳಿಗೆ ನೀರಿನ ಸೆಲೆಯಾಗಿಸಲು ಹಿಂದೆಯೇ ನೀರಾವರಿ ತಜ್ಞರು ನಿರ್ಮಿಸಿದ ಪಟ್ಟಣದ ಸಿದ್ದರಕಟ್ಟೆ ಹಾಗೂ ಕುಂಬಾರ ಕಟ್ಟೆಯು ಅವಸಾನದ ಅಂಚಿಗೆ ತಲುಪಿದೆ. ಈಗ ಇದು ಹೆಣ ಉಳುವ ಸ್ಮಶಾನವಾಗಿ ಹಾಗೂ ಕೆಲವರಿಂದ ಒತ್ತುವರಿಯಾಗಿದ್ದು, ಕಲ್ಯಾಣಿಗಳು ಹಾಗೂ ಅಜ್ಜರ ಕಾಲದ ಸಿಹಿನೀರಿನ ಬಾವಿಗಳು ಬತ್ತಿದ್ದು, ಪ್ರಸ್ತುತ ಪಟ್ಟಣದ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ.

Advertisement

ಮಧುಗಿರಿ ಬೆಟ್ಟದ ತಪ್ಪಲಿನಲ್ಲಿರುವ ಸಿಹಿನೀರಿನ ಬಾವಿ ಬಳಿಯ ಕಟ್ಟೆ ಹಾಗೂ ಇಸ್ಲಾಂಪುರದ ಹಿಂಭಾಗದಲ್ಲಿ ಸಿದ್ದರಕಟ್ಟೆ ರಾಜರ ಕಾಲದಲ್ಲಿ ನಿರ್ಮಿಸಿದ್ದಾಗಿದೆ. ಬೆಟ್ಟದ ಮೇಲಿನ ಕೋಟೆ ನಿರ್ಮಿಸಿದ ಕಾಲದಲ್ಲೇ ನೀರಿನ ಸೆಲೆ ಅರಿತು, ಈಗಿನ ಇಸ್ಲಾಂಪುರದಲ್ಲಿ ಶುದ್ಧ ಕುಡಿಯುವ ನೀರಿನ ಬಾವಿ, ಶಿರಾಗೇಟ್‌ ಬಳಿಯಿರುವ ಎರಡು ಕಲ್ಯಾಣಿಗಳನ್ನು ಪೂರ್ವಜರು ನಿರ್ಮಿಸಿದ್ದರು. ಈ ಕಟ್ಟೆಗಳಿಂದ ಜಿನುಗುತ್ತಿದ್ದ ನೀರು ಬಾವಿ ಹಾಗೂ ಕಲ್ಯಾಣಿಗಳಿಗೆ ಒಸರುತ್ತಿತ್ತು. ಇದು ಸುತ್ತಲೂ ನೆಲೆಸಿದ್ದ ಜನತೆಗೆ ನೀರಿನ ದಾಹ ತಣಿಸುತ್ತಿತ್ತು.

ಆದರೆ, ಕಾಲ ಕಳೆದಂತೆ ಈ ಕಟ್ಟೆಗಳಲ್ಲಿ ಹೂಳು ತುಂಬಿದೆ. ಹಲವರು ಇದನ್ನು ಅತಿಕ್ರಮಿಸಿಕೊಂಡಿದ್ದು, ಹಿಂದೆ ಬೇಸಿಗೆಯಲ್ಲೂ ಇರುತ್ತಿದ್ದ ಕುಡಿಯುವ ನೀರು ಈಗ ಜನವರಿಗೆ ಬತ್ತುತ್ತಿದೆ. ಆದರೆ, ಕಳೆದ ಅವಧಿಯಲ್ಲಿನ ಶಾಸಕರು ಸಿಹಿನೀರಿನ ಬಾವಿ ಬಳಿಯ ಕಟ್ಟೆಯನ್ನು ಅಲ್ಪ ಮಟ್ಟಿಗೆ ಅಭಿವೃದ್ಧಿ ಪಡಿಸಿದ್ದರು. ನಂತರ ಯಥಾಸ್ಥಿತಿಯಂತಾಗಿ ಬಾವಿಯಲ್ಲಿ ನೀರಿನ ಒರತೆ ಕಮ್ಮಿಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಂಕಷ್ಟವಾಗಿದೆ.

ಜೀವ ಕಳೆದುಕೊಂಡ ಬಾವಿಗಳು: ಈ ಬಾವಿಯ ಸ್ಥಿತಿ ಹೀಗಾದರೆ ಸಿದ್ದರಕಟ್ಟೆಯಿಂದ ಉಸಿರಾಡುತ್ತಿದ್ದ ಇಸ್ಲಾಂಪುರದ ಬಾವಿ ಹಾಗೂ ಶಿರಾಗೇಟ್‌ ಬಳಿಯ 2 ಕಲ್ಯಾಣಿಗಳು ಈಗಾಗಲೇ ಜೀವ ಕಳೆದುಕೊಂಡಿವೆ. ಕಟ್ಟೆಯಲ್ಲಿ ನೀರಿಲ್ಲದ ಕಾರಣ ಈ ಬಾವಿಯಲ್ಲಿ ಶೌಚದ ಗುಂಡಿಯ ನೀರು ಜಿನುಗುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಇನ್ನೂ ಕಲ್ಯಾಣಿಗಳ ಕಥೆಯಂತೂ ಹೇಳ ತೀರದಾಗಿದ್ದು, ಹಿಂದೆ ಸಾವಿರಾರು ಜೀವರಾಶಿಗಳಿಗೆ ನೀರಿನ ಆಸರೆಯ ತಾಣವಾಗಿದ್ದ ಇವು ಜೀವಂತ ಶವಗಳಾಗಿವೆ.

ಪುನರ್ವಸತಿ ಹೇಗೆ: ಹೂಳು ತುಂಬಿರುವ ಈ ಕಟ್ಟೆಯನ್ನು ಹೂಳಿನಿಂದ ಮುಕ್ತವಾಗಿಸಬೇಕು. ಸ್ಮಾಶಾನದ ಅವಶ್ಯಕತೆಯಿರುವ ಜನತೆಗೆ ಸ್ಮಶಾನಕ್ಕೆ ಅನುಕೂಲ ಮಾಡಿಕೊಡಬೇಕು. ಒತ್ತುವರಿಯಾಗಿರುವ ಜಾಗವನ್ನು ಮುಲಾಜಿಲ್ಲದೆ ಸ್ವಾಧೀನಪಡಿಸಿ ಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ ನೀರು ಪೂರೈಕೆ ಮೊದಲ ಆದ್ಯತೆಯಾಗಿರಬೇಕು. ಇದರಿಂದ ಬತ್ತಿರುವ ಜಲ ಸಂಗ್ರಾಹಾರಗಳು ಮರುಜೀವ ಪಡೆದು ಇದೇ ಜನರಿಗೆ ಜೀವಜಲ ನೀಡಲಿದೆ. ಅದಕ್ಕಾಗಿ ಈ ಕಟ್ಟೆ ಪುನರುಜ್ಜೀವನ ಅವಶ್ಯಕವಾಗಿ ನಡೆಯಬೇಕು.

Advertisement

ಸ್ಮಶಾನಕ್ಕೆ ಪರ್ಯಾಯ ಭೂಮಿ ನೀಡಿ: ಪಟ್ಟಣದಲ್ಲಿ ಹಿಂದೂ ರುದ್ರಭೂಮಿ ಅವಶ್ಯಕತೆಯಿದ್ದು, ಈ ಭಾಗದ ಭೂಮಿಯಿಲ್ಲದವರು ಸಿದ್ದರಕಟ್ಟೆಯನ್ನೇ ಸ್ಮಶಾನವಾಗಿಸಿ ಕೊಂಡಿದ್ದಾರೆ. ಜನರಿಗೆ ಸ್ಮಶಾನ ಒದಗಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದ್ದು, ಜನರ ಮೂಲಭೂತ ಹಕ್ಕಾಗಿದೆ. ಇದರಿಂದಾಗಿ ಈಗ ಭೂಮಿಯಿಲ್ಲದೆ ಈ ಕಟ್ಟೆಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದು, ಕಟ್ಟೆಯ ಉಳಿವಿಗಾಗಿ ಸ್ಮಾಶಾನಕ್ಕೆ ಪರ್ಯಾಯ ಭೂಮಿ ನೀಡಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದಂತೆ ದೇವಸ್ಥಾನದ ಬದಲು ಶಾಲೆಗಳನ್ನು ನಿರ್ಮಿಸಬೇಕು ಎಂದು. ಅದೇ ರೀತಿ
ಗೋರಿಗಳ ನಿರ್ಮಾಣದ ಬದಲು ಕಟ್ಟೆಯನ್ನು ಉಳಿಸಿದರೆ ಜೀವಜಲ ರಕ್ಷಿಸಿದಂತಾಗುತ್ತದೆ. ಇಲ್ಲಿನ ಪ್ರಸ್ತುತ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಇದೇ ಬಲವಾದ ಕಾರಣ.

ಕಟ್ಟೆಯೇ ಜೀವ ರಕ್ಷಕ: ಮಾನವನ ದುರಾಸೆಯಿಂದ ಪೂರ್ವಜರು ನಿರ್ಮಿಸಿದ ಕೆರೆ-ಕಟ್ಟೆಗಳು ನಾಶ ಮಾಡುತ್ತಿದ್ದು, ಇದರಿಂದ ಜಿನುಗುವ ನೀರು ಕೊಳವೆ ಬಾವಿ ಹಾಗೂ ಬಾವಿಗಳಿಗೆ ತಲುಪದೆ ಅಂತರ್ಜಲ ಕಾಣದಂತಾಗುತ್ತಿದೆ. ಇದನ್ನು ಪುನರ್‌ ನಿರ್ಮಿಸಿದರೆ ಸಿದ್ದರಕಟ್ಟೆಯಿಂದ ನೂರಾರು ಕೊಳವೆಬಾವಿ ಹಾಗೂ 2 ಕಲ್ಯಾಣಿಗಳಿಗೆ ಮರುಜೀವ ಬರಲಿದೆ. ಬೆಟ್ಟದ ಮೇಲಿಂದ ಬಿದ್ದ ನೀರು ಸ್ವಲ್ಪವೂ ವ್ಯರ್ಥವಾಗದೆ ಕಟ್ಟೆಯಲ್ಲಿ ನಿಂತಾಗ, ಇದರಿಂದ ಜಿನುಗುವ ನೀರಿಂದ ಪಟ್ಟಣದ ಜನತೆಗೆ ನೀರಿನ ಲಭ್ಯತೆ ಸಿಗಲಿದೆ.

ನೈಸರ್ಗಿಕವಾದ ಜಲಸಂಗ್ರಾಹಾರಗಳನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಆದ್ಯತೆ. ಈಗಿರುವ ನೀರಿನ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಬೇಕಿದೆ. ಆದ್ದರಿಂದ ಈ ಭೂಮಿ ಸಿದ್ದರಕಟ್ಟೆಯೆಂದೇ ದಾಖಲೆಯಲ್ಲಿದ್ದು, ಇದರ ಸಂರಕ್ಷಣೆ ನಮ್ಮ ಕರ್ತವ್ಯವಾಗಿದೆ. ಈ ಕಟ್ಟೆಯ ಅಭಿವೃದ್ಧಿಗಾಗಿ ಎಲ್ಲ ರೀತಿಯ ಕಾನೂನು ರೀತಿಯ ಕಾರ್ಯಕ್ಕೆ ಕ್ರಮ ವಹಿಸುತ್ತೇನೆ.
ನಂದೀಶ್‌, ತಹಶೀಲ್ದಾರ್‌

 ನೀರಿನ ಸಮಸ್ಯೆಗೆ ಈ ಕಟ್ಟೆಗಳ ಅಭಿವೃದ್ಧಿ ಆಗಲೇಬೇಕು. ಇದರಿಂದ 2 ಕಲ್ಯಾಣಿ ಹಾಗೂ ಹತ್ತಾರು ಕೊಳವೆಬಾವಿಗಳು
ಮರುಜೀವ ಪಡೆಯಲಿವೆ. ಸಾರ್ವಜನಿಕರು ಹಾಗೂ ಶಾಸಕರು ಈ ಕಾರ್ಯಕ್ಕೆ ಬೆಂಬಲ ನೀಡಿದರೆ ಮುಂಬರುವ ವರ್ಷವೇ ಈ ಭಾಗದ ಎಲ್ಲ ಕೊಳವೆ ಬಾವಿಯಲ್ಲಿ ಹಾಗೂ ಕಲ್ಯಾಣಿಯಲ್ಲಿ ನೀರೂರುವಂತೆ ಮಾಡುತ್ತೇನೆ. 
ಲೋಹಿತ್‌, ಪುರಸಭೆ ಮುಖ್ಯಾಧಿಕಾರಿ 

ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next