Advertisement

ಜಲ ಮೂಲಗಳು ಕಲುಷಿತ: ನಗರಕ್ಕೆ ಕಾದಿದೆಯೆ ಆಪತ್ತು?

11:34 PM Dec 09, 2019 | Sriram |

ವಿಶೇಷ ವರದಿ-ಉಡುಪಿ: ನಗರದಲ್ಲಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಸಾರ್ವಜನಿಕರ ಬೇಜವಾಬ್ದಾರಿಯಿಂದ ನೀರಿನ ಮೂಲವಾದ ಇಂದ್ರಾಣಿ ನದಿ ಜತೆಗೆ ನೂರಾರು ಬಾವಿ, ಕೆರೆಗಳು ಕಲ್ಮಶವಾಗಿವೆ. ಸಮಸ್ಯೆ ಹೀಗೆ ಮುಂದುವರೆದರೆ ನಗರವಾಸಿಗಳು ಶುದ್ಧ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

Advertisement

ಇಂದ್ರಾಣಿ ನದಿ ಇತಿಹಾಸ
ಇಂದ್ರಾಣಿ ನದಿಗೆ ಒಂದು ಸಾವಿರ ವರ್ಷಗಳ ಇತಿಹಾಸ ಇದೆ. ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿಯಲ್ಲಿ ಒಂದು ಆಂಜನೇಯ ಸ್ವಾಮಿ ಗುಡಿ ಸಮೀಪ ಒಂದು ಪುಟ್ಟ ತೊರೆ ಹರಿದು ದೊಡ್ಡದಾಗುತ್ತ ಚಿಟಾ³ಡಿ, ಕೊಡವೂರು, ಕಲ್ಮಾಡಿ ಮೂಲಕ ಸಮುದ್ರ ಸೇರುತ್ತದೆ. ಹುಟ್ಟುವಾಗ ಶುದ್ಧವಾಗಿರುವ ಇಂದ್ರಾಣಿ ಸಮುದ್ರ ಸೇರುವ ಹೊತ್ತಿಗೆ ನಗರದ ಕಲ್ಮಶವನ್ನೆಲ್ಲ ಒಡಲಲ್ಲಿ ತುಂಬಿಕೊಂಡಿರುತ್ತದೆ. ಈ ನದಿ 10 ಕಿ.ಮೀ. ಹರಿದು ಸಮುದ್ರ ಸೇರುತ್ತದೆ.

ಕಲುಷಿತಗೊಂಡ ಇಂದ್ರಾಣಿ
ಸರೋವರದಿಂದ ಹರಿದ ನೀರಿಗೆ ಮುಂದೆ ಬುಡ್ನಾರಿನಲ್ಲಿ ಸಣ್ಣ ಜಲಪಾತದ ಕೊಡುಗೆ ಸೇರುತ್ತದೆ. ಇಂದ್ರಾಳಿ ರೈಲು ನಿಲ್ದಾಣದ ಬಳಿ ಅಲೆವೂರು ನದಿಯ ಒಂದು ಕವಲು ಸೇರುತ್ತದೆ. ಸಮಸ್ಯೆ ಇರುವುದು ಇನ್ನು ಮುಂದಿನ ನದಿ ಪಾತ್ರದ ಆಸುಪಾಸು. ಶ್ರೀಕೃಷ್ಣಮಠದ ಪಾರ್ಕಿಂಗ್‌ ಪ್ರದೇಶ, ವೆಂಕಟರಮಣ ದೇವಸ್ಥಾನದ ಹಿಂಭಾಗ, ತೆಂಕುಪೇಟೆ, ಬಡಗುಪೇಟೆ ಪರಿಸರದ ಮನೆ, ಛತ್ರಗಳ ಕೊಳಚೆ ಸೇರಿಕೊಂಡು ಕಲ್ಸಂಕದಿಂದ ಮುಂದೆ ಸಾಗಿ ಸಿಟಿ ಮತ್ತು ಸರ್ವಿಸ್‌ ಬಸ್‌ ನಿಲ್ದಾಣ ಸಮೀಪದಿಂದ ಹರಿ ಯುವ ಎಲ್ಲ ಪ್ರತಿಷ್ಠಿತರ ಕೊಳಚೆ ಇಂದ್ರಾಣಿಯನ್ನು ಸೇರುತ್ತಿದೆ.

ಬದಲಾದ ನಾಮ
1960ರ ದಶಕದಲ್ಲಿ ಇಂದ್ರಾಣಿ ನದಿಯ ಉಲ್ಲೇಖಖವಿದೆ. ನಗರಸಭೆ ಕಾಮಗಾರಿ ಮಾಡುವಾಗ ಇಂದ್ರಾಣಿ ನದಿ ಎಂದೇ ಉಲ್ಲೇಖ ಮಾಡಲಾಗಿದೆ. ಅನಂತರ ನಗರ ಬೆಳೆಯುತ್ತಾ ಹೋದಂತೆ, ಕಲ್ಮಶಗಳು ಇಂದ್ರಾಣಿ ಸೇರುವ ಸಲುವಾಗಿ ನದಿಯನ್ನು ತೋಡನ್ನಾಗಿ ಪರಿವರ್ತಿಸಲಾಯಿತು ಎನ್ನುವ ಆರೋಪವಿದೆ.

ಕೃಷಿ ಸಂಸ್ಕೃತಿಗೆ ಮಾರಕ
ಕಲ್ಮಶ ನೀರಿನಿಂದಾಗಿ ನಗರದ ಮಠದ ಬೆಟ್ಟು, ಬೈಲಕೆರೆಯಲ್ಲಿ ಕೃಷಿ ಸಂಸ್ಕೃತಿ ಇಲ್ಲವಾಗಿದೆ. ಚಿಟಾ³ಡಿ ಮತ್ತು ಕೊಡವೂರಿನಲ್ಲಿ ಎರಡು ಕಂಬಳಗಳು ನಡೆಯುತ್ತಿದ್ದವು. ಕೃಷಿ ಕಡಿಮೆಯಾದ ಮೇಲೆ ಕಂಬಳವೂ ನೆಪಮಾತ್ರಕ್ಕೆ ಇದೆ. ನದಿ ಪರಿಸರದಲ್ಲಿ ಸುಮಾರು 250 ಬಾವಿಗಳ ನೀರು ಹಾಳಾಗಿ ನಗರಸಭೆಯ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಇದರಲ್ಲಿ ನಡೆಯುತ್ತಿದ್ದ ಹಿನ್ನೀರ ಮೀನುಗಾರಿಕೆ ಸಂಪೂರ್ಣವಾಗಿ ನಿಂತೇ ಹೋಗಿದೆ.

Advertisement

ನೀರಿನ ಮೂಲಕ್ಕೆ ಆಪತ್ತು
ನಗರದ ಒಳಚರಂಡಿಗಳಲ್ಲಿ ಹರಿಯುವ ತ್ಯಾಜ್ಯ ಇಂದ್ರಾಣಿ ಹೊಳೆ ಸೇರುತ್ತಿರುವುದರಿಂದ ನದಿ ಪಾತ್ರದ ಬಾವಿಗಳೆಲ್ಲ ಕಲ್ಮಶವಾಗಿವೆ. ಇನ್ನೊಂದು ಕಡೆ ಡ್ರೈನೇಜ್‌ ಪೈಪ್‌ಲೈನ್‌ ಸೋರಿಕೆಯಿಂದ ನಗರದ ಬಾವಿಗಳು ಕಲುಷಿತಗೊಂಡಿವೆ. ನೀರು ಕಪ್ಪುಬಣ್ಣಕ್ಕೆ ತಿರುಗಿದ್ದು, ನದಿ ಅಕ್ಕಪಕ್ಕದಲ್ಲಿರುವ ಬಾವಿಗಳ ನೀರು ಹಾಳಾಗಿದೆ. ಸಮಸ್ಯೆ ಹೀಗೇ ಮುಂದುವರಿದರೆ ನಗರದಲ್ಲಿ ಶುದ್ಧ ನೀರಿನ ಮೂಲ ಸಿಗುವುದು ಕಷ್ಟ ಸಾಧ್ಯ. ಜನರು ನಗರಸಭೆ ನೀರು ನಂಬಿಕೊಂಡು ಜೀವನ ನಡೆಸಬೇಕಾಗುತ್ತದೆ.

ಶೀಘ್ರದಲ್ಲಿ ಪರಿಹಾರ‌
ಕಳೆದ ಅನೇಕ ವರ್ಷದಿಂದ ಈ ಸಮಸ್ಯೆ ಇದೆ. ಈ ಕುರಿತು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜನರ ಸಮಸ್ಯೆ ಅರ್ಥವಾಗುತ್ತಿದೆ. ಕೊಳಚೆ ನೀರಿನ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಮಾಡಬೇಕು ಎನ್ನುವ ಆಸೆ ಇದೆ. ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಬೇಕಿದೆ.
-ಸವಿತಾ ಹರೀಶ್‌ ರಾಮ್‌, ಬನ್ನಂಜೆ ವಾರ್ಡ್‌ ಸದಸ್ಯೆ

ಇಂದ್ರಾಣಿ ಸಂಪೂರ್ಣ ಕಲುಷಿತ
ನಗರದಲ್ಲಿ ಹುಟ್ಟಿ ನಗರದಲ್ಲಿ ಹರಿಯುವ ಏಕೈಕ ನದಿ ಇಂದ್ರಾಣಿ. ಸುಮಾರು 8 ಕೆರೆಗಳಿಗೆ ಜೀವ ತುಂಬುತ್ತಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ನಗರದ ಕೊಳಚೆ ನೀರು ನೇರವಾಗಿ ನದಿ ಸೇರುತ್ತಿರುವುದರಿಂದ ಇಂದ್ರಾಣಿ ಸಂಪೂರ್ಣ ಕಲುಷಿತಗೊಂಡಿದ್ದು, 200ಕ್ಕೂ ಹೆಚ್ಚು ಬಾವಿಗಳು, ಕೆರೆಗಳು ಹಾಳಾಗಿರುವ ಬಗ್ಗೆ ಮಾಹಿತಿ ದೊರಕಿದೆ.
-ಪ್ರಕಾಶ ಮಲ್ಪೆ, ಪರಿಸರ ಪ್ರೇಮಿ

ಕೊಳಚೆ ನೀರು ನೇರವಾಗಿ ನದಿಗೆ
ಮಠದ ಬೆಟ್ಟು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಿಸದೆ ನೇರವಾಗಿ ನದಿಗೆ ಬಿಡಲಾಗುತ್ತಿದೆ. ಕಲ್ಸಂಕದ ಸಮೀಪ ಕೃಷಿಗಾಗಿ ಶೇಖರಿಸಿದ ನೀರಿನ ಜತೆಗೆ ಕೊಳಚೆ ನೀರನ್ನೂ ಬಿಡುತ್ತಿದ್ದಾರೆ. ಇದರಿಂದಾಗಿ ಬಾವಿ ನೀರು ಹಾಳಾಗುವುದರ ಜತೆಗೆ ಪರಿಸರ ದುರ್ನಾತ ಬೀರುತ್ತಿದೆ.
-ಉದಯ ಮಠದಬೆಟ್ಟು

ಹೋರಾಟದ ದಿಕ್ಕು ಬದಲಾಗಲಿದೆ
ನಗರಸಭೆ ಅಧಿಕಾರಿಗಳಿಗೆ ಪರಿಸರ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತು ಕಾಳಜಿ ಇಲ್ಲ. ನಗರದ ಕೊಳಚೆ ನೀರನ್ನು ಶುದ್ಧೀಕರಿಸದೆ ನೇರವಾಗಿ ಇಂದ್ರಾಣಿ ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಹರಿಯುವ ಪರಿಸರ ಸಂಪೂರ್ಣವಾಗಿ ಹಾಳಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರ ಗಮನಕ್ಕೆ ತರಲಾಗಿದೆ. 6 ಬಾರಿ ಮನವಿಯನ್ನೂ ಸಲ್ಲಿಸಲಾಗಿದೆ. ಸಮಸ್ಯೆ ಸ್ಪಂದಿಸದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟದ ದಿಕ್ಕು ಬದಲಾಗಲಿದೆ.
-ಶ್ರೀಕಾಂತ ಶೆಟ್ಟಿ,
ಇಂದ್ರಾಣಿ ನದಿ ಉಳಿಸಿ ತಂಡದ ಸಂಚಾಲಕರು

ಉಚಿತಸೊಳ್ಳೆ ಉತ್ಪಾದಕ ಕೇಂದ್ರ
ನಗರಸಭೆಯಿಂದ ಮಠದಬೆಟ್ಟಿಗೆ ಉಚಿತವಾಗಿ ಸೊಳ್ಳೆ ಉತ್ಪಾದಕ ಕೇಂದ್ರ ನೀಡಿದೆ. ಕೊಳಚೆ ನೀರು ಶುದ್ಧೀ ಕರಿಸದೆ ಇಂದ್ರಾಣಿ ನದಿಗೆ ಬಿಡುತ್ತಿರು ವುದರಿಂದ ಸ್ಥಳೀಯರು ನಿತ್ಯ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
-ಆನಂದ ಸುವರ್ಣ, ಮಠದ ಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next