Advertisement

ಜಲಮೂಲ ರಕ್ಷಣೆ ಪ್ರತಿಯೊಬ್ಬರ ಹೊಣೆ

11:16 AM Jul 10, 2019 | Suhan S |

ಯಲಬುರ್ಗಾ: ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳುಸುವ ಮೂಲಕ ಜಲ ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದು ವಿಜ್ಞಾನಿ ಕಶಪ್‌ ಪರಾಗ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಕೇಂದ್ರ ಸರಕಾರ ಜಾರಿಗೊಳಿಸಿರುವ ಜಲಶಕ್ತಿ ಅಭಿಯಾನದ ಕೇಂದ್ರ ಅಧ್ಯಯನ ತಂಡ ನಡೆಸಿದ ತಾಲೂಕಿನ ಗ್ರಾಪಂ ಅಧ್ಯಕ್ಷರಿಗೆ ಹಾಗೂ ಪಿಡಿಒಗಳಿಗೆ ಹಮ್ಮಿಕೊಂಡ ಜಲಸಂರಕ್ಷಣೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ನಿತ್ಯ ಬಳಸುವ ನೀರನ್ನು ಮರುಬಳಕೆ ಮಾಡಬೇಕು. ಮಿತಿಮೀರಿ ಕೊಳವೆಬಾವಿ ಕೊರೆಸುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಅಮೂಲ್ಯವಾಗಿರುವ ನೀರನ್ನು ಸಂರಕ್ಷಿಸುವ ದೃಷ್ಟಿಯಿಂದ ಜಲಮೂಲಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ನೀರನ್ನು ಮಿತವಾಗಿ ಬಳಕೆ ಮಾಡದಿದ್ದರೆ ಮುಂದಿನ ದಿನದಲ್ಲಿ ಹಣಕೊಟ್ಟು ನೀರನ್ನು ಪಡೆದುಕೊಳ್ಳವ ಸ್ಥಿತಿ ಎದುರಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಆ. 15ಕ್ಕೆ ಮತ್ತೂಮ್ಮೆ ಕೇಂದ್ರ ತಂಡ ಭೇಟಿ ನೀಡಲಿದೆ. ಅಷ್ಟರೊಳಗಾಗಿ ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿರಬೇಕು. ನೀರು ಮಿತ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಪಂ ಆಡಳಿತ ಮಂಡಳಿ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಶಾಲಾ ಮಕ್ಕಳೊಂದಿಗೆ ನೀರು ಮಿತ ಬಳಕೆ ಕುರಿತು ಜಾಗೃತಿ ಜಾಥಾ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.

ಅಧ್ಯಯನ ತಂಡದ ಸದಸ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಸ್‌.ಕೆ. ಜಾ ಮಾತನಾಡಿ, ಅಂರ್ತಜಲ ಹೆಚ್ಚಳಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು. ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ತಾಲೂಕಿನಲ್ಲಿ ಜಲಶಕ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಕೆರೆ ಪುನಶ್ಚೇತನ, ಬತ್ತಿರುವ ಬೋರ್‌ವೆಲ್ ಮರುಪೂರಣ, ಜಲಾನಯನ ಅಭಿವೃದ್ಧಿ, ಅರಣ್ಯೀಕರಣ, ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡುವುದು ಜಲಶಕ್ತಿ ಅಭಿಯಾನ ಮೂಲ ಉದ್ದೇಶ ಎಂದರು.

Advertisement

ಚಾಲ್ತಿಯಲ್ಲಿರುವ ಯೋಜನೆಗಳ ಮೂಲಕವೇ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ನೀರಿನ ಸಮಸ್ಯೆ ನಿವಾರಿಸಲು ಒತ್ತು ನೀಡಬೇಕು. ನರೇಗಾದನ್ವಯ ಅಂತರ್ಜಲ ಅಭಿವೃದ್ಧಿ, ಸಂರಕ್ಷಣೆಗೆ ಅಗತ್ಯವಿರುವ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಆರ್ಥಿಕ ಸಲಹೆಗಾರ ಪ್ರವೀಣ ಮೆಹತೋ, ತಾಪಂ ಇಒ ಡಿ. ಮೋಹನ, ಕೃಷಿ ಅಧಿಕಾರಿ ಹಾರೋನ ರಾಶೀದ್‌, ತಾಪಂ ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ, ಜಿಪಂ ಎಇಇ ಯು.ಎಚ್. ಮಂಡಸೋಪ್ಪಿ, ಗ್ರಾಪಂ ಅಧ್ಯಕ್ಷರಾದ ಶಂಭುಗೌಡ ಪಾಟೀಲ, ಈರಪ್ಪ ಗುಡಿಸಲದ, ಬಸವರಾಜ ಗಟ್ಟೆಪ್ಪನವರ, ತಾಲೂಕಿನ ಪಿಡಿಒಗಳು, ತಾಪಂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next