Advertisement

ಪಿಜಿಗಳಿಗೂ ನೀರಿನ ಅಭಾವ; ವೆನ್ಲಾಕ್ ನಲ್ಲಿ ರೇಷನಿಂಗ್‌

03:05 AM Apr 26, 2019 | Team Udayavani |

ನಗರಾದ್ಯಂತ ಮನೆಮನೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಾದ ಮಾಲ್‌, ಸಾರ್ವಜನಿಕ ಶೌಚಾಲಯಗಳು, ಆಸ್ಪತ್ರೆಗಳು, ಬಸ್‌ ನಿಲ್ದಾಣಗಳಲ್ಲಿ “ಉದಯವಾಣಿ-ಸುದಿನ’ ತಂಡ ಗುರುವಾರ ಸಂಚರಿಸಿ ಅಲ್ಲಿನ ವಾಸ್ತವ ಸ್ಥಿತಿ ತಿಳಿಸುವ ಪ್ರಯತ್ನ ಇಲ್ಲಿದೆ.

Advertisement

ಮಹಾನಗರ: ಶೌಚಾಲಯ ದಲ್ಲಿ ಈವರೆಗೆ ನೀರಿನ ಸಮಸ್ಯೆ ಕಾಡಿಲ್ಲ. ಆದರೆ, ನಗರಾದ್ಯಂತ ಸಮಸ್ಯೆ ಇರುವುದರಿಂದ ಮುಂದೆ ಸಮಸ್ಯೆ ತಲೆದೋರಬಹುದೋ ಎಂಬ ಆತಂಕವಿದೆ. ಅದಕ್ಕಾಗಿ ಸಾರ್ವಜನಿಕರಿಗೂ ಅವಶ್ಯಕ್ಕಿಂತ ಹೆಚ್ಚಾಗಿ ನೀರು ಪೋಲು ಮಾಡದಂತೆ ಹೇಳುತ್ತಿದ್ದೇವೆ.. ಹೀಗೆಂದವರು ನಗರದ ಬಿಜೈ ಕೆಎಸ್ಸಾರ್ಟಿಸಿ ಮತ್ತು ಜ್ಯೋತಿ ಬಸ್‌ ನಿಲ್ದಾಣದ ಶೌಚಾಲಯದಲ್ಲಿರುವ ಸಿಬಂದಿ.

ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ತಲೆದೋರದಿದ್ದರೆ, ಇತ್ತ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನೀರಿನ ರೇಷನಿಂಗ್‌ನ್ನೇ ಆರಂಭಿಸಲಾಗಿದೆ!

ಶೌಚಾಲಯಗಳ ಸಿಬಂದಿ ಹೇಳುವ ಪ್ರಕಾರ, ಶೌಚಾಲಯಕ್ಕೆ ಆಗಮಿಸುವ ಕೆಲವು ಮಂದಿ ಅಗತ್ಯಕ್ಕಿಂತ ಹೆಚ್ಚಾಗಿ ನೀರು ಬಳಸುತ್ತಿರುತ್ತಾರೆ. ನೀರಿನ ಸಮಸ್ಯೆ ಬಿಗಡಾಯಿಸಿರುವುದರಿಂದ ಕೈಕಾಲು, ಮುಖ ತೊಳೆಯುವುದಕ್ಕೆ ನೀರನ್ನು ಅತಿಯಾಗಿ ಬಳಸದಿರುವುದೇ ಒಳಿತು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ.

ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಜ್ಯೋತಿ ಬಸ್‌ ನಿಲ್ದಾಣ, ಹಂಪನಕಟ್ಟೆ ಸಾರ್ವಜನಿಕ ಶೌಚಾಲಯಗಳಲ್ಲಿ ಸದ್ಯ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ ಮುಂದೆ ನೀರಿನ ಸಮಸ್ಯೆ ಉಲ್ಬಣಗೊಂಡರೆ ನೀರು ನಿಲುಗಡೆಯಾಗಬಹುದು ಎನ್ನುತ್ತಾರೆ ಶೌಚಾಲಯ ಸಿಬಂದಿ. ಮೂರ್‍ನಾಲ್ಕು ದಿನಗಳ ಹಿಂದೆ ನೀರಿನ ಸಮಸ್ಯೆ ಯಿಂದಾಗಿ ಬೀಗ ಜಡಿಯಲಾಗಿದ್ದ ಕಂಕನಾಡಿ ಸಾರ್ವಜನಿಕ ಶೌಚಾಲಯ ಗುರುವಾರ ಬಾಗಿಲು ತೆರೆದಿದೆ. ಸದ್ಯ ನೀರಿನ ರೇಷನಿಂಗ್‌ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶೌಚಾಲಯಕ್ಕೆ ನೀರು ಪೂರೈಕೆಯಾಗುತ್ತಿದೆ. ನಗರದ ಮೂರು ಪ್ರಮುಖ ಮಾಲ್‌ಗ‌ಳು ಶೌಚಾಲಯ ಗಳಿಗೆ ಮತ್ತು ಕುಡಿ ಯುವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಮಾಡಿಲ್ಲ.

Advertisement

ನೀರಿನ ಸಮಸ್ಯೆ:
ರಜೆಯಲ್ಲಿ ಬದಲಾವಣೆ
ನಗರದ ಕರ್ನಾಟಕ ಪಾಲಿಟೆಕ್ನಿಕ್‌ ಸಂಸ್ಥೆಯಲ್ಲಿ ಸದ್ಯ ನೀರಿನ ಸಮಸ್ಯೆ ತಲೆದೋರಿಲ್ಲ. ಈಗ ರಜಾ ಅವಧಿಯಾಗಿರುವುದರಿಂದ ವಿದ್ಯಾರ್ಥಿಗಳೆಲ್ಲ ತಂತಮ್ಮ ಊರಿಗೆ ತೆರಳಿದ್ದಾರೆ. ಎ. 29ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ಹಾಸ್ಟೆಲ್‌ಗ‌ಳಿಗೆ ಬರಲಿದ್ದಾರೆ. ಆ ಬಳಿಕ ಸಮಸ್ಯೆಯಾಗಬಹುದೋ ಗೊತ್ತಿಲ್ಲ ಎನ್ನುತ್ತಾರೆ ಕೆಪಿಟಿ ಪ್ರಾಂಶುಪಾಲ ದೇವರಸೇ ಗೌಡ.

ನಗರದ ಕೆಲವು ಖಾಸಗಿ ಕಾಲೇಜು ಗಳಲ್ಲಿ ಈ ಬಾರಿ ನೀರಿನ ಅಭಾವ ಮನಗಂಡು ಬೇಸಗೆ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ. ಪ್ರತಿ ವರ್ಷ ಶೈಕ್ಷಣಿಕ ವರ್ಷ ಮುಗಿದರೂ ಕೆಲವೊಂದು ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ತಡವಾಗಿ ರಜೆ ನೀಡಲಾಗುತ್ತಿತ್ತು. ಆದರೆ ನಗರಕ್ಕೆ ನೀರಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್‌ಗ‌ಳಲ್ಲೇ ಇದ್ದರೆ ನೀರು ಪೂರೈಕೆ ಕಷ್ಟವಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಕಾಲೇಜು, ಹಾಸ್ಟೆಲ್‌ಗ‌ಳಲ್ಲಿ ವಹಿಸಲಾಗಿದೆ.

ಪಿಜಿಗಳಲ್ಲಿ ನೀರಿಲ್ಲ
ದೂರದೂರಿನ ವಿದ್ಯಾರ್ಥಿಗಳು, ಉದ್ಯೋಗಿಗಳು ಉಳಿದುಕೊಳ್ಳುವ ಪೇಯಿಂಗ್‌ ಗೆಸ್ಟ್‌ (ಪಿಜಿ)ಮನೆಗಳಲ್ಲಿ ನೀರಿನ ಅಭಾವ ಹೆಚ್ಚಿದೆ. ವಾರದಲ್ಲಿ ನಾಲ್ಕು ದಿನ ನೀರು ಪೂರೈಕೆ, ಎರಡು ದಿನ ಸ್ಥಗಿತ ಮೂಲಕ ನೀರಿನ ರೇಷನಿಂಗ್‌ ಆರಂಭಿಸಿದಾಗ ಅದರ ಮೊದಲ ಪರಿಣಾಮ ತಟ್ಟಿದ್ದು ಪಿಜಿಗಳ ಮೇಲೆ. ಕನಿಷ್ಠ 30-40 ಮಂದಿ ವಾಸಿಸುವ ಮನೆಗಳಲ್ಲಿ ದಿನದ ನೀರಿನ ಸಂಗ್ರಹ ದಿನಕ್ಕಷ್ಟೇ ಸಾಕಾಗುವುದರಿಂದ ಸ್ಥಗಿತಗೊಂಡ ದಿನಗಳಲ್ಲಿ ಸ್ನಾನಕ್ಕೂ ಪರದಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಪಿಜಿಯೊಂದರ ನಿವಾಸಿಗಳಾದ ಸುಶ್ಮಿತಾ, ಕಾವ್ಯಾ. ಸದ್ಯ ರೇಷನಿಂಗ್‌ ಸ್ಥಗಿತ ಗೊಂಡರೂ ಯಾವಾಗ ನೀರು ನಿಲುಗಡೆಗೊಳ್ಳುವುದೋ ಎಂಬ ಆತಂಕ ಇನ್ನೂ ಹೋಗಿಲ್ಲ ಎನ್ನುತ್ತಾರೆ ಪಿಜಿ ನಿವಾಸಿಗಳು.

ಲೇಡಿಗೋಶನ್‌ಗೆ
ಬೋರ್‌ವೆಲ್‌ ನೀರು ಆಸರೆ
ಲೇಡಿಗೋಶನ್‌ ಸರಕಾರಿ ಆಸ್ಪತ್ರೆಯಲ್ಲಿ ಈವರೆಗೆ ನೀರಿನ ಸಮಸ್ಯೆ ಬಾಧಿಸಿಲ್ಲ. ಆಸ್ಪತ್ರೆ ಆವರಣದಲ್ಲಿರುವ ಎರಡು ಬೋರ್‌ವೆಲ್‌ಗ‌ಳಿಂದ ಆಸ್ಪತ್ರೆಗೆ ಸಾಕಾಗುವಷ್ಟು ನೀರು ಸಿಗುತ್ತಿದೆ. ಆದರೆ ಕಳೆದ ವರ್ಷ ಮೇ ಅಂತ್ಯದ ವೇಳೆ ಒಂದು ಬೋರ್‌ವೆಲ್‌ನಲ್ಲಿ ನೀರಿಲ್ಲದಂತಾಗಿತ್ತು. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೇಕಾದಾಗ ಟ್ಯಾಂಕರ್‌ ನೀರು ನೀಡಲು ಸಂಬಂಧಪಟ್ಟವರಿಗೆ ಬರೆಯ ಲಾಗುವುದು ಎಂದು ಲೇಡಿಗೋಶನ್‌ ಆಸ್ಪ ತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ “ಉದಯವಾಣಿ-ಸುದಿನ’ಕ್ಕೆ ತಿಳಿಸಿದರು.

ವಾಹನಗಳನ್ನು ತೊಳೆಯುವಾಗ ಎಚ್ಚರ
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಬೆಳಗ್ಗೆ ಅಥವಾ ಸಂಜೆ ವಾಹನಗಳನ್ನು ತೊಳೆಯುವಾಗ ನೀರು ವ್ಯರ್ಥ ಮಾಡುವುದನ್ನು ನೋಡಬಹುದು. ಆದರೆ, ಬೇಸಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮಾಲಕರು ತಮ್ಮ ವಾಹನಗಳನ್ನು ತೊಳೆಯುವುದನ್ನು ಕಡಿಮೆಗೊಳಿಸುವ ಮೂಲಕ ನೀರು ಉಳಿಸುವುದಕ್ಕೆ ಕೈಜೋಡಿಸಬಹುದು.

ಬಾವಿಗಳು ಸ್ವತ್ಛವಾಗಿರಲಿ
ಮನೆಯ ಆವರಣಗಳಲ್ಲಿರುವ ಬಾವಿಗಳನ್ನು ಸ್ವಚ್ಚವಾಗಿಟ್ಟು ಬಳಕೆ ಯೋಗ್ಯ ವಾಗಿರಿಸುವುದು ಅತಿ ಅಗತ್ಯ. ಪ್ರಸ್ತುತ ನಳ್ಳಿ ನೀರು ಬರುವುದರಿಂದ ಬಾವಿಗಳನ್ನು ಕಡೆಗಣಿಸಲಾಗುತ್ತಿದೆ. ಬಾವಿಗಳನ್ನು ಸ್ವಚ್ಚವಾಗಿಟ್ಟುಕೊಂಡು ಕುಡಿಯಲು ಯೋಗ್ಯವಾಗಿದ್ದರೆ ಬಳಸಬಹುದಾಗಿದೆ. ಕುಡಿಯಲು ಯೋಗ್ಯವಾಗಿರದಿದ್ದರೆ ಇತರ ಉದ್ದೇಶಗಳಿಗೆ ಬಳಸಬಹುದಾಗಿದೆ.

ನೀರು ಹಂಚಿಕೊಳ್ಳಿ
ಬಹಳಷ್ಟು ಮನೆಗಳ ಆವರಣದ ಬಾವಿಗಳಲ್ಲಿ ನೀರಿದೆ. ಸಂಕಷ್ಟ ಕಾಲದಲ್ಲಿ ನೆರೆಹೊರೆಯವರ ಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ. ಇನ್ನೇನು ಗರಿಷ್ಠ ಎಂದರೆ ಒಂದು ತಿಂಗಳಲ್ಲಿ ಮಳೆ ಬರಲೇ ಬೇಕು. ಅಲ್ಲಿಯವರೆಗೆ ಕುಡಿಯುಲು ಒಂದೆರಡು ಕೊಡಪಾನ, ಬಕೆಟ್‌ ನೀರು ನೀಡಿ ಸ್ಪಂದಿಸಿ. ಕೆಲವು ಕಡೆಗಳಲ್ಲಿ ಖಾಸಗಿಯವರು ತಮ್ಮ ಬಾವಿಗಳಿಂದ, ಬೋರ್‌ವೆಲ್‌ಗ‌ಳಿಂದ ಅಕ್ಕಪಕ್ಕದ ಮನೆಗಳಿಗೆ ಕುಡಿಯಲು ನೀರು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಕೆಲವು ತಾವೆ ಪಂಪ್‌ ಮಾಡಿ ಇತರರ ಬಕೆಟ್‌, ಕೊಡಪಾನಗಳಿಗೆ ತುಂಬಿಸಿ ಕಳುಹಿಸಿಕೊಡುತ್ತಾರೆ.

ಪ್ರಾಣಿ, ಪಕ್ಷಿಗಳ ಬಗ್ಗೆ ದಯೆ ಇರಲಿ
ಪಕ್ಷಿ ಸಂಕುಲನ ಕೂಡ ಕುಡಿಯುವ ನೀರಿನ ಅಭಾವ ಎದುರಿಸುತ್ತಿವೆ. ಅವುಗಳ ಬಗ್ಗೆಯೂ ದಯೆ ತೋರೋಣ. ಪಕ್ಷಿಗಳು ಅತ್ಯಂದ ಸೂಕ್ಷ್ಮ ಜೀವಿಗಳು. ಅದುದರಿಂದ ಚಿಕ್ಕ ಪಾತ್ರೆಯಲ್ಲಿ ನೀರನ್ನು ತುಂಬಿ ಮನೆಯ ಹೊರಗ ಅಥವಾ ತಾರಸಿನ ಮೇಲೆ ಇಟ್ಟು , ಪ್ರಾಣಿ ಪಕ್ಷಿಗಳಿಗೂ ನೀರು ಒದಗಿಸಿದರೆ ಅವುಗಳು ದಾಹ ನೀಗಿಸಿ.

ಬತ್ತಿದ ಬೋರ್‌ವೆಲ್‌!
ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆಯ ಬಳಕೆಗೆಂದೇ ಎರಡು ಬಾವಿ, ಎರಡು ಬೋರ್‌ವೆಲ್‌ಗ‌ಳಿವೆ. ಪ್ರಸ್ತುತ ಎರಡೂ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಪಂಪ್‌ ಮಾಡುವುದು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಆಸ್ಪತ್ರೆಯ ಎರಡು ಬೋರ್‌ವೆಲ್‌ಗ‌ಳು ಸಂಪೂರ್ಣ ಬತ್ತಿ ಹೋಗಿರುವುದರಿಂದ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ.

ವೇಳಾಪಟ್ಟಿ ಆಧರಿಸಿ ನೀರು ಪೂರೈಕೆ
ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಕಿಡ್ನಿ ವೈಫಲ್ಯಗೊಂಡ ರೋಗಿಗಳಿಗೆ ಡಯಾಲಿಸಿಸ್‌ ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಅಲ್ಲದೆ, ದಿನಕ್ಕೆ ಅಂದಾಜು 3,500 ಮಂದಿ ವಿವಿಧ ರೀತಿಯ ಚಿಕಿತ್ಸೆ ಪಡೆಯುವ ಆಸ್ಪತ್ರೆಯಲ್ಲಿ ನೀರಿನ ಪೂರೈಕೆಯೇ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಆಸ್ಪತ್ರೆಯಲ್ಲೇ ನೀರಿನ ರೇಷನಿಂಗ್‌ ಆರಂಭವಾಗಿದೆ. 905 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಶೇ. 80ರಷ್ಟು ಹಾಸಿಗೆ ಭರ್ತಿಯಾಗಿರುತ್ತದೆ. ರೋಗಿಗಳ ಸಂಬಂಧಿಕರೂ ಸೇರಿ ಸುಮಾರು 2,000 ಮಂದಿ ಇಲ್ಲಿರುತ್ತಾರೆ. ಅಲ್ಲದೆ, ಹೊರರೋಗಿ ವಿಭಾಗದಲ್ಲಿ ದಿನಕ್ಕೆ ಸುಮಾರು 1,500 ಮಂದಿ ಚಿಕಿತ್ಸೆ ಪಡೆಯುತ್ತಾರೆ. ಇವರೆಲ್ಲರ ನೀರಿನ ಆವಶ್ಯಕತೆ ಪೂರೈಸಲು ನೀರಿನ ರೇಷನಿಂಗ್‌ ಮಾಡಲಾಗಿದೆ. ಬೆಳಗ್ಗೆ 6ರಿಂದ 8, 10ರಿಂದ ಮಧ್ಯಾಹ್ನ 12, ಸಂಜೆ 4ರಿಂದ 6ರ ತನಕ ನೀರು ಪೂರೈಕೆಯಾಗುತ್ತಿದೆ. ನಡುವಿನ ಅವಧಿಯಲ್ಲಿ ಸ್ಥಗಿತ ಮಾಡಲಾಗುತ್ತಿದೆ.

ಮಾಹಿತಿ ನೀಡಿ
ಮಹಾನಗರ ವ್ಯಾಪ್ತಿಯಲ್ಲಿ ನೀರಿನ ತೀವ್ರ ಸಮಸ್ಯೆ ಇದ್ದಲ್ಲಿ ತಮ್ಮ ಹೆಸರಿನ ಸಹಿತ “ಉದಯವಾಣಿ’ ಸುದಿನ ವಾಟ್ಸಪ್‌ ನಂಬರ್‌ 9900567000 ಬರೆದು ಕಳುಹಿಸಿ. ಅದನ್ನು ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಜತೆಗೆ ನೀರು ಉಳಿತಾಯ ಮಾಡುವ ಬಗ್ಗೆ ಅಥವಾ ಮಾದರಿಯಾಗುವ ಪರ್ಯಾಯ ನೀರಿನ ವ್ಯವಸ್ಥೆಯನ್ನು ತಮ್ಮ ಮನೆಗಳಲ್ಲಿ ಸ್ವಯಂ ಅಳವಡಿಸಿಕೊಂಡಿದ್ದರೆ ಅಂತಹ ಯಶೋಗಾಥೆಗಳನ್ನೂ ಕಳುಹಿಸಬಹುದು.

ಕೊರತೆ ನೀಗಿಸಲು ರೇಷನಿಂಗ್‌
ನೀರಿನ ತೀವ್ರ ಕೊರತೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ನೀರಿನ ರೇಷನಿಂಗ್‌ ಆರಂಭಿಸಲಾಗಿದೆ. ವೇಳಾಪಟ್ಟಿಯನುಸಾರ ನೀರು ಪೂರೈಕೆ ಮಾಡಲಾಗುತ್ತಿದೆ. ಆಸ್ಪತ್ರೆಯ ಆವರಣದಲ್ಲಿರುವ ಎರಡು ಬೋರ್‌ವೆಲ್‌ ಬತ್ತಿ ಹೋಗಿದ್ದು, ಎರಡು ಬಾವಿಗಳಲ್ಲಿಯೂ ನೀರು ಕಡಿಮೆಯಾಗಿದೆ.
 - ಡಾ| ರಾಜೇಶ್ವರಿ ದೇವಿ, ವೈದ್ಯಕೀಯ ಅಧೀಕ್ಷಕಿ, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next