Advertisement

1.10 ಲಕ್ಷ ಕುಡಿವ ನೀರುನ ಎಕರೆಗೆ ನೀರಿನ ಕೊರತೆ

04:56 PM Jul 22, 2018 | Team Udayavani |

ಚಾಮರಾಜನಗರ: ತಮಿಳುನಾಡಿಗೆ ಪ್ರತಿವರ್ಷ ಕಬಿನಿ ಜಲಾಶಯದಿಂದ ನಿಗದಿತ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದರೂ, ನೀರಿನ ಕೊರತೆಯಿಂದಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿರುವ ಕಬಿನಿ ಬಲದಂಡೆ, ಎಡದಂಡೆ ನಾಲೆಗಳಿಗೆ ಸಮರ್ಪಕವಾಗಿ ನೀರು ದೊರಕದೇ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

Advertisement

ಸಮುದ್ರದ ನೆಂಟು ಉಪ್ಪಿಗೆ ಬರ ಎಂಬ ಗಾದೆಯಂತೆ ಕಬಿನಿ ಜಲಾಶಯ ಅವಳಿ ಜಿಲ್ಲೆಯಲ್ಲೇ ಇದ್ದರೂ, ತಿಂಗಳುಗಟ್ಟಲೆ ನೀರು ಸಂಗ್ರಹಿಸಿಕೊಂಡು ಪ್ರತಿ ತಿಂಗಳು ತಮಿಳುನಾಡಿಗೆ ನದಿಯ ಮೂಲಕ ನಿಗದಿತ ಪ್ರಮಾಣದ ನೀರು ಬಿಡಲಾಗುತ್ತಿದೆ. ಆದರೆ ರಾಜ್ಯದ ರೈತರ ಬೆಳೆಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. ಅದರಲ್ಲೂ ಕಳೆದ ವರ್ಷಗಳಿಂದ ಎರಡೂ ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ಕಬಿನಿ ನಾಲೆಯಲ್ಲಿ ನೀರು ಹರಿಸಲೇ ಇಲ್ಲ.

55600 ಎಕರೆ ಅಚ್ಚುಕಟ್ಟು : ಕಬಿನಿ ಬಲದಂಡೆ ನಾಲೆಯ ನೀರು ಆಶ್ರಯಿಸಿ ಚಾಮರಾಜನಗರ ಜಿಲ್ಲೆ ಯಲ್ಲಿ ಒಟ್ಟು 55600 ಎಕರೆ ಅಚ್ಚುಕಟ್ಟು ಪ್ರದೇಶ ವಿದೆ. ಇದರಲ್ಲಿ ಚಾಮರಾಜನಗರ ತಾಲೂಕಿನ 3400 ಎಕರೆ, ಯಳಂದೂರು ತಾಲೂಕಿನ 11 ಸಾವಿರ ಎಕರೆ, ಕೊಳ್ಳೇಗಾಲ ತಾಲೂಕಿನ 36200 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಇನ್ನು, ಮೈಸೂರು ಜಿಲ್ಲೆ ಒಟ್ಟು 51350 ಎಕರೆ ಯಷ್ಟು ಅಚ್ಚುಕಟ್ಟು ಪ್ರದೇಶವನ್ನು ಹೊಂದಿದ್ದು, ಹೆಗ್ಗಡದೇವನಕೋಟೆ ತಾಲೂಕಿನಲ್ಲಿ 4,074 ಎಕರೆ, ತಿ. ನರಸೀಪುರ ತಾಲೂಕಿನಲ್ಲಿ 30 ಸಾವಿರ, ನಂಜನಗೂಡು ತಾಲೂ ಕಿನಲ್ಲಿ 17,276 ಎಕರೆ ಅಚ್ಚುಕಟ್ಟು ಒಳಗೊಂಡಿದೆ. ಅಲ್ಲದೇ ಕಬಿನಿ ಎಡದಂಡೆ ನಾಲೆಯು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟಿ ತಾಲೂಕಿನಲ್ಲಿ ಮಾತ್ರ 3,125 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ.

ಎರಡೂ ಜಿಲ್ಲೆಯಿಂದ ಕಬಿನಿ ಆಶ್ರಯಿಸಿ ಒಟ್ಟು 1,10,075 ಎಕರೆ ಜಮೀನು ನೀರಾವರಿ ಸೌಲಭ್ಯ ಕ್ಕೊಳಪಟ್ಟಿದೆ. ಕಬಿನಿ ಜಲಾಶಯ ಪಕ್ಕದಲ್ಲೇ ಇದ್ದರೂ ಇಷ್ಟು ಪ್ರಮಾಣದ ಅಚ್ಚುಕಟ್ಟು ಪ್ರದೇಶಕ್ಕೆ ತೃಪ್ತಿಕರ ವಾಗಿ ನೀರು ಪೂರೈಕೆಯಾಗುತ್ತಿಲ್ಲ. ಮಳೆಯ ಕೊರತೆಯಿಂದಾಗಿ ಕಬಿನಿ ಜಲಾಶಯ ಭರ್ತಿ ಯಾಗದ ಕಾರಣ ಕಳೆದ ಎರಡು ವರ್ಷಗಳಿಂದ ಈ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಬಿಡಲಿಲ್ಲ.

ಒಣಗಿನಿಂತ 55600 ಎಕರೆ ಪ್ರದೇಶ: ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕಿನ ಕೆಲ ಭಾಗ ಮಾತ್ರ ನೀರಾವರಿ ಸೌಲಭ್ಯ ಪಡೆದಿವೆ. ಉಳಿದಂತೆ ಜಿಲ್ಲೆಯಲ್ಲಿ ಮಳೆಯಾಶ್ರಿತ ಬೇಸಾಯವಿದೆ. ಕೊಳವೆ ಬಾವಿಗಳಲ್ಲಿ ಒಂದು ಸಾವಿರ ಅಡಿ ಕೊರೆದರೂ ನೀರು ಬರುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಕಬಿನಿ ಬಲದಂಡೆ ನಾಲೆಯ 55600 ಎಕರೆ ಪ್ರದೇಶದ ರೈತರು ನಾಲೆಯಲ್ಲಿ ಬರುವ ನೀರನ್ನಾಧರಿಸಿ ಭತ್ತ ಬೆಳೆಯುತ್ತಿದ್ದಾರೆ. ವರ್ಷಕ್ಕೆ ಎರಡು ಬೆಳೆ ತೆಗೆಯುವ ಅವಕಾಶ ಇದ್ದರೂ, ಪ್ರಸ್ತುತ ಒಂದು ಬೆಳೆಗೆ ಮಾತ್ರ ನೀರು ದೊರಕುತ್ತಿತ್ತು. ಕಳೆದ ಎರಡು ವರ್ಷಗಳಿಂದ ಕೇವಲ ಒಂದು ಬೆಳೆಯನ್ನೂ ಬೆಳೆಯಲಾಗಲಿಲ್ಲ. ಹೀಗಾಗಿ 55600 ಎಕರೆ ಪ್ರದೇಶವೂ ಒಣಗಿ ನಿಂತಿತ್ತು.

Advertisement

ಈ ಬಾರಿ ಜಲಾಶಯ ತುಂಬಿರುವುದರಿಂದ ಕೆಲವು ದಿನಗಳಿಂದ ನಾಲೆಗೆ ನೀರು ಬಿಡಲಾಗಿದೆ. ಮುಂಗಾರು ಮುಗಿದ ಬಳಿಕ ಮುಂದೇನಾಗುವುದೋ ಹೇಳಲಾಗುವುದಿಲ್ಲ. ಕಬಿನಿ ನಾಲೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ರೈತರು ಭತ್ತವನ್ನಷ್ಟೇ ಬೆಳೆಯುತ್ತಿದ್ದಾರೆ. ನೀರು ಬಿಡದ ವೇಳೆ ಯಾವ ಬೆಳೆಯನ್ನೂ ಬೆಳೆಯಲಾಗದ ಅಸಹಾಯಕ ಸ್ಥಿತಿಯಿಲ್ಲಿದ್ದಾರೆ. ಕಾವೇರಿ ಅಚ್ಚುಕಟ್ಟು ಪ್ರಾಧಿಕಾರ ಈಗ ಅಸ್ತಿತ್ವಕ್ಕೆ ಬಂದಿರುವುದರಿಂದ ನಾಲೆಗೆ ನೀರು ಬಿಡಲು ಇನ್ನೂ ಹೆಚ್ಚಿನ ಸಂಕಷ್ಟ ಪರಿಸ್ಥಿತಿ ಬರುವ ಆತಂಕದಲ್ಲಿ ರೈತರಿದ್ದಾರೆ.

ಕಾವೇರಿ ನ್ಯಾಯಾಧಿಕರಣ, ಸುಪ್ರೀಂ ಕೋರ್ಟ್‌ ಆದೇಶ, ಕಾವೇರಿ ಪ್ರಾಧಿಕಾರ ಆದೇಶ ತಮಿಳುನಾಡಿಗೇ ಹೆಚ್ಚಿನ ಅನುಕೂಲವೊದಗಿಸಿದೆ. ತಮಿಳುನಾಡಿಗೆ ಕಬಿನಿ ನೀರು ಬಿಡುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕಬಿನಿ ನಾಲಾ ವ್ಯಾಪ್ತಿಯ ಅಚ್ಚುಕಟ್ಟಿಗೆ ನೀರಿನ ಅಭಾವ ಉಂಟಾಗುತ್ತಿದೆ. ರೈತರು ತೊಂದರೆಯಲ್ಲಿ ಸಿಲುಕಿದ್ದೇವೆ.
 ಹೊನ್ನೂರು ಪ್ರಕಾಶ್‌,  ಅಧ್ಯಕ್ಷ, ಜಿಲ್ಲಾ ರೈತ ಸಂಘ.

ಕಬಿನಿ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಕಳೆದ ಎರಡು ವರ್ಷ ಕಬಿನಿ ಬಲದಂಡೆ ಹಾಗೂ ಎಡದಂಡೆ ನಾಲಾ ವ್ಯಾಪ್ತಿಯ ಪ್ರದೇಶಕ್ಕೆ ನೀರು ಬಿಡುಗಡೆ ಮಾಡಿರಲಿಲ್ಲ.
 ಪುಟ್ಟಶೇಷಗಿರಿ, ಎಇಇ, ನೀರಾವರಿ ಇಲಾಖೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next