Advertisement

Water Problem: ಹೊರ ವಲಯ ಭಾಗಕ್ಕೆ ನೀರಿನ ಅಭಾವ ಭೀತಿ

10:18 AM Aug 27, 2023 | Team Udayavani |

ಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದ ಕೆಲವೆಡೆ ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದ್ದು, ರಾಜ್ಯ ರಾಜಧಾನಿಯ ಹೊರ ವಲಯದಲ್ಲಿರುವ ಗ್ರಾಮಗಳೂ ಇದರಿಂದ ಹೊರತಾಗಿಲ್ಲ.

Advertisement

ಬೆಂಗಳೂರಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ನಿವಾಸಿಗಳಿಗೆ ನೀರಿನ ಅಭಾವದ ಬಿಸಿ ತಟ್ಟುವ ಲಕ್ಷಣ ಗೋಚರಿಸಿದೆ. ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆಯಾದರೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಕಾವೇರಿ 5ನೇ ಹಂತದ ಯೋಜನೆಯು ಹಲವು ವರ್ಷಗಳಿಂದ ಕಾಮಗಾರಿ ಹಂತದಲ್ಲಿದೆ. ಹೀಗಾಗಿ ಬೆಂಗಳೂರು ಹೊರ ವಲಯದಲ್ಲಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬೆಂಗಳೂರು ಹೊರ ವಲಯದ ನಿವಾಸಿಗಳಿಗೆ ಈಗಲೇ ನೀರಿಗಾಗಿ ಅಭಾಗದ ಮುನ್ಸೂಚನೆ ಸಿಕ್ಕಿದೆ.

ನೀರಿಗೆ ಕೊರತೆ ಸದ್ಯಕ್ಕಿಲ್ಲ: ಬೆಂಗಳೂರಿನಲ್ಲಿ ಕಾವೇರಿ ನೀರಿನ ಸಂಪರ್ಕ ಹೊಂದಿರುವಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಅಭಾವ ಇಲ್ಲ. ಸಾಮಾನ್ಯವಾಗಿ ಬೆಂಗಳೂರಿಗೆ ಕುಡಿಯಲು ಬೇಕಾಗುವಷ್ಟು ಪ್ರಮಾಣದ ನೀರನ್ನು ಕೆಆರ್‌ಎಸ್‌ ಡ್ಯಾಮ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಬೆಂಗಳೂರಿಗೆ ಪ್ರತಿ ತಿಂಗಳಿಗೆ ಸುಮಾರು 1.6 ಟಿಎಂಸಿ ನೀರು ಬೇಕಾಗುತ್ತದೆ. ವರ್ಷಕ್ಕೆ 19 ಟಿಎಂಸಿ, ದಿನಕ್ಕೆ 1800 ಎಂಎಲ್‌ಡಿ ನೀರು ಬಳಕೆಯಗುತ್ತದೆ. 1,450 ಎಂಎಲ್‌ಡಿ ನೀರನ್ನು ಪಂಪ್‌ ಮಾಡಲು ಸದ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿಗೆ ಇದಕ್ಕಿಂತ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಆದರೆ, 1,450 ಎಂಎಲ್‌ಡಿಗೆ ಬೇಕಾದಷ್ಟು ಪೈಪ್‌ಲೈನ್‌ ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷ ಎನ್‌.ಜಯರಾಮ್‌.

ಹೊರವಲಯಕ್ಕೆ ನೀರಿಗೆ ಭೀತಿ ಏಕೆ?: ಕೆಆರ್‌ಎಸ್‌ ಜಲಾನಯನ ಪ್ರದೇಶದಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೂ ಸರ್ಕಾರ ತಮಿಳುನಾಡಿಗೆ ನೀರು ಹರಿಬಿಟ್ಟ ಪರಿಣಾಮ ಮುಂದಿನ ದಿನಗಳಲ್ಲಿ ಬೆಂಗಳೂರು ನಿವಾಸಿಗಳಿಗೂ ನೀರಿನ ಕೊರತೆಯಾಗುವ ಸಾಧ್ಯತೆಗಳಿವೆ. ಕಾವೇರಿ ಸಂಪರ್ಕ ಹೊಂದದೇ ಇರುವ ಪ್ರದೇಶಗಳಿಗೆ ಕೊಳವೆಬಾವಿ, ಬೋರ್‌ವೆಲ್‌, ಟ್ಯಾಂಕರ್‌ ನೀರಿನ ಬಳಕೆ ಹೆಚ್ಚಿದೆ. ವಾಡಿಕೆ ಮಳೆಯಾಗದಿದ್ದರೆ ಇಲ್ಲಿನ ನಿವಾಸಿಗಳು ಬೆಂಗಳೂರು ನಗರದ ವಿವಿಧ ಪ್ರದೇಶಗಳಿಂದ ದುಪ್ಪಟ್ಟು ದುಡ್ಡು ಕೊಟ್ಟು ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತಾರೆ. ಇದೀಗ ಬೆಂಗಳೂರು ನಗರದಲ್ಲೂ ಮಿತಿಗಿಂತ ಹೆಚ್ಚು ನೀರು ಇಲ್ಲದಿರುವ ಹಿನ್ನೆಲೆ ಹೊರ ವಲಯಗಳಿಗೆ ನೀರಿನ ಪೂರೈಸಲಾಗುತ್ತಿಲ್ಲ. ಹೀಗಾಗಿ ಬೆಂಗಳೂರಿನ ಹೊರ ವಲಯಗಳ ನಿವಾಸಿಗಳಿಗೆ ನೀರಿನ ಬೀತಿ ಎದುರಾಗಿದೆ.

ಬೋರ್‌ವೆಲ್‌ ಕೊರೆಸಲು ಚಿಂತನೆ: ಕಾವೇರಿ ನದಿಯಿಂದ ಹಳ್ಳಿಗಳಿಗೆ ನೀರು ಪೂರೈಸಲು ಬೇಕಾಗಿರುವ ಪೈಪ್‌ ಅಳವಡಿಸಲಾಗುತ್ತಿದೆ. ಜಲಮಂಡಳಿಯು ಡಿಸೆಂಬರ್‌ನಲ್ಲಿ ಕಾಮ ಗಾರಿ ಪೂರ್ಣಗೊಳಿಸುವ‌ ವಿಶ್ವಾಸದಲ್ಲಿದೆ. ನೀರಿನ ಕೊರತೆಯಿರುವ ಹೊರವಲ ಯಗಳಲ್ಲಿ ಬೋರ್‌ವೆಲ್‌ ಕೊರೆಸಲು ಸರ್ಕಾರ ಚಿಂತನೆ ನಡೆಸಿದೆ. ಸಾಮಾನ್ಯವಾಗಿ ಡ್ಯಾಮ್‌ಗಳಲ್ಲಿ ಕುಡಿಯಲು ಅಗತ್ಯವಿರುವ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಅದನ್ನು ಕೃಷಿ ಚಟುವಟಿಕೆಗಳಿಗೆ ಬಳಸುವುದಿಲ್ಲ. ಆದರೆ, ಈ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಅಗತ್ಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಿಡುಗಡೆ ಮಾಡದಿದ್ದರೆ ಕೆಲ ರೈತರಿಗೆ ಸಮಸ್ಯೆ ಆಗಲಿದೆ.

Advertisement

ಯಾವೆಲ್ಲ ಪ್ರದೇಶಗಳಿಗೆ  ತಟ್ಟಲಿದೆ ನೀರಿನ ಸಮಸ್ಯೆ?:

ಮಹದೇವಪುರ ವಲಯಗಳಲ್ಲಿ ಚೆನ್ನಸಂದ್ರ, ದೇವರಬೀಸನಹಳ್ಳಿ, ಕಾಡಬೀಸನಹಳ್ಳಿ, ವರ್ತೂರು, ಹೊರಮಾವು ಸೇರಿ 23 ಹಳ್ಳಿಗಳು, ಬ್ಯಾಟರಾಯನಪುರ ವಲಯಗಳಲ್ಲಿ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಗೋವಿಂದಪುರ, ಹೊರಮಾವು ಆಗರ, ಬೈರತಿ, ದಾಸರಹಳ್ಳಿ, ಚಿಕ್ಕನಹಳ್ಳಿ, ಕೊತ್ತನೂರು ಸೇರಿ 26 ಹಳ್ಳಿಗಳು, ಬೊಮ್ಮನಹಳ್ಳಿ ವಲಯಗಳಲ್ಲಿ ಅಂಬಲಿಪುರ, ಬೇಗೂರು ಸೇರಿ 33 ಹಳ್ಳಿಗಳು, ದಾಸರಹಳ್ಳಿ ವಲಯಗಳಲ್ಲಿ ಚಿಕ್ಕಲಸಂದ್ರ, ಅಬ್ಬಿಗೆರೆ, ಹೇರೋಹಳ್ಳಿ, ಹೊಸಹಳ್ಳಿ ಸೇರಿದಂತೆ 11 ಗ್ರಾಮಗಳಿಗೆ ನೀರಿನ ಕೊರತೆ ಎದುರಾಗುವ ಆತಂಕ ಎದುರಾಗಿದೆ.

ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ 110 ಹಳ್ಳಿಗಳಿಗೆ ನೀರಿನ ಪೂರೈಕೆಯಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ಕೆಆರ್‌ಎಸ್‌ ಡ್ಯಾಂನಿಂದ ಬೆಂಗಳೂರಿಗೆ ಪ್ರತಿದಿನ ನೀರು ಬಿಡುಗಡೆಯಾಗುತ್ತದೆ. -ಎನ್‌.ಜಯರಾಮ್‌, ಅಧ್ಯಕ್ಷ, ಜಲಮಂಡಳಿ.

Advertisement

Udayavani is now on Telegram. Click here to join our channel and stay updated with the latest news.

Next