Advertisement

ಮಳೆಗಾಲದಲ್ಲೂ ನೀರಿಗೆ ಹಾಹಾಕಾರ

04:08 PM Jul 26, 2019 | Team Udayavani |

ಕಾರಟಗಿ: ಸಮೀಪದ ದೇವಿಕ್ಯಾಂಪ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ದನಕರುಗಳಿಗೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾಗಿ ತಿಂಗಳಾದರೂ ಸಮರ್ಪಕವಾಗಿ ಮಳೆಯಾಗಿಲ್ಲ. ಇದರಿಂದಾಗಿ ಜಲಾಶಯ ತುಂಬುವ ವಿಶ್ವಾಸ ಇಲ್ಲವಾಗಿದೆ. ದೇವಿಕ್ಯಾಂಪ್‌ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿಗೆ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿಗೆ ಒಳಪಡುತ್ತದೆ. ಅದರಲ್ಲಿ ಕ್ಯಾಂಪ್‌ನ 23ನೇ ವಾರ್ಡ್‌ ಕಾರಟಗಿ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ಈ ಗ್ರಾಮ ಎರಡು ತಾಲೂಕಿನ ಮಧ್ಯವಿದೆ. ಆದರೂ ನೀರಿಲ್ಲದೇ ನರಳುತ್ತಿದೆ.

Advertisement

ಗ್ರಾಮಕ್ಕೆ ಕೊಳವೆಬಾವಿ ಮೂಲಕ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕಾಲುವೆಗಳಲ್ಲೂ ಕೂಡ ನೀರು ಸ್ಥಗಿತಗೊಳಿಸಿದ್ದರಿಂದ ಜಾನುವಾರುಗಳಿಗೆ ನೀರು ಸಿಗದಂತಾಗಿ ಗ್ರಾಮಸ್ಥರು ಹೊಲಗದ್ದೆಗಳಲ್ಲಿನ ಬೋರ್‌ವೆಲ್, ಕೆರೆ ಬಾವಿಗಳಿಗೆ ಅಲೆಯಬೇಕಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಪರಿಣಾಮ ಕೊಳವೆ ಬಾವಿಗಳಲ್ಲೂ ಕೂಡ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕಾರಟಗಿ ಪುರಸಭೆ 23ನೇ ವಾರ್ಡ್‌ ವ್ಯಾಪ್ತಿಯಲ್ಲಿ 17 ವರ್ಷಗಳ ಹಿಂದೆ ಕೆರೆ ನಿರ್ಮಾಣಗೊಂಡಿದೆ. ನಂತರ 10 ವರ್ಷಗಳ ಹಿಂದೆ ಕೆರೆ ನಿರ್ಮಾಣಕ್ಕೆ ಅಂದಿನ ಕೃಷಿ ಮಾರುಕಟ್ಟೆ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ಸಲ್ಲಿಸಿದ್ದು, ಅಂದಿನಿಂದ ಕೆರೆ ಅಭಿವೃದ್ಧಿ ನೆಪದಲ್ಲಿ ಸರಕಾರದ ಹಣ ಪೋಲಾಗುತ್ತಿದೆಯೆ ಹೊರತು ಕೆರೆ ಅಭಿವೃದ್ಧಿ ಆಗಿಲ್ಲ. ಕೆರೆಗೆ ಇವರೆಗೂ ನೀರು ಬಂದಿಲ್ಲ. ಕೆರೆ ನಿರ್ವಹಣೆ ಇಲ್ಲದೆ ದಡದಲ್ಲಿ ಕಸ ಬೆಳೆದಿದೆ. ಕೆರೆ ಅಭಿವೃದ್ಧಿಗೊಳಿಸಿ ನೀರು ತುಂಬಿದರೆ ಗ್ರಾಮಕ್ಕೆ ಅನೂಕುಲವಾಗುತ್ತದೆ. ಕೆರೆ ತುಂಬಿಸಲು ಕೆರೆ ಪಕ್ಕದಲ್ಲೇ ತುಂಗಭದ್ರಾ 31ನೇ ವಿತರಣಾ ಕಾಲುವೆ ಇದ್ದು, ಕಾಲುವೆಗೆ ನೀರು ಹರಿಸಿದಾಗ ಕೆರೆ ತುಂಬಿಸಲು ಕೂಡ ಹೆಚ್ಚಿನ ತೊಂದರೆಯಾಗುವುದಿಲ್ಲ. ಇದರಿಂದ ಅಂತರ್ಜಲ ಹೆಚ್ಚುತ್ತದೆ. ಆದರೆ ಸಂಬಂಧಿಸದ ಯಾರೂ ಇತ್ತ ಗಮನಹರಿಸಿಲ್ಲ.

ಸರಕಾರ ಕುಡಿವ ನೀರಿನ ತೊಂದರೆಯಾಗದಂತೆ ಹಲವಾರು ಯೋಜನೆಗಳನ್ನು ರೂಪಿಸಿ ಕೋಟ್ಯಂತರ ರೂ. ಮಂಜೂರು ಮಾಡುತ್ತಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕುಡಿವ ನೀರಿನ ಯೋಜನೆಗಳು ನನೆಗುದಿಗೆ ಬಿದ್ದಿವೆ. 4-5 ತಿಂಗಳಿಂದ ಬೀರು ಬಿಸಿಲಿಗೆ ತತ್ತರಿಸುತ್ತಿರುವ ಜನತೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ನೀರಿಗಾಗಿ ನಿತ್ಯ ಪರದಾಡುವುದು ಸಾಮಾನ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next