Advertisement

Lack of Water: ಬೊಂಬೆನಾಡಿನಲ್ಲಿ ಜೀವಜಲಕ್ಕೆ ಹೆಚ್ಚಿದ ತತ್ವಾರ

03:27 PM Feb 18, 2024 | Team Udayavani |

ಚನ್ನಪಟ್ಟಣ: ನೀರಾವರಿ ಕ್ರಾಂತಿ ಮೂಲಕ ರಾಜ್ಯದ ಗಮನ ಸೆಳೆದಿದ್ದ ಬೊಂಬೆನಾಡು ಚನ್ನಪಟ್ಟಣ ನಗರ ಹಾಗೂ ಗ್ರಾಮೀಣ ಭಾಗದ ಜನರು ಬೇಸಿಗೆಗೂ ಮುನ್ನವೇ ನೀರಿನ ಸಮಸ್ಯೆ ಹೆಚ್ಚಾಗಿದೆ.

Advertisement

ಇದರೊಂದಿಗೆ ಬೇಸಿಗೆ ಕಾಲ ಸಮೀಪಕ್ಕೂ ಮುನ್ನವೇ ನಗರದ ಪ್ರದೇಶದಲ್ಲಿ ನೀರಿಗೆ ಸಮಸ್ಯೆ ಉಂಟಾಗುತ್ತಿದ್ದು, ಪರಿಸ್ಥಿತಿ ಕೈ ಮೀರುವ ಹಂತ ತಲುಪುವ ಮುಂಚೆ ಎಚ್ಚರ ವಹಿಸಿಲು ಹಾಗೂ ನೀರಿನ ಮಿತಬಳಕೆ ಬಗ್ಗೆ ಜಾಗೃತಿ ಮೂಡಿಸಲು ಜಲಮಂಡಳಿ ಹಾಗೂ ಚನ್ನಪಟ್ಟಣ ನಗರಸಭೆ ಆಟೋ ಪ್ರಚಾರದ ಮೂಲಕ ನಾಗರಿಕರಿಗೆ ನೀರಿನ ಅರಿವು ಮೂಡಿಸಲು ಮುಂದಾಗಿದೆ.

ತಾಪಮಾನ ಏರಿಕೆ: ಸಾಧಾರಣವಾಗಿ ಫೆಬ್ರವರಿ ಅಂತ್ಯದಲ್ಲಿ ಬೇಸಿಗೆ ಕಾಲ ಆರಂಭಗೊಳ್ಳುತ್ತದೆಯಾದರೂ, ಈ ವರ್ಷ ಮಾತ್ರ ಫೆಬ್ರವರಿ ಆರಂಭದಲ್ಲೇ ಬೇಸಿಗೆ ಕಾಲ ಆರಂಭಗೊಂಡಿದೆ. ಮಲೆನಾಡು ಭಾಗಗಳಲ್ಲಿ ಕಳೆದ ವಾರದಿಂದ ತಾಪಮಾನ ಏರಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ನೀರಿನ ಅಭಾವ ಉಂಟಾಗಿ, ಜನಜೀವನ ದುಸ್ತರಗೊಳ್ಳಲಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಪ್ರಮಾಣ ತಗ್ಗಿದ್ದು, ಶಿಂಷಾನದಿ ಒಡಲು ಬಹುತೇಕ ಬರಿದಾಗಿ ಮುಂದೇನು ಎಂದು ಜನರು ಯೋಚಿಸುವಂತಾಗಿದೆ.

ರಾಜ್ಯದಲ್ಲಿ ಎಲ್ಲೆಡೆ ಬರಗಾಲ ಬಂದು ಕುಡಿಯುವ ನೀರಿನ ಸಮಸ್ಯೆ ಕಂಡರೂ, ಸಹ ತಾಲೂಕಿನಲ್ಲಿ ಕಳೆದ ಏಳೆಂಟು ವರ್ಷದಿಂದ ನಗರ, ಗ್ರಾಮೀಣ ಜನರಿಗೆ ನೀರಿನ ಸಮಸ್ಯೆ ಭಾದಿಸುತ್ತಿರಲಿಲ್ಲ, ಆದರೆ, ಈ ಬಾರಿ ಚಳಿಗಾಲದಲ್ಲೇ ನೀರಿಗೆ ಆಭಾವ ಉಂಟಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ, ನೀರನ್ನು ಮಿತವಾಗಿ ಬಳಸುವಂತೆ ಆಟೋ ಪ್ರಚಾರ ಮಾಡುತ್ತಿರುವುದು ಗಮನಿಸಿದರೆ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತಿದೆ.

ನೀರು ಪೂರೈಕೆಯಲ್ಲಿ ವ್ಯತ್ಯಯ: ಇಡೀ ನಗರಕ್ಕೆ ಟಿ.ಕೆ.ಹಳ್ಳಿ ಬಳಿ ಇರುವ ಶಿಂಷಾನದಿಯಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಜಲಾಶಯಗಳಲ್ಲಿ ನೀರು ಬತ್ತಿರುವ ಪರಿಣಾಮ, ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಎರಡು ದಿನಗಳಿಗೊಮ್ಮೆ ಬೀಡುತ್ತಿದ್ದ ನೀರನ್ನು ಐದು ದಿನಗೊಳಿಗೊಮ್ಮೆ ಬೀಡಲು ಜಲಮಂಡಳಿ ಹಾಗೂ ಚನ್ನಪಟ್ಟಣ ನಗರಸಭೆ ಕರಪತ್ರ ಮುದ್ರಿಸಿ, ಆಟೋ ಪ್ರಚಾರ ಮಾಡುತ್ತಿದೆ. ಇದರಿಂದ ಈಗಾಗಲೇ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದ ನಗರ ನಿವಾಸಿಗಳು ಎರಡು ಇಲಾಖೆಗಳ ಬಹಿರಂಗ ಹೇಳಿಕೆಗಳಿಂದ ಚಿಂತಿಸುತ್ತಿದ್ದಾರೆ.

Advertisement

ಶಿಂಷಾನದಿಯಲ್ಲಿ ನೀರಿಲ್ಲ: ದೂರದ ಬೆಂಗಳೂರು, ರಾಮನಗರ, ಚನ್ನಪಟ್ಟಣಗಳಿಗೆ ಕುಡಿಯುವ ನೀರನ್ನು ಟಿ.ಕೆ.ಹಳ್ಳಿಯ ಶಿಂಷಾ ನದಿಯಿಂದ ಪ್ರತಿನಿತ್ಯ ಪೂರೈಕೆ ಮಾಡಲಾಗುತ್ತಿತ್ತು. ಇಲ್ಲಿ ಏನಾದರೂ ಸ್ವಲ್ಪ ಏರುಪೇರಾದರೂ ಚನ್ನಪಟ್ಟಣ ಮತ್ತು ರಾಮನಗರದ ನಗರ ಮತ್ತು ಗ್ರಾಮೀಣ ಪ್ರದೇಶ ನಿವಾಸಿಗಳ ಸ್ಥಿತಿಯಂತೂ ಆಯೋಮಯವಾಗಲಿದೆ. ಎರಡು ನಗರಗಳು ನೀರಿಗೆ ಶಿಂಷಾನದಿಯನ್ನು ಆಶ್ರಯಿಸಿದ್ದು, ಇದೀಗ ನದಿಯಲ್ಲಿ ನೀರು ಇಲ್ಲದ ಕಾರಣ ನಗರಕ್ಕೆ ಐದು ದಿನಗಳಿಗೊಮ್ಮೆ ನೀರು ಪೂರೈಸುವುದಾಗಿ ಪ್ರಚಾರ ಮಾಡುತ್ತಿರುವುದು ಸಾರ್ವಜನಿಕರನ್ನು ಗಾಬರಿಗೊಳಿಸುತ್ತಿದೆ.

ಮುಂಜಾಗ್ರತ ಕ್ರಮವಿಲ್ಲ; ಭ್ರಷ್ಟಾಚಾರ, ಸ್ವಯಂಪತ್ರಿಷ್ಠೆ, ಖಾತೆಗಳ ಕ್ಯಾತೆಯಲ್ಲಿ ಮುಳುಗಿರುವ ಚನ್ನಪಟ್ಟಣ ನಗರಸಭೆ, ಸದಾ ನಿದ್ದೆಯಲ್ಲಿ ಕಾಲ ಕಳೆಯುತ್ತಾ ಸಮಸ್ಯೆ ತೀವ್ರಗೊಂಡಾಗ ಎಚ್ಚರಗೊಳ್ಳುವ ಜಲಮಂಡಳಿ ನದಿಯಲ್ಲಿ ನೀರಿಲ್ಲದ ನೆಪ ಹೇಳಿ, ನಗರ ನಿವಾಸಿಗಳಿಗೆ ನೀರಿನ ಜಾಗೃತಿ ಮೂಡಿಸುವ, ನೀರನ್ನು ಮಿತವಾಗಿ ಬಳಸುವಂತೆ ಪ್ರಚಾರ ಮಾಡುತ್ತಿದೆ. ರಾಜ್ಯದಲ್ಲಿ ಬರ ಬಂದು ಜಲಾಶಯಗಳಲ್ಲಿ ನೀರಿನ ಲಭ್ಯತೆ ಇಲ್ಲದ ಅರಿವಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಕಗ್ಗಂಟಾಗುವ ಸೂಚನೆಯಿದ್ದರೂ ಸಹ ಅದಕ್ಕೆ ಬೇಕಾದ ಮುಂಜಾಗ್ರತ ಕ್ರಮ ಕೈಗೊಳ್ಳಲು ವಿಫ‌ಲವಾಗಿದೆ. ಆಟೋ ಪ್ರಚಾರ, ಜಾಗೃತಿ ಮೂಡಿಸುವುದರಿಂದ ಸಮಸ್ಯೆ ಪರಿಹಾರ ಆಸಾಧ್ಯವಾಗಿದೆ. ಕಳೆದ ವರ್ಷಕ್ಕಿಂತಲೂ ಎರಡು ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದ್ದು, ಇದರಿಂದ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿ ನೀರಿನ ಸಮಸ್ಯೆ ಮತ್ತಷ್ಟು ಅಧಿಕವಾಗಲಿದೆ.

ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪಂಪ್‌ ಹೌಸ್‌ ನಿಂದ ಪೈಪ್‌ ಮೂಲಕ ಸರಬರಾಜು ಆಗುವ ನೀರು ಚನ್ನಪಟ್ಟಣ ನಗರ ವ್ಯಾಪ್ತಿಗೂ ಇದೇ ನೀರು ಸರಬರಾಜು ಆಗುತ್ತದೆ. ಶಿಂಷಾ ನದಿಗೆ ಅಡ್ಡಲಾಗಿ ಇಗ್ಗಲೂರು ಬಳಿ ನಿರ್ಮಾಣವಾಗಿರುವ ಎಚ್‌.ಡಿ. ದೇವೇಗೌಡ ಬ್ಯಾರೇಜ್‌ನಿಂದ ಕೆರೆಗಳಿಗೆ ನೀರು ತುಂಬಿಸುವ ಕಾಯಕ ನಿರಂತರವಾಗಿ ನಡೆಯುತ್ತಿದೆ. ಬೇಸಿಗೆಗೆ ಮುನ್ನವೇ ನೀರಿನ ಸಮಸ್ಯೆ ಉಂಟಾಗುವ ಮುನ್ಸೂಚನೆ ಈಗಾಗಲೇ ಕಾಣತೊಡಗಿದೆ.

ನಗರಸಭೆಯಾಗಲಿ, ಜಲಮಂಡಳಿಯಾಗಲಿ ಮಳೆಬಾರದೆ ಬರ ಬಂದ ತಕ್ಷಣ ಪರ್ಯಾಯ ವ್ಯವಸ್ಥೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿತ್ತು. ಆದರೆ, ಇವರು ಸಮಸ್ಯೆಗೆ ಪರಿಹಾರ ಹುಡುಕುವುದನ್ನು ಬಿಟ್ಟು ಕಾಲಹರಣದ ಮೂಲಕ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚು ಮಾಡುತ್ತಿದ್ದಾರೆ.-ಪುಟ್ಟರಾಜು, ಚನ್ನಪಟ್ಟಣ

ಚಳಿಗಾಲ ಮುಗಿದು ಬೇಸಿಗೆ ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇರುವಾಗಲೇ ತಾಲೂಕಿನ ಕೆರೆ, ಬಾವಿ ಮತ್ತು ನದಿಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಇನ್ನೂ 3-4 ತಿಂಗಳು ಬೇಸಿಗೆ ಕಳೆವುದು ಹೇಗೆಂಬ ಆತಂಕ ಎದುರಾಗಿದೆ. ಆಟೋ ಪ್ರಚಾರದಿಂದ ನೀರಿನ ಅರಿವು ಮೂಡಿಸಲಾಗುತ್ತಿದೆ. -ಪುಟ್ಟಸ್ವಾಮಿ, ನಗರಸಭೆ ಆಯುಕ್ತ

-ಎಂ.ಶಿವಮಾದು

 

Advertisement

Udayavani is now on Telegram. Click here to join our channel and stay updated with the latest news.

Next