Advertisement

ಟೋಲ್‌ನಂತೆ ನೀರೂ ಖಾಸಗೀಕರಣ

05:24 PM Jul 08, 2021 | Team Udayavani |

ವರದಿ: ಡಾ|ಬಸವರಾಜ ಹೊಂಗಲ್‌

Advertisement

ಧಾರವಾಡ: ನಗರವಾಸಿಗಳಿಗೆ ಅಗತ್ಯಕ್ಕೆ ತಕ್ಕಷ್ಟು ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿರಂತರ ನೀರು ಯೋಜನೆಯ 2ನೇ ಭಾಗ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದ್ದು, 2ನೇ ಭಾಗ ವಿಸ್ತರಣೆಗೆ ಹೊಸ ಖಾಸಗಿ ಕಂಪನಿ ಮುಂದಾಗಿದೆ. ಮೊದಲ ಹಂತದಲ್ಲಿ ಆಮೆಗತಿಯಲ್ಲಿ ಸಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ನಿರಂತರ ನೀರು ಯೋಜನೆ 2ನೇ ಭಾಗದಲ್ಲಿ ಇನ್ನುಳಿದ ಶೇ.80 ರಷ್ಟು ಪ್ರದೇಶದಲ್ಲಿ ಜಾರಿಯಾಗಬೇಕಾಗಿದೆ.

ಹೌದು. ರಾಜ್ಯ ಸರ್ಕಾರ ವಿದೇಶಿ ಬ್ಯಾಂಕುಗಳಿಂದ ಸಾಲ ಪಡೆದು ಕಲಬುರ್ಗಿ, ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಿಗೆ ದಿನದ 24 ಗಂಟೆ ನೀರು ಪೂರೈಕೆಗೆ ರೂಪಿಸಿದ ಯೋಜನೆ, ಕುಚ್ಚ ಕಟ್ಟಿ ಕುಚ್ಚ ಮೀಟಿ ಅಂಶಗಳೊಂದಿಗೆ ಆಮೆಗತಿಯಲ್ಲಿ ಸಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಪ್ರಾಯೋಗಿಕವಾಗಿ ಜಾರಿಗೊಳಿಸಿದ ವಾರ್ಡುಗಳಲ್ಲಿ ಕಾಲ ಮಿತಿ ಮೀರಿದರೂ ಜನರಿಗೆ ಶುದ್ಧ ಮತ್ತು ಸಮಯಕ್ಕೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ಆರೋಪವೂ ಇದೆ. ಇದೀಗ ಈ ಮೂರು ಮಹಾನಗರ ಪಾಲಿಕೆಗಳ ಇನ್ನುಳಿದ ಶೇ.80ರಷ್ಟು ವಾರ್ಡುಗಳಿಗೂ ದಿನವಿಡಿ ನೀರು ಪೂರೈಸುವ ಈ ಯೋಜನೆ ವಿಸ್ತರಿಸಲು ಮತ್ತೂಂದು ಖಾಸಗಿ ಕಂಪನಿಗೆ ಟೆಂಡರ್‌ ನೀಡಲಾಗಿದ್ದು, ಮತ್ತೆ ಈ ಮೂರು ನಗರಗಳಲ್ಲಿ ರಸ್ತೆ ಅಗೆತ ಶುರುವಾಗಲಿದೆ. ಪ್ರಾಯೋಗಿಕವಾಗಿ ಜಾರಿಗೊಳಿಸಿದ ಪ್ರತಿನಗರದಲ್ಲಿಯೂ ಒಂದೊಂದು ಸಮಸ್ಯೆಗಳು ಎದುರಾಗಿವೆ.

ಕಲಬುರ್ಗಿ-ಬೆಳಗಾವಿಯಲ್ಲಿ ನೀರಿನ ಗುಣಮಟ್ಟ ಸರಿಯಾಗಿಲ್ಲ. ಹುಬ್ಬಳ್ಳಿಯಲ್ಲಿ ನೀರು ಸಂಗ್ರಹಾಗಾರಗಳ ಕೊರತೆ ಎದುರಾಗಿದ್ದು, ಎಲ್ಲಾ ವಾರ್ಡುಗಳಿಗೆ ಯೋಜನೆ ವಿಸ್ತರಣೆಯಾಗಲು ನೂರೆಂಟು ವಿಘ್ನಗಳು ಎದುರಾದಂತಾಗಿದೆ.

ಟೋಲ್‌ನಂತೆ ನೀರು ಖಾಸಗಿ 

Advertisement

ಸರ್ಕಾರದ್ದೇಯಾದ ಈ ಯೋಜನೆ ಯಶಸ್ವಿಯಾಗದಿರಲು ಮತ್ತು ಕುಂಟುತ್ತ ಸಾಗಲು ಅದೇ ಸರ್ಕಾರದ ವಿವಿಧ ಇಲಾಖೆಗಳ ಮಧ್ಯದ ಸಮನ್ವಯ ಕೊರತೆಯೇ ಪ್ರಮುಖ ಕಾರಣವಾಗಿದೆ. ಈ ಅಂಶವನ್ನು ಧಾರವಾಡದ ಸಿಎಂಡಿಆರ್‌ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಪತ್ತೆ ಮಾಡಿದ್ದು, ನೀರಿನ ಉಳಿತಾಯ, ಶುದ್ಧ ಕುಡಿಯುವ ನೀರು ಪೂರೈಕೆಯ ಆಶಯಗಳು ಈಡೇರಲು ಸರ್ಕಾರ ಏನು ಮಾಡಬೇಕೆನ್ನುವ ಸಲಹೆ ಕೊಡಲು ಕೂಡ ಸಜ್ಜಾಗಿದೆ. ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹವನ್ನು ಖಾಸಗೀಕರಣ ಮಾಡಿದಂತೆಯೇ ಇದೀಗ ನೀರು ಸಂಗ್ರಹ-ಸರಬರಾಜನ್ನು ಕೂಡ ಖಾಸಗಿ ಕಂಪನಿಗಳಿಗೆ ಸರ್ಕಾರ ನೀಡಿದ್ದು, ಅವರೇ ನೀರು ಸರಬರಾಜು ಮಾಡಿ ಜನರಿಂದ ಅವರೇ ನೀರಿನ ಕರ ಸಂಗ್ರಹಿಸಲಿದ್ದಾರೆ. ಹೀಗಾಗಿ ಇನ್ಮುಂದೆ ಇಲ್ಲಿನ ಜಲಮಂಡಳಿಗಳ ಕೆಲಸ ಮುಕ್ತಾಯವಾದಂತಾಗಿದ್ದು, ಜಲಮಂಡಳಿಗಳಿಗೆ ಬೀಗ ಬೀಳುವುದು ಪಕ್ಕಾ ಆದಂತಾಗಿದೆ.

735 ಕೋಟಿ ರೂ.ಯೋಜನೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ 360 ಕೋಟಿ ರೂ.ಗಳು, ಬೆಳಗಾವಿಗೆ 220 ಕೋಟಿ ರೂ. ಹಾಗೂ ಕಲಬುರ್ಗಿಗೆ 150 ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿತ್ತು. ಈ ಪೈಕಿ 367 ಕೋಟಿ ರೂ.ಖಾಸಗಿ ಕಂಪನಿಗಳಿಂದ, 147 ಕೋಟಿ ರೂ. ಕೇಂದ್ರ ಸರ್ಕಾರ ಹಾಗೂ 147 ಕೋಟಿ ರೂ.ರಾಜ್ಯ ಸರ್ಕಾರ ಜತೆಗೆ ಸ್ಥಳೀಯ ಮಹಾನಗರ ಪಾಲಿಕೆಗಳಿಂದ 73 ಕೋಟಿ ರೂ. ಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next