Advertisement

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

06:40 PM Apr 18, 2024 | Team Udayavani |

ಬೀದರ್: ನಾಮಪತ್ರ ಸಲ್ಲಿಕೆಗೆ ಕೆಲ ನಿಮಿಷಗಳು ಬಾಕಿಯಿದ್ದ ಕಾರಣ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಓಡಿ ಬಂದು ನಾಮಪತ್ರ ಸಲ್ಲಿಸಿದ ಪ್ರಸಂಗ ನಡೆಯಿತು.

Advertisement

ಉಮೇದುವಾರಿಕೆ ಸಲ್ಲಿಕೆ ಪ್ರಯುಕ್ತ ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಬೃಹತ್ ಸಭೆ ಆಯೋಜಿಸಲಾಗಿತ್ತು. ಸಭೆ ತಡವಾಗಿ ಆರಂಭವಾದ ಕಾರಣ, ನಂತರ ನಡೆದ ರೋಡ್ ಶೋ ಮುಗಿಯಲು ಸಮಯ ಹಿಡಿಯಿತು. ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 3 ಗಂಟೆಗೆ ಸಮಯ ನಿಗದಿಯಿದ್ದು, ಭಗವಂತ ಖೂಬಾ ಅವರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದಾಗ ಇನ್ನೂ ಕೆಲ ನಿಮಿಷಗಳೇ ಉಳಿದಿತ್ತು. ಹಾಗಾಗಿ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ಕೊಠಡಿಗೆ ಓಡಿ ಬಂದರು, ಅವರ ಹಿಂದೆ ಸೂಚಕರು ಸಹ ಓಡೋಡಿ ಕೋಣೆಗೆ ತಲುಪಿದರು. ನಂತರ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಭಗವಂತ ಖೂಬಾ ಅವರು ಭರ್ಜರಿ ರೋಡ್ ಶೋ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು. ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ಬಳಿಕ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು, ಖೂಬಾ ಅಭಿಮಾನಿಗಳು ಕೇಸರಿ ಶಾಲು, ಪಕ್ಷದ ಧ್ವಜ ಮತ್ತು ಟೋಪಿಗಳನ್ನು ಧರಿಸಿ ಜಯ ಘೋಷಗಳ ಮಧ್ಯ ಹೆಜ್ಜೆ ಹಾಕಿದರು.

ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ಎಸ್.ಕೆ ಬೆಳ್ಳುಬ್ಬಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಅವಿನಾಶ ಜಾಧವ, ಸಿದ್ದು ಪಾಟೀಲ, ಶರಣು ಸಲಗರ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಮಲ್ಲಿಕಾರ್ಜುನ ಖೂಬಾ, ಎಂ.ಜಿ ಮೂಳೆ, ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್ ಠಾಕೂರ, ರಮೇಶ ಪಾಟೀಲ ಸೋಲಪೂರ, ಶಿವಾನಂದ ಮಂಠಾಳಕರ್, ಬಾಬು ವಾಲಿ, ಡಿಕೆ ಸಿದ್ರಾಮ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next