Advertisement

ಜಲಶಕ್ತಿ ಅಭಿಯಾನ ಸಾಕಾರ ಎಲ್ಲರ ಜವಾಬ್ದಾರಿ

12:39 PM Jul 16, 2019 | Suhan S |

ಕೋಲಾರ: ಜಲಶಕ್ತಿ ಅಭಿಯಾನವು ಕೇಂದ್ರ ಸರ್ಕಾರದ ಬಹುದೊಡ್ಡ ಯೋಜನೆಯಾಗಿದೆ. ಇದನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನೀರಿನ ಸಂರಕ್ಷಣೆ ಕುರಿತು ಆಯೋಜಿಸಿದ್ದ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಸಹ ಪ್ರಸಕ್ತ ವರ್ಷವನ್ನು ಆಯವ್ಯಯದಲ್ಲಿ ಜಲವರ್ಷವೆಂದು ಘೋಷಿಸಿದೆ. ಜೀವ ಜಲವನ್ನು ಮುಂದಿನ ಪೀಳಿಗೆಗೆ ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಜಲಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇವಲ ಒಂದು ದಿನ ಈ ಕಾರ್ಯಕ್ರಮ ಮಾಡುವುದರಿಂದ ನೀರನ್ನು ಉಳಿಸಲು ಸಾಧ್ಯವಿಲ್ಲ. ನೀರಿನ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾದಾಗ ಮಾತ್ರ ಜಲಸಂಪನ್ಮೂಲ ಉಳಿಯುತ್ತದೆ ಎಂದು ಹೇಳಿದರು.

ದೇಶಾದ್ಯಂತ ಜಲಶಕ್ತಿ ಅಭಿಯಾನ ನೀರಿನ ಸಮಸ್ಯೆಯು ಕೇವಲ ಒಂದು ಪ್ರದೇಶಕ್ಕೆ ಸಂಬಂಧಿಸಿಲ್ಲ. ಅದು ದೇಶದ ಅತಿದೊಡ್ಡ ಸಮಸ್ಯೆಯಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ 710 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ 256 ಜಿಲ್ಲೆಗಳನ್ನು ಜಲಶಕ್ತಿ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಕೋಲಾರ ಜಿಲ್ಲೆಯು ಸೇರಿದೆ ಎಂದು ವಿವರಿಸಿದರು.ಅದರಂತೆ 1952 ತಾಲೂಕುಗಳು ಹಾಗೂ 756 ನಗರ ಸ್ಥಳೀಯ ಸಂಸ್ಥೆಗಳನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಪ್ರದೇಶಗಳಲ್ಲಿ ನೀರಿನ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜಲಶಕ್ತಿ ಅಭಿಯಾನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಬತ್ತಿದ ನೀರಿನ ಸೆಲೆಗಳು: ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿದೆ. ಮೊದಲು ಕೆರೆ ಕುಂಟೆಯಲ್ಲಿನ ನೀರನ್ನೇ ಕುಡಿಯುತ್ತಿದ್ದರು. ನಂತರ ಅಂತರ್ಜಲ ಪಾತಾಳ ಸೇರುತ್ತಿದ್ದಂತೆ ಬಾವಿಗಳನ್ನು ಬಳಸಿದರು. ಮುಂದೆ ಸಾಗಿ ಕೈ ಪಂಪ್‌ಗ್ಳ ಬಳಕೆ ಹೆಚ್ಚಾಯಿತು. ಆದರೆ, ಇದೀಗ ಕೊಳವೆ ಬಾವಿಗಳನ್ನು ಹಾಕಿ ನೀರನ್ನು ಭೂಮಿಯಿಂದ ತೆಗೆದು ಕುಡಿಯಲು ಬಳಸುವ ಸ್ಥಿತಿ ಎದುರಾಗಿದೆ. ಇದರಿಂದ ಪ್ಲೋರೈಡ್‌ನ‌ಂತಹ ವಿಷಕಾರಿ ವಸ್ತುಗಳು ಹೆಚ್ಚಾಗಿದ್ದು, ಶುದ್ಧ ನೀರಿಗೂ ಕುತ್ತು ಬಂದೊದಗಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಇದಕ್ಕೆ ಪ್ರತಿಯೊಬ್ಬರೂ ಬೆಲೆ ತೆರಬೇಕಾಗುತ್ತದೆ ಎಂದು ಜಾಗೃತಿ ಮೂಡಿಸಿದರು.

Advertisement

ಗಿಡ ನೆಟ್ಟು ಮಳೆ ಪ್ರಮಾಣ ಹೆಚ್ಚಿಸಿ: ಸಕಲ ಜೀವ ಸಂಕುಲಕ್ಕೂ ನೀರನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆ, ಕುಂಟೆ, ಬಾವಿಗಳನ್ನು ಉಳಿಸುವುದು ಎಲ್ಲರ ಕೆಲಸವಾಗಬೇಕು. ನೀರು ಪೋಲಾಗುವುದನ್ನು ತಡೆಗಟ್ಟುವ ಕಡೆ ಗಮನ ಹರಿಸಬೇಕು. ಮಳೆ ನೀರಿನ ಕೊಯ್ಲನ್ನು ಬಳಸಿಕೊಂಡು ನೀರು ವ್ಯರ್ಥವಾಗುವುದನ್ನು ತಡೆಗಟ್ಟಬೇಕು. ಇದರ ಜೊತೆಗೆ ಗಿಡಗಳನ್ನು ನೆಡುವ ಮೂಲಕ ಮಳೆ ಪ್ರಮಾಣ ಹೆಚ್ಚಿಸುವಂತೆ ಮಾಡಬೇಕು.

ಅಂತರ್ಜಲ ಹೆಚ್ಚಳಕ್ಕೆ ಕೆ.ಸಿ.ವ್ಯಾಲಿ: ಜಿಲ್ಲೆಯು ಸತತ ಬರಗಾಲದಿಂದ ಆವರಿಸಿದೆ. ಅಂತರ್ಜಲ ಮಟ್ಟವು ಸಂಪೂರ್ಣ ಕುಸಿದಿದೆ. 1500 ಅಡಿ ಕೊರೆದರೂ ನೀರು ದೊರೆಯುತ್ತಿಲ್ಲ. ಹಾಗಾಗಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಕೆ.ಸಿ. ವ್ಯಾಲಿ ಮೂಲಕ ಜಿಲ್ಲೆಯ 136 ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ 18 ಕೆರೆಗಳು ತುಂಬಿದ್ದು, ಉಳಿದ ಕೆರೆಗಳಿಗೂ ನೀರು ಹರಿಸಲಾಗುವುದು. ಇದರಿಂದ ಅಂತರ್ಜಲ ಅಭಿವೃದ್ಧಿಯಾಗಲಿದೆ ಎಂದರು.

ವಿದ್ಯಾರ್ಥಿಗಳಿಂದ ನೀರಿನ ಸಂರಕ್ಷಣೆ: ಬದಲಾವಣೆಯು ಸದಾ ಮಕ್ಕಳಿಂದಲೇ ಪ್ರಾರಂಭವಾಗುವುದು ಸೂಕ್ತ. ವಿದ್ಯಾರ್ಥಿಗಳು ಪ್ರತಿಯೊಬ್ಬರೂ ನೀರನ್ನು ಸಂರಕ್ಷಿಸುವ ಕೆಲಸವನ್ನು ಮಾಡಿದ್ದೇ ಆದಲ್ಲಿ ಇದರಿಂದ ಪೋಷಕರು ಹಾಗೂ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಮೂಡುತ್ತವೆ. ಈ ನಿಟ್ಟಿನಲ್ಲಿ ಮಕ್ಕಳು ಇಡುವು ಒಂದು ಸಣ್ಣ ಹೆಜ್ಜೆಯು ದೇಶದಲ್ಲಿ ಅತಿ ದೊಡ್ಡ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದರು.

ಮತ್ತಷ್ಟು ಶಕ್ತಿ ತುಂಬಿ: ಜಿಪಂ ಸಿಇಒ ಜಿ.ಜಗದೀಶ್‌ ಮಾತನಾಡಿ, ಮನುಷ್ಯನ ದುರಾಸೆಗಳಿಗೆ ಗೋಕುಂಟೆಗಳು, ಕಲ್ಯಾಣಿಗಳು, ಕೆರೆಗಳು ಮುಚ್ಚಿ ಹೋಗಿವೆ. ಪರಿಸರದ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚಾಗಿದೆ. ಇದರಿಂದ ಜಿಲ್ಲೆಯು ನೀರಿನ ಸಮಸ್ಯೆ ಅನುಭವಿಸುವಂತಾಗಿದೆ. ಪರಿಸರವನ್ನು ಉಳಿಸಲು ಪ್ರತಿಯೊಬ್ಬರು ಸಸಿಗಳನ್ನು ನೆಡಬೇಕು. ಈ ಮೂಲಕ ಜಲಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ತಿಳಿಸಿದರು.

ಪರಿಸರ ಉಳಿಸಬೇಕು: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರತ್ನಯ್ಯ ಮಾತನಾಡಿ, ಇರುವುದೊಂದೆ ಭೂಮಿ. ಇಲ್ಲಿ ನೆಲ, ಜಲ, ಗಾಳಿ ಎಲ್ಲವೂ ಇದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಮೂಲಕ ಪ್ರತಿಯೊಂದು ಜೀವ ಸಂಕುಲವು ಬದುಕಲು ಅವಕಾಶ ಮಾಡಿಕೊಡಬೇಕು. ಅಂತರ್ಜಲ ಅಭಿವೃದ್ಧಿಯಾಗಲು ಕೆರೆಗಳು ತುಂಬಬೇಕು. ಕೆರೆ ತುಂಬಲು ಮಳೆ ಬರಬೇಕು ಎಂದರು. ಜಿಪಂ ಸದಸ್ಯೆ ಪದ್ಮಾವತಿ, ಬಿಇಒ ನಾಗರಾಜಗೌಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮೈಲಾರಪ್ಪ, ತಾಪಂ ಇಒ ಬಾಬು, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌, ಉಪಾಧ್ಯಕ್ಷೆ ರತ್ನಮ್ಮ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಶಂಕರೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next