Advertisement

ನಗರದಲ್ಲಿ ಹೊಸ ನಿರೀಕ್ಷೆ ಮೂಡಿಸಿದ “ವಾಟರ್‌ ಏರೋಡ್ರೋಮ್‌’

02:48 PM Jul 15, 2022 | Team Udayavani |

ಮಹಾನಗರ: ಪ್ರವಾಸೋದ್ಯಮ ಹಾಗೂ ಸ್ಥಳೀಯ ಆರ್ಥಿಕ ಅಭಿವೃದ್ಧಿ ಸಾಧಿ ಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ “ವಾಟರ್‌ ಏರೋಡ್ರೋಮ್‌’ ಅಭಿವೃದ್ಧಿಪಡಿಸುವ ಬಗ್ಗೆ ಸಚಿವ ವಿ. ಸೋಮಣ್ಣ ಅವರು ಬುಧವಾರ ಬೆಂಗಳೂರಿನಲ್ಲಿ ನೀಡಿದ ಹೇಳಿಕೆ ನಗರದಲ್ಲಿ ಹೊಸ ನಿರೀಕ್ಷೆ ಹುಟ್ಟುಹಾಕಿದೆ.

Advertisement

ಈ ಮೂಲಕ, ಸುದೀರ್ಘ‌ ಕಾಲದಿಂದ ಸುದ್ದಿ ಮಾಡುತ್ತಲೇ ಬಾಕಿಯಾಗಿದ್ದ “ಸೀ ಪ್ಲೇನ್‌’ ಹಾಗೂ “ಹೆಲಿಟೂರಿಸಂ’ ಯೋಜನೆಗೆ ಮರುಜೀವ ಬಂದಂತಾಗಿದೆ. ಸದ್ಯ ಕೇಳಿಬಂದಿರುವ “ವಾಟರ್‌ ಏರೋಡ್ರೋಮ್‌’ ಯೋಜನೆಯು ಈ ಹಿಂದೆ ಚರ್ಚಿತವಾಗಿದ್ದ “ಸೀ ಪ್ಲೇನ್‌’ ಆಗಿರಲಿದೆ ಎಂಬುದು ಸದ್ಯದ ಪ್ರಾಥಮಿಕ ಮಾಹಿತಿ.

ಸರ್ವೇ ಆಗಿದೆ!

ಸೀ ಪ್ಲೇನ್‌ ಹಾಗೂ ಹೆಲಿಟೂರಿಸಂ ಯೋಜನೆಯನ್ನು ಮಂಗಳೂರಿನಲ್ಲಿ ಜಾರಿಗೆ ಹಿಂದಿನ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್‌ ಅವರು ಕೆಲವು ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ತಿಳಿಸಿದ್ದರು. ಇದರಂತೆ ವಿಸ್ತೃತ ವರದಿಯನ್ನು ಜಿಲ್ಲಾಡಳಿತವು ಸಚಿವರಿಗೆ ನೀಡಿತ್ತು. ಇದರಂತೆ ಬೆಂಗಳೂರಿನ ಖಾಸಗಿ ವಿಮಾನಯಾನ ಸಂಸ್ಥೆಯ ತಜ್ಞರ ತಂಡ ಆ ಬಳಿಕ ನಗರಕ್ಕೆ ಆಗಮಿಸಿ ಸರ್ವೆ ಕೂಡ ನಡೆಸಿತ್ತು.

ಗುರುಪುರ ನದಿಯಲ್ಲಿ “ಸೀ ಪ್ಲೇನ್‌’

Advertisement

ಗುರುಪುರ ನದಿ (ಫಲ್ಗುಣಿ)ಯಲ್ಲಿ “ಸೀ ಪ್ಲೇನ್‌’ ಯೋಜನೆಗೆ ಆದ್ಯತೆ ನೀಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದಲ್ಲಿರುವ ಕಾರಣದಿಂದ “ಸೀ ಪ್ಲೇನ್‌’ಗೆ ಇಲ್ಲಿ ಹೆಚ್ಚು ಉಪಯೋಗ. ನದಿ ದಂಡೆಯಲ್ಲಿ ಸ್ಥಳದ ಆವಶ್ಯಕತೆ ಇರುವ ಕಾರಣಕ್ಕಾಗಿ ಈ ಹಿಂದೆ ನದಿ ಉತ್ಸವ ನಡೆದ ಬಂಗ್ರಕೂಳೂರು ಭಾಗದಲ್ಲಿ ಯೋಜನೆ ಜಾರಿಗೆ ಅವಕಾಶಗಳು ಹೆಚ್ಚು.

ಸ್ಥಳೀಯ ಆರ್ಥಿಕತೆಗೆ ಲಾಭ

“ಸೀ ಪ್ಲೇನ್‌ ಆರಂಭವಾದರೆ ಕೇರಳ ಸಹಿತ ಕರ್ನಾಟಕದ ಹಲವು ನದಿಪಾತ್ರದ ವಿವಿಧ ಭಾಗಗಳಿಗೆ ಮಂಗಳೂರು ಮುಖೇನ ಪ್ರವಾಸಿಗರು ಸುಲಭವಾಗಿ ತೆರಳಲು ಸಾಧ್ಯ. ಸ್ಥಳೀಯ ಆರ್ಥಿಕ ಚಟುವಟಿಕೆಗೂ ವೇಗ ನೀಡಿದಂತಾಗುತ್ತದೆ. ಈ ಮೂಲಕ ಕರಾವಳಿಯ ಪ್ರವಾಸೋದ್ಯಮ ಹೊಸ ಅವಕಾಶಕ್ಕೆ ತೆರೆದುಕೊಳ್ಳಲಿದೆ. ಬಹುಕಾಲದ ಬೇಡಿಕೆ ಈ ಬಾರಿಯಾದರೂ ಈಡೇರಲಿ’ ಎನ್ನುತ್ತಾರೆ ಪ್ರವಾಸೋದ್ಯಮ ಕ್ಷೇತ್ರದ ಮಾರ್ಗದರ್ಶಕ ಯತೀಶ್‌ ಬೈಕಂಪಾಡಿ.

ಏನಿದು “ಸೀ ಪ್ಲೇನ್‌’?

6 ಆಸನಗಳುಳ್ಳ ವಿಶೇಷ ವಿಮಾನವಿದು. ನೀರಿನ ಮೇಲೆ ನಿಲ್ಲಲು ಎರಡು ಆಧಾರಗಳು ಇದಕ್ಕಿದೆ. ಸಮುದ್ರದಲ್ಲಿ ಅಲೆಗಳಿರುವುದರಿಂದ ಅಲ್ಲಿ ನಿಲುಗಡೆ ಇದಕ್ಕೆ ಸಾಧ್ಯವಿಲ್ಲ. ಹೀಗಾಗಿ ನದಿ ಇದಕ್ಕೆ ಪೂರಕ ಪ್ರದೇಶ. ನೀರಿನಲ್ಲೇ ಇದು ನಿಲ್ಲುತ್ತದೆ. ಬೋಟಿನ ಮೂಲಕ ಪ್ರವಾಸಿಗರನ್ನು ತಲುಪಿಸಲಾಗುತ್ತದೆ. ನದಿ ಪಾತ್ರದ ಜಾಗದಲ್ಲಿ ಪ್ರಯಾಣಿಕರಿಗೆ ಬೇಕಾಗುವ ಪ್ರಶಾಂತ ವಾತಾವರಣ, ಅಗತ್ಯ ಸೌಲಭ್ಯಗಳು. ಹೀಗೆ ಪ್ರವಾಸಿಗರ ಅನುಕೂಲದ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಮಾಹಿತಿ ಪಡೆದು ತೀರ್ಮಾನ ಮಂಗಳೂರಿನಲ್ಲಿ ವಾಟರ್‌ ಏರೋಡ್ರೋಮ್‌ ಆರಂಭಿಸುವ ಕುರಿತಂತೆ ಸರಕಾರ ತೀರ್ಮಾನಿಸಿದೆ. ಈ ಬಗ್ಗೆ ಸರಕಾರದಿಂದ ಪೂರ್ಣ ಮಾಹಿತಿ ಪಡೆದು ನಗರದ ಸೂಕ್ತ ಸ್ಥಳದಲ್ಲಿ ಯೋಜನೆ ಆರಂಭಿಸಲು ಸಿದ್ಧತೆ ನಡೆಸಲಾಗುವುದು. ಫಲ್ಗುಣಿ, ನೇತ್ರಾವತಿ ನದಿಯಲ್ಲಿ ಇದಕ್ಕೆ ಅವಕಾಶವೂ ಇದೆ. ಇದರಿಂದ ಕರಾವಳಿಯ ಪ್ರವಾಸೋದ್ಯಮಕ್ಕೆ ಬಹು ಉಪಯೋಗವಾಗವಾಗಲಿದೆ. –ಮಾಣಿಕ್ಯ, ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ದ.ಕ

Advertisement

Udayavani is now on Telegram. Click here to join our channel and stay updated with the latest news.

Next