Advertisement

ರಾಗಿ ಬೆಳೆ ಕಣ್ಮುಂದೆ ಭೂಮಿ ಪಾಲು

04:57 PM Nov 22, 2019 | Suhan S |

ತಿಪಟೂರು: ತಾಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆ ಭರ್ಜರಿಯಾಗಿ ಬೆಳೆದು ಹಚ್ಚ ಹಸಿರಾಗಿ ಉತ್ಕೃಷ್ಟ ತೆನೆಗಟ್ಟಿನೊಂದಿಗೆ ರೈತರ ಮೊಗದಲ್ಲಿ ಸಂತಸ ಮೂಡಿಸಿತ್ತು. ಆದರೆ ರಾಗಿ ಪೈರು ಅಳತೆ ಮೀರಿ ಬೆಳೆದ ಪರಿಣಾಮ ಹಾಗೂ ಕಾಳು ಬಲಿತ ಮೇಲೂ ಮಳೆ ಬಂದಿದ್ದರಿಂದ ರಾಗಿ ಫ‌ಸಲು ಕೈ ಸೇರುವ ನಿರೀಕ್ಷೆ ಹುಸಿಯಾಗಿದೆ.

Advertisement

ಕಟಾವು ಮಾಡುವ ವೇಳೆ ರಾಗಿ ಪೈರುಬಾಗಿ ಅಡ್ಡಾದಿಡ್ಡಿಯಾಗಿ ನೆಲಕ್ಕೆ ಬಿದ್ದಿದ್ದು, ಭೂಮಿತಾಯಿ ಪಾಲಾಗುತ್ತಿರುವುದರಿಂದ ಅನ್ನದಾತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತನ ಬದುಕು ಅತಂತ್ರ ವಾಗಿದೆ. ರಾಗಿ ಬೆಳೆ ಹುಲುಸಾಗಿ ಬೆಳೆದು ತೆನೆಹಾಗೂ ಕಡ್ಡಿ ತೂಕ ಹೆಚ್ಚಾಗಿ ಬೆಳೆದ ಪೈರು ಸಂಪೂರ್ಣ ನೆಲಕಚ್ಚುವ ಮೂಲಕ ಭೂಮಿ ತಾಯಿ ಪಾಲಾಗಿದೆ. ಇದರಿಂದ ರಾಗಿ ತೆನೆಮತ್ತು ಜಾನುವಾರುಗಳ ಮೇವು ರೈತನ ಕಣ್ಣ ಮುಂದೆಯೇ ಹಾಳಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರುವ ಆಸೆ ಇಲ್ಲದೇ ರೈತನ ಕನಸು ನುಚ್ಚು ನೂರಾಗಿದೆ.

ಬಿತ್ತಿದ ನಂತರ ಮೊಳಕೆಯೊಡೆದು ಚನ್ನಾಗಿ ಬೆಳೆದು ಬಂದ ಬಿರುಸು ನೋಡಿದರೆ ರೈತನ ಕಣಜ ತುಂಬ ಬೇಕಾಗಿದ್ದ ರಾಗಿ ವರ್ಷಪೂರ ತಿಂದರೂ ಸವೆಯದಂತೆ ಬವಣೆಗೆ ಸೇರ ಬೇಕಾಗಿದ್ದ ರಾಗಿ ಹುಲ್ಲು ನೋಡ ನೋಡುತ್ತಲೆ ನೆಲಕ್ಕುರುಳಿದೆ. ಕಟಾವು ಮಾಡಬೇಕಾಗಿರುವ ರಾಗಿ ಪೈರೆಲ್ಲಾ ಅಡ್ಡಾದಿಡ್ಡಿಯಾಗಿ ಬಿದ್ದಿರು ವುದರಿಂದ ಕಟಾವು ಮಾಡುವುದು ಕಷ್ಟವಾಗಿದೆ. ರಾಗಿ ತೆನೆಗಳೆಲ್ಲಾ ಕರಗಿದಂತಾಗಿ ಕಳಚಿ ಬೀಳುತ್ತಿದ್ದು, ರಾಗಿ ಕಾಳುಗಳು ಭೂಮಿಗೇ ಉದುರಿ ಮೊಳಕೆ ಯೊಡೆಯುತ್ತಿವೆ.

ಕಟಾವಿನ ಚಿಂತೆ: ರಾಗಿ ಪೈರು ಈಗಾಗಲೇ ಕಟಾವು ಮಾಡುತ್ತಿದ್ದು, ಕಟಾವು ಮಾಡುವುದು ಹೇಗೆ ಎಂಬ ಚಿಂತೆಯಾಗಿದೆ. ಕಟಾವು ಮಾಡುವ ಕಾರ್ಮಿಕರಿಗೂ ಕಷ್ಟವಾಗಿರುವುದರಿಂದ ಮಾಮೂಲಿ ಕೂಲಿಗಿಂತ ಒಂದೂವರೆ ಪಟ್ಟು ಹೆಚ್ಚು ಕೂಲಿ ಕೇಳುತ್ತಿದ್ದಾರೆ. ಆದರೆ ಕೇಳಿದಷ್ಟು ಹಣ ಕೊಟ್ಟರೂ ಕೆಲಸ ಮಾಡುವವರೂ ಸಕಾಲಕ್ಕೆ ಸಿಗದಂತಾಗಿ ಕಾರ್ಮಿಕರಿ ಗಾಗಿ ಊರೂರು ಅಲೆದಾಡು ವಂತಾಗಿದೆ.

ರಾಗಿ ಕಟಾವು ಮಾಡುವ ಮಷಿನ್‌ಗಳಿಂದಲೂ ಮಾಡಿಸಲಾಗುತ್ತಿಲ್ಲ. ರಾಗಿ ಬೆಳೆಯುವುದೇ ನಷ್ಟದ ಕೃಷಿಯಾಗಿದ್ದು, ಉಳುಮೆ, ಬಿತ್ತನೆ, ಬೆಳೆಯಲು ತಗುಲುತ್ತಿರುವ ಖರ್ಚು,ಕಟಾವು, ಕಣದ ಕೆಲಸ ಇವೆಲ್ಲವನ್ನೂ ಲೆಕ್ಕ ಹಾಕಿದರೆ ರಾಗಿಗೆ ಮಾಡುವ ಖರ್ಚು ರೈತರ ಮೈಮೇಲೆಯೇ ಬರುವಂತಾಗಿದೆ. ಶ್ರಮ ಹಾಕಿ ಬೆಳೆದ ಬೆಳೆ ಕುಯಿಲು ಮಾಡದೆ ಬಿಡಲೂ ಆಗದೆ ರಾಗಿ ಬೆಳೆಗಾರರು ರಾಗಿ ಸಹವಾಸ ಸಾಕಪ್ಪ ಎನ್ನುತ್ತಿದ್ದಾರೆ.

Advertisement

ಹಾಳಾಗಿರುವ ಮೇವು: ರಾಗಿ ಪೈರು ನೆಲಕಚ್ಚಿ ರುವುದರಿಂದ ಹುಲ್ಲು ಗೆದ್ದಲು ಹಿಡಿಯು ತ್ತಿದ್ದು, ಬಹುತೇಕ ರಾಗಿಯಗುಣಮಟ್ಟವೂ ಹಾಳಾಗಿದೆ. ಇದರಿಂದ ಇತ್ತ ಉತ್ತಮ ರಾಗಿಯೂ ಇಲ್ಲ, ಮೇವು ಇಲ್ಲದಂತಾಗಿದೆ. ಶೇ.80 ರಾಗಿ ಹೊಲಗಳು ಕಣ್ಣ ಮುಂದೆಯೇ ಹಾಳಾಗುತ್ತಿರುವುದರಿಂದ ರೈತರ ನೆಮ್ಮದಿ ಹಾಳಾಗಿದೆ. ಕೃಷಿ ಯಾವತ್ತೂ ಲಾಭದಾಯಕವಾಗ ಲಾರದು ಎಂಬುದನ್ನ ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವುದು ನೋಡಿದರೆ ಈಗಾಗಲೆ ಅಳಿವಿನಂಚಿನಲ್ಲಿರುವ ಕೃಷಿ ಕಾಯಕಕ್ಕೆ ಮತ್ತಷ್ಟು ಹೊಡೆತ ಬೀಳ ಬಹುದು. ಸಾವಿರಾರು ರೂಪಾಯಿ ಸಾಲ ತಂದು ದುಬಾರಿ ಖರ್ಚಿನೊಂದಿಗೆ ಬೀಜ-ಗೊಬ್ಬರ ಖರೀದಿಸಿ ಹೊಲ ಉತ್ತು, ಬಿತ್ತಿ ಹಗಲಿರುಳು ಜೋಪಾನ ಮಾಡಿದ್ದ ರಾಗಿ ಬೆಳೆ ಕಣ್ಣ ಮುಂದೆಯೂ ನೆಲ ಕಚ್ಚಿರುವುದನ್ನು ನೋಡಿದರೆ ರೈತನ ಭವಿಷ್ಯಕ್ಕೆ ಕೃಷಿ ಯಾವತ್ತೂ ಲಾಭ ದಾಯಕವಲ್ಲ ಎಂಬುದನ್ನು ಸಾಬೀತುಪಡಿಸಿದೆ.

 

-ಬಿ. ರಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next