Advertisement

ಗ್ರಾ.ಪಂ.ಗಳ ನಡುವೆ ಶುರುವಾಗಿದೆ ತ್ಯಾಜ್ಯ ಸಮರ!

09:41 PM Nov 22, 2019 | mahesh |

ಬಜಪೆ: ಇಲ್ಲಿನ ಗ್ರಾ.ಪಂ.ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಂದು ಗ್ರಾ.ಪಂ. ಇನ್ನೊಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಕಲಾಗುತ್ತಿದ್ದು ಇದರಿಂದಾಗಿ ಗ್ರಾಮ ಪಂಚಾಯತ್‌ಗಳ ನಡುವೆ ಈಗ ಹೊಸದೊಂದು ತ್ಯಾಜ್ಯ ಸಮರ ಆರಂಭಗೊಂಡತಾಗಿದೆ.

Advertisement

ಗುತ್ತಿಗೆದಾರರು ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಆದರೆ ಗ್ರಾ.ಪಂ. ಆಡಳಿತ ಮಾತ್ರ ಇನ್ನೊಂದು ಗ್ರಾ.ಪಂ. ವಿರುದ್ಧ ದೂರು ನೀಡುತ್ತಿ ದ್ದಾರೆ. ಈಗಾಗಲೇ ಕೆಲವು ಪ್ರಕರ ಣಗಳು ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತಿದ್ದು, ಕೆಲವರು ತಾ.ಪಂ. ಕಾರ್ಯನಿರ್ವಾ ಹಣಾಧಿಕಾರಿಗಳಿಗೆ ದೂರು ನೀಡಿವೆ.

ಘಟನೆ ಒಂದು: ಪಡುಪೆರಾರ ಗ್ರಾ.ಪಂ.ನ ಕತ್ತಲ್‌ಸಾರ್‌ ವ್ಯಾಪ್ತಿಯಲ್ಲಿ 4ತಿಂಗಳ ಹಿಂದೆ ಬೇರೆ ಪಂಚಾಯತ್‌ನ ತ್ಯಾಜ್ಯ ಹಾಕಲಾಗಿದೆ. ಈ ಬಗ್ಗೆ ತ್ಯಾಜ್ಯ ಹಾಕಿದವರು ಯಾರೂ ಎಂದು ಗೊತ್ತಿದ್ದರೂ ಸಮರ್ಪಕ ದಾಖಲೆ ಇಲ್ಲದ ಕಾರಣ ಪಂಚಾಯತ್‌ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಶಕ್ತವಾಗಿಲ್ಲ.

ಘಟನೆ ಎರಡು: ಗುರುಪುರ ಕೈಕಂಬದ 4 ಟಿಪ್ಪರ್‌ ತ್ಯಾಜ್ಯವನ್ನು ಗುತ್ತಿಗೆದಾರರು ಎಕ್ಕಾರು ಗ್ರಾ.ಪಂ.ನ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಿದ್ದಾರೆ. ಈ ಬಗ್ಗೆ ಎಕ್ಕಾರು ಗ್ರಾ.ಪಂ. ಆಡಳಿತ ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿಗೆ ದೂರು ನೀಡಿದೆ.

ಘಟನೆ ಮೂರು: ಬಜಪೆ ಪಂಚಾಯತ್‌ ಎದುರು ಹಳೆಯಂಗಡಿ ಗ್ರಾ.ಪಂ. ವ್ಯಾಪ್ತಿ ತ್ಯಾಜ್ಯ ಹಾಕಿದ್ದು ಈ ಬಗ್ಗೆ ಪಂಚಾಯತ್‌ ದಾಖಲೆ ಸಹಿತ ಪತ್ತೆ ಹಚ್ಚಿದೆ.

Advertisement

ಘಟನೆ ನಾಲ್ಕು: ಮಳವೂರು ಗ್ರಾ.ಪಂ.ಗೆ ಸುತ್ತಮುತ್ತಲೂ ಗ್ರಾಮ ಪಂಚಾಯತ್‌ನ ತ್ಯಾಜ್ಯಹಾಕಿದ್ದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಘಟನೆ ಐದು: ಜೋಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಕೆಐಎಡಿಬಿಯು ನಿವೇಶನಕ್ಕೆ ಸ್ವಾಧೀನ ಮಾಡಿದ ಜಾಗದಲ್ಲಿ ಸುತ್ತ ಮುತ್ತಲಿನ ಎಲ್ಲ ಪಂಚಾಯತ್‌ನವರು ತ್ಯಾಜ್ಯ ಹಾಕುವ ಬಗ್ಗೆ ವರದಿಯಾಗಿದೆ.

ಘಟನೆ ಆರು:
ಕಂದಾವರ ಗ್ರಾ.ಪಂ.ನ ತ್ಯಾಜ್ಯ ಸೌಹಾರ್ದನಗರದಲ್ಲಿ ವಿಲೇವಾರಿ ಮಾಡಿರುವ ಬಗ್ಗೆ ಮಾಹಿತಿ ಬಂದಿದೆ. ಹೀಗೆ ಎಲ್ಲೆಡೆ ಒಂದು ಗ್ರಾ.ಪಂ.ನ ತ್ಯಾಜ್ಯ ಇನ್ನೊಂದು ಗ್ರಾ.ಪಂ. ವ್ಯಾಪ್ತಿಗೆ ಹಾಕಲಾಗುತ್ತಿದೆ.

ಈ ಮೊದಲು ಹೆಚ್ಚಿನ ಎಲ್ಲ ಗ್ರಾ.ಪಂ.ನ ತ್ಯಾಜ್ಯವನ್ನು ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ನಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಈಗ ಡಂಪಿಂಗ್‌ ಯಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿಗೆ ಅವಕಾಶ ಇರದ ಕಾರಣದಿಂದಾಗಿ ಗ್ರಾಮಾಂತರ ಪ್ರದೇಶದ ಗುತ್ತಿಗೆದಾರರು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಹಾಕುತ್ತಿದ್ದಾರೆ.

ಕೆಲವೆಡೆ ವಿರೋಧ
ಗುರುಪುರ, ಉಳ್ಳಾಯಿಬೆಟ್ಟು ಮಲ್ಲೂರು, ಕುಪ್ಪೆಪದವು, ಎಡಪದವು, ಬಡಗ ಎಡಪದವು, ಅಡ್ಯಾರು ಗ್ರಾ.ಪಂ. ಗಳಿಗೆ ತ್ಯಾಜ್ಯ ಘಟಕ ಜಾಗವನ್ನು ಕಾಯ್ದಿರಿಸಲು ಸಾಧ್ಯವಾಗಿಲ್ಲ. ಕೆಲವೆಡೆ ನೈರ್ಮಲ್ಯ ಸಮಸ್ಯೆ ಉಂಟಾಗುತ್ತದೆ ಎಂಬ ದೃಷ್ಟಿಯಲ್ಲಿ ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ. ಕಂದಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ಮಾಡಿದಲ್ಲಿ ಹಕ್ಕಿಗಳು ಹಾರಾಟದಿಂದಾಗಿ ವಿಮಾನ ಹಾರಾಟಕ್ಕೆ ತೊಂದರೆಯ ಕಾರಣದಿಂದ ಅನುಮತಿ ದೊರೆತಿಲ್ಲ. ಎಕ್ಕಾರು ಗ್ರಾ.ಪಂ.ಗೆ

ಅರಣ್ಯ ಇಲಾಖೆ, ಪೆರ್ಮುದೆ ಗ್ರಾ.ಪಂ. ಗಣಿ ಮತ್ತು ಆರೋಗ್ಯ ಇಲಾಖೆ ಮತ್ತು ಮಳವೂರು ಗ್ರಾ.ಪಂ.ಗೆ ಸಿಆರ್‌ಝಡ್‌ನ‌ ಆಕ್ಷೇಪಣೆಯಿಂದಾಗಿ ಜಾಗ ಕಾಯ್ದಿರಿಸಿದ್ದರೂ ಕೂಡ ತ್ಯಾಜ್ಯ ಘಟಕ ಆರಂಭಕ್ಕೆ ಅನುಮತಿ ಸಿಗದಂತಾಗಿದೆ. 4 ಅಥವಾ 5 ಪಂಚಾಯತ್‌ನ್ನು ಒಟ್ಟು ಗೂಡಿಸಿ ಒಂದು ತ್ಯಾಜ್ಯ ಘಟಕಕ್ಕೆ ಜಾಗ ವನ್ನು ಜಿಲ್ಲಾಧಿಕಾರಿಯವರೇ ನೇರವಾಗಿ ಮೀಸಲಿಡಬೇಕಾಗಿದೆ. ಸಣ್ಣ ಪಂಚಾ ಯತ್‌ಗಳು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯೊಂದಿಗೆ ತ್ಯಾಜ್ಯ ಸುಡುವ ಯಂತ್ರ ಅಳವಡಿಸಲು ಸರಕಾರ ಸೂಚಿಸಬೇಕು.

ಸಾರ್ವಜನಿಕರಿಗೆ ರಸ್ತೆ ಬದಿ ತ್ಯಾಜ್ಯ ಬಿಸಾಡಿದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ದಂಡ ಕಟ್ಟಲು ಕಾನೂನಿನ ಮಾರ್ಪಾಡಿನ ಅಗತ್ಯವಿದೆ. ಪಂಚಾಯತ್‌ಗಳು ಪ್ಲಾಸ್ಟಿಕ್‌ ಮಾರಾಟ ಮಾಡುವ ಅಂಗಡಿಗಳಿಗೆ ರಾಜ್ಯ ಪತ್ರದಲ್ಲಿ ಸೂಚಿಸಿರುವಂತೆ ದಿಢೀರ್‌ ದಾಳಿ ಮಾಡಿ ದಂಡ ಹಾಕಲು ಜಿಲ್ಲಾ ಪಂಚಾಯತ್‌ ನೈತಿಕ ಬಲವನ್ನು ನೀಡಬೇಕಾಗಿದೆ ಈ ಕ್ರಮಗಳಿಂದ ತ್ಯಾಜ್ಯ ಸಮಸ್ಯೆಯನ್ನು ನಿವಾರಿಸಿಬಹುದು ಎಂಬುದು ಅಭಿಪ್ರಾಯ.

ಕೆಲವೇ ಪಂಚಾಯತ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ
ಮಂಗಳೂರು ತಾಲೂಕು ವ್ಯಾಪ್ತಿಯ ಸುರತ್ಕಲ್‌ ಹೋಬಳಿಯಲ್ಲಿ ಬಜಪೆ ಗ್ರಾ. ಪಂ. ಗ್ರಾಮಸ್ಥರ ವಿರೋಧದ ನಡುವೆಯೂ 25ಸೆಂಟ್‌ ಜಾಗವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೀಸಲಿಟ್ಟಿದೆ. ಉಳಿದಂತೆ ಲಭ್ಯ ಮಾಹಿತಿ ಪ್ರಕಾರ ಗುರುಪುರ ಹೋಬಳಿಯಲ್ಲಿ ಗಂಜಿಮಠ, ಮುಚ್ಚಾರು, ಪಡುಪೆರಾರ, ನೀರುಮಾರ್ಗ, ಮುತ್ತೂರು ಗ್ರಾ.ಪಂ. ತ್ಯಾಜ್ಯ ಘಟಕಕ್ಕೆ ಜಾಗವನ್ನು ಕಾಯ್ದಿರಿಸಲಾಗಿದೆ.

ತ್ಯಾಜ್ಯ ಸಮಸ್ಯೆಗೆ ಕಾರಣ
ತ್ಯಾಜ್ಯ ವಿಲೇವಾರಿಗೆ ಮೀಸಲಿಟ್ಟ ಜಾಗದಲ್ಲಿ ಕೆಲವೊಂದು ಕಡೆ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ಜಿ.ಪಂ. ಅಂಗನವಾಡಿ ಕೇಂದ್ರದಿಂದ 4ನೇ ಶನಿವಾರ ಪ್ಲಾಸ್ಟಿಕ್‌ ವಿಲೇವಾರಿಯನ್ನು ಸಮರ್ಪಕವಾಗಿ ಮಾಡದಿರುವುದು ತ್ಯಾಜ್ಯ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಆದರೆ ಈ ಬಗ್ಗೆ ಜಿ.ಪಂ. ಆಡಳಿತ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ತ್ಯಾಜ್ಯ ವಿಲೇವಾರಿ ದೃಷ್ಟಿಯಲ್ಲಿ ಉಡುಪಿ ಜಿಲ್ಲಾಡಳಿತವೂ ಸೂಕ್ತ ಕ್ರಮವನ್ನು ಕೈಗೊಂಡಿದೆ ಆದರೆ ದ.ಕ. ಜಿಲ್ಲಾಡಳಿತವೂ ಈ ಬಗ್ಗೆ ಗಮನಹರಿಸಬೇಕಿದೆ.

ಎಲ್ಲ ಪಂ.ನಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕ
ಎಲ್ಲ ಗ್ರಾ. ಪಂ.ಗಳಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಆರಂಭಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದ್ದು ಜಿ.ಪಂ. ನಿಂದ ಸೂಚನೆ ನೀಡಲಾಗಿದೆ. ಹೀಗಾಗಿ ಮುಂದಿನ ಕೆಲವು ತಿಂಗಳೊಳಗೆ ಜಿಲ್ಲೆಯ ಎಲ್ಲ ಗ್ರಾ. ಪಂ.ನಲ್ಲಿಯೂ ತ್ಯಾಜ್ಯ ಘಟಕ ಕಾರ್ಯನಿರ್ವಹಿಸಲಿವೆ.
– ಡಾ| ಆರ್‌. ಸೆಲ್ವಮಣಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,

- ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next