Advertisement

ಸಮ್ಮೇಳನದಿಂದ ದಲಿತ ಪ್ರಜ್ಞೆ ಜಾಗೃತವಾಯಿತೆ?

05:14 PM Aug 20, 2019 | Suhan S |

ಕೋಲಾರ: ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಿಂದ ದಲಿತ ಪ್ರಜ್ಞೆ ಜಾಗೃತವಾಯಿತೆ ಎಂಬ ಪ್ರಶ್ನೆ ಉದ್ಭವವಾಗಿದ್ದು ಚರ್ಚೆಗಳು ಆರಂಭವಾಗಿವೆ.

Advertisement

ನೆರೆ, ಪ್ರವಾಹ, ಸಮ್ಮೇಳನ ನಡೆದ ಎರಡೂ ದಿನವೂ ತುಂತುರು ಮಳೆ ಕಾಟ, ಸ್ಥಳೀಯರನ್ನು ಕಡೆಗಣಿಸಲಾಗಿದೆಯೆಂಬ ಆರೋಪಗಳ ನಡುವೆಯೂ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತೆಂಬ ಭಾವನೆ ಸಮ್ಮೇಳನದಲ್ಲಿ ಪಾಲ್ಗೊಂಡವರಿಂದ ವ್ಯಕ್ತವಾಯಿತು.

ಕಸಾಪಕ್ಕೆ ಅಭಿನಂದನೆ: ಜಾತಿ ಜನಗಣತಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತರು 105 ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ, ಪದಾಧಿಕಾರಿ ಹುದ್ದೆ ಅಲಂಕರಿಸಿದವರು ತೀರಾ ಕಡಿಮೆ. ದಶಕಗಳ ಹಿಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತರ ಪರ ಗೋಷ್ಠಿಯೊಂದನ್ನು ಇಡಲು ನಿರಾಕ ರಿಸಿದ ಕುಖ್ಯಾತಿಯನ್ನು ಕಸಾಪ ಹೊಂದಿತ್ತು. ಆದರೆ, ಮನುಬಳಿಗಾರ್‌ ನೇತೃತ್ವದ ಕಸಾಪ ಈ ಅಪವಾದವನ್ನು ಪ್ರಥಮ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ತೊಡೆದು ಹಾಕುವ ಪ್ರಯತ್ನ ಮಾಡಿದೆ. ಇದರಲ್ಲಿ ಯಶಸ್ವಿಯೂ ಆಗಿದೆ.

ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದ ದಲಿತ ವಿದ್ವಾಂಸರು ಮನು ಬಳಿಗಾರ ಮತ್ತವರ ತಂಡದ ಪ್ರಯತ್ನವನ್ನು ಮೆಚ್ಚಿಕೊಂಡಿದ್ದು ಇದನ್ನು ಪುಷ್ಟೀಕರಿಸಿದಂತಿತ್ತು.

ಅಚ್ಚುಕಟ್ಟು ವ್ಯವಸ್ಥೆ: ಸಮ್ಮೇಳನಗಳನ್ನು ಆಯೋಜಿಸುವಲ್ಲಿ ಅಧಿಕಾರಿಯಾಗಿ, ಕಸಾಪ ಚುಕ್ಕಾಣಿ ಹಿಡಿದವರಾಗಿ ಭಾರೀ ಅನುಭವ ಹೊಂದಿರುವ ಮನು ಬಳಿಗಾರ್‌, ಕೋಲಾರದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿಯೇ ವ್ಯವಸ್ಥೆ ಮಾಡಿದ್ದರು. ತುಂತುರು ಮಳೆ ನಡುವೆಯೂ ಸಮ್ಮೇಳನದ ಗೋಷ್ಠಿಗಳನ್ನು ಯಶಸ್ವಿಗೊಳಿಸಿದ್ದು, ಗೋಷ್ಠಿಗಳಲ್ಲಿ ವಿಷಯ ಮಂಡನೆ ಮಾಡಿದವರೆಲ್ಲರೂ ಆಗಮಿಸಿದ್ದು, ಯಾವುದೇ ಲೋಪವಿಲ್ಲದಂತೆ ಎರಡೂ ದಿನವೂ ತಿಂಡಿ, ಊಟದ ವ್ಯವಸ್ಥೆ ಮಾಡಿದ್ದರು.

Advertisement

ಆರೋಪ: ಸಾಕಷ್ಟು ಸ್ಥಳೀಯರಿಗೆ ಸಮ್ಮೇಳನದಲ್ಲಿ ಅವಕಾಶ ನೀಡಿಲ್ಲವೆಂಬ ಆಕ್ಷೇಪಗಳ ನಡುವೆಯೂ ಸ್ಥಳೀಯ ಕಲಾವಿದ ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದು, ಸಾಮಾನ್ಯವಾಗಿ ದಲಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದ ಇತರೇ ವರ್ಗದವರನ್ನು ಸಮ್ಮೇಳನದಲ್ಲಿ ಸಭಿಕರಾಗಿ ಪಾಲ್ಗೊಳ್ಳುವಂತೆ ಮಾಡುವ ವಿಚಾರಗಳಲ್ಲಿ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆಯೆಂದೇ ಭಾವಿಸಬೇಕು.

ಕೆ.ರಾಮಯ್ಯರ ಗೈರು ಕೊರತೆ: ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ನಡೆಸಲು ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿದ ಕಸಾಪದ ನಿರ್ಧಾರಕ್ಕೆ ಯಾರದೂ ಆಕ್ಷೇಪವಿರಲಿಲ್ಲ. ಆದರೆ, ಕೋಲಾರ ಜಿಲ್ಲೆಯವರೇ ಆದ, ದಲಿತ ಕವಿ, ವಿಮರ್ಶಕ, ಹೋರಾಟಗಾರ, ಕನ್ನಡ ನಾಡಿನ ಸಮಸ್ತ ದಲಿತರ ಸಾಕ್ಷಿ ಪ್ರಜ್ಞೆಯಾಗಿರುವ ಕೋಟಿಗಾನಹಳ್ಳಿ ರಾಮಯ್ಯ ಪ್ರಥಮ ದಲಿತ ಸಮ್ಮೇಳನ ಅದರಲ್ಲೂ ಕೋಲಾರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಪಾಲ್ಗೊಳ್ಳದೇ ಇದ್ದುದು ದೊಡ್ಡ ಕೊರತೆಯಾಗಿ ಕಾಡುತ್ತಲೇ ಇತ್ತು.

ಕೆಲವರನ್ನು ಕರೆತರಲಿಲ್ಲ: ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಕೋಟಿಗಾನಹಳ್ಳಿ ರಾಮಯ್ಯರಿಂದಲೇ ಮಾಡಿಸಿ ಜಾಣ್ಮೆ ತೋರಿದ್ದ ಕಸಾಪಕ್ಕೆ ಅವರನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಸೋತಿತ್ತು. ದಲಿತ ಹೋರಾಟಕ್ಕಾಗಿಯೇ ಬದುಕು ಮೀಸಲಿಟ್ಟ ಅನೇಕ ದಲಿತೇತರ ಲಕ್ಷ್ಮೀಪತಿ ಕೋಲಾರ ಇತರರನ್ನು ಸಮ್ಮೇಳನ ಮರೆತು ಬಿಟ್ಟಿತು. ಈ ಲೋಪ ಸಮ್ಮೇಳನದ ಪರಿಪೂರ್ಣತೆಗೆ ಚ್ಯುತಿ ತಂದಂತಿತ್ತು.

ಸ್ಥಳೀಯ ವಿಚಾರಗಳ ಕುರಿತು ಜಾಣ ಮರೆವು: ಸಮ್ಮೇಳನದ ಆರಂಭದಲ್ಲಿಯೇ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕಂಬಾಲಪಲ್ಲಿಯ ಘೋರ ದುರಂತದ ವಿಷಯದ ಆಧಾರದ ಮೇಲೆ ಸಮ್ಮೇಳನ ನಡೆಯಬೇಕಿತ್ತು ಎಂದು ಕೋಟಿಗಾನಹಳ್ಳಿ ರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಕಂಬಾಲಪಲ್ಲಿ, ನಾಗಲಾಪಲ್ಲಿ ಹಾಗೂ ದಲಿತ ಚಳವಳಿ ನಾಡಿನಾದ್ಯಂತ ಹರಡಲು ಕಾರಣವಾಗಿದ್ದ ಜಿಲ್ಲೆಯ ಯಾವುದೊಂದು ಹೋರಾಟವನ್ನು ಸಮ್ಮೇಳನದಲ್ಲಿ ಸ್ಮರಿಸಿಕೊಳ್ಳಲೇ ಇಲ್ಲ.

ದಲಿತ ಸಾಹಿತ್ಯಕ್ಕೆ ದಲಿತ ಹೋರಾಟವೇ ಕಾರಣ ಎಂಬ ಮಾತು ಸಮ್ಮೇಳನದ ಗೋಷ್ಠಿಗಳಲ್ಲಿ ಸಾಕಷ್ಟು ಬಾರಿ ಕೇಳಿ ಬಂದಿತು. ಆದರೆ, ಅದೇ ಹೋರಾಟಗಳು ಮತ್ತು ಅದರಲ್ಲೂ ಜಿಲ್ಲೆಯ ಹೋರಾಟಗಾರರನ್ನು ಪರಿಗಣಿಸದೆ, ಸಮ್ಮೇಳನದ ಗೋಷ್ಠಿಗಳು ಕೇವಲ ವಿದ್ವತ್‌ ಪೂರ್ಣವಾಗಿ ಮಾತ್ರವೇ ನಡೆದಿದ್ದು, ದಲಿತ ಸಮಾಜದ ಮೇಲೆ ಬೆಳಕು ಚೆಲ್ಲುವಂತಾಗಲಿಲ್ಲ ಎಂಬ ಆರೋಪಕ್ಕೆ ತುತ್ತಾಗುವಂತಾಯಿತು. ಕೋಲಾರ ಜಿಲ್ಲೆಯ ಸ್ಥಳೀಯ ಹೋರಾಟಗಾರರು, ಕಲಾವಿದರು ಹಾಗೂ ಸ್ಥಳೀಯ ವಿಚಾರಗಳನ್ನು ಮರೆ ಮಾಚಿ ಸಮ್ಮೇಳನ ನಡೆದಿರುವ ಕುರಿತು ಭಾರೀ ಆಕ್ರೋಶವಿದ್ದರೂ, ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಅದಕ್ಕೆ ಅಡ್ಡಿ ಮಾಡಬಾರದೆಂಬ ಕಾರಣಕ್ಕೆ ಅನೇಕರು ಸಮ್ಮೇಳನದತ್ತಲೂ ತಲೆ ಹಾಕದೆ ಇದ್ದು ಬಿಟ್ಟಿದ್ದು ಸಮ್ಮೇಳನದ ಲೋಪವೇ.

ದಲಿತ ಪ್ರಜ್ಞೆ ಜಾಗೃತ ಗೊಂಡಿತೇ?:

ಮೊದಲ ದಲಿತ ಸಮ್ಮೇಳನವು ಪೂರ್ಣವಾಗಿ ಅಲ್ಲದಿದ್ದರೂ, ಹಿಂದಿನ ಕೆಲವು ಘಟನಾವಳಿಗಳನ್ನು ಪುನರ್‌ ಮನನ ಮಾಡಿಸಲು ಸಫ‌ಲವಾಯಿತು. ಆದರೆ, ದಲಿತರ ಬದುಕು, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಹಾಡು ಪಾಡು ವಿಷಯದಲ್ಲಿ ಆನೆಯನ್ನು ಮುಟ್ಟಿ ನೋಡಿ ಅನುಭವಿಸಿದ ಕುರುಡನಂತಷ್ಟೇ ಇರುವಂತಾಯಿತು. ದಲಿತರು ಎದುರಿಸುತ್ತಿರುವ ಜಾತೀಯತೆ ಬಿಸಿ, ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ, ನಿರುದ್ಯೋಗ ಸಮಸ್ಯೆ, ಆರ್ಥಿಕ ಚೈತನ್ಯ, ರಾಜಕೀಯ ಸ್ಥಾನಮಾನಗಳಿಸುವ ವಿಚಾರಗಳಲ್ಲಿ ಸ್ಪಷ್ಟವಾದ ದಿಕ್ಸೂಚಿಯಾಗಲಿಲ್ಲ ಎಂಬ ಮಾತುಗಳು ಸಮ್ಮೇಳನದ ನಂತರದ ವಿಮರ್ಶೆಯಲ್ಲಿ ಕೇಳಿ ಬರುವಂತಾಗಿದೆ. ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ದಲಿತರಲ್ಲಿ ಕಿಂಚಿತ್ತಾದರೂ, ಜಾಗೃತಿ ಮೂಡಿಸಿ, ಮಸುಕಾಗುತ್ತಿರುವ ದಲಿತ ನೆಲ ಸಂಸ್ಕೃತಿಗಳನ್ನು ಹುಡುಕಾಟದ ವಿಚಾರದಲ್ಲಿ, ದಲಿತ ಪ್ರಜ್ಞೆಯನ್ನು ಉದ್ದೀಪನಗೊಳಿಸುವ ವಿಷಯದಲ್ಲಿ ಪ್ರೇರಣೆಯಾಯಿತೇ ಎಂಬ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಸಮ್ಮೇಳನದಿಂದ ಸಿಗಲೇ ಇಲ್ಲ.
● ಕೆ.ಎಸ್‌.ಗಣೇಶ್‌
Advertisement

Udayavani is now on Telegram. Click here to join our channel and stay updated with the latest news.

Next