Advertisement

ಈ ಬಾರಿಯಾದರೂ ರೇಣುಕಾಚಾರ್ಯಗೆ ಒಲಿದೀತೇ ಮಂತ್ರಿ ಪಟ್ಟ?

03:44 PM Jan 13, 2021 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿರುವ ಏಳು ಜನರಲ್ಲಿ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ. ರೇಣುಕಾಚಾರ್ಯ ಒಬ್ಬರಾಗಲಿದ್ದಾರಾ ಎಂಬ ಕೌತುಕ, ಕಾತುರ, ನಿರೀಕ್ಷೆ ಮತ್ತೆ ಗರಿಗೆದರಿದೆ.

Advertisement

ರಾಜ್ಯ ಸಚಿವ ಸಂಪುಟದ ವಿಸ್ತರಣೆ ಇಲ್ಲವೇ ಪುನಾರಚನೆ ಮಾತುಗಳು ಕೇಳಿ ಬರುತ್ತಿದ್ದಂತೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ಮಂತ್ರಿಗಿರಿ ದೊರೆಯುತ್ತದೆಯೇ ಇಲ್ಲವೇ ಎಂಬ ವಿಚಾರ ಮುನ್ನೆಲೆಗೆ ಬರುತ್ತದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ 6 ಜನ ಶಾಸಕರು ಆಯ್ಕೆಯಾಗಿದ್ದರು. (ಜಿ. ಕರುಣಾಕರ ರೆಡ್ಡಿ ಇದೀಗ ಬಳ್ಳಾರಿ ಜಿಲ್ಲೆಯ ಶಾಸಕರಾಗಿದ್ದಾರೆ). ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಇದ್ದಂತಹ ಇಬ್ಬರು ಕಾಂಗ್ರೆಸ್‌ ಶಾಸಕರಲ್ಲಿ ಹಿರಿತನ, ರಾಜಕೀಯ ಅನುಭವದ ಆಧಾರದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು.

ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೊಂಡಾಗ ಸಹಜವಾಗಿಯೇ ದಾವಣಗೆರೆ ಜಿಲ್ಲೆಯ ಒಬ್ಬರಿಗೆ ಮಂತ್ರಿಗಿರಿ ಪಕ್ಕಾ ಎನ್ನುವ ಮಾತುಗಳು ಪ್ರಬಲವಾಗಿ ಕೇಳಿ ಬಂದಿದ್ದವು. ಸಂಸದ ಜಿ.ಎಂ. ಸಿದ್ದೇಶ್ವರ ಆದಿಯಾಗಿ ಎಲ್ಲರೂ ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈವರೆಗೂ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಕೈಗೆಟುಕದ ದ್ರಾಕ್ಷಿ ಎನ್ನುವಂತಾಗುತ್ತಿದೆ.

ಪ್ರತಿ ಬಾರಿ ಸಚಿವ ಸಂಪುಟದ ವಿಸ್ತರಣೆ, ಪುನಾರಚನೆಯ ಮಾತುಗಳು ಹರಿದಾಡಿದಾಗ ಎಂದಿನಂತೆ ನಿರೀಕ್ಷೆ ಮೂಡುವುದು ಸಹಜವಾಗಿದೆ. ಹಾಗೆಯೇ ನಿರೀಕ್ಷೆ ಕೆಲ ಸಮಯದಲ್ಲಿ ಠುಸ್‌ ಆಗುವುದು ನಡೆಯುತ್ತಲೇ ಇದೆ. ಹಾಗಾಗಿ ಈ ಬಾರಿಯಾದರೂ ಜಿಲ್ಲೆಗೆ ಸಚಿವ ಸ್ಥಾನ ದಕ್ಕುವುದೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ.

ಈ ಬಾರಿಯ ಸಚಿವರ ಆಕಾಂಕ್ಷಿಗಳ ಪಟ್ಟಿಯಲ್ಲೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೆಸರಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ “ಮಾನಸಿಕ ಪುತ್ರ’ ಎಂದೇ ಗುರುತಿಸಲ್ಪಡುವ ರೇಣುಕಾಚಾರ್ಯ ಅವರ ಹೆಸರು ಪಟ್ಟಿಯಲ್ಲಿ ಇರುವುದು ಮುಖ್ಯ ಅಲ್ಲ, ನಿಜವಾಗಿಯೂ ಮಂತ್ರಿಗಿರಿ ಸಿಗುತ್ತಾ ಎಂಬುದು ಮಹತ್ವ ಪಡೆದಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ವಿಪಕ್ಷ ಹಾಗೂ ಸ್ವಪಕ್ಷದವರು ಧ್ವನಿ ಎತ್ತಿದಾಗ ಮೊದಲಿಗೆ ಯಡಿಯೂರಪ್ಪ ಪರ ಧ್ವನಿ ಎತ್ತುವವರಲ್ಲಿ, ಅತ್ಯಂತ ಪ್ರಬಲವಾಗಿ ಸಮರ್ಥನೆ ಮಾಡಿಕೊಳ್ಳುವಲ್ಲಿ ರೇಣುಕಾಚಾರ್ಯ ಸದಾ ಮುಂದು.

Advertisement

ಇದನ್ನೂ ಓದಿ:ಸಚಿವ ಶ್ರೀಪಾದ ನಾಯಕ್ ಆರೋಗ್ಯ ಸುಧಾರಿಸುತ್ತಿದೆ: ಗೋವಾ ಸಿಎಂ ಪ್ರಮೋದ್ ಸಾವಂತ್

ಯಡಿಯೂರಪ್ಪ ಪರವಾಗಿ ಅಷ್ಟೊಂದು ಬ್ಯಾಟಿಂಗ್‌ ಮಾಡುವ ರೇಣುಕಾಚಾರ್ಯಗೆ ಈಗಲಾದರೂ ಸಚಿವ ಸ್ಥಾನ ದೊರೆಯುವುದರ ಮೂಲಕ ದಾವಣಗೆರೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ಆರು ಬಿಜೆಪಿ ಶಾಸಕರಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಎಸ್‌.ಎ. ರವೀಂದ್ರನಾಥ ಹೊರತುಪಡಿಸಿದರೆ ಎಲ್ಲರಿಗೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಾಗಾಗಿ ಸಚಿವ ಸ್ಥಾನಕ್ಕೆ ರವೀಂದ್ರನಾಥ, ರೇಣುಕಾಚಾರ್ಯ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗುವ ಸಾಧ್ಯತೆ ಇದೆ.

ಹೈಕಮಾಂಡ್‌ನಿಂದ ಸಿಗುತ್ತಾ ಗ್ರೀನ್‌ ಸಿಗ್ನಲ್‌ ?

ಶಿರಾ ಉಪ ಚುನಾವಣೆ ನಂತರ ಯಡಿಯೂರಪ್ಪ ಪಾಳಯಕ್ಕೆ ಮತ್ತಷ್ಟು ಹತ್ತಿರವಾಗಿರುವ ರೇಣುಕಾಚಾರ್ಯ ಹೆಸರು ಸಚಿವ ಸ್ಥಾನದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಿಂದಿನಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಧಾರವೇ ಆಂತಿಮ ಎನ್ನುವ ರಾಜಕೀಯ ವಾತಾವರಣ ಇದ್ದಲ್ಲಿ ರೇಣುಕಾಚಾರ್ಯರ ಪ್ರಯತ್ನಕ್ಕೆ ಇಷ್ಟೊತ್ತಿಗಾಗಲೇ ಸಿಕ್ಕಿರುತ್ತಿತ್ತು. ಆದರೆ ಈಗ ಅಂತಹ ವಾತಾವರಣ ಇಲ್ಲ. ಪ್ರತಿಯೊಂದಕ್ಕೂ ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಹೈಕಮಾಂಡ್‌ ಅಣತಿಯಂತೆ ಯಡಿಯೂರಪ್ಪ ಸಹ ನಡೆದುಕೊಳ್ಳಲೇಬೇಕಾದ ವಾತಾವರಣ ಇದೆ. ಹಾಗಾಗಿ ರೇಣುಕಾಚಾರ್ಯಗೆ ಸಚಿವ ಸ್ಥಾನಕ್ಕೆ ಹಸಿರು ನಿಶಾನೆ ದೊರೆಯುವುದೇ ಎಂಬ ಕುತೂಹಲದ ಪ್ರಶ್ನೆಗೆ ಬುಧವಾರ ಖಚಿತ ಉತ್ತರ ದೊರೆಯಲಿದೆ.

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next