Advertisement

ಸಸಿಹಿತ್ಲು ಬೀಚ್‌ ಪ್ರದೇಶದಲ್ಲಿ ಕಟ್ಟೆಚ್ಚರ

03:30 AM Jul 08, 2017 | Karthik A |

ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲು ಆದೇಶ
ಹಳೆಯಂಗಡಿ: ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ನ, ಪಣಂಬೂರು, ತಣ್ಣೀರುಬಾವಿ, ಸುರತ್ಕಲ್‌ ಬೀಚ್‌ಗಳಲ್ಲಿ ಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದನ್ನು ನಿರ್ಬಂಧಿಸಿರುವಂತೆಯೇ ಸಸಿಹಿತ್ಲು ಬೀಚ್‌ನಲ್ಲಿಯೂ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ.

Advertisement

ಸಸಿಹಿತ್ಲಿನ ಕಡಲ ಕಿನಾರೆಗಳಿಗೆ ಆಗಮಿಸುವವರನ್ನು ಅಪಾಯದ ಕುರಿತು ಎಚ್ಚರಿಸಲು ಸೂಚನಾ ಫ‌ಲಕಗಳನ್ನು ಹಾಕಲಾಗಿದೆ. ಜತೆಗೆ ಪ್ರವಾಸೋದ್ಯಮ ಇಲಾಖೆಯ ಇಬ್ಬರು ಪ್ರವಾಸಿ ಮಿತ್ರರನ್ನು ಹಾಗೂ ಮೂರು ಮಂದಿ ಗೃಹ ರಕ್ಷಕದಳದವರನ್ನು ಜು. 1ರಿಂದ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಇವರು ಪ್ರತಿದಿನ ಸುರತ್ಕಲ್‌ ಠಾಣೆಯಲ್ಲಿ ಹಾಜರಾತಿ ಹಾಕಿ ಸಸಿಹಿತ್ಲಿನ ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ವ್ಯವಸ್ಥೆ ಆಗಸ್ಟ್‌ವರೆಗೆ ಮುಂದುವರಿಯಲಿದೆ. ಸಸಿಹಿತ್ಲಿನಲ್ಲಿ ಕಳೆದ ವಾರ ಮೂರು ಮಂದಿ ಹಾಗೂ ಉಳ್ಳಾಲದಲ್ಲಿ ಇಬ್ಬರು ಸಮುದ್ರ ಪಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ. ಸಸಿಹಿತ್ಲಿನಲ್ಲಿ ಖಾಯಂ ಜೀವ ರಕ್ಷಕರಾದ ಅನಿಲ್‌, ಮನೋಜ್‌, ದಿಲೀಪ್‌ ಜಗದೀಶ್‌ ಅವರೊಂದಿಗೆ ಪ್ರವಾಸಿ ಮಿತ್ರ ಮತ್ತು ಗೃಹರಕ್ಷಕದಳದವರು ಕಾರ್ಯ ಪ್ರವೃತ್ತರಾಗಿದ್ದಾರೆ.

ನಿರ್ಬಂಧಿತ ಪ್ರದೇಶವನ್ನು ಉಲ್ಲಂಘಿಸಿ ಪ್ರವೇಶಿಸಿದಲ್ಲಿ ಅಥವಾ ಉದ್ಧಟತನದಿಂದ ವರ್ತಿಸುವವರನ್ನು ಸುರತ್ಕಲ್‌ ಪೊಲೀಸ್‌ ಠಾಣೆಗೆ ಒಪ್ಪಿಸಲು ಸಹ ಇವರಿಗೆ ಆದೇಶಿಸಲಾಗಿದೆ. ಗುಂಪಾಗಿ ಬರುವ ಪ್ರವಾಸಿಗರು ಎಚ್ಚರಿಕೆಯ ಮಾತನ್ನು ಮೀರಿ ವರ್ತಿಸಿ ಗದ್ದಲ ಸೃಷ್ಟಿಸಿದರೆ ಸೆಕ್ಷನ್‌ 144ರಂತೆ ಲಾಠಿ ಚಾರ್ಜ್‌ ಮಾಡಿಯೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅವಕಾಶ ನೀಡಲಾಗಿದೆ. ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮಾತ್ರ ಸಸಿಹಿತ್ಲು ಬೀಚ್‌ ತೆರೆದಿರುತ್ತದೆ. ಸಮಯದ ಪರಿಪಾಲನೆ ಹಾಗೂ ಪ್ರವಾಸಿಗರು ತಾಳ್ಮೆಯಿಂದ ವರ್ತಿಸುವಂತೆ ಸ್ಥಳದಲ್ಲಿಯೇ ಸೂಚಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next