Advertisement

ಮೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆ

06:30 AM Feb 25, 2019 | |

ಬೆಂಗಳೂರು: ಮೇ 2ರಿಂದಲೇ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಹೊರಟಿರುವ ನಿರ್ಧಾರದಿಂದ ಸರ್ಕಾರ  ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಬೇಕಾಗುತ್ತದೆ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯಪುರ್ಲೆ, ಸಚಿವ ವೆಂಕಟರಾವ್‌ ನಾಡಗೌಡ ಎದುರೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಶಾಸಕರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ತಿಮ್ಮಯ್ಯ ಪುರ್ಲೆ, ಸರ್ಕಾರವನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ಐಎಎಸ್‌ ಅಧಿಕಾರಿಗಳು ನಿರತರಾಗಿದ್ದಾರೆ. ಮುಖ್ಯಮಂತ್ರಿಗಳು ಈ ಅಧಿಕಾರಿಗಳ ಮಾತಿಗೆ ಮಣೆ ಹಾಕಬಾರದು ಎಂದು ಮನವಿ ಮಾಡಿದರು.

ಕಳೆದ ವರ್ಷದಿಂದಲೇ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ತರಗತಿಗಳನ್ನು ಮೇ 2ರಿಂದ ಆರಂಭಿಸಿದೆ. ಆದರೆ ಉಪನ್ಯಾಸಕರು ತರಗತಿಗೆ ಹೋದರೂ ವಿದ್ಯಾರ್ಥಿಗಳು ತರಗತಿಗೆ ಬರಲಿಲ್ಲ. ಬಹುತೇಕ ಉಪನ್ಯಾಸಕರು ಈ ಬಗ್ಗೆ ಅಪಸ್ವರ ಎತ್ತಿದ್ದು, ಖಾಸಗಿ ಸಂಸ್ಥೆಗಳಲ್ಲಿನ ಈ ವ್ಯವಸ್ಥೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸರ್ಕಾರಿ ಕಾಲೇಜುಗಳಲ್ಲಿ ಜಾರಿಗೆ ತರಬಾರದು. ಒಂದೊಮ್ಮೆ ಸರ್ಕಾರ ಇದರ ಕಾರ್ಯಗತಕ್ಕೆ ಮುಂದಾದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಪ್ರಕಟಿಸಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಈಗಾಗಲೇ ಸರ್ಕಾರ ಉಪನ್ಯಾಸಕ ವಲಯದ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದು ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸ ಬೇಕಾಗಿದೆ. ಕಾಲ್ಪನಿಕ ವೇತನ ಸೇರಿದಂತೆ ಹಲವು ಸೌಲಭ್ಯಗಳು ಉಪನ್ಯಾಸಕರ ವಲಯಕ್ಕೆ ದೊರಕಿಲ್ಲ. ಸರ್ಕಾರ  ಕೂಡಲೇ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ಹಿರಿಯ ಅಧಿಕಾರಿಗಳ ಮಾತನ್ನು ಕೇಳಬಾರದು ಎಂದು ಮನವಿ ಮಾಡಿದರು.

 ಸಂಘದ ಚುನಾವಣೆಯನ್ನು ಬಹಳಷ್ಟು ಪಾರದರ್ಶಕತೆಯಿಂದ ನಡೆಸಲಾಗಿದೆ. ತಾಲೂಕು ಮಟ್ಟದವರೆಗೂ ಚುನಾವಣೆ ವ್ಯವಸ್ಥೆಯನ್ನು ವಿಸ್ತರಿಸಿರುವುದು ಈ ಬಾರಿಯ ವಿಶೇಷವಾಗಿದ್ದು, ಸಂಘವನ್ನು ಮತ್ತಷ್ಟು ಗಟ್ಟಿಗೊಳಿಸಿ ಉಪನ್ಯಾಸಕರ ಹೋರಾಟಗಳಿಗೆ ನ್ಯಾಯ ನೀಡುವುದಾಗಿ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಮಾತನಾಡಿ, ಉಪನ್ಯಾಸಕರ ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ.

Advertisement

ಮೇ ತಿಂಗಳಲ್ಲಿ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸುವ ಬಗೆಗಿನ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವರಿಕೆ ಮಾಡಿಕೊಡಲಾಗಿದೆ. ಉಪನ್ಯಾಸಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ಬಗೆಹರಿಸಲಿದೆ ಎಂಬ ಭರವಸೆ ನೀಡಿದರು. ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಎಸ್‌.ಆರ್‌.ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಎ.ಎಚ್‌.ಲಿಂಗೇಗೌಡ, ಕೋಶಾಧ್ಯಕ್ಷ ಜಯಣ್ಣ ಉಪಸ್ಥಿತರಿದ್ದರು.

ಬಹಿಷ್ಕಾರ ಪರಿಹಾರವಲ್ಲ: ಯಾವುದೇ ಸಮಸ್ಯೆಗಳಿಗೆ ಬಹಿಷ್ಕಾರ ಒಂದೇ ಪರಿಹಾರವಲ್ಲ. ಸಮಸ್ಯೆಗಳು ಹೇಗೆ ಹುಟ್ಟಿಕೊಳ್ಳುತ್ತವೆಯೋ, ಹಾಗೆಯೇ ಅದಕ್ಕೆ ಪರಿಹಾರ ಕೂಡ ಇರುತ್ತದೆ. ಯಾವುದೇ ಸಮಸ್ಯೆಗಳಿರಲಿ ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸಿಕೊಳ್ಳ ಬೇಕು. ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಮನ್ನಣೆ ನೀಡಲಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next