Advertisement

ಯುದ್ಧ ಆಯ್ಕೆಯಲ್ಲ; ಆದರೆ ಎಲ್ಲದಕ್ಕೂ ಸನ್ನದ್ಧ: ಏ|ಚೀ|ಮಾ|ಭದೌರಿಯಾ

01:06 AM Jun 21, 2020 | Sriram |

ಹೊಸದಿಲ್ಲಿ: ಯಾವುದೇ ಸನ್ನಿವೇಶ ಎದುರಾಗಲಿ, ನಾವು ಸರ್ವ ಸನ್ನದ್ಧರಾಗಿದ್ದೇವೆ. ಯುದ್ಧಕ್ಕೂ ಸಿದ್ಧರಿದ್ದೇವೆ.ಇದು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಆರ್‌ಕೆಎಸ್‌ ಭದೌರಿಯಾ ಅವರ ಖಚಿತ ಹೇಳಿಕೆ. ಗುರುವಾರ ಮತ್ತು ಶುಕ್ರವಾರವಷ್ಟೇ ಸದ್ದಿಲ್ಲದೆ ಲಡಾಖ್‌ಗೆ ತೆರಳಿ, ವಸ್ತುಸ್ಥಿತಿ ಪರಿಶೀಲನೆ ನಡೆಸಿ ಬಂದಿರುವ ಅವರು ದೇಶಕ್ಕೆ ಈ ಭರವಸೆ ನೀಡಿದ್ದಾರೆ. ನಮ್ಮ 20 ಯೋಧರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗಲು ಬಿಡುವುದಿಲ್ಲ ಎಂದೂ ಹೇಳಿದ್ದಾರೆ. ಹೈದರಾಬಾದ್‌ನ ದಿಂಡಿಗಲ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನಾವು ಯುದ್ಧವನ್ನು ಬಯಸುವವರಲ್ಲ. ಆದರೆ ಅಂಥ ಪರಿಸ್ಥಿತಿ ಎದುರಾದರೆ ಸುಮ್ಮನಿರುವುದಿಲ್ಲ ಎಂದಿದ್ದಾರೆ.

Advertisement

ಮೇ ತಿಂಗಳಿನಿಂದಲೇ ಸೇನೆ ಜಮಾವಣೆ
ಭಾರತ-ಚೀನ ಸಂಘರ್ಷ ಮೇಯಲ್ಲಿ ಆರಂಭವಾದಾಗಿನಿಂದಲೇ ನಮ್ಮ ವಾಯುನೆಲೆಗಳಲ್ಲಿ ಯುದ್ಧ ವಿಮಾನ ಜಮಾವಣೆ ಆರಂಭಿಸಿದ್ದೇವೆ. ಕೇವಲ ಲೇಹ್‌ ಮತ್ತು ಶ್ರೀನಗರದಲ್ಲಷ್ಟೇ ಅಲ್ಲ ಎಂದು ಹೇಳಿರುವ ಭಡೌರಿಯಾ, ನಮ್ಮ ವಾಯುಪಡೆ ಅತ್ಯಂತ ಎತ್ತರದ ಮತ್ತು ದುರ್ಗಮ ಪ್ರದೇಶಗಳಲ್ಲೂ ಸೆಣಸುವಷ್ಟು ಶಕ್ತವಾಗಿದೆ ಎಂದಿದ್ದಾರೆ.

ಲಡಾಖ್‌ ಸಂಘರ್ಷಕ್ಕೆ ಭೂಸೇನೆ ಉತ್ತರ ನೀಡಿದೆ. ಇದಕ್ಕೆ ಪೂರಕವಾಗಿ ವಾಯುಪಡೆಯೂ ಹೆಚ್ಚುವರಿ ಬೆಟಾಲಿಯನ್‌ಗಳನ್ನು ನಿಯೋಜಿಸಿದ್ದು, ಎಂತಹುದೇ ಪರಿಸ್ಥಿತಿ ಎದುರಾದರೂ ಸಿದ್ಧವಾಗಿದೆ ಎಂದು ಭದೌರಿಯಾ ತಿಳಿಸಿದರು.

ಬಲಿದಾನ ವ್ಯರ್ಥವಾಗದು ಲಡಾಖ್‌ ಗಡಿಯಲ್ಲಿ ಹುತಾತ್ಮರಾದ 20 ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದ ಏ| ಚೀ| ಮಾ| ಭದೌರಿಯಾ, ನಮ್ಮ ಪಡೆಗಳನ್ನು ಸರ್ವಸಜ್ಜಿತವಾಗಿ ಮತ್ತು ಅತ್ಯಂತ ಸೂಕ್ತ ಸ್ಥಳಗಳಲ್ಲಿ ಜಮಾವಣೆ ಮಾಡಿದ್ದೇವೆ. ಯಾವುದೇ ಅನಿರೀಕ್ಷಿತ ಸಂದರ್ಭ ಎದುರಾದರೂ ಸೂಕ್ತ ಉತ್ತರ ಕೊಡುತ್ತೇವೆ ಎಂದರು.

ಸದ್ಯ ಲಡಾಖ್‌ ಪ್ರದೇಶ ಸಂಪೂರ್ಣ ನಿಯಂತ್ರಣದಲ್ಲಿದೆ. ಭಾರತೀಯ ಸೇನಾಪಡೆ ಈ ಪ್ರದೇಶವನ್ನು ಹತೋಟಿಯಲ್ಲಿ ಇರಿಸಿಕೊಂಡಿದೆ ಎಂದರು.

Advertisement

ಈಗ ಯುದ್ಧವಾದರೆ ಚೀನಕ್ಕೆ ಸೋಲು
ಒಂದು ವೇಳೆ ಈಗ ಲಡಾಖ್‌ ಪ್ರದೇಶದಲ್ಲಿ ಯುದ್ಧವಾದರೆ ಚೀನಕ್ಕೆ ಸೋಲು ಖಚಿತ ಎಂಬುದಾಗಿ ಅಧ್ಯಯನವೊಂದು ಪ್ರತಿಪಾದಿಸಿದೆ. 1962ರ ಯುದ್ಧಾನಂತರದಲ್ಲಿ ಪಾಠ ಕಲಿತಿರುವ ಭಾರತ, ಈಗಾಗಲೇ ಈ ಪ್ರದೇಶದಲ್ಲಿ ಅಚ್ಚುಕಟ್ಟಾದ ವಾಯುನೆಲೆಗಳನ್ನು ನಿರ್ಮಾಣ ಮಾಡಿದೆ. ಚೀನಕ್ಕೆ ಹೋಲಿಸಿದರೆ ಈ ವಿಚಾರದಲ್ಲಿ ಭಾರತವೇ ಮುಂದಿದೆ.

ಅಮೆರಿಕದ ಎರಡು ಸಂಸ್ಥೆಗಳು ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶ ಪ್ರಸ್ತಾವಿಸಲಾಗಿದೆ. ಚೀನಕ್ಕಿಂತ ಭಾರತಕ್ಕೆ ಹೆಚ್ಚು ವಾಯುನೆಲೆಗಳ ಲಭ್ಯತೆಯ ಸಹಕಾರ ಸಿಗಲಿದೆ.

ಚೀನ ಆ್ಯಪ್‌ಗಳ ಚೇಷ್ಟೆ
ಭಾರತದಲ್ಲಿ ಚೀನ ವಸ್ತುಗಳು, ಆ್ಯಪ್‌ ನಿಷೇಧಕ್ಕೆ ಕೂಗು ಮೊಳಗುತ್ತಿರುವಾಗಲೇ ಚೀನದ ಎರಡು ಆ್ಯಪ್‌ಗಳು ತಮ್ಮ ಚೇಷ್ಟೆ ಪ್ರದರ್ಶಿಸಿವೆ. ಗಡಿ ಸಂಘರ್ಷದ ಕುರಿತಂತೆ ಪ್ರಧಾನಿ ಮೋದಿ ಮತ್ತು ವಿದೇಶಾಂಗ ವಕ್ತಾರ ಅನುರಾಗ್‌ ಶ್ರೀವಾಸ್ತವ ನೀಡಿದ್ದ ಹೇಳಿಕೆಗಳನ್ನು ವಿ ಚಾಟ್‌ ಮತ್ತು ವಿಯಾಬೋದಿಂದ ಅಳಿಸಲಾಗಿದೆ. ತಮ್ಮ ನೀತಿ ನಿಬಂಧನೆಗಳಿಗೆ ಒಳಪಡದ್ದರಿಂದ ಈ ಕ್ರಮ ಎಂದು ಕಾರಣ ನೀಡಲಾಗಿದೆ.

ಸಮರಕ್ಕೂ ಸನ್ನದ್ಧ
ನೇಪಾಲವನ್ನು ತನ್ನ ಕಡೆಗೆ ಸೆಳೆದುಕೊಂಡ ಬಳಿಕ ಈಗ ಚೀನವು ಬಾಂಗ್ಲಾ ದೇಶಕ್ಕೂ ಆಮಿಷಗಳ ಬೆಣ್ಣೆ ಹಚ್ಚಿ ಒಲಿಸಿ ಕೊಳ್ಳಲು ಮುಂದಾಗಿದೆ. ಈ ಪ್ರಯತ್ನದ ಭಾಗವಾಗಿಯೇ ಶೂನ್ಯ ಸುಂಕದೊಂದಿಗೆ ಬಾಂಗ್ಲಾದಿಂದ ತಾನು ಆಮದು ಮಾಡಿಕೊಳ್ಳುತ್ತಿರುವ ವಿವಿಧ ವಸ್ತುಗಳ ಪ್ರಮಾಣವನ್ನು ಶೇ.97ಕ್ಕೆ ಏರಿಸಿದೆ.

ಗಾಲ್ವಾನ್‌ ಕಣಿವೆ ನಮ್ಮದೇ
ಗಾಲ್ವಾನ್‌ ಕಣಿವೆ ನಮ್ಮದು ಎಂದಿದ್ದ ಚೀನಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ಮತ್ತೆ ತಿರುಗೇಟು ನೀಡಿದೆ. ಕಣಿವೆ ಹಿಂದೆಯೂ ಈಗಲೂ ನಮ್ಮದೇ. ನಿಮ್ಮ ವಾದ ಒಪ್ಪಲುಅಸಾಧ್ಯವಾದದ್ದು ಮತ್ತು ಪ್ರಶ್ನಾರ್ಹವಾದುದು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಗಾಲ್ವಾನ್‌ ಕಣಿವೆ ತನ್ನದೆನ್ನುವ ಚೀನದ ಹೇಳಿಕೆ ಅದರ ಈ ಹಿಂದಿನ ನಿಲುವಿಗೆ ಅನುಗುಣವಾಗಿಲ್ಲ. ತನ್ನ ವ್ಯಾಪ್ತಿಯನ್ನು ಅದು ಮೀರಿದ್ದರಿಂದಲೇ ಭಾರತ ತಕ್ಕ ಪ್ರತ್ಯುತ್ತರ ನೀಡಬೇಕಾಯಿತು ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ. ಗಾಲ್ವಾನ್‌ನಲ್ಲಿ ಎರಡೂ ದೇಶಗಳ ನೆಲೆಗಳು ಐತಿಹಾಸಿಕವಾಗಿ ಸ್ಪಷ್ಟ. ತನ್ನ ಮಿತಿಯನ್ನು ಭಾರತೀಯ ಪಡೆ ಪಾಲಿಸುತ್ತಿದೆ. ಅಲ್ಲಿ ದೀರ್ಘ‌ಕಾಲದಿಂದ ಅದು ಗಸ್ತು ನಡೆಸುತ್ತಿದ್ದು, ಈ ಅವಧಿಯಲ್ಲಿ ಯಾವುದೇ ಅನಪೇಕ್ಷಿತ ಘಟನೆಗಳು ನಡೆದಿರಲಿಲ್ಲ ಎಂಬುದು ಗಮನಾರ್ಹ ಎಂದೂ ಶ್ರೀವಾಸ್ತವ ಹೇಳಿದ್ದಾರೆ.

ಐಪಿಎಲ್‌ನಿಂದ ವಿವೋಗೆ ಔಟ್‌?
ದೇಶದಲ್ಲಿ ಚೀನ ವಿರೋಧಿ ಭಾವನೆ ಹೆಚ್ಚುತ್ತಿರುವುದರಿಂದ ಐಪಿಎಲ್‌ ಪ್ರಾಯೋಜಕತ್ವದಿಂದ ಚೀನದ ಸ್ಮಾರ್ಟ್‌ ಫೋನ್‌ ಕಂಪೆನಿ ವಿವೋ ಅನ್ನು ಕೈಬಿಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಈ ಸಂಬಂಧ ಮುಂದಿನ ವಾರ ಐಪಿಎಲ್‌ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಇದರಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸ್ವತಃ ಐಪಿಎಲ್‌ನ ಅಧಿಕೃತ ಟ್ವಿಟರ್‌ ಖಾತೆಯಲ್ಲೇ ಈ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಲಡಾಖ್‌ನಲ್ಲಿ ಹೆಲಿಕಾಪ್ಟರ್‌ ನಿಗಾ
ಲಡಾಖ್‌ ಗಡಿಭಾಗದಲ್ಲಿ ಚೀನದ ಪಡೆಗಳು ಭಾರತೀಯ ಪ್ರದೇಶದೊಳಕ್ಕೆ ನುಸುಳಿರುವ ಅನುಮಾನದಿಂದ ಭಾರತೀಯ ಸಮರ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಹಿಮಾಲಯದ ಅತೀ ಎತ್ತರದ ಪ್ರದೇಶಗಳಲ್ಲಿ ಪೆಟ್ರೋಲಿಂಗ್‌ ನಡೆಸಿವೆ. ಹೊಸ ರಾಡಾರ್‌ ಮತ್ತು ಏವಿಯೋನಿಕ್ಸ್‌ ಹೊಂದಿರುವ ಮಿಗ್‌ 29, ಚಿನೂಕ್‌ ಹೆಲಿಕಾಪ್ಟರ್‌ಗಳು ಮತ್ತು ಸುಖೋಯ್‌ ಯುದ್ಧ ವಿಮಾನಗಳನ್ನು ಗಸ್ತಿಗೆ ನಿಯೋಜಿಸಲಾಗಿದೆ. ಚಿನೂಕ್‌ ಟ್ರಾನ್ಸ್‌ಪೋರ್ಟ್‌ ಕಾಪ್ಟರ್‌ಗಳಲ್ಲಿ ಎಂ-777 ಆರ್ಟಿಲರಿ ಗನ್‌ ಒಯ್ಯಬಹುದಾಗಿದೆ ಎಂದು ಏ|ಚೀ|ಮಾ| ಭದೌರಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next