Advertisement

ಗದೆಯೂ ಯುದ್ಧವೂ

06:37 PM Jun 15, 2019 | mahesh |

ಗದಾಯುದ್ಧ ಶಬ್ದ ಜನಸಾಮಾನ್ಯರ ಮಾತಿನಲ್ಲಿ ಬಳಕೆಯಾಗುವ ಪರಿ ನೆನೆದರೆ ನಗೆ ಉಕ್ಕುತ್ತದೆ. ನಾವು ಚಿಕ್ಕಂದಿನಲ್ಲಿರುವಾಗ ಅಮ್ಮ “ಯಾರ ಹತ್ತಿರವೂ ಗದಾಯುದ್ಧ ಮಾಡಬೇಡಿ’ ಎಂದು ಹೇಳುತಿದ್ದುದು ಕಿವಿಯಲ್ಲಿ ಕುಳಿತುಬಿಟ್ಟಿದೆ. ಆದರೆ, ನಮ್ಮ ಚಿಕ್ಕಪುಟ್ಟ ಹೊಡೆದಾಟಗಳಿಗೆಲ್ಲ ಅಮ್ಮ ಗದಾಯುದ್ಧ ಅಂತ ಯಾಕೆ ಹೆಸರಿಟ್ಟರು ಎಂಬುದು ಮಾತ್ರ ಇವತ್ತಿಗೂ ಅರ್ಥವಾಗಿಲ್ಲ. ನಮ್ಮ ಹತ್ತಿರ ಗದೆ ಇರುತ್ತಿರ‌ಲಿಲ್ಲ. ಗದೆಯೇ ಇಲ್ಲದಿದ್ದ ಮೇಲೆ ಗದಾಯುದ್ಧ ಎಲ್ಲಿಂದ ನಡೆಯಬೇಕು? ಗದಾಯುದ್ಧ ಎಂಬ ಪದ ಉಪಯೋಗಿಸುವಾಗಲೆಲ್ಲ “ಗದೆ’ ಮುಖ್ಯವಾಗುವುದೇ ಇಲ್ಲ. “ಯುದ್ಧ’ ಮಾತ್ರ ಮುಖ್ಯವಾದ ವಿಷಯವಾಗುತ್ತದೆ. ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಒಂದು ಕಾಲದಲ್ಲಿ ಭೀಮನಂಥ ಭೀಮನ ಕೈಯಲ್ಲಿ ತನ್ನ ಪೌರುಷದಿಂದ ಮಿರಮಿರ ಮಿರುಗಿದ ವೈಭವೋಪೇತ ದಿನಗಳ ಗದೆ, ಯುದ್ಧದಲ್ಲಿ ದುರೊಧನನ ಕೈಯ್ಯಲ್ಲಿ ಶತ್ರು ಸೈನಿಕನ ಹೃದಯದಲ್ಲಿ ಸಾವಿನ ಭಯವನ್ನು ಬಿತ್ತಿದ ಗದೆ, ದುಷ್ಟ ಶಿಕ್ಷಕ- ಶಿಷ್ಟ ರಕ್ಷಕ ವಿಷ್ಣುವಿನ ಕೈಯಲ್ಲಿ ವಿರಾಜಿಸುತ್ತಿರುವ ಗದೆ, ಬಾಳೆತೋಟವನ್ನು ಹಾಳುಮಾಡಿ ರಕ್ಕಸ ರಾವಣನ ಅಹಂಕಾರವನ್ನು ಮೆಟ್ಟಿ ಸೀತಾ ಸಂಪಾದನೆಗೆ ದಾರಿಯಾಗಿ ಹನುಮಂತನ ಕೈಯಲ್ಲಿ ಮಿಂಚಿದ ಗದೆ- ಕಲಿಯುಗದ ಯಃಕಶ್ಚಿತ್‌ ಮಾನವರ ಬಾಯಲ್ಲಿ ಆ ಶಬ್ದಕ್ಕೂ ಬೆಲೆಯೇ ಇಲ್ಲದ ಸ್ಥಿತಿಯನ್ನು ಮುಟ್ಟಿದೆಯೆಂದರೆ ಸಂವೇದನೆಯಿರುವ ಯಾವ ಜೀವಿಗೆ ತಾನೇ ವೇದನೆಯಾಗುವುದಿಲ್ಲ?

Advertisement

“ಗದೆ ಎಂದಕೂಡಲೇ ಬಾಲ್ಯದ ನೆನಪುಗಳು ನುಗ್ಗಿ ಬರುತ್ತವೆ. ಜಾತ್ರೆಯಲ್ಲಿ ಪ್ರತಿದಿನ ಯಕ್ಷಗಾನ ನಡೆಯುತ್ತಿದ್ದ ಕಾಲ ಅದು. ಜಾತ್ರೆಯ ಹದಿನೈದು ದಿನಗಳಲ್ಲಿ ಯಕ್ಷಗಾನವೇ ಪ್ರಮುಖ ಆಕರ್ಷಣೆ. ಗದಾಯುದ್ಧ, ದ‌ುರೊಧನಾವಸಾನ, ಕೃಷ್ಣಸಂಧಾನ, ಶರಸೇತುಬಂಧ, ಕಂಸವಧೆ ಮುಂತಾದ ಪ್ರಸಂಗಗಳಲ್ಲಿ “ಗದೆ’ಗಳಿಗೇ ಹೆಚ್ಚು ಮಹತ್ವ. ಸಾಮಾನ್ಯವಾಗಿ ಗದೆಯಿಲ್ಲದೇ ಹೋದ ಪ್ರಸಂಗಗಳೇ ಕಡಿಮೆ. ಇಂತಹ ಯಕ್ಷಗಾನಗಳನ್ನು ನೋಡಿ ರಸಾನಂದ ಹೊಂದಿದ ದಿನಗಳೆಷ್ಟೋ! ನೆನೆದರೆ ಇವತ್ತಿಗೂ ಮನಸ್ಸು ಖುಷಿಯಿಂದ ಕುಣಿದಾಡುತ್ತದೆ. ಅಂದಿನ ಯಕ್ಷಗಾನದ ಒಂದು ಪ್ರಸಂಗ ಹೀಗಿದೆ. ಪ್ರಸಂಗ ಏನೆಂದಿರಾ? ಅದೇ ಗದಾಯುದ್ಧ. ಆವತ್ತಿನ ಪ್ರಸಿದ್ಧ ಜೋಡಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್‌ ಪಾತ್ರಧಾರಿಗಳು. ಚಿಟ್ಟಾಣಿಯವರ ದುರೊಧನ, ಜಲವಳ್ಳಿಯವರ ಭೀಮ. ಈ ಜೋಡಿಗೆ ಮಾರು ಹೋಗದವರಾರು? ಚಿಟ್ಟಾಣಿ ಖಳ ಪಾತ್ರದಲ್ಲಿ ವೇದಿಕೆಗೆ ಬಂದರು. ದುರ್ಯೋಧನನನ್ನು ಅಟ್ಟಿಸಿಕೊಂಡು ಬಂದ ಭೀಮ. ಚಿಟ್ಟಾಣಿ ರಂಗ ಪ್ರವೇಶ ಮಾಡುತ್ತಿದ್ದ ಹಾಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು! ಕೇಕೆ ಹಾಕಿದರು! ಸಿಳ್ಳು ಹೊಡೆದರು! ಚಿಕ್ಕವಳಾದ ನನಗೆ ದುರ್ಯೋಧನ ಕೆಟ್ಟವನಾದರೂ ಯಾಕೆ ಅವನಿಗಿಷ್ಟೊಂದು ಚಪ್ಪಾಳೆ? ಎಂದು ಅರ್ಥವಾಗಲಿಲ್ಲ. ಆದರೆ, ಆ ಚಿಕ್ಕ ವಯಸ್ಸಿನಲ್ಲಿ ಕೂಡ ಅವರ ಕುಣಿತದ ಮೋಹಕ ಭಂಗಿಗೆ ಮಾರುಹೋಗಿಬಿಟ್ಟೆ. ಅವರು ಗದೆ ಬೀಸುವ ಪರಿ, ಊರುಭಂಗ, ಮುಕುಟಭಂಗದ ಅಪಮಾನವನ್ನು ನಟಿಸಿದ ಪರಿ… ವೈಶಂಪಾಯನ ಸರೋವರದಲ್ಲಡಗಿದಾಗ ಭೀಮ ಕರೆಯುತ್ತಾನೆ: “ಎಲಾ, ಎಲಾ ಛೀ, ಥೂ ನೃಪ ಕುಲ ಕುನ್ನಿ… ಕಳುವಿನ ಜೂಜಾಡುವ ಬಾರೈ’ ಎಂದಾಗ ಅವರು ಹಲ್ಲು ಮಸೆದ ರೀತಿ- ಎಲ್ಲವೂ, ಎಲ್ಲವೂ “ಗದಾಯುದ್ಧ’ವನ್ನು ಪ್ರೀತಿಸುವಂತೆ ಮಾಡಿತ್ತು.

ಕಾಲೇಜಿನಲ್ಲಿ ಕಲಿಯುವಾಗ ಅಧ್ಯಾಪಕರು ಮಾಡುತ್ತಿದ್ದ ಪಾಠವಿನ್ನೂ ನೆನಪಿದೆ-
ಗದೆ ಗದೆಯಂ ಘಟ್ಟಿಸೆ ಪುಟ್ಟಿದ ಕೆಂಡದ ಕಿರಿಯವೇಣು³ಂ ದೆಸೆಯುಂ
ಪುದಿಯೆ ಪದಧೂಳಿ ಗಗನದೊ
ಳೊದವೆ ಸುರರ್‌ ಬೆದರು ಕಾದಿದರ್‌ ಕಡುಗಲಿಗಳ್‌
-ಗದೆಗೆ ಗದೆ ಅಪ್ಪಳಿಸಲಾಗಿ ಹುಟ್ಟಿದ ಕೆಂಡದ ಕಿಡಿಗಳು ಎಂಟೂ ದಿಕ್ಕುಗಳನ್ನು ತುಂಬಿ, ಅವರ ಕಾಲಿನಿಂದೆದ್ದ ಧೂಳು ಆಕಾಶಕ್ಕೇರಲಾಗಿ ದೇವತೆಗಳು ಬೆದರುವಂತೆ ಆ ಧೀರರು ಕಾದಿದರು.
ಮೈಯೆಲ್ಲ ಕಣ್ಣಾಗುವಂತೆ ಮಾಡುತ್ತಿತ್ತು ಆ ಕ್ಷಣಗಳು.
ಗದಾಪರ್ವದ- ಯಕ್ಷಗಾನದ ಆ ಸಾಲುಗಳಿನ್ನೂ ನನ್ನ ಕಿವಿಗಳಲ್ಲಿದೆ:

ಸರಳ ಭೋಜನ ಕರಗಿನುರಿಗೆ ದೂತದಿ ಗೆದ್ದ
ಪರಿಗೆ ವಸನವ ಸೆಲೆದುರಿತಕ್ಕೆ ವನಕೆಮ್ಮ
ತೆರಳಿಸಿದ ದೋಷಕೆ ಗದಾಘಾತವಿದು ನೋಡು ದುರುಳ…
ಇದು ಕೇವಲ ದುರ್ಯೋಧನನಿಗೆ ಭೀಮ ಹೇಳುತ್ತಿರುವ ಮಾತು ಮಾತ್ರವಲ್ಲ ಎಲ್ಲ ಕಾಲದಲ್ಲೂ ಇರುವ ಧೂರ್ತರಿಗೂ ಕೂಡ. ಖೇದದ ಸಂಗತಿಯೆಂದರೆ ಇಂತಹ ರಸಾನಂದಕ್ಕೂ ವೈಭವಕ್ಕೂ ಕಾರಣವಾದ “ಗದೆ’ ಇಂದು ಎಂತೆಂಥ‌ ಪ್ರಸಂಗಗಳಿಗೆ ಸಿಕ್ಕಿಹಾಕಿಕೊಂಡಿದೆ! ನಿಯತಕಾಲಿಕಗಳನ್ನೇ ನೋಡಿ, “ಆಸ್ತಿಗಾಗಿ ಅಣ್ಣತಮ್ಮಂದಿರ ನಡುವೆ ಗದಾಯುದ್ಧ, ತಮ್ಮನನ್ನು ಕೊಂದ ಅಣ್ಣ’ ಅಂತಲೋ; “ಎರಡು ಪಕ್ಷಗಳ ನಡುವೆ ಗದಾಯುದ್ಧ, “ಗೆಲುವಿನ ಮಾಲೆ ಯಾರಿಗೆ?’

ಉದ್ಯೋಗಕ್ಕಾಗಿ ಕಾಲೇಜು ಸೇರಿದ ಹೊಸದರಲ್ಲಿ ಸಹೋದ್ಯೋಗಿಯೊಬ್ಬರು ಹೇಳಿದ್ದರು, “”ಮೇಡಂ, ನೀವು ಗದಾಯುದ್ಧ ಮಾಡಿ. ನಾವು ಉಳಿದ ಪಾಠ ಮಾಡ್ತೀವಿ” ಅಂತ. ನಾನು ತಕ್ಷಣ ಹೇಳಿದೆ, “”ಇಲ್ಲ ನಮ್ಮ ತಾಯಿ ಚಿಕ್ಕಂದಿನಿಂದ ನಮಗೆ “ಗದಾಯುದ್ಧ’ ಮಾಡಬೇಡಿ ಅಂತ ಹೇಳಿದಾರೆ” ಎಂದು. “ಆಂ!’ ಎಂದರು. “ಅಮ್ಮನ ಗದಾಯುದ್ಧ ಅಲ್ಲ, ರನ್ನನ ಗದಾಯುದ್ಧ ಪಾಠ ಮಾಡ್ತೀನಿ’ ಎಂದು ಮತ್ತೆ ನಕ್ಕೆ. ಯುದ್ಧದ ಜೊತೆ “ಗದೆ’ ಇದೆ ಎಂದ ಮಾತ್ರಕ್ಕೆ ಗದೆಯನ್ನೇ ಯುದ್ಧದ ರೂವಾರಿ ಎಂದುಕೊಳ್ಳಬೇಕಿಲ್ಲ. ಗದೆ ಶಿಷ್ಟ ರಕ್ಷಕನೂ ಹೌದೆಂದು ಮೊದಲೇ ಹೇಳಿದೆನಲ್ಲ! ಈಗಂತೂ ಬಿಡಿ. ಯುದ್ಧಕ್ಕೆ “ಗದೆ’ಯ ಹಂಗೇ ಇಲ್ಲ. ಗದೆಯಿಂದ ಕೈಕಾಲು ಮುರಿಯಬಹುದೇನೊ! ಆದರೆ ಒಂದೇ ಸಲಕ್ಕೆ ಜೀವ ಹೋಗುವುದಿಲ್ಲ. ಈಗಿನ ಯುದ್ಧಕ್ಕೆ ಜೀವದ ಹಂಗೆಲ್ಲಿದೆ? ಮಕ್ಕಳು, ಮರಿ, ಮುದುಕ, ಅಶಕ್ತ, ಹೆಣ್ಣು, ನರಿ ನಾಯಿ ಕೋತಿ, ಗಿಡ ಮರ ಗಿಳಿ ಯಾರೂ, ಯಾವುದೂ ಲೆಕ್ಕಕ್ಕಿಲ್ಲ. ಸಮುದ್ರದ ದಂಡೆಯಲ್ಲಿ ಪುಟ್ಟ ಮಗುವೊಂದು ಅಂಗಾತ ಬೀಳಬಹುದು, ಚಿಟ್ಟೆ ಹಿಡಿಯಲು ಹೋದ ಪುಟ್ಟ ಮಗು ತಾನು ಹಿಡಿದದ್ದು ಚಿಟ್ಟೆಯಂತಹ ಬಾಂಬ್‌ ಎಂದು ತಿಳಿಯದೇ ಒಂದೇ ಸಲಕ್ಕೆ ಸ್ಫೋಟಿಸಬಹುದು. ರಜೆಯಿಂದ ಮರಳುತ್ತಿದ್ದ ನಿಷ್ಪಾಪಿ ಸೈನಿಕರು ರಜೆಯ ನೆನಪು ಮಾಸುವ ಮುನ್ನವೇ ಸಜೀವ ಸುಟ್ಟು ತಾವೇ ಒಂದು ನೆನಪಾಗಿಬಿಡಬಹುದು, ಯಾವುದೋ ರೈಲ್ವೇ ನಿಲ್ದಾಣದಲ್ಲಿ ಎಲ್ಲಿಗೋ ಪ್ರಯಾಣ ಮಾಡಬೇಕಿದ್ದ ಮುಗ್ಧ ಪ್ರಯಾಣಿಕ ಯಮಲೋಕಕ್ಕೇ ಸೀದಾ ಪ್ರಯಾಣ ಮಾಡಬಹುದು! ಇದೆಂಥ ಯುದ್ಧ! ಗದೆಗಾದರೆ ಸಮಾನಬಲರು ಕಾಣುತ್ತಿದ್ದರು. ಮಕ್ಕಳು, ಸ್ತ್ರೀಯರ ಮುಂದೆಲ್ಲ ಗದೆ ತೆಪ್ಪಗಿರುತ್ತಿತು. ರಾಕ್ಷಸರು ಮಾತ್ರ ಅದರ ಕಣ್ಣಿಗೆ ಕಾಣುತ್ತಿದ್ದರು.

Advertisement

ರನ್ನನ ಗದಾಯುದ್ಧದ ಈ ಪದ್ಯವನ್ನು ಗಮನಿಸಿ….
ನಿರರ್ಥನಿರಹಂಕಾರಂ
ನಿರಾಯುಧಂ ದೀನವದನನದಿಂದಳಿದರಂ
ಕರುಣಿಸಿ ಕಳಿಪಿದರಿರೆಯದೆ
ಪರಾಜ್ಮುಖಸ್ಥಿತರನಿಲ್ಲಿ ಕಡುಮುಳಿದಾಳಳ್‌
-ನಿರುಪಯುಕ್ತರೂ, ಅಹಂಕಾರವಿಲ್ಲದವರೂ, ಆಯುಧಹೀನರೂ ದೀನರಾದವರೂ, ಬೆನ್ನು ತಿರುಗಿಸಿ ನಿಂತವರೂ ಆದ ಶತ್ರುಗಳನ್ನು ಕಂಡು ಕ್ಷುದ್ರರಾದ ಭಟರು ನೋಯಿಸದೆ ಕರುಣೆಯಿಂದ ಕಳುಹಿಸಿಕೊಟ್ಟರು ಇನ್ನೂ ಒಂದು ವಿಷಯ ಮರೆತಿದ್ದೆ. ಈಚೆಗೆ ಕೆಲವು ರಾಜಕಾರಣಿಗಳಿಗೆ ಬೆಳ್ಳಿಯ ಗದೆ, ಚಿನ್ನದ ಕತ್ತಿ ಮುಂತಾದವನ್ನು ನೀಡಿ ಗೌರವಿಸಲಾಗುತ್ತಿದೆ. ರಾಜಕೀಯವೂ ರಂಣರಂಗವಾಗಿದೆ ಎನ್ನುವುದನ್ನು ಇದು ಚಿತ್ರಿಸುತ್ತದೆಯಾ? ಪತ್ರಿಕೆಯವರು ಇತ್ತೀಚೆಗೆ ಒಂದು ರಿವ್ಯೂ ಹಾಕಿದ್ದರು! ಟಿ.ವಿ.ಗಳಲ್ಲಿ ಬರುತ್ತಿರುವ ಪೌರಾಣಿಕ ಧಾರಾವಾಹಿಗಳನ್ನು ನೋಡಿ ಮಕ್ಕಳು ಗನ್ನಿನ ಬದಲಾಗಿ “ಗದೆ’ಯನ್ನು ಆಟಿಕೆಯಾಗಿ ಬಳಸಲು ಇಷ್ಟಪಡುತ್ತಿದ್ದಾರಂತೆ! ಗದೆಯ ಮಾರಾಟ ಇದರಿಂದ ಜಾಸ್ತಿಯಾಗಿದೆಯಂತೆ.

ಸಂಧ್ಯಾ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next