Advertisement

ಆಧಾರ್‌ ತಿದ್ದುಪಡಿಗೆ ಪರದಾಟ

11:07 AM Jul 30, 2019 | Team Udayavani |

ಕುಮಟಾ: ಆಧಾರ ಕಾರ್ಡ್‌ ತಿದ್ದುಪಡಿ, ಹೊಸ ನೋಂದಣಿ ಇನ್ನಿತರ ಕೆಲಸಕ್ಕಾಗಿ ಟೋಕನ್‌ ಪಡೆಯುವ ಉದ್ದೇಶದಿಂದ ಇಲ್ಲಿನ ಪ್ರಧಾನ ಅಂಚೆ ಕಚೇರಿಗೆ ಸಾವಿರಾರು ಜನ ಆಗಮಿಸಿದ್ದರಿಂದ ಸರತಿ ಸಾಲಿಗೂ ಜಾಗ ಸಾಲದೇ, ನೆಲ್ಲಿಕೇರಿ ಮುಖ್ಯ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೂ ಕಿರಿಕಿರಿಯಾದ ಘಟನೆ ನಡೆದಿದೆ.

Advertisement

ಆಧಾರ ಕಾರ್ಡ್‌ ಸಂಬಂಧ ಪ್ರಧಾನ ಅಂಚೆ ಕಚೇರಿ ನೋಂದಣಿ ವಿಭಾಗದಲ್ಲಿ 15 ದಿನ ಮುಂಚಿತವಾಗಿ ಟೋಕನ್‌ ಪಡೆದವರಲ್ಲಿ ಪ್ರತಿನಿತ್ಯ 50ಕ್ಕೂ ಹೆಚ್ಚು ಜನರ ಆಧಾರ್‌ ಕೆಲಸ ಮಾಡಿಕೊಡಲಾಗುತ್ತಿದೆ. ಇಡೀ ತಾಲೂಕಿನ ಜನರು ಇಲ್ಲಿ ಬರುವುದರಿಂದ ಒತ್ತಡ ವಿಪರೀತವಾಗಿದ್ದು, ಟೋಕನ್‌ ನೀಡುವ ದಿನದ ಮುಂಚಿನ ರಾತ್ರಿಯೇ ಬಂದು ಬಾಗಿಲು ತೆಗೆಯುವುದನ್ನೇ ಕಾಯುತ್ತಾ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿಯೇ ಸೋಮವಾರ ಬೆಳಗ್ಗೆ ಸಾವಿರಾರು ಜನ ಅಂಚೆಕಚೇರಿ ಬಳಿ ಜಮಾಯಿಸಿ ಟೋಕನ್‌ಗಾಗಿ ಸರತಿಯಲ್ಲಿ ನಿಂತರು. ಕಚೇರಿಯ ವಿಶಾಲವಾದ ಆವಾರದಲ್ಲಿಯೂ ಜಾಗ ಸಾಲದೇ ನೆಲ್ಲಿಕೇರಿ ಮುಖ್ಯ ರಸ್ತೆ ಮೇಲೂ ಜನ ಜಮಾಯಿಸತೊಡಗಿದ್ದರಿಂದ ಜನ-ವಾಹನ ಸಂಚಾರಕ್ಕೆ ಕಿರಿಕಿರಿ ಅನುಭವಿಸುವಂತಾಯಿತು. ವೃದ್ಧರು, ಅಂಗವಿಕಲರು, ಮಹಿಳೆಯರು, ಮಕ್ಕಳನ್ನು ಕರೆತಂದವರು ಸೇರಿದಂತೆ ಸಾವಿರಾರು ಜನರು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಲು ಅಸಾಧ್ಯವೆಂದರಿತು ಕೆಲವರು ಮರಳಿ ನಡೆದರು. ಆದರೂ ಅಂಚೆ ಕಚೇರಿ ಆವಾರ ಟೋಕನ್‌ ಸಾಲಿನಿಂದ ಗಿಜಿಗುಡುತ್ತಿತ್ತು.

ಟೋಕನ್‌ಗಾಗಿ ಕಾಯುತ್ತಿದ್ದ ರಾಜೇಂದ್ರ ನಾಯಕ ಮಾತನಾಡಿ, ನಿಯಮಾವಳಿ ಪ್ರಕಾರ ಪ್ರತಿಯೊಬ್ಬರಿಗೂ ಆಧಾರ್‌ ಕಾರ್ಡ ಎಲ್ಲದಕ್ಕೂ ಬೇಕು. ಆದರೆ ಆಧಾರ ಕೇಂದ್ರಗಳು ಮಾತ್ರ ಇಲ್ಲ. ಇದು ಗಂಭೀರ ಸಮಸ್ಯೆಯಾಗಿದ್ದು, ಆಡಳಿತ ವ್ಯವಸ್ಥೆ ಇದನ್ನು ಸರಿಪಡಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next