Advertisement

ಸರ್‌ಎಂವಿ ಮಾರ್ಗದಲ್ಲಿ ನಡೆದರೆ ಭವಿಷ್ಯ ಉಜ್ವಲ

05:14 PM Sep 17, 2018 | Team Udayavani |

ಚಿಕ್ಕಮಗಳೂರು: ತಾಂತ್ರಿಕತೆಯ ಜ್ಞಾನವನ್ನು ಸದುಪಯೋಗಕ್ಕಾಗಿ ಬಳಸಿಕೊಳ್ಳುವ ಸ್ವಾನುಭವ ಅಗತ್ಯವೆಂಬುದನ್ನು ಸರ್‌.ಎಂ.ವಿ. ಅವರಿಂದ ಕಲಿಯಬಹುದು ಎಂದು ಕನ್ನಡ ಸಾಹಿತ್ಯ ಪೂಜಾರಿ ಹಿರೇಮಗಳೂರುಕಣ್ಣನ್‌ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಸಿವಿಲ್‌ ಇಂಜಿನಿಯರ್ ಅಸೋಸಿಯೇಷನ್‌ ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಇಂಜಿನಿಯರ್ ಡೇ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಯನ್ನು ಮೊದಲು ಅಭ್ಯಾಸ ಮಾಡಿ, ಪಿಎಚ್‌ಡಿ ಪಡೆದು ಪುಸ್ತಕವಾಗಿ ಹೊರ ತಂದಿರುವವರು ನಮ್ಮ ಜಿಲ್ಲೆಯ ಡಾ| ಜಯಪ್ಪ ಗೌಡ ಎಂಬುದು ಜಿಲ್ಲೆಗೆ ಅಭಿಮಾನದ ಸಂಗತಿ. ಅದೇರೀತಿ ಸರ್‌.ಎಂ.ವಿ. ಅವರ ಪತ್ರಗಳನ್ನೆಲ್ಲಾ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತಂದಿರುವ ಶಿವಮೊಗ್ಗದ ಸುಂದರರಾಜ್‌ ಕೆಲಸವೂ ಸ್ಮರಣೀಯ. ಅವರ ದೌಲತ್ತು, ಜಬರ್ದಸ್ತು, ಬದ್ಧತೆ, ಸಮಯಪ್ರಜ್ಞೆ ಸಾಮಾಜಿಕ ಕಾಳಜಿ ವಿಶೇಷವಾಗಿತ್ತು ಎಂದು ಸ್ಮರಿಸಿದರು. 

ತಾಂತ್ರಿಕತೆಯ ಜ್ಞಾನವನ್ನು ಸ್ವಾನುಭಾವದಿಂದ ಬಳಸುವ ವಿವೇಚನೆ ಅಗತ್ಯ. ಇತ್ತೀಚೆಗೆ ಬೇಲೂರಿಗೆ ಭೇಟಿ ನೀಡಿದ್ದ ವಿದೇಶಿಯ ಪ್ರವಾಸಿ ಯಗಚಿ ಅಣೆಕಟ್ಟೆಯ ಪ್ರಸ್ತುತತೆಯನ್ನು ಪ್ರಶ್ನಿಸಿದ್ದರು. ಕೇವಲ ಎರಡು ಕಿ.ಮೀ. ಅಂತರದಲ್ಲಿ ವಿಶ್ವವಿಖ್ಯಾತ ದೇವಾಲಯವಿದ್ದು, ಅಣೆಕಟ್ಟೆಯಲ್ಲಿ ನೀರಿರುವುದರಿಂದ ಅದರ ಪಸೆ 50ಕಿ. ಮೀ.ವರೆಗೂ ಪಸರಿಸುವ ಸಾಧ್ಯತೆ ಇದೆ. ಒಂದೊಮ್ಮೆ ಅಣೆಕಟ್ಟೆಗೆ ಧಕ್ಕೆಯಾದರೆ ಸುಂದರ-ಅಪೂರ್ವ ಕಲಾದೇಗುಲ ನಾಶವಾಗುವ ಸಾಧ್ಯತೆ ಇದೆ. ಮುಂದೆ ಇಂತಹ ಕೆತ್ತನೆಯನ್ನು ಮಾನವ ಸಂಪನ್ಮೂಲ ಬಳಸಿ ಪುನಃ ನಿರ್ಮಿಸುವುದು ಅಸಾಧ್ಯವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆಂದು ಕಣ್ಣನ್‌ ಉಲ್ಲೇಖೀಸಿದರು. ಇಂಗ್ಲಿಷ್‌ ಕಲಿಸಿ, ಕನ್ನಡ ಮರೆಸಿ ಮಕ್ಕಳ ಸೃಜನಶೀಲತೆಯನ್ನು ಹಾಳು ಮಾಡುತ್ತಿದ್ದೇವೆ. 

ಅಂಕಗಳಿಕೆಗಾಗಿ ಓದುವುದಕ್ಕಿಂತ ಉತ್ತಮ ಜೀವನ ನಡೆಸಲು ಶಿಕ್ಷಣ ಅಗತ್ಯ. ಸತ್ಸಜೆಗಳಾಗಿ ಬದುಕುವುದೇ ನಿಜವಾದ ಬದುಕು. ಸಾಕ್ಷರರಿಂದಲೇ ನಿಜವಾಗಿಯೂ ಸ್ವತ್ಛತೆಗೆ ಹಾನಿಯುಂಟಾಗಿದೆ. ಇತಿಹಾಸ ನಿರ್ಮಿಸುವ ಶಕ್ತಿ ಭಾರತಕ್ಕಿದೆ. ಸತ್ಯವೇ ನಮ್ಮ ತಾಯಿ-ತಂದೆ, ಬಂಧು-ಬಳಗ ಎಂದು ನಂಬಿದ್ದ ಸರ್‌.ಎಂ.ವಿ. ಅವರ ಹಾದಿಯಲ್ಲಿ ಮುನ್ನಡೆದಾಗ ನಿಜಕ್ಕೂ ದೇಶದ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.

Advertisement

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ  ದಿಚುಂಚನಗಿರಿ ವಿ.ವಿ.ಕುಲಸಚಿವ ಡಾ|ಸುಬ್ರಾಯ, ವಿಶ್ವಕಂಡ ಬಹುಮುಖ ಪ್ರತಿಭೆ ಸರ್‌.ಎಂ.ವಿ. ಶಿಸ್ತು, ಪ್ರಾಮಾಣಿಕತೆ, ದಕ್ಷತೆ, ತಾಂತ್ರಿಕ ನೈಪುಣ್ಯತೆ, ದೂರದೃಷ್ಟಿ, ಮಾನವೀಯತೆ, ಇವೆಲ್ಲ ಓರ್ವ ವ್ಯಕ್ತಿಯಲ್ಲಿ ಮೇಳೈಸಿರುವುದು ಅಪರೂಪ. ಒಪೊ³ತ್ತಿನ ಊಟಮಾಡಿ, ಬೀದಿ ದೀಪದಡಿ ಓದಿ, ಸಂಕಷ್ಟಗಳನ್ನೆಲ್ಲಾ ಅನುಭವಿಸಿ ಮೂಡಿಬಂದ ಅವರದು ಸಾಧನೆಯ ಬದುಕು ನಿಷ್ಕಂಳಕ ವ್ಯಕ್ತಿತ್ವ ಎಂದರು. 

ಔದ್ಯೋಗೀಕರಣಗೊಳ್ಳದಿದ್ದರೆ ದೇಶ ವಿನಾಶದತ್ತ ಸಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಸರ್‌.ಎಂ.ವಿ. ಮಹಾತ್ಮಾ ಗಾಂಧೀಜಿ ಅವರೊಂದಿಗೆ ಸುಮಧುರ ಬಾಂಧವ್ಯ ಹೊಂದಿದ್ದರು. ಅನೇಕ ಹೊಸ ಆವಿಷ್ಕಾರಗಳಿಗೆ ಕಾರಣರಾಗಿದ್ದರು. ಅಣೆಕಟ್ಟೆಗೆ ಸ್ವಯಂಚಾಲಿತ ಗೇಟ್‌ ಗಳನ್ನು ಅಳವಡಿಸಿದಷ್ಟೇ ಅಲ್ಲದೆ ಈ ತಂತ್ರಜ್ಞಾನಕ್ಕಾಗಿ ಪೇಟೆಂಟ್‌ ಪಡೆದಿದ್ದವರೆಂದು ಡಾ| ಸುಬ್ರಾಯ ವಿವರಿಸಿದರು. ಸಂಘದ ಅಧ್ಯಕ್ಷ ಎಂ.ಎಸ್‌.ಮಹೇಶ್‌ ಅಭಿನಂದನಾ ಭಾಷಣ ಮಾಡಿದರು. 

ಇಂಜಿನಿಯರ್‌ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಾದ ವಿದ್ಯಾಶ್ರೀ, ಡಾ|ನಿಖೀಲ್‌ ಎನ್‌.ಕಶ್ಯಪ್‌ ಮತ್ತು ಚಿರಾಗ್‌ ಎಂ.ಅರಸು ಅವರನ್ನು ಪುರಸ್ಕರಿಸಿ ಮಾತನಾಡಿದ ನಗರಸಭಾ ಆಯುಕ್ತೆ ಎಂ.ವಿ.ತುಷಾರಮಣಿ, ಮಹಿಳೆಯರು ಸರ್‌.ಎಂ.ವಿ. ಅವರಿಗೆ ಕೃತಜ್ಞರಾಗಿರಬೇಕು. ನಿತ್ಯೋಪಯೋಗಿ ಉಪಕರಣಗಳ ಆವಿಷ್ಕಾರದಿಂದಲೇ ಮಹಿಳೆಯರಿಗೆ ಮನೆಕೆಲಸದ ಜೊತೆಗೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಅವರ ಮಾಂತ್ರಿಕತೆ ಶಕ್ತಿ ಸಾಮರ್ಥ್ಯಗಳು ಆದರ್ಶವಾಗಬೇಕು ಎಂದರು.

ಜಿಲ್ಲಾ ಸಿವಿಲ್‌ ಇಂಜಿನಿಯರ್ ಅಸೋಸಿಯೇಷನ್‌ ಅಧ್ಯಕ್ಷ ಬಿ.ಎಸ್‌.ಹರೀಶ್‌ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸರ್‌.ಎಂ.ವಿ. ಹೆಸರಿನಲ್ಲಿ ಯಾವುದೇ ರಸ್ತೆ, ವೃತ್ತ, ಬಡಾವಣೆಗಳಿಲ್ಲ. ಆಜಾದ್‌ ಪಾರ್ಕ್‌ನಿಂದ ಕೋಟೆಕೆರೆಯವರೆಗಿನ ರಸ್ತೆಗೆ ಅವರ ಹೆಸರಿಡಬೇಕೆಂದರು. ಸಿಡಿಎ ಆಯುಕ್ತ ಟಿ.ಆರ್‌.ಭೀಮಾನಿಧಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಎನ್‌.ಎಸ್‌.ನಾಗೇಂದ್ರ ಮತ್ತು ಜಿ.ರಮೇಶ್‌ ಕಾರ್ಯಕ್ರಮ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next