Advertisement

ಬೇಡನ ವೇಷದ ರಂಗಿನ ಹಬ್ಬ

12:30 AM Mar 22, 2019 | |

ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುವ ಬಣ್ಣದಾಟ ಹೋಳಿ. ಸಾಮಾನ್ಯವಾಗಿ ಹೋಳಿ ಎಂದಾಕ್ಷಣ ನಮ್ಮ ಕಣ್ಣೆನಲ್ಲಿ ಮೂಡುವ ಚಿತ್ರ ಕಲರ್‌ಫ‌ುಲ್‌. ಆ ಬಿಳಿ ಹಾಳೆಯಂತಿರುವ ಜಗತ್ತನ್ನು ಹೋಳಿ ಆಚರಣೆಯ ಮೂಲಕ ಬಣ್ಣಮಯವಾಗಿಸಿ ಜನರ ಮನಸ್ಸನ್ನು ರಂಗುರಂಗಾಗಿಸಿ ಬಣ್ಣದೋಕುಳಿಯಲ್ಲಿ ಮಿಂದೆದ್ದು ಆಚರಿಸುವುದಾಗಿದೆ. ಎಲ್ಲೆಡೆ ಹೋಳಿ ಹಬ್ಬವು ಮೂರು ದಿನದ ಆಚರಣೆಯಾದರೆ ಶಿರಸಿಯಲ್ಲಿ ಐದು ದಿನಗಳ ಸಂಭ್ರಮ. ಐದು ರಾತ್ರಿಗಳು ಶಿರಸಿ ಊರಿಗೆ ಊರೇ ರಸ್ತೆಯ ಇಕ್ಕೆಲಗಳಲ್ಲಿ ತಮಟೆಗಳ ಸದ್ದಿನಲ್ಲಿ ಆರ್ಭಟಿಸುತ್ತ ಬರುವ ಬೇಡನನ್ನು ಕಾಯುತ್ತ ಕುಳಿತಿರುತ್ತದೆ. ರಾಜ್ಯದೆಲ್ಲೆಡೆ ವಿಶಿಷ್ಟವಾಗಿ ಹೋಳಿ ಆಚರಿಸಿದರೆ ಶಿರಸಿಯಲ್ಲಿ ಬೇಡರ ವೇಷದ ಮೂಲಕ ಸಾಂಸ್ಕೃತಿಕ ಜಾನಪದ ಸೊಬಗಿನ ಆಚರಣೆ ಇನ್ನೂ ಚಾಲ್ತಿಯಲ್ಲಿದೆ ದೇಶದೆಲ್ಲೆಡೆ ಹೋಳಿಯನ್ನು ವರ್ಷಕ್ಕೊಮ್ಮೆ ಆಚರಿಸಿದರೆ, ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸುವ ರೂಢಿ. ಶಿರಸಿಯಲ್ಲಿ ಒಂದು ವರ್ಷ ಮಾರಿಯಮ್ಮನ ಜಾತ್ರೆ ಇದ್ದರೆ ಮಾರನೇ ವರ್ಷವನ್ನು ಹೋಳಿ ಆಚರಣೆಗೆ ಮೀಸಲಿಡುತ್ತಾರೆ. ಹೋಳಿ ಆಚರಣೆಗೆ ಶಿರಸಿಯ ಜನರು ವಾರದ ಹಿಂದೆಯೇ ಸಿದ್ಧತೆ ನಡೆಸುತ್ತಾರೆ. ಶಿರಸಿ ಜನರು  ಹೋಳಿಯನ್ನು ಬೇಡರ ವೇಷ ಕುಣಿತದ ಜೊತೆಗೆ ಸಂಭ್ರಮದಿಂದ ಆಚರಿಸುತ್ತಾರೆ.

Advertisement

ಶಿರಸಿಯಲ್ಲಿ ಹೋಳಿ ವಿಶೇಷ ಬೇಡರ ವೇಷ 
ಬೇಡರ ವೇಷ ಹಾಕಿಕೊಳ್ಳುವವರು ಹೋಳಿ ದಿವಸದ ಕೆಲವು ಮಾಸಗಳ ಹಿಂದೆಯೇ ಕುಣಿತದ ತಾಲೀಮು ನಡೆಸುತ್ತಿರುತ್ತಾರೆ. ಕುಣಿತದ ದಿನ ಬೇಡರ ವೇಷಕ್ಕೆ‌ ಬೇಕಾದ ಅಲಂಕಾರಿಕ ವಸ್ತುಗಳಾದ ನವಿಲುಗರಿ, ಬಣ್ಣ, ಗೆಜ್ಜೆ, ಮೀಸೆ, ಹತ್ತಿ, ಕೆಂಪುಬಟ್ಟೆ, ಕತ್ತಿ, ಡಾಲು, ಕೈಗೆ ಲಿಂಬೆಹಣ್ಣು ಕಟ್ಟಿಕೊಂಡು ಕುಣಿಯಲು  ಸಿದ್ಧರಾಗಿರುತ್ತಾರೆ. ಶಿರಸಿಯಲ್ಲಿ ಬೆಳಗ್ಗೆ ಹುಲಿ ವೇಷ ಇದ್ದರೆ ರಾತ್ರಿ ಬೇಡರ ವೇಷ ಇಲ್ಲಿನ ವಿಶೇಷತೆಯಾಗಿದೆ. ನಗರದ ಬೀದಿ ಬೀದಿಗಳಲ್ಲಿ ಢಣ್‌ ಢಣಕು ಢಣ್‌ ಢಣಕು ಶಬ್ದದ ಜೊತೆಗೆ ಪ್ರೇಕ್ಷಕರ ನಡುವೆ ಕತ್ತಿ ಬೀಸುತ್ತ ನವಿಲುಗರಿ ಹೊತ್ತುಕೊಂಡು ಬೇಡನು ಬರುತ್ತಾನೆ. ಬೇಡನು ಇಲ್ಲಿ ಜನರ ಮೈ ನವಿರೇಳಿಸುವೆಂತೆ ಕುಣಿಯುತ್ತಿರುವಾಗ ಆತನ ಹಿಂದೆ ಇಬ್ಬರು ವೇಷವನ್ನು ಹಿಡಿದುಕೊಂಡು ನಿಯಂತ್ರಣ ಮಾಡುತ್ತಾರೆ. ಬೇಡನು ವೇಷಧಾರಿಯಾಗಿ  ಕುಣಿಯುವುದನ್ನು ನಗರದ ಜನ ನಿದ್ದೆ ಬಿಟ್ಟು ರಾತ್ರಿಯಿಡೀ ನೋಡಿ ಕಣ್ತುಂಬಿಕೊಳ್ಳುತ್ತಾರೆ.                                                                                      

ಬೇಡನ ವೇಷದ ಚರಿತ್ರೆ
ಶಿರಸಿಯ ಇಂತಹ ವಿಶಿಷ್ಟವಾದ ಆಚರಣೆಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರ ಅವಸಾನದ ನಂತರ ಆರಂಭವಾದದ್ದು ಸೋಂದಾರಾಜರ ಆಳ್ವಿಕೆ. ಮುಸ್ಲಿಂ ದಂಡುಕೋರರ ಭೀತಿಯಿದ್ದಿದ್ದ‌ರಿಂದ ಈ ಭಾಗದ ರಕ್ಷಣೆಗಾಗಿ ಸೋಂದಾ ಅರಸರು ಬೇಡರ ಜನಾಂಗಕ್ಕೆ ಸೇರಿದ ಮಲ್ಲೇಶಿ ಎಂಬ ಯುವ ವೀರನನ್ನು ನೇಮಿಸುತ್ತಾರೆ. ಅಪ್ರತಿಮ ಸಾಹಸಿಗನಾಗಿದ್ದ ಮಲ್ಲೇಷಿಗೆ ಕ್ರಮೇಣ ಅಧಿಕಾರದ ಮದವೇರುತ್ತದೆ. ಸ್ತ್ರೀಲೋಲನೂ ಆಗಿದ್ದ ಆತನ ಹಿಂಸೆಯನ್ನು ಜನರು ತಾಳದಾಗುತ್ತಾರೆ. ರಾತ್ರಿವೇಳೆ ತಮಟೆ ತಾಳಕ್ಕೆ ನರ್ತಿಸುತ್ತ ಗಸ್ತು ತಿರುಗುವ ಈತನ ಕಣ್ಣು ದಾಸಪ್ಪ ಶೆಟ್ಟಿ ಎಂಬಾತನ ಮಗಳು ರುದ್ರಾಂಬಿಕಾಳ ಮೇಲೆ ಬೀಳುತ್ತದೆ. ಸಮಾಜ ಕಲ್ಯಾಣಕ್ಕಾಗಿ ಆಕೆ ತನ್ನ ಜೀವವನ್ನು ಪಣಕ್ಕಿಡಲು ಒಪ್ಪಿ ಮಲ್ಲೇಶಿಯನ್ನು ವರಿಸುತ್ತಾಳೆ. ಹೋಳಿ ಹುಣ್ಣಿಮೆಯ ದಿನದಂದು ರಾತ್ರಿಯ ವೇಳೆ ಎಂದಿನಂತೆ ಕುಣಿಯುತ್ತಿದ್ದ ಗಂಡನ ಮುಖದ ಮೇಲೆ ಆಮ್ಲವನ್ನು ಎರಚುತ್ತಾಳೆ. ಇದರಿಂದ ಮಲ್ಲೇಶಿಯ ಕಣ್ಣು ಕಾಣಿಸದಾಗುತ್ತದೆ. ಆದರೂ ಆತ ಆಕೆಯನ್ನು ಅಟ್ಟಿಸಿಕೊಂಡು ಬರುತ್ತಾನೆ. ಈ ವೇಳೆ 12 ಜನ ಸ್ಥಳೀಯರು ಆತನನ್ನು ಹಿಡಿದು ಕಟ್ಟಿಹಾಕಿ ಜೀವಂತವಾಗಿ ಸುಡುತ್ತಾರೆ. ಈ ಕ್ಷಣವೇ ರುದ್ರಾಂಬಿಕಾ ಪತಿಯ ಚಿತೆಗೆ ಹಾರಿ ಪ್ರಾಣ ಬಿಡುತ್ತಾಳೆ. ಆಕೆಯ ತ್ಯಾಗದ ಸಂಕೇತವಾಗಿ ಬೇಡರ ವೇಷವನ್ನು ಹೋಳಿ ದಿನದಂದು ಶಿರಸಿಯಲ್ಲಿ ಆಚರಿಸಲಾಗುತ್ತದೆ‌. ಕೊನೆಯ ದಿನ ಅಂದರೆ ಹುಣ್ಣಿಮೆಯ ಹಿಂದಿನ ದಿನ ರಾತ್ರಿ ಸರಿಸುಮಾರು 50ಕ್ಕೂ ಹೆಚ್ಚು ಬೇಡರ ವೇಷದ ತಂಡಗಳು ರಸ್ತೆಯನ್ನಾಕ್ರಮಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ತಬ್ಧಚಿತ್ರಗಳೂ, ಛದ್ಮವೇಷಧಾರಿಗಳೂ, ಡೀಜೆ, ಸಂಗೀತ ಇವುಗಳೆಲ್ಲವೂ ಸೇರ್ಪಡೆಯಾಗಿವೆ.ಶಿರಸಿಯ ಜನರು ಹೋಳಿ ದಿನದಂದು ಹರಕೆಯನ್ನು ಹೊತ್ತುಕೊಂಡು ಈಡೇರಿದಾಗ ಹಗಲು ಹುಲಿವೇಷ ಹಾಕುತ್ತಾರೆ. ಇದು ತಲತಲಾಂತರದಿಂದ ನಡೆದು ಬಂದ ಸಂಪ್ರದಾಯವಾಗಿದೆ.                        

– ಅಶ್ವಿ‌ತ 
ಎಂಸಿಜೆ, ಮಂಗಳೂರು ವಿ. ವಿ.

Advertisement

Udayavani is now on Telegram. Click here to join our channel and stay updated with the latest news.

Next