Advertisement

“ಪ್ರವೇಶ’ಕ್ಕೆ ಡಿಸೆಂಬರ್‌ವರೆಗೆ ಕಾಯಿರಿ!

11:20 AM May 02, 2019 | pallavi |

ಒಂದು ಹಳ್ಳಿ. ಅಲ್ಲೊಂದು ಶಾಂತಿ ಸಾಮರಸ್ಯದ ಜೀವನ. ಜಾತಿ-ಮತ ಧರ್ಮದ ಪರಿವೆಯೇ ಇಲ್ಲದೆ ಬದುಕುವ ಜನರು. ಆಧುನಿಕ ಸ್ಪರ್ಶದ ಹೊರಜಗತ್ತಿನಿಂದ ದೂರ ನಿಂತ ಸಮಾಜವದು. ಆದರೆ, ಅಂತಹ ಊರೇ ಜಾತಿ-ಧರ್ಮದ ಆಧಾರದಲ್ಲಿ ಯಾರೂ ಊಹಿಸದ ಹಾಗೆ ಬದಲಾಗಿ ಬಿಡುತ್ತದೆ. ಯಾಕೆ ಹೀಗೆ.. ಎಂದು ಯೋಚಿಸುವ ಸಮಯದಲ್ಲಿ ಊರಿನ ಚಿತ್ರಣವೇ ಅದಲು-ಬದಲು. ಯಾಕೆಂದರೆ; ಅನ್ಯೋನ್ಯ ಬದುಕಿಗೆ ಅಲ್ಲಿ ಕೊಳ್ಳಿ ಏಟು ಬಿದ್ದಾಗಿರುತ್ತದೆ!

Advertisement

ಇದು “ಪ್ರವೇಶ’ ಸಿನೆಮಾದ ವನ್‌ಲೈನ್‌ ಸ್ಟೋರಿ. ಈಗಾಗಲೇ ಶೂಟಿಂಗ್‌ ಮುಗಿಸಿದ ಈ ಸಿನೆಮಾ ಈಗಾಗಲೇ ಕೊನೆಯ ಹಂತದ ಎಡಿಟಿಂಗ್‌ನಲ್ಲಿದೆ. ಹೆಚ್ಚಾ ಕಡಿಮೆ ಒಂದೆರಡುತಿಂಗಳಿನಲ್ಲಿ ಸಿನೆಮಾ ರಿಲೀಸ್‌ ಮಾಡಬೇಕು ಎಂದು ಚಿತ್ರ ತಂಡ ಒಮ್ಮೆ ಲೆಕ್ಕ ಹಾಕಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ರಿಲೀಸ್‌ ಟೈಮ್‌ ಇನ್ನಷ್ಟು ಕಾಲ ಮುಂದೂಡಿಕೆಯಾಗಲಿದೆ. ಈಗಾಗಲೇ ತುಳುವಿನಲ್ಲಿ ಒಂದೊಂದು ಸಿನೆಮಾದವರು ಆಗಸ್ಟ್‌, ಸಪ್ಟೆಂಬರ್‌ ಎಂದು ಹೇಳುತ್ತಿರುವ ಕಾರಣದಿಂದ ಅದೇ ಕಾಲದಲ್ಲಿ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಸಿನೆಮಾ ರಿಲೀಸ್‌ ಮಾಡಿದರೆ ಯಾರಿಗೂ ಲಾಭವಿಲ್ಲ. ಹೀಗಾಗಿ ಎಲ್ಲರನ್ನೂ ಮೊದಲು ಕಳುಹಿಸಿ ಆ ಬಳಿಕ ಅಂದರೆ ಡಿಸೆಂಬರ್‌ ವೇಳೆಗೆ ರಿಲೀಸ್‌ ಮಾಡುವ ಬಗ್ಗೆ ನಿರ್ದೇಶಕರು ಲೆಕ್ಕಹಾಕಿದ್ದಾರೆ.

ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಚೇತನ್‌ ಮುಂಡಾಡಿಯವರು ಮಾಡಿದ ಸಿನೆಮಾ ಇದಾಗಿರುವುದರಿಂದ “ಪ್ರವೇಶ’ದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಇದೆ. ಕರ್ನಾಟಕದ ಪ್ರಾದೇಶಿಕ ಭಾಷೆಯನ್ನು ಹದವಾಗಿ ಮಿಕ್ಸ್‌ ಮಾಡಿ ರೆಡಿ ಮಾಡಿದ ಸಿನೆಮಾ. ಸಿನೆಮಾಗೆ ಚೇತನ್‌ ಅವರೇ ಕಥೆ ಬರೆದಿದ್ದು, ಅದನ್ನು ಖ್ಯಾತ ಸಿನಿ ಪತ್ರಕರ್ತ ಜೋಗಿ ಅವರು ವಿಸ್ತರಿಸಿದ್ದಾರೆ. ಹಿಂದಿನ ಪ್ರಶಸ್ತಿ ಪುರಸ್ಕೃತ “ಮದಿಪು’ ಚಿತ್ರದ ತಂಡವನ್ನೇ ಈ ಸಿನೆಮಾಕ್ಕೂ ಬಳಸಲಾಗಿದೆ.

ವಿ.ಮನೋಹರ್‌ ಅವರ ಸಂಗೀತವಿದೆ. ನಾಯಕನಾಗಿ ಪೃಥ್ವೀ ಅಂಬರ್‌ ಮತ್ತು ನಾಯಕಿಯಾಗಿ ಬಿಂದು ರಕ್ಷಿದಿ ಅವರು ನಟಿಸುತ್ತಿದ್ದಾರೆ. ಖ್ಯಾತ ರಂಗಭೂಮಿ ನಟ ಮತ್ತು ಪಡ್ಡಾಯಿ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಚಂದ್ರಹಾಸ್‌ ಉಳ್ಳಾಲ ಅವರು ಒಂದು ಭಿನ್ನ ಮತ್ತು ವಿಶೇಷ ಪಾತ್ರದಲ್ಲಿದ್ದಾರೆ. ಅಂದಹಾಗೆ, ಚೇತನ್‌ ಇದೀಗ “ಚಾವಡಿ’ ಎಂಬ ಕನ್ನಡ ಸಿನೆಮಾ ಮಾಡುವ ಬಗ್ಗೆ ಪ್ಲ್ಯಾನ್‌ ಹಾಕಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next