Advertisement

ವರ್ಷ ಕಳೆದರೂ ಮರೀಚಿಕೆಯಾಯಿತು ವೇತನ

09:20 AM Jul 24, 2017 | Team Udayavani |

ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಗೋಳು
– ಭರತ್‌ರಾಜ್‌ ಕಲ್ಲಡ್ಕ

Advertisement

ಮಂಗಳೂರು: ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ನೇಮಕಾತಿ, ವೇತನ ಸಮಸ್ಯೆಗಳು ಇನ್ನೂ ಕೊನೆಗಾಣದಿರುವಂತೆಯೇ ದ.ಕ. ಜಿಲ್ಲಾ ವ್ಯಾಪ್ತಿಯ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿರುವ ಅತಿಥಿ ಉಪನ್ಯಾಸಕರು ಕೂಡ ಕಳೆದ ಒಂದು ವರ್ಷದಿಂದ ವೇತನ ದೊರೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಸರಿಯಾದ ರೀತಿಯಲ್ಲೇ ವೇತನ ಪಡೆಯುತ್ತಿದ್ದ ಪ.ಪೂ. ಕಾಲೇಜಿನ ಅತಿಥಿ ಉಪನ್ಯಾಸಕರಿಗೆ 2016-17ನೇ ಸಾಲಿನ ವೇತನ ಮಾತ್ರವಲ್ಲದೇ 2017-18ನೇ ಸಾಲಿನ ವೇತನವೂ ಇನ್ನೂದಕ್ಕಿಲ್ಲ.

60ಕ್ಕೂ ಮಿಕ್ಕಿ ಉಪನ್ಯಾಸಕರ ಪರದಾಟ
ಜಿಲ್ಲೆಯಲ್ಲಿ ನೂರಕ್ಕೂ ಮಿಕ್ಕಿ ಪ.ಪೂ. ಕಾಲೇಜಿನ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಇವರ ಪೈಕಿ ಸುಮಾರು 60 ಅತಿಥಿ ಉಪನ್ಯಾಸಕರಿಗೆ ಇನ್ನೂ ವೇತನ ದೊರಕಿಲ್ಲ. ಇವರಿಗೆ ಹಿಂದಿನಿಂದಲೂ 4-5 ತಿಂಗಳ ವೇತನ ಒಮ್ಮೆಲೇ ದೊರಕುತ್ತಿತ್ತು. ಮೊದಲು ಅತಿಥಿ ಉಪನ್ಯಾಸಕರ ಸಹಿ, ಅವರು ಮಾಡಿದ ಕೆಲಸದ ಅವಧಿ ಮುಂತಾದ ಪ್ರತಿಯೊಂದು ಅಂಶವನ್ನೂ ಕೂಡ ಪುಸ್ತಕದಲ್ಲಿ ದಾಖಲಿಸಿ ಬಳಿಕ ಡಿಡಿಪಿಯು ಅವರಿಗೆ ಕಳುಹಿಸಿ ಕೊಡಲಾಗುತ್ತಿತ್ತು. ಆದರೆ ಕಳೆದ ಸಾಲಿನಿಂದ
ವೇತನಕ್ಕಾಗಿ ಕೆ-2 ವ್ಯವಸ್ಥೆ ಬಂದ ಬಳಿಕ ಇಲ್ಲಿವರೆಗೆ ವೇತನವೇ ದೊರಕಿಲ್ಲ. ವೇತನದ ಕುರಿತಂತೆ ಡಿಡಿಪಿಯು ಬಳಿ ನೇರವಾಗಿ ಕೇಳಿದರೂ ಅತಿಥಿ ಉಪನ್ಯಾಸಕರಿಗೆ ಮಾತ್ರ ದೊರಕಿರುವುದು ಋಣಾತ್ಮಕ ಉತ್ತರ.

ಅಧಿಕಾರಿಗಳ ತಪ್ಪು – ಉಪನ್ಯಾಸಕರಿಗೆ ಶಿಕ್ಷೆ
ಸರಕಾರದ ಆದೇಶದನ್ವಯ ಶಿಕ್ಷಣ ಇಲಾಖೆ ಕೆಲವು ಉಪನ್ಯಾಸಕರನ್ನು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ನಿಯೋಜನೆ ಮಾಡಿತು. ಅದಕ್ಕೆ ಹೆಚ್ಚಿನ ಉಪನ್ಯಾಸಕರು ಬೇರೆ ಬೇರೆ ಕಾರಣದಿಂದಾಗಿ ಸೇರಿಲ್ಲ. ಉಪನ್ಯಾಸಕರು ವಾರಕ್ಕೆ 20 ಗಂಟೆ ಕಾರ್ಯನಿರ್ವಹಿಸಬೇಕು, ಇಲ್ಲವಾದಲ್ಲಿ ಬೇರೆ ಕಾಲೇಜು, ಶಾಲೆಗೆ ತೆರಳಬೇಕಾಗಿರುವುದು ಇಲಾಖೆಯ ನಿಯಮ. ಇಲಾಖೆಯ ಕ್ರಮ ಪ್ರಾಯೋಗಿಕವಾಗಿ ಸ್ವಲ್ಪ ಕಷ್ಟವೇ ಸರಿ. ಕೆಲವೆಡೆ ಉಪನ್ಯಾಸಕರ ಕೊರತೆ ಯಾದಾಗ ಇಲಾಖೆ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಿ ಎಂಬ ಸುತ್ತೋಲೆಯನ್ನು ಕಳುಹಿಸಿ, 7,000 ರೂ. ನಿಗದಿ ಪಡಿಸಿತ್ತು. ಈ ವರ್ಷ ಅದನ್ನು 9,000 ರೂ. ಮಾಡಿದ್ದಾರೆ. ನಿಯೋಜನೆ ಮಾಡಿದವರು ಹೋಗಿದ್ದಾರೆ ಎಂದು ಇಲಾಖೆ ಲೆಕ್ಕ ಹಾಕಿದ್ದರೂ ಶೇ. 50ರಷ್ಟು ಮಂದಿ ಹೋಗಿರಲಿಲ್ಲ. ಪಾಠಕ್ಕೆ ಸಮಸ್ಯೆಯಾಗುತ್ತದೆಂದು ಪ್ರಾಂಶುಪಾಲರು ಅತಿಥಿ ಉಪನ್ಯಾಸಕರನ್ನು ತೆಗೆದುಕೊಂಡಿದ್ದರು. ಆದರೆ ನಿಯೋಜನೆಯಾದವರ ಪಟ್ಟಿ ಇಲಾಖೆಗೆ ಹೋಯಿತಾದರೂ ನಿಯೋಜನೆಯನ್ನು ಅನುಸರಿಸದವರ ಪಟ್ಟಿ ಇಲಾಖೆಗೆ ಹೋಗಿರಲಿಲ್ಲ. ಇದರಿಂದಾಗಿ ಹೋಗದವರ ಸ್ಥಾನಕ್ಕೆ ನೇಮಿಸಿದ ಅತಿಥಿ ಉಪನ್ಯಾಸಕರ ವೇತನಕ್ಕಾಗಿ ಬಿಲ್‌ ಮಾಡಿ ಕಳುಹಿಸುವಾಗ ಅನುದಾನ ಬಂದಿಲ್ಲ. 

ಸಮಸ್ಯೆ ಮುಂದುವರಿಯುವ ಸಾಧ್ಯತೆ?
ಪ್ರಾಚಾರ್ಯರ ಸಂಘದಿಂದ ಸಮಸ್ಯೆ ಬಗೆಹರಿಸಲು 2-3 ಬಾರಿ ಪ್ರಯತ್ನ ಮಾಡಲಾಯಿತು. ಸಚಿವ ರಮಾನಾಥ ರೈ ಅವರಲ್ಲಿ ಸಮಸ್ಯೆ ಹೇಳಿದ್ದರಿಂದ ಆ ಫೈಲ್‌ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಟೇಬಲ್‌ಗೆ ಹೋಗಿದೆ ಎಂದು ಹೇಳಲಾಗುತ್ತಿದೆ. ಈ ಸಾಲಿನಲ್ಲಿ ಮತ್ತೆ ಇದರ ಬಗ್ಗೆ ಬೇಡಿಕೆಯಿಟ್ಟಾಗ, ಮುಖ್ಯ ಕಾರ್ಯದರ್ಶಿಯವರ ಟೇಬಲ್‌ ಮೇಲೆ 2 ಫೈಲ್‌ಗ‌ಳಿವೆ ಎಂಬ ಮಾಹಿತಿ ದೊರಕಿದೆ. ಬಿಎ- ಬಿಎಡ್‌ನ‌ವರ ವೇತನ ಹಾಗೂ ಅತಿಥಿ ಉಪನ್ಯಾಸಕರ ವೇತನದ ಕುರಿತ ಫೈಲ್‌ ಇದಾಗಿವೆ. ರಾಜ್ಯ ನಾಯಕರನ್ನು ಸಂಪರ್ಕಿಸು ವಾಗ ಮೊದಲು ಬಿಎಡ್‌ನ‌ವರ ಫೈಲ್‌ಗೆ ಪ್ರಾಧಾನ್ಯತೆ ಕೊಡುತ್ತಾರೆ ಎಂಬ ಮಾಹಿತಿ ದೊರಕಿದೆ. ಅತಿಥಿ ಉಪನ್ಯಾಸಕರಿಗೆ ಈ ವರ್ಷವೂ ಇದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿರಬಹುದು ಎಂದು ಹೇಳುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಸರಸ್ವತಿ.

Advertisement

ಯಾರು ಹೇಳಿದ್ದಾರೆ ಬರುವುದಿಲ್ಲವೆಂದು, ವೇತನ ಬರುತ್ತಿದೆ. ದ.ಕ. ಜಿಲ್ಲೆಯಲ್ಲಿ ಮಾತ್ರ ಈ ಸಮಸ್ಯೆ. ನಾನು ಹಣಕಾಸಿನ ಮಂತ್ರಿನೂ ಅಲ್ಲ, ಶಿಕ್ಷಣ ಮಂತ್ರಿನೂ ಅಲ್ಲ. ಇದು ನನಗೆಲ್ಲಾ ಗೊತ್ತಾಗಲ್ಲ. ನಾವು ಕಳುಹಿಸಿದ್ದು, ಬಂದಿರ್ಲಿಲ್ಲಂದ್ರೆ ನಾನೆಂತ ಮಾಡಕ್ಕಾಗುತ್ತೆ? ನಾವು ಡೆಪ್ಯುಟೇಶನ್‌ ಎಂದು ಮಾಡಿರ್ತೇವೆ, ಕಡಿಮೆ ಸಮಯವಿರ್ತದೆ. ಆದರೆ ಅವರು ಫೋನ್‌ ಮಾಡಿದ್ರೂ ಹೋಗಲ್ಲ. ಇದೆಲ್ಲಾ ಆಗಬೇಕೆಂದರೆ ಸರಕಾರದಿಂದ ಇಷ್ಟಿಷ್ಟು ಲಿಮಿಟ್‌ನಲ್ಲಿ ಸಂಬಳ ಬರುತ್ತೆ. ಕರ್ನಾಟಕದ ಯಾವ ಜಿಲ್ಲೆಯಲ್ಲೂ ಈ ಸಮಸ್ಯೆಯಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ. ಅನುದಾನ ಬಂದಿಲ್ಲದಿದ್ದರೆ ನಾವೇನು ಮಾಡಕಾಗುತ್ತೆ? ನಾನು ಸಚಿವ ಬಿ. ರಮಾನಾಥ ರೈ ಹಾಗೂ ಶಾಸಕ ವಸಂತ ಬಂಗೇರ ಅವರ ಬಳಿ ತಿಳಿಸಿದ್ದೇನೆ. ಡೆಪ್ಯುಟೇಷನ್‌ಗೆ ಕಳುಹಿಸಿದ್ದವರು ಹೋಗುವುದಿಲ್ಲ. ಮೇಲಿಂದ ಇವುಗಳನ್ನು ಒಪ್ಪುತ್ತಿಲ್ಲ. ಈ ಬಗ್ಗೆ ಬರೆದು – ಬರೆದು ಸಾಕಾಯಿತು. ಪ್ರಸ್ತುತ ನಾನು ರಜೆಯಲ್ಲಿದ್ದು, ಶೀಘ್ರದಲ್ಲಿ ಬಂದು ಇದರ ಬಗ್ಗೆ ಗಮನ ಹರಿಸುತ್ತೇನೆ.
– ತಿಮ್ಮಯ್ಯ, ಡಿಡಿಪಿಯು

Advertisement

Udayavani is now on Telegram. Click here to join our channel and stay updated with the latest news.

Next