Advertisement

ಗುಡ್ಡಗಾಡು ಭೂಮಿ ವರದಿಯಿಂದ ಬೆಚ್ಚಿದ ರೈತರು

11:29 AM Jun 15, 2019 | Naveen |

ಮಡಿವಾಳಪ್ಪ ಹೇರೂರ
ವಾಡಿ:
ಕಲಬುರಗಿ ಹಾಗೂ ಗುತ್ತಿ ನಡುವಿನ ರಾಜ್ಯ ಹೆದ್ದಾರಿ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ಭೂಸ್ವಾಧೀನ ಆತಂಕದ ಜತೆಗೆ ಪರಿಹಾರ ದರ ಪಾತಾಳಕ್ಕಿಳಿದಿರುವ ಚಿಂತೆ ರೈತರನ್ನು ಕಾಡುತ್ತಿದೆ.

Advertisement

ಜನದಟ್ಟಣೆ ಹಾಗೂ ತಿರುವುಗಳನ್ನು ಗಮನಿಸಿರುವ ಅಧಿಕಾರಿಗಳು, ಲಾಡ್ಲಾಪುರ ಗ್ರಾಮದ ಹೊರ ವರ್ತುಲ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಈ ಗ್ರಾಮದಲ್ಲಿ ಒಟ್ಟು 11 ಎಕರೆ ಕೃಷಿ ಭೂಮಿ ಹೆದ್ದಾರಿ ಪಾಲಾಗಲಿದ್ದು, ಭೂಮಿ ಕಳೆದುಕೊಳ್ಳುತ್ತಿರುವ ರೈತರು ಪರಿಹಾರ ನಷ್ಟ ಅನುಭವಿಸುವ ಆತಂಕ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಗಾಗಿ ಜಮೀನು ಬಿಟ್ಟುಕೊಡುವ ರೈತರಿಗೆ ಪ್ರಾಧಿಕಾರದಿಂದ ಸೂಕ್ತ ಪರಿಹಾರ ಸಿಗುವುದೋ ಇಲ್ಲವೋ ಎನ್ನುವ ದುಗುಡಕ್ಕೆ ಭೂಸ್ವಾಧೀನ ಪ್ರಕ್ರಿಯೆಯಲ್ಲಾದ ಅವೈಜ್ಞಾನಿಕ ಸರ್ವೇ ಕಾರಣವಾಗಿದೆ.

ಸರಕಾರ ನೀಡುವ ಪುಡಿಗಾಸು ಪರಿಹಾರ ನಮ್ಮನ್ನು ಬೀದಿಗೆ ತಳ್ಳಲಿದೆ ಎನ್ನುತ್ತಾರೆ ರೈತರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಸಂಬಂಧಿಸಿದ ರೈತರಿಗೆ ನೋಟಿಸ್‌ ಜಾರಿಮಾಡಿ, ಸಭೆ ನಡೆಸಿದೆ ಎನ್ನಲಾಗಿದ್ದು, ರೈತರ ಜಮೀನುಗಳ ದಾಖಲಾತಿ ಕೇಳಿದೆ. ಸರಕಾರದ ಮಾರುಕಟ್ಟೆ ಮೌಲ್ಯಪಟ್ಟಿ ಮಾನದಂಡದ ನಾಲ್ಕು ಪಟ್ಟು ಪರಿಹಾರ ಮೊತ್ತ ನೀಡಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ ಸರ್ವೇ ಎಡವಟ್ಟಿನಿಂದ ಪರಿಹಾರ ದರದಲ್ಲಿ ಇಳಿತ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಹೆಚ್ಚಿಸಿದೆ.

ಲಾಡ್ಲಾಪುರ ಗ್ರಾಮದ ಸರ್ವೇ ನಂಬರ್‌ 296, 323, 295, 240, 283/1, 283/2 ಹೀಗೆ ಹಲವು ಪಹಣಿ ದಾಖಲಾತಿ ಜಮೀನುಗಳು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನೀಲ ನಕ್ಷೆಯಲ್ಲಿ ಅಚ್ಚಾಗಿವೆ. ಭೂಸ್ವಾಧೀನ ಪ್ರಕ್ರಿಯೆಗೊಳಗಾಗುವ ಜಮೀನುಗಳಿಗೆ ಕಾನೂನು ಪ್ರಕಾರ ಎಕರೆಗೆ ನಾಲ್ಕು ಲಕ್ಷ ರೂ. ದರ ನಿಗದಿಯಾಗಬೇಕು. ಲಾಡ್ಲಾಪುರ ಭೂಮಿ ವಲಯ ಗುಡ್ಡಗಾಡು ಪ್ರದೇಶದ್ದು ಎನ್ನುವ ಸರ್ವೇ ವರದಿ ರವಾನೆಯಾಗಿದ್ದರಿಂದ ಎಕರೆಗೆ ಕೇವಲ ಎರಡು ಲಕ್ಷ ರೂ. ಕೈಗೆಟಕುವ ಸಾಧ್ಯತೆ ಹೆಚ್ಚಿದ್ದು, ಮುಗಿಲೇ ಕತ್ತರಿಸಿ ಮೈಮೇಲೆ ಬೀಳುವ ಗಂಡಾಂತರ ಎದುರಾಗಿದೆ.

Advertisement

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರಕಾರದ ಮಾರುಕಟ್ಟೆ ದರಪಟ್ಟಿಯ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡುವುದಾಗಿ ಹೇಳಿದೆ. ಅಂದರೆ ಎಕರೆಗೆ 16 ಲಕ್ಷ ರೂ. ದರ ಲಭ್ಯವಾಗಬೇಕು. ಕಂದಾಯ ಅಧಿಕಾರಿಗಳ ಸರ್ವೇ ಲೋಪದಿಂದ ಪರಿಹಾರ ಧನ ಪಾತಾಳಕ್ಕೆ ಕುಸಿದಿದ್ದು, ಎಕರೆಗೆ 8 ಲಕ್ಷ ರೂ. ದರದಂತೆ ಬಿಡಿಗಾಸು ಪರಿಹಾರ ನಮ್ಮ ಕೈಗಿಟ್ಟು ಬೀದಿಪಾಲು ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಗ್ರಾಮದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂದಾಯ ಇಲಾಖೆ ಸರ್ವೇಯಿಂದಾದ ದರ ನಿಗದಿ ಲೋಪ ಸರಿಪಡಿಸಬೇಕು. ನೀರಾವರಿ ಕೃಷಿ ಆಧಾರಿತ ಭೂಮಿಗಳ ಮೌಲ್ಯ ಕಳೆದಿರುವ ಅಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಹೆದ್ದಾರಿ ಅಭಿವೃದ್ಧಿಗಾಗಿ ಶಾಶ್ವತವಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಕಾನೂನುಬದ್ಧ ಮೌಲ್ಯ ನಿಗದಿಪಡಿಸಬೇಕು. ನಮ್ಮನ್ನು ಬೀದಿಗೆ ತಳ್ಳಿ ರಸ್ತೆ ಅಭಿವೃದ್ಧಿ ಮಾಡುವುದೇ ಆದರೆ ನಮ್ಮ ಶವಗಳ ಮೇಲೆಯೇ ಹೆದ್ದಾರಿ ಹಾಯ್ದು ಹೋಗಲಿ ಎಂದು ರೈತರಾದ ವಿಶ್ವನಾಥ ಸಾಹುಕಾರ, ಮರೆಮ್ಮ ಸಾಬಣ್ಣ ಹಾಗೂ ನಾಗರತ್ನಮ್ಮ ಮಲಕಂಡಿ ತಮ್ಮ ಮನದ ನೋವು ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next