Advertisement

Revenge: 13 ವರ್ಷದ ಬಾಲಕಿ ಕುತ್ತಿಗೆಗೆ ಚೂರಿ ಇರಿತ ! ಅತ್ಯಾಚಾರಕ್ಕೆ ಅತ್ಯಾಚಾರದ ಪ್ರತಿಕಾರ?

11:49 AM May 12, 2024 | Team Udayavani |

ವಾಡಿ: ಕುಟುಂಬ ದ್ವೇಷದ ಸೇಡು ಮನುಷ್ಯತ್ವವನ್ನೇ ಕೊಂದು ಹಾಕಿ ಕ್ರೌರ್ಯ ಮೆರೆಯುತ್ತದೆ ಎಂದರೆ, ಕರಳುಬಳ್ಳಿಗಳ ಸಂಬಂಧ ಏನಾಗಬೇಕು! ಅವರು ಈ ಹಿಂದೆ ನನ್ನ ತಂಗಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಾನೂ ಅವರ ತಂಗಿಯನ್ನು ಭೋಗಿಸಿ ಸೇಡು ತೀರಿಸಿಕೊಳ್ಳಬೇಕು ಎಂದು ಕಾದು ಕುಳಿತಿದ್ದ ವಿಕೃತ ಮನಸ್ಸೊಂದು ಏನೂ ತಪ್ಪು ಮಾಡದ 13 ವರ್ಷದ ಕುಟುಂಬ ಸಂಬಂಧಿ ಬಾಲಕಿಯ ಕುತ್ತಿಗೆಗೆ ಚೂರಿ ಇರಿದ ಪ್ರಕರಣ ಚಿತ್ತಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

Advertisement

ಹೌದು, ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ಸಂಭವಿಸಿದ್ದು, ಛತ್ರಿ ಮನೆತನದ ಎರಡು ಸಹೋದರ ಸಂಬಂಧಿ ಕುಟುಂಬಗಳ ಇಬ್ಬರು ಬಾಲಕಿಯರು, ಅದೇ ಕುಟುಂಬದ ಕಾಮುಕರ ಕೆಂಗಣ್ಣಿಗೆ ಗುರಿಯಾಗಿ ಭವಿಷ್ಯದ ಕರಿನೆರಳಿಗೆ ಮುಖವೊಡ್ಡುವಂತಾಗಿದೆ.

ತನ್ನ ಕುಟುಂಬದ ಯುವತಿಯನ್ನು ಕುಟುಂಬ ಸಂಬಂಧಿ ಭೀಮಾಶಂಕರ ಎಂಬಾತ ಈ ಹಿಂದೆ ಮನೆಯಿಂದ ಕರೆದೊಯ್ದು ಕೆಲ ಗಂಟೆಗಳ ನಂತರ ವಾಪಸ್ ತಂದು ಬಿಟ್ಟಿದ್ದ ಎಂಬ ದ್ವೇಷದ ಬೆಂಕಿ ಹೊತ್ತಿದ್ದ ಅದೇ ಕುಟುಂಬದ ಮರಲಿಂಗಪ್ಪ ಈರಪ್ಪ ಛತ್ರಕಿ ಎಂಬಾತ ಮೇ.9ರಂದು ಮಲ್ಲಮ್ಮ ಸೂರ್ಯಕಾಂತ ಕೊಲಕುಂದಿ ಎಂಬವರ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಬೈಕ್ ಮೇಲೆ ಒತ್ತಾಯದಿಂದ ಕರೆದೊಯ್ದು ಕಲಬುರ್ಗಿ ನಗರದ ಆಳಂದ ಮಾರ್ಗದ ಲೇಔಟ್ ಪ್ರದೇಶದಲ್ಲಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಪ್ರಜ್ಞೆ ತಪ್ಪಿಬಿದ್ದ ಬಾಲಕಿ ಮೃತಪಟ್ಟಿದ್ದಾಳೆಂದು ಭಾವಿಸಿ ಬಿಟ್ಟು ಬಂದಿದ್ದಾರೆ.

ಅದೇ ವೇಳೆ ಲೇಔಟ್ ಮಾಲೀಕ ಆ ಜಾಗಕ್ಕೆ ಬಂದಿದ್ದಾನೆ. ರಕ್ತ-ಗಾಯದಿಂದ ಎದ್ದು ಕುಳಿತ ಬಾಲಕಿ, ಆತನ ನೆರವು ಕೋರಿದ್ದಾಳೆ. ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮಾರಣಾಂತಿಕ ಹಲ್ಲೆಗೆ ಗುರಿಯಾದ ಬಾಲಕಿ ಸದ್ಯ ಕಲಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಸಂತ್ರಸ್ತ ಬಾಲಕಿಯ ತಾಯಿ ಮಲ್ಲಮ್ಮ ಸೂರ್ಯಕಾಂತ ಕೊಲಕುಂದಿ ಶನಿವಾರ ನೀಡಿರುವ ದೂರಿನ ಮೇರೆಗೆ ಆರೋಪಿಗಳಾದ ಮರಲಿಂಗಪ್ಪ ಈರಪ್ಪ ಛತ್ರಕಿ, ಈರಪ್ಪ, ಬಸಪ್ಪ, ರಾಜ, ಅನಸಮ್ಮ, ಕಾವೇರಿ, ಶಿವಪ್ಪ, ಸಂತೋಷ, ಗಂಗಮ್ಮ ಎಂಬವರ ವಿರುದ್ಧ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರಕರಣ ಕೈಗೆತ್ತಿಕೊಂಡಿರುವ ಪಿಎಸ್ಐ ಮಂಜುನಾಥ ರೆಡ್ಡಿ ತನಿಖೆ ಕೈಗೊಂಡಿದ್ದಾರೆ. ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆಯಿದೆ ಎಂಬ ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next