Advertisement

ನಿಧಿಗಾಗಿ ವ್ಯಾಸರಾಜ ವೃಂದಾವನವೇ ಧ್ವಂಸ

02:34 AM Jul 19, 2019 | sudhir |

ಗಂಗಾವತಿ: ಕೊಪ್ಪಳ ಜಿಲ್ಲೆ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿರುವ ಐದು ಶತಮಾನಗಳಷ್ಟು ಪುರಾತನ ವ್ಯಾಸರಾಜ(ರಾಯ)ರ ವೃಂದಾನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ನಿಧಿಗಾಗಿ ಶೋಧ ಮಾಡಿದ ಘಟನೆ ಬುಧವಾರ ರಾತ್ರಿ ಜರುಗಿದೆ. ಇದರಿಂದ ವಿಚಲಿತರಾದ ಸಾವಿರಾರು ಭಕ್ತರು ಸ್ಥಳಕ್ಕೆ ದೌಡಾಯಿಸಿ ನವವೃಂದಾವನ ಸ್ವಚ್ಛಗೊಳಿಸಿದರು. ಮಂತ್ರಾಲಯ ಮಠ, ಉತ್ತಾರಾದಿಮಠ ಹಾಗೂ ವ್ಯಾಸರಾಯರ ಮಠ ಸೇರಿ ಇತರೆ ಮಧ್ವಪರಂಪರೆ ಮಠಾಧೀಶರು ಮತ್ತು ಭಕ್ತರು ಖಂಡನೆ ವ್ಯಕ್ತಪಡಿಸಿದ್ದಾರೆ.

Advertisement

ನವವೃಂದಾವನ ಗಡ್ಡಿಯಲ್ಲಿ ಒಂಬತ್ತು ಯತಿಗಳ ವೃಂದಾವನಗಳಿದ್ದು, ಆಂಜನೇಯ ಸ್ವಾಮಿ ದೇವಾಲಯದ ಎದುರು ವ್ಯಾಸರಾಜರ ವೃಂದಾವನವಿತ್ತು. ಅದರ ಮುಂದಿನ ಕಲ್ಲಿನ ಮಂಟಪ ಹಾಗೂ ವೃಂದಾವನ ಮೇಲಿದ್ದ ಕಲ್ಲುಗಳನ್ನು ತೆರವುಗೊಳಿಸಿ ಸುಮಾರು 2-3 ಅಡಿ ನೆಲ ಅಗೆದು ನಿಧಿಗಾಗಿ ಶೋಧ ನಡೆಸಲಾಗಿದೆ. 480 ವರ್ಷಗಳ ಹಿಂದೆ ನಿರ್ಮಿಸಿದ್ದ ವೃಂದಾವನ ಹಾಗೂ ಕಲ್ಲುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿರುವುದು ಭಕ್ತರಲ್ಲಿ ತೀವ್ರ ನೋವನ್ನುಂಟು ಮಾಡಿದೆ.

ಧ್ವಂಸಕ್ಕೂ ಮುನ್ನ ಪೂಜೆ?:ಧ್ವಂಸಕ್ಕೂ ಮುಂಚೆ ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನ ಹಾಗೂ ವೃಂದಾವನ ಎದುರಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಹೂ-ಹಣ್ಣು ಇಟ್ಟು ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆ. ರಾತ್ರಿ ಪೂಜೆ ಮಾಡಿದ್ದರಿಂದ ಬೆಳಗ್ಗೆ ತೆರಳಿದ ಭಕ್ತರಿಗೆ ಪೂಜೆ ಮಾಡಿದ ಸಾಮಾನುಗಳು ಕಂಡು ಬಂದಿವೆ.

ಸ್ವಚ್ಛಗೊಳಿಸಿದ ಭಕ್ತರು: ಸುದ್ದಿ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾದ ರಾಯಚೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಸುತ್ತಲಿನ ಸಾವಿರಾರು ಭಕ್ತರು ಆಗಮಿಸಿ ಎಲ್ಲೆಂದರಲ್ಲಿ ಬಿದ್ದಿದ್ದ ಕಲ್ಲು, ಮಣ್ಣು ಸ್ವಚ್ಛಗೊಳಿಸಿದರು. ಈ ಸಂದರ್ಭ ಸ್ವಯಂ ಮೂರು ಮಠದ ಪೂಜ್ಯರು ಶ್ರಮಾನುಭವದಲ್ಲಿ ಭಕ್ತರ ಜತೆ ಸೇರಿ ಕೆಲಸ ಮಾಡಿದರು. ಅಲ್ಲದೇ, ಮೂರು ಮಠಗಳ ಭಕ್ತರು ಸೇರಿ ಪುನರ್‌ ನಿರ್ಮಾಣ ಮಾಡುವುದಾಗಿ ಮಂತ್ರಾಲಯ ಶ್ರೀಗಳು ಘೋಷಿಸಿದರು. ಭಕ್ತರು ಯಾವುದೇ ಭಾವೋದ್ವೇಗಕ್ಕೆ ಒಳಗಾಗದಂತೆ ಮನವಿ ಮಾಡಿದರು.

ವೃಂದಾವನ ಸೇರಿ ಆನೆಗೊಂದಿ ಸುತ್ತಲಿನ ಐತಿಹಾಸಿಕ ಸ್ಮಾರಕಗಳಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪುರಾತತ್ವ ಇಲಾಖೆ, ಕೊಪ್ಪಳ, ಬಳ್ಳಾರಿ ಜಿಲ್ಲಾಡಳಿತಗಳು ಭದ್ರತೆ ನೀಡದೇ ನಿರ್ಲಕ್ಷ್ಯ ವಹಿಸಿರುವುದರಿಂದ ಮೇಲಿಂದ ಮೇಲೆ ಸ್ಮಾರಕಗಳನ್ನು ನಿಧಿಗಳ್ಳರು ಧ್ವಂಸಗೊಳಿಸುತ್ತಿದ್ದಾರೆ.

ಎಂಟು ತಿಂಗಳ ಹಿಂದೆ ಕಡೆಬಾಗಿಲು ಆನೆಗೊಂದಿ ಮಧ್ಯೆ ಇರುವ ಸುಂಕದಕಟ್ಟೆ ಆಂಜನೇಯ ಗುಡಿ ಅಗೆದು ಧ್ವಂಸಗೊಳಿಸಲಾಗಿತ್ತು. ತನಿಖೆಗೆ ತಂಡ ರಚನೆ: ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೋತಿಲಾಲ್ ಲಮಾಣಿ, ತಹಶೀಲ್ದಾರ್‌ ವೀರೇಶ್‌ ಬಿರಾದಾರ್‌, ಗ್ರಾಮೀಣ ಪಿಎಸೈ ಪ್ರಕಾಶ ಮಾಳೆ ಹಾಗೂ ಆನೆಗೊಂದಿ ರಾಜಮನೆತನದ ಶ್ರೀಕೃಷ್ಣದೇವರಾಯ, ಡಿವೈಎಸ್ಪಿ ಚಂದ್ರಶೇಖರ, ಸಿಪಿಐ ಸುರೇಶ ತಳವಾರ ಹಾಗೂ ಪಿಎಸೈ ಪ್ರಕಾಶ ಮಾಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳ ತ್ವರಿತ ಬಂಧನ ಮತ್ತು ತನಿಖೆಗೆ ಗಂಗಾವತಿ ಸಿಪಿಐ ಸುರೇಶ ತಳವಾರ ನೇತೃತ್ವದಲ್ಲಿ ವೈಜ್ಞಾನಿಕ ತನಿಖಾ ತಂಡ ರಚಿಸಿ ಎಸ್‌ಪಿ ರೇಣುಕಾ ಸುಕುಮಾರನ್‌ ಆದೇಶಿಸಿದ್ದಾರೆ.
ಹಿನ್ನೆಲೆ ಏನು?: ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ಮಧ್ವಪರಂಪರೆಯ ಒಂಭತ್ತು ಯತಿಗಳ ವೃಂದಾವನಗಳದ್ದು, ಪ್ರತಿ ವರ್ಷ ಮಂತ್ರಾಲಯ ಮಠ, ಉತ್ತಾರಾಧಿಮಠ, ವ್ಯಾಸರಾಯರ ಮಠ ಸೇರಿ ಇತರೆ ಮಧ್ವಪರಂಪರೆ ಮಠಗಳು ಮತ್ತು ಭಕ್ತರು ಆರಾಧನೆ ನಡೆಸಿ ಧಾರ್ಮಿಕ ಆಚರಣೆ ನಡೆಸುತ್ತಾರೆ. ವ್ಯಾಸರಾಜರು ವಿಜಯನಗರ ಸಾಮ್ರಾಜ್ಯ ಅರಸರ ರಾಜಗುರುಗಳಾಗಿದ್ದರು. ವಿಜಯನಗರ ಸಾಮ್ರಾಜ್ಯದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಆಂಜನೇಯ ಸ್ವಾಮಿ ಮೂರ್ತಿ ಸೇರಿ ಹಂಪಿಯ ಚಕ್ರತೀರ್ಥ ಹತ್ತಿರ ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಶ್ರೀಕೃಷ್ಣದೇವರಾಯರಿಗೆ ಕುಹಾದೋಷ ಉಂಟಾದಾಗ ಒಂದು ದಿನದ ಮಟ್ಟಿಗೆ ವಿಜಯನಗರ ಸಾಮ್ರಾಜ್ಯದ ಅರಸರಾಗಿ ರಾಜನಿಗೆ ಬಂದ ದೋಷ ನಿವಾರಣೆ ಮಾಡಿದ್ದರೆಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಪುರಂದರದಾಸ, ಕನಕದಾಸ ಸೇರಿ ಹಲವು ದಾಸವರೇಣ್ಯರಿಗೆ ವ್ಯಾಸರಾಜರು ದೀಕ್ಷೆ ನೀಡಿ ಹರಿಭಕ್ತರನ್ನಾಗಿಸಿದ್ದರು. 1539ರಲ್ಲಿ ವ್ಯಾಸರಾಜರು ವೃಂದಾವನಸ್ಥರಾದ ಸಂದರ್ಭ ಆನೆಗೊಂದಿಯ ನವವೃಂದಾವನದಲ್ಲಿ ಪದ್ಮನಾಭತೀರ್ಥ, ಶ್ರೀರಾಮತೀರ್ಥ, ಶ್ರೀಸುಧೀಂದ್ರತೀರ್ಥ, ಕವೀಂದ್ರತೀರ್ಥ ವೃಂದಾವನಗಳ ಮಧ್ಯೆ ವ್ಯಾಸರಾಜರ ವೃಂದಾವನಗಳು ಮತ್ತು ಎದುರಿಗೆ ಆಂಜನೇಯ ದೇಗುಲವಿದೆ.
ಧ್ವಂಸಕ್ಕೂ ಮುಂಚೆ ಪೂಜೆ?

ಗಂಗಾವತಿ: ನವವೃಂದಾವನದಲ್ಲಿರುವ ವ್ಯಾಸರಾಜರ ವೃಂದಾವನ ಧ್ವಂಸಕ್ಕೂ ಮುಂಚೆ ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನ ಹಾಗೂ ವೃಂದಾವನ ಎದುರಿರುವ ಆಂಜನೇಯ ಸ್ವಾಮಿ ಮೂರ್ತಿಗೆ ಹೂ-ಹಣ್ಣು ಇಟ್ಟು ಕುಂಕುಮ ಹಚ್ಚಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ್ದಾರೆನ್ನಲಾಗಿದೆ.
ಹಗಲಿನಲ್ಲಿ ಪೂಜೆ ಮಾಡಿದರೆ ಇಲ್ಲಿರುವ ಕೋತಿಗಳು ಎಲ್ಲವನ್ನೂ ಎತ್ತಿಕೊಂಡು ಹೋಗುತ್ತವೆ. ರಾತ್ರಿ ಮಾಡಿದ್ದರಿಂದ ಬೆಳಗ್ಗೆ ಪೂಜೆ ಮಾಡಲು ತೆರಳಿದವರಿಗೆ ಪೂಜೆ ಮಾಡಿದ ಸಾಮಗ್ರಿಗಳು ಕಂಡು ಬಂದಿವೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next