ಮೈಸೂರು : ಸಂವಿಧಾನ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ, ಬಿಜೆಪಿ ವಕ್ತಾರ ಗೋ ಮಧುಸೂದನ್ ಮತ್ತು ಪೇಜಾವರ ಶ್ರೀಗಳ ವಿರುದ್ಧ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶ್ರೀನಿವಾಸ್ ಪ್ರಸಾದ್ ‘ಪ್ರಧಾನಿ ಮೋದಿ ಅವರ ಸರ್ಕಾರದಲ್ಲಿ ಅನಂತ್ ಕುಮಾರ್ ಹೆಗಡೆಯನ್ನು ಮಂತ್ರಿ ಮಾಡಿರುವುದು ಅವಮಾನ. ನಮ್ಮ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದುದ್ದು’ ಎಂದರು.
‘ಗೋಮಧುಸೂಧನ್ ಗೆ 2 ಬಾರಿ ಎಂಎಲ್ಸಿ ಆದರೂ ಬುದ್ದಿ ಬಂದಿಲ್ಲ.ಎಲ್ಲರೂ ಅವರನ್ನು ಗೋ ಅನ್ನುತ್ತಾರೆ ಕಮ್ ಅನ್ನುವುದಿಲ್ಲ’ ಎಂದು ಲೇವಡಿ ಮಾಡಿದರು.
‘ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ’ ಎಂದು ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳ ವಿರುದ್ಧ ಕಿಡಿ ಕಾರಿ ‘ಅವರು ಮಠದ ಕೆಲಸಗಳನ್ನು ನೋಡಿಕೊಂಡು ಇರಲಿ, ಎಲ್ಲಾ ವಿಚಾರಕ್ಕೂ ಮಾತನಾಡುವುದು ಬೇಡ. ಶೃಂಗೇರಿ ಮಠ, ಪರಕಾಲ ಮಠ ಸೇರಿದಂತೆ ಹಲವು ಮಠಗಳಿವೆ, ಯಾವುದಾದರೂ ಹೇಳಿಕೆ ನೀಡುತ್ತಾರೆಯೇ? ಅವರಷ್ಟಕ್ಕೆ ಕೆಲಸ ಮಾಡಿಕೊಂಡು ಇಲ್ಲವೆ’ ಎಂದು ಪ್ರಶ್ನಿಸಿದರು.
‘ಅಂಬೇಡ್ಕರ್ ನಮಗೆ ಆಧ್ಯಾತ್ಮಿಕ ನಾಯಕ.ರಾಜಕೀಯ ಮುಖ್ಯವಲ್ಲ, ಅಂಬೇಡ್ಕರ್ ಅವರೇ ನಮಗೆ ಮುಖ್ಯ’ ಎಂದರು.
‘ಸಂವಿಧಾನ ಬದಲಾವಣೆ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕಿತ್ತು’ ಎಂದು ವರಿಷ್ಠರ ವಿರುದ್ಧವೂ ಅಸಮಧಾನ ಹೊರ ಹಾಕಿದರು.