Advertisement

ವಿಪ ಸದಸ್ಯ ರಘು ಆಚಾರ್‌ ರಾಜೀನಾಮೆ ಬೆದರಿಕೆ

06:00 AM Oct 09, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ದೊರೆಯುತ್ತಿಲ್ಲ, ಮುಖ್ಯಮಂತ್ರಿ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರಿಗೆ ನೀಡಿ ತಮ್ಮ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌ ಮುಂದಾಗಿದ್ದಾರೆ.

Advertisement

ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ಈ ವಿಷಯ ತರಲಾಗಿದ್ದು,  ಅವರು ರಘು ಆಚಾರ್‌ ಅವರನ್ನು ಮಂಗಳವಾರ ಕರೆದು ಮಾತನಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಿತ್ರದುರ್ಗ ಜಿಲ್ಲೆಗೆ ವೈದ್ಯಕೀಯ ಕಾಲೇಜ್‌ ಘೋಷಣೆ ಮಾಡಲಾಗಿತ್ತು. ಅದು ಆರಂಭವಾಗುವ ಮೊದಲೇ ರಾಮನಗರಕ್ಕೆ ವೈದ್ಯಕೀಯ ಕಾಲೇಜು ಘೋಷಣೆ ಮಾಡಲಾಗಿದ್ದು, ಚಿತ್ರದುರ್ಗದ ವೈದ್ಯಕೀಯ ಕಾಲೇಜು ಸ್ಥಾಪನೆ ನಿರ್ಲಕ್ಷಿಸಲಾಗಿದೆ ಎಂದು ರಘು ಆಚಾರ್‌ ಆರೋಪಿಸಿದ್ದಾರೆ.

ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿರುವ ರಘು ಆಚಾರ್‌ ಅವರು, ಶಾಸಕರ ಮನವಿಗೆ ಸ್ಪಂದಿಸಲು ಮುಖ್ಯಮಂತ್ರಿಗೆ ಸಮಯ ಇಲ್ಲದಿದ್ದರೆ, ಅಂತಹ ಸರ್ಕಾರದಿಂದ ಏನೂ ಪ್ರಯೋಜನವಾಗದು. ಅಲ್ಲದೇ ಚಿತ್ರದುರ್ಗದ ಜನತೆ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ನಾನು ಯಾರ ಋಣದಲ್ಲಿಯೂ ಇಲ್ಲ. ಕ್ಷೇತ್ರದ ಜನ ಬಯಸಿದರೆ, ವಿಧಾನ ಪರಿಷತ್‌ ಸ್ಥಾನಕ್ಕೆ  ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಆದರೆ, ಪಕ್ಷದ ಮೂಲಗಳ ಪ್ರಕಾರ ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಹುದ್ದೆ ಪಡೆಯಲು ಈ ರೀತಿಯ  ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next