Advertisement

ಶೇ.58 ಮತದಾನ ದಾಖಲು; ಉತ್ತರಪ್ರದೇಶ ಮೊದಲ ಹಂತದಲ್ಲಿ ಶಾಂತಿಯುತ ಮತದಾನ

12:34 AM Feb 11, 2022 | Team Udayavani |

ಹೊಸದಿಲ್ಲಿ: ಉತ್ತರಪ್ರದೇಶ ವಿಧಾನಸಭೆಯ ಮೊದಲ ಹಂತದ ಮತದಾನ ಶಾಂತಿಯುತವಾಗಿ ನೆರವೇರಿದೆ. ಗುರುವಾರ 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಶೇ.58ರಷ್ಟು ಮತದಾನ ದಾಖಲಾಗಿದೆ.

Advertisement

ಕೆಲವು ಪ್ರದೇಶಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ಲೋಪ ಕಂಡುಬಂದ ಘಟನೆಗಳು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತು ಎಂದು ಚುನಾವಣ ಆಯೋಗ ತಿಳಿಸಿದೆ. ಗಾಜಿಯಾಬಾದ್‌ನಲ್ಲಿ ಬಿಜೆಪಿ ನಾಯಕ ವಿ.ಕೆ.ಸಿಂಗ್‌ ಮತ್ತು ಕಾಂಗ್ರೆಸ್‌ ನಾಯಕ ರಾಜನ್‌ ಕಾಂತ್‌ ಬೆಂಬಲಿಗರ ನಡುವೆ ಸಣ್ಣಮಟ್ಟಿಗೆ ಘರ್ಷಣೆ ನಡೆದಿದೆ.

73 ಮಂದಿ ಮಹಿಳೆಯರು ಸೇರಿದಂತೆ 623 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಿದ್ದಾರೆ. 2017ರ ಚುನಾವಣೆಯಲ್ಲಿ ಈ 58 ಕ್ಷೇತ್ರಗಳ ಪೈಕಿ 53 ಸೀಟುಗಳು ಬಿಜೆಪಿ ಪಾಲಾಗಿದ್ದವು. ಎಸ್ಪಿ ಮತ್ತು ಬಿಎಸ್ಪಿ ತಲಾ 2 ಸ್ಥಾನ, ಆರ್‌ಎಲ್‌ಡಿ 1 ಸ್ಥಾನ ಗಳಿಸಿತ್ತು.

ಹಕ್ಕು ಚಲಾಯಿಸದ ಚೌಧರಿ!: ಗುರುವಾರ ಮತದಾನ ನಡೆದ ಮಥುರಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದ್ದರೂ ಆರ್‌ಎಲ್‌ಡಿ ನಾಯಕ ಜಯಂತ್‌ ಚೌಧರಿ ಹಕ್ಕು ಚಲಾಯಿಸಿಲ್ಲ. 2ನೇ ಹಂತದ ಮತದಾನ ನಡೆಯಲಿರುವ ಬಿಜ್ನೋರ್‌ನಲ್ಲಿ ಪ್ರಚಾರದಲ್ಲಿದ್ದ ಕಾರಣ ಮತದಾನ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ನಡುವೆ, ಹಲವೆಡೆ ಇವಿಎಂ ಲೋಪ ಕಂಡುಬಂದ ಘಟನೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಚೌಧರಿ, “ಯುವಕರು ಮತ್ತು ರೈತರು ತೀವ್ರತರವಾದ ಸಿಟ್ಟಿನಿಂದ ಇವಿಎಂ ಗುಂಡಿಗಳನ್ನು ಒತ್ತುತ್ತಿರಬಹುದು. ಹೀಗಾಗಿಯೇ ಮತಯಂತ್ರದಲ್ಲಿ ಲೋಪ ಕಂಡುಬಂದಿರಬಹುದು’ ಎಂದು ವ್ಯಂಗ್ಯವಾಡಿದ್ದಾರೆ.

ಡಿಸಿಎಂ ವಿರುದ್ಧ ಪಾತ್ರೆ ಮಾರಾಟಗಾರ ಕಣಕ್ಕೆ: ಕಳೆದ 2 ದಶಕಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಚುನಾವಣೆಗಳಲ್ಲಿ ಕಣಕ್ಕಿಳಿದಿರುವ ಪಾತ್ರೆ ಮಾರಾಟಗಾರ ಛೆಡ್ಡು ಚಮಾರ್‌  ಉ.ಪ್ರದೇಶ ಡಿಸಿಎಂ ಕೇಶವ

Advertisement

ಪ್ರಸಾದ್‌ ಮೌರ್ಯ ವಿರುದ್ಧವೇ ಸ್ಪರ್ಧಿಸಿದ್ದಾರೆ. ಗುರುವಾರ ಸಿರಾಥು ಕ್ಷೇತ್ರದಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಡಿಸಿಎಂ ವಿರುದ್ಧವೇ ಕಣಕ್ಕಿಳಿದಿದ್ದೀರಲ್ಲವೇ ಎಂದು ಪ್ರಶ್ನಿಸಿದರೆ, “ಆ ನಾರಾಯಣನಿಗಿಂತ ಯಾರೂ ದೊಡ್ಡವರಲ್ಲ’ ಎಂದು ಉತ್ತರಿಸುತ್ತಾರೆ ಚಮಾರ್‌.

ಸಿಎಂ ಚನ್ನಿ ವಿರುದ್ಧ ಆಪ್‌ಗೆ “ಲಾಭ’?
ಪಂಜಾಬ್‌ನ ಭದೌರ್‌ ಅಸೆಂಬ್ಲಿ ಕ್ಷೇತ್ರದಲ್ಲಿ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ವಿರುದ್ಧ ಆಪ್‌ ಅಭ್ಯರ್ಥಿಯಾಗಿ ಲಾಭ್‌ ಸಿಂಗ್‌ ಉಗೋಕೆ(35) ಅವರು ಸ್ಪರ್ಧಿಸಲಿದ್ದಾರೆ. ಲಾಭ್‌ಸಿಂಗ್‌ ಅವರ ತಂದೆ ಚಾಲಕನಾಗಿದ್ದು, ತಾಯಿ ಸರಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಾರೆ. ನನಗೆ ಭದೌರ್‌ ಕೇವಲ ಕ್ಷೇತ್ರವಲ್ಲ, ಅದು ನನ್ನ ಪರಿವಾರ ವಿದ್ದಂತೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌, ಅವರ ಪತ್ನಿ ಮತ್ತು ಪುತ್ರಿ ಶುಕ್ರವಾರ ಧುರಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಸಿಎಂ ಅಭ್ಯರ್ಥಿ ಭಗವಂತ್‌ ಮನ್‌ ಪರ ಪ್ರಚಾರ ನಡೆಸಲಿದ್ದಾರೆ.

“ದಿ ಗ್ರೇಟ್‌ ಖಾಲಿ’ ಬಿಜೆಪಿ ಸೇರ್ಪಡೆ: ಪಂಜಾಬ್‌ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ, ವೃತ್ತಿಪರ ಕುಸ್ತಿಪಟು “ದಿ ಗ್ರೇಟ್‌ ಖಾಲಿ’ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗುರುವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್‌ ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಸಮ್ಮುಖದಲ್ಲಿ ಅವರು ಪಕ್ಷ ಸೇರಿದ್ದಾರೆ. ಬಳಿಕ ಮಾತನಾಡಿದ ಅವರು, “ಬಿಜೆಪಿಗೆ ಸೇರಲು ಸಂತೋಷವಾಗಿದೆ. ಪ್ರಧಾನಿ ಮೋದಿಯವರು ಭಾರತದ ಅಭಿವೃದ್ಧಿಗೆ ಮಾಡುತ್ತಿರುವ ಕೆಲಸ ಇಷ್ಟವಾಗಿದೆ’ ಎಂದಿದ್ದಾರೆ.

ಮುಸ್ಲಿಂ ಮಹಿಳೆಯರ ಹಕ್ಕು ಕಸಿಯಲು ಯತ್ನ
“ಭಾರತದಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಸಿಯಲು ಕೆಲವು ಜನರು ಈಗೀಗ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಗುರುವಾರ ಉತ್ತರಪ್ರದೇಶದಲ್ಲಿ ತಮ್ಮ ಮೊದಲ ಭೌತಿಕ ರ್‍ಯಾಲಿಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್‌ ವಿವಾದ ತೀವ್ರಗೊಂಡಿರುವ ನಡುವೆಯೇ ಮೋದಿ ಅವರು ಈ ಹೇಳಿಕೆ ನೀಡಿರುವುದು ವಿಶೇಷ. “ಬಿಜೆಪಿ ಸರಕಾರ ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್‌ನಿಂದ ಮುಕ್ತಿ ನೀಡಿದೆ. ಯಾವಾಗ ಆ ಮಹಿಳೆಯರು ಸಾರ್ವಜನಿಕವಾಗಿಯೇ ಬಿಜೆಪಿಗೆ ಬೆಂಬಲ ನೀಡಲು ಆರಂಭಿಸಿದರೋ ಆಗ ವಿರೋಧಿಗಳು ಇನ್ನಷ್ಟು ಹತಾಶರಾದರು. ಆದರೆ ನಾವು ಪ್ರತಿಯೊಬ್ಬ ಮುಸ್ಲಿಂ ಮಹಿಳೆಯರ ಪರವಾಗಿರುತ್ತೇವೆ’ ಎಂದಿದ್ದಾರೆ.

ಮಣಿಪುರ ಚುನಾವಣೆ ದಿನಾಂಕ ಪರಿಷ್ಕರಣೆ
ಮಣಿಪುರ ವಿಧಾನಸಭಾ ಚುನಾವಣೆ ದಿನಾಂಕವನ್ನು ಚುನಾವಣ ಆಯೋಗ ಪರಿಷ್ಕರಿಸಿದ್ದು, ಫೆ.27ರ ಬದಲಿಗೆ ಫೆ.28ಕ್ಕೆ  ಮೊದಲ ಹಂತದ ಮತದಾನ ನಡೆಯಲಿದೆ ಎಂದಿದೆ. ಅದೇ ರೀತಿ ಮಾ.3ರ ಬದಲಿಗೆ ಮಾ.5ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ ಎಂದೂ ಆಯೋಗ ಹೇಳಿದೆ.

ಮೋದಿ ಮಾತು ನಾನು ಕೇಳಲ್ಲ: ರಾಹುಲ್‌
ಉತ್ತರಾಖಂಡದ ಹರಿದ್ವಾರದಲ್ಲಿ ಗುರುವಾರ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಮೋದಿ ಯವರ ಅಹಂಕಾರ ನೋಡಿ ನನಗೆ ನಗು ಬರುತ್ತಿದೆ ಎಂದಿದ್ದಾರೆ. “ಮೋದಿ ಇತ್ತೀಚೆಗೆ ಸಂದರ್ಶನ ವೊಂದರಲ್ಲಿ, ನಾನು ಅವರ ಮಾತುಗಳನ್ನು ಆಲಿಸುತ್ತಿಲ್ಲ ಎಂದಿದ್ದಾರೆ. ಅವರು ಹೇಳಿದ್ದು ಸರಿಯಿದೆ. ನಾನು ಅವರ ಸಿಬಿಐ, ಇಡಿಗೆ ಹೆದರುವವನಲ್ಲ. ಅವರ ಮಾತನ್ನು ಕೇಳುವುದೂ ಇಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next