Advertisement

ಮತ ಯಂತ್ರ ದೋಷ ಗಂಭೀರ ಲೋಪ

11:22 PM Apr 11, 2019 | mahesh |

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಮೊದಲ ಹಂತದ ಮತದಾನ ಗುರುವಾರ ಮುಗಿದಿದೆ. 91 ಲೋಕಸಭಾ ಕ್ಷೇತ್ರಗಳ ಜತೆಗೆ ಆಂಧ್ರ ಪ್ರದೇಶವೂ ಸೇರಿದಂತೆ ಕೆಲವು ವಿಧಾನಸಭೆಗಳಿಗೆ ನಡೆದ ಮತದಾನದ ಪ್ರಮಾಣ ಪ್ರಾಥಮಿಕ ವರದಿಗಳ ಪ್ರಕಾರ ತೃಪ್ತಿಕರವಾಗಿ ಇದೆ. ಆದರೆ ಇದೇ ವೇಳೆ ಆಂಧ್ರ ಪ್ರದೇಶದಲ್ಲಿ ವ್ಯಾಪಕವಾಗಿ ಹಿಂಸಾಚಾರ ಸಂಭವಿಸಿ ಇಬ್ಬರು ಮೃತಪಟ್ಟಿರುವುದು ಆರೋಗ್ಯಕರ ಪ್ರಜಾತಂತ್ರಕ್ಕೆ ಕಪ್ಪುಚುಕ್ಕೆಯಾಗುವಂಥ ಘಟನೆ. ಈ ಘಟನೆ ಮತಪತ್ರಗಳಲ್ಲಿ ಮತದಾನ ನಡೆಯುತ್ತಿದ್ದ ಹಿಂದಿನ ದಶಕಗಳ ಚುನಾವಣೆಗಳ ನೆನಪನ್ನು ಮರುಕಳಿಸಿದೆ. ಅದರಲ್ಲೂ ಶಾಂತಿಯುತ ಮತ್ತು ಸಭ್ಯತೆಯ ರಾಜಕೀಯಕ್ಕೆ ಹೆಸರಾಗಿರುವ ದಕ್ಷಿಣ ಭಾರತದಲ್ಲಿ ಈ ಮಾದರಿಯ ರಾಜಕೀಯ ಹಿಂಸಾಚಾರ ನಡೆದಿರುವುದು ತಲೆತಗ್ಗಿಸುವ ಸಂಗತಿ. ಒಟ್ಟಾರೆಯಾಗಿ ಇದು ಪ್ರಜಾತಂತ್ರದ ಆಶಯಗಳಿಗೆ ಧಕ್ಕೆಯುಂಟು ಮಾಡುವ ಬೆಳವಣಿಗೆ.

Advertisement

ಚುನಾವಣೆ ಪಾರದರ್ಶಕವಾಗಿ ಮತ್ತು ಮುಕ್ತವಾಗಿ ಮಾತ್ರವಲ್ಲದೆ ಶಾಂತಿಯುತವಾಗಿಯೂ ನಡೆಯಬೇಕು. ಮತದಾರರು ನಿರ್ಭೀತಿಯಿಂದ ಮತ ಚಲಾಯಿಸುವ ವಾತಾವರಣ ಇದ್ದರೆ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಜೀವಂತವಾಗಿರುತ್ತವೆ. ಆಂಧ್ರದಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ಸಂಭವಿಸಿದೆ. ಇದು ಎರಡು ಪ್ರಾದೇಶಿಕ ಪಕ್ಷಗಳ ನಡುವಿನ ಕಡು ವೈಷಮ್ಯದ ಫ‌ಲವೆಂದು ಹೇಳಬಹುದಾದರೂ ಒಟ್ಟಾರೆಯಾಗಿ ಇಡೀ ಚುನಾವಣೆ ಪ್ರಕ್ರಿಯೆ ಮೇಲೆ ಇದರ ಪ್ರಭಾವ ಆಗಲಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಅತ್ಯಂತ ಬಿಗು ಬಂದೋಬಸ್ತಿನ ನಡುವೆಯೂ ಟಿಡಿಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಾಡಿಕೊಂಡಿರುವುದು ನಾಚಿಕೆಗೇಡಿನ ಘಟನೆ. ಇನ್ನೊಂದು ಕ್ಷೇತ್ರದಲ್ಲಿ ಟಿಡಿಪಿ ಪರವಾಗಿ ಮತ ಹಾಕಲು ಹೇಳಿದ ಆಂಧ್ರದ ಸ್ಪೀಕರ್‌ ಮೇಲೂ ಹಲ್ಲೆಯಾಗಿರುವ ವರದಿಯಿದೆ. ಸ್ಪೀಕರ್‌ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎನ್ನುತ್ತದೆ ಸಂವಿಧಾನ. ವಿಧಾನಸಭೆ ವಿಸರ್ಜನೆಯಾಗುವ ತನಕ ಸ್ಪೀಕರ್‌ ಹುದ್ದೆ ಊರ್ಜಿತದಲ್ಲಿರುವುದರಿಂದ ಅವರು ತನ್ನ ಪಕ್ಷದ ಪರವಾಗಿ ಮತ ಹಾಕಲು ಹೇಳಿರುವುದು ಸಂವಿಧಾನ ವಿರೋಧಿ ನಡೆಯಾಗುತ್ತದೆ. ಆದರೆ ಇದನ್ನು ಹಿಂಸಾತ್ಮಕವಾಗಿ ಪ್ರತಿಭಟಿಸಿದ್ದು ಮಾತ್ರ ಸರಿಯಲ್ಲ.

ಮಹಾರಾಷ್ಟ್ರದ ಗಢ್‌ಚಿರೋಳಿಯಲ್ಲಿ ಮತಗಟ್ಟೆ ಸಮೀಪವೇ ನಕ್ಸಲರು ನೆಲಬಾಂಬ್‌ ಸ್ಫೋಟಿಸಿರುವುದು ಕೂಡಾ ಆತಂಕಕಾರಿ ಘಟನೆ. ನಕ್ಸಲ್‌ ಹಾವಳಿಯಿರುವ ಪ್ರದೇಶಗಳಲ್ಲಿ ಜನರು ಚುನಾವಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ಚುನಾವಣ ಆಯೋಗ, ಸರಕಾರ ಮತ್ತು ಸರಕಾರೇತರ ಸಂಘಟನೆಗಳು ಶತಪ್ರಯತ್ನ ಪಟ್ಟಿವೆ. ಇಂಥ ಸೂಕ್ಷ್ಮ ಮತಗಟ್ಟೆಗಳಲ್ಲಿ ಇನ್ನಷ್ಟು ಬಿಗು ಬಂದೋಬಸ್ತಿನ ಏರ್ಪಾಡು ಮಾಡಬೇಕಿತ್ತು. ನಕ್ಸಲರಿಗೆ ಮತಗಟ್ಟೆಯ ಸಮೀಪದ ತನಕ ಬರಲು ಸಾಧ್ಯವಾಗಿದೆ ಎನ್ನುವುದು ಭದ್ರತೆಯಲ್ಲಿ ಎಲ್ಲೋ ಲೋಪವಾಗಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ. ಮುಂದಿನ ಹಂತಗಳಲ್ಲಿ ಈ ಮಾದರಿಯ ಲೋಪಗಳು ಮರುಕಳಿಸದಂತೆ ನೋಡುವ ಬಾಧ್ಯತೆ ಚುನಾವಣಾಧಿಕಾರಿಗಳದ್ದು. ನಕ್ಸಲರ ಉದ್ದೇಶವೇ ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಮಾಡುವುದು. ಒಂದು ವೇಳೆ ಅವರು ಇದರಲ್ಲಿ ತುಸು ಯಶಸ್ವಿಯಾದರೂ ಅದು ಪ್ರಜಾತಂತ್ರಕ್ಕಾಗುವ ಸೋಲು ಎಂದು ಭಾವಿಸಬೇಕಾಗುತ್ತದೆ.

ಇದೇ ವೇಳೆ ಮತಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕುರಿತು ಅನೇಕ ದೂರುಗಳು ಬಂದಿದ್ದು, ಇದು ಖಂಡಿತ ಅನಪೇಕ್ಷಿತ ಬೆಳವಣಿಗೆಯಲ್ಲ. ಆಂಧ್ರವೊಂದರಲ್ಲೇ ಶೇ.30ರಷ್ಟು ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದು ಉತ್ಪ್ರೇಕ್ಷಿತ ಸಂಖ್ಯೆ ಇರಬಹುದಾಗಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎನ್ನುವುದು ನಿಜ. ಅದೇ ರೀತಿ ಕಾಶ್ಮೀರದಲ್ಲಿ ಒಂದು ಪಕ್ಷದ ಚಿಹ್ನೆಯ ಗುಂಡಿಯನ್ನು ಒತ್ತಲು ಸಾಧ್ಯವಾಗುತ್ತಿರಲಿಲ್ಲ ಎಂದು ಮತದಾರರು ದೂರಿದ್ದಾರೆ.

ಚುನಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಬೇಕಾದ ಚುನಾವಣ ಆಯೋಗ ಈ ಲೋಪಗಳಿಗೆ ಉತ್ತರಿಸುವ ಹೊಣೆ ಹೊಂದಿದೆ. ಮೊದಲ ಹಂತದ ಚುನಾವಣೆಯಲ್ಲೇ ಇಷ್ಟೊಂದು ದೂರುಗಳು ಬರುತ್ತಿರುವುದು ಹಿತಕಾರಿಯಾದ ಬೆಳವಣಿಗೆಯಲ್ಲ. ಇದರಿಂದ ಮುಂಬರುವ ಹಂತಗಳ ಮೇಲೆ ಪ್ರತಿಕೂಲ ಪರಿಣಾಮವಾಗಬಹುದು. ಈಗಾಗಲೇ ವಿಪಕ್ಷಗಳಿಗೆ ಮತಯಂತ್ರಗಳ ಮೇಲೆ ಅನುಮಾನವಿದೆ.ಹೀಗಿರುವಾಗ ಮತಯಂತ್ರಗಳ ಅಸಮರ್ಪಕ ಕಾರ್ಯ ನಿರ್ವಹಣೆಯ ದೂರುಗಳು ಈ ಅನುಮಾನವನ್ನು ಇನ್ನಷ್ಟು ದಟ್ಟವಾಗಿಸುತ್ತವೆ. ಆಯೋಗ ಈ ವಿಚಾರದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸಿಕೊಳ್ಳಬೇಕಿತ್ತು. ಯಾವ ಕಾರಣಕ್ಕೂ ಮುಂದಿನ ಹಂತಗಳಲ್ಲಿ ಮತಯಂತ್ರಗಳು ಕೈಕೊಡದಂತೆ ನೋಡಿಕೊಳ್ಳಬೇಕು.ಜನರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ಇದೆ ಎನ್ನುವುದು ಮೊದಲ ಹಂತದ ಮತದಾನ ಪ್ರಮಾಣದಿಂದ ಸ್ಪಷ್ಟವಾಗುತ್ತದೆ. ಆದರೆ ಈ ಆಸಕ್ತಿ ಕುಂದದಂತೆ ನೋಡಿಕೊಳ್ಳುವ ಬಾಧ್ಯತೆ ಚುನಾವಣೆ ನಡೆಸುವವರದ್ದು.

Advertisement
Advertisement

Udayavani is now on Telegram. Click here to join our channel and stay updated with the latest news.

Next