ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿಯ ಗ್ರಾಮಸ್ಥರು ಕೊಳವೆ ಬಾವಿಯ ಕಲುಷಿತ ನೀರು ಸೇವಿಸಿ ಹಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಹಿನ್ನಲೆ ಜಿಲ್ಲಾಧಿಕಾರಿ ಶಿಲ್ಪನಾಗ್ ಮೇ.26ರ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಹಲವರು ಸರ್ಕಾರಿ, ಖಾಸಗಿ ಆಸ್ಪತ್ರೆ ಹಾಗೂ ಕೆಲವರು ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ-ಭೇದಿಗೆ ಒಳಗಾದ ಕುಟುಂಬದವರ ಮನೆ-ಮನೆಗೆ ತೆರಳಿದ ಜಿಲ್ಲಾಧಿಕಾರಿ ಧೈರ್ಯದಿಂದ ಇರುವಂತೆ ಜನರಲ್ಲಿ ಮನವಿ ಮಾಡಿದರು.
ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಿದ ಬಳಿಕ ಜಿಲ್ಲಾಧಿಕಾರಿ ಮಾತನಾಡಿ, ಮಳೆ ಬಂದ ಕಾರಣ ಎರಡು ಕೊಳವೆ ಬಾವಿಯ ನೀರು ಕಲುಷಿತಗೊಂಡಿರುವುದರಿಂದ ಗ್ರಾಮಸ್ಥರು ಆ ನೀರು ಸೇವಿಸಿ ಅಸ್ವಸ್ಥರಾಗಿದ್ದು, ಕೂಡಲೇ ಕೊಳವೆ ಬಾವಿ ನೀರು ಸೇವನೆ ಮಾಡದಂತೆ ಗ್ರಾಮಸ್ಥರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಒಂದು ವಾರದಲ್ಲಿ ಕಾವೇರಿ ಶುದ್ದ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗುವುದು. ಆಸ್ಪತ್ರೆಯಲ್ಲಿ 24×7 ವೈದ್ಯರು ಇರುವಂತೆ ಸೂಚನೆ ನೀಡಿರುವುದಾಗಿ ಹೇಳಿದರು.
ಭೇಟಿಯ ವೇಳೆ ಮಾಜಿ ಶಾಸಕ ನರೇಂದ್ರ ಚಾಮುಲ್, ನಿರ್ದೇಶಕ ನಂಜುಂಡಸ್ವಾಮಿ, ಶಿವಕುಮಾರ ಮತ್ತಿತರರು ಇದ್ದರು.