Advertisement

ಶಾಸಕ ಕಾಗೇರಿ ಗೆಲುವಿಗೆ ಶ್ರಮಿಸಲು “ಸ್ವಯಂ’ಪಡೆ ಸಿದ್ಧ

12:20 PM Apr 10, 2018 | Team Udayavani |

ಶಿರಸಿ: ಸೋಲಿಲ್ಲದ ಸರದಾರ, ಕ್ಷೇತ್ರ ಬದಲಾವಣೆ ಮಾಡಿದರೂ ಎರಡು ಸಲ ಗೆದ್ದ ಶಿರಸಿ ವಿಧಾನ ಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ರಕ್ಷಣೆಗೆ ಸ್ವಯಂ ಪಡೆ ಸಿದ್ಧವಾಗಿದೆ. ಈಗಾಗಲೇ ತನ್ನೊಳಗಿನ ಕಾರ್ಯ ಆರಂಭಿಸಿದ್ದು, ಹೊರ ನೋಟಕ್ಕೆ ಕಾಣದೇ ಒಳಗೊಳಗೇ ಸಂಘಟನೆ, ಪ್ರಚಾರ, ರಾಷ್ಟ್ರಹಿತ ಕಾರ್ಯ ಎಂದು ಕೆಲಸ ಶುರು ಮಾಡಿದೆ.

Advertisement

ಜಿಲ್ಲೆಯ ರಾಜಕೀಯ ವಿದ್ಯಮಾನದಲ್ಲಿ ಪ್ರಥಮ ಬಾರಿಗೆ ವಿಧಾನ ಸಭಾ ಚುನಾವಣೆಗೆ ಈ ಸ್ವಯಂ ತಂಡ ಇಳಿದಿದ್ದು ಇದೇ ಪ್ರಥಮ. ಕಳೆದ ಸಂಸತ್‌ ಚುನಾವಣೆಯಲ್ಲಿ ಅಖಾಡಕ್ಕೆ ಇಳಿದಿದ್ದ ಕಾರ್ಯಕರ್ತರ ಪಡೆ ಇದೀಗ ವಿಧಾನ ಸಭಾ ಚುನಾವಣೆಗೂ ಇಳಿದಿದೆ.

ಏನಿದು ಸ್ವಯಂ ಪಡೆ?

 ಬೇರೆ ಬೇರೆ ಹಂತದಲ್ಲಿ ಪ್ರಮುಖರು ನಿರ್ವಹಣೆ ಮಾಡುವ ಆದರೆ, ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಸಂಬಂಧ  ಇಲ್ಲದಂತೆ ಕೆಲಸ ಮಾಡುತ್ತಿರುವ ಸಂಘಟನೆ ಇದು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಿರಸಿಯಲ್ಲಿ ಸ್ವಯಂ ಆಗಿ ಪ್ರಚಾರದ ಕಾರ್ಯಕ್ಕೆ ಇಳಿದಿದೆ.

ಈಗಾಗಲೇ ಕ್ಷೇತ್ರದಲ್ಲಿ ಐವತ್ತಕ್ಕೂ ಅಧಿಕ ಕಾರ್ಯಕರ್ತ ಪ್ರಮುಖರು ರಾಷ್ಟ್ರಹಿತ, ರಾಜ್ಯದ ಒಳಿತು, ಹಿಂದುಗಳ ಮೇಲಿನ ದೌರ್ಜನ್ಯ, ದೇವಾಲಯಗಳ ಸರಕಾರೀಕರಣ ಸೇರಿದಂತೆ ಅನೇಕ ಕಾರಣಗಳನ್ನು ಪ್ರಸ್ತುತಗೊಳಿಸಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

Advertisement

ಟಾರ್ಗೆಟ್‌

ಶಾಸಕ ಕಾಗೇರಿ ಅವರು ಶಿರಸಿ ವಿಧಾನ ಸಭಾ ಕ್ಷೇತ್ರಕ್ಕೆ ಅಂಕೋಲಾದಲ್ಲಿ ಮೂರು   ಅವಧಿ  ಪೂರ್ಣಗೊಳಿಸಿ ಬಂದಾಗ 32 ಸಾವಿರ ಮತಗಳು ಅಧಿ ಕವಾಗಿದ್ದವು. ಆದರೆ, ಕಳೆದ ಚುನಾವಣೆಯಲ್ಲಿ 3 ಸಾವಿರ ಚಿಲ್ಲರೆ ಮತಗಳು ಬಂದಿದ್ದವು. ಈ ಬಾರಿ ಗೆಲ್ಲಿಸುವ ಜೊತೆಗೆ ಬಿಜೆಪಿ ಸರಕಾರವನ್ನು ರಾಜ್ಯದಲ್ಲಿ ತರಬೇಕು ಎಂಬ ಆಶಯದಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಉಳಿದ ಪಕ್ಷಗಳಿಗೆ ಕಾಗೇರಿ ಟಾರ್ಗೆಟ್‌ ಆಗಿದ್ದಾರೆ. ಐದು ಬಾರಿ ಆಡಳಿತ ಮಾಡಿದ್ದನ್ನು ನೋಡಿದ್ದೇವೆ, ನಮಗೆ ಅವಕಾಶ ಕೊಡಿ ಎಂದು ಜೆಡಿಎಸ್‌ ಶಶಿಭೂಷಣ ಹೆಗಡೆ, ಕಾಂಗ್ರೆಸ್‌ ಟಿಕೆಟ್‌ ಆಂಕಾಕ್ಷಿತರಾದ ಭೀಮಣ್ಣ ನಾಯ್ಕ, ನಿವೇದಿತ್‌ ಆಳ್ವಾ ಇಬ್ಬರೂ ಕೇಳುತ್ತಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎಂಬುದರ ಮೇಲೆ ಚುನವಣಾ ಪ್ರಚಾರದ ನಡೆ ಕೂಡ ಬದಲಿಸಿಕೊಳ್ಳಲಿದೆ. ಜೆಡಿಎಸ್‌, ಬಿಜೆಪಿ ಇಬ್ಬರೂ ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ತಮ್ಮ ಜಯ ಅಪಜಯದ ಲೆಕ್ಕಾಚಾರ ಮಾಡುತ್ತಿದ್ದಾರೆ. ಬಲವಾಗುವುದೇ?: ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌ ಹಾಗೂ ಇತರ ಹಿಂದೂ ಸಂಘಟನೆಗಳು ಬಿಜೆಪಿಗೆ ಬೆಂಬಲವಾಗಿ ನಿಂತಿವೆ. ಬಿಜೆಪಿಯಲ್ಲಿ ಇನ್ನೊಬ್ಬ ಅಭ್ಯರ್ಥಿ ಕೃಷ್ಣ ಎಸಳೆ ಇದ್ದರೂ ಅವರಿಗೆ ಕರಾವಳಿ ಭಾಗದ ಜವಾಬ್ದಾರಿ ನೀಡಿದ್ದಾರೆ. ಕರಾವಳಿಯ ಮೂರು ಹಾಗೂ ಶಿರಸಿ, ಯಲ್ಲಾಪುರ ಕ್ಷೇತ್ರದ ಗೆಲುವು ಅನಂತಕುಮಾರ ಹೆಗಡೆ ಅವರ ಮರ್ಯಾದೆ ಉಳಿಸುವುದಕ್ಕೂ ಕಾರಣವಾಗಿದೆ.

ಈ ಕಾರಣದಿಂದ ಆರ್‌ಎಸ್‌ಎಸ್‌ ಸಂಘಟನೆಗೆ ಶಿರಸಿ ಜವಬ್ದಾರಿ ವಿಶೇಷವಾಗಿ ನೀಡಲಾಗಿದೆ ಎಂಬ ಮಾತುಗಳೂ ಇವೆ. ಕಾಗೇರಿ ಕೂಡ ಕಳೆದ ಅವಧಿಗಿಂತ ಕೆಲವು ವಿಚಾರದಲ್ಲಿ ಸ್ಟ್ರಾಂಗ್‌ ಆಗಿದ್ದಾರೆ ಎಂಬುದೂ ಹಲವು ಘಟನೆಗಳಿಂದ ಸಾಬೀತಾಗಿದೆ ಎಂದೂ ಅವರ ಒಡನಾಡಿಗಳೇ ಹೇಳುತ್ತಿದ್ದಾರೆ. ಈವರೆಗೆ ವಿಧಾನ ಸಭಾ ಚುನಾವಣೆಗೆ ಇಳಿಯದ ಸ್ವಯಂ ಪಡೆ ಈ ಬಾರಿ ಇಳಿದದ್ದು ಯಾಕೆ? ಸೋಲಿನ ಭೀತಿನಾ ಎಂಬ ಪ್ರಶ್ನೆಯೂ ಜತೆಯಾಗಿದೆ. 

ಶಿರಸಿ ಕ್ಷೇತ್ರ ಉಳಿದರೆ ಉಳಿದ ಕ್ಷೇತ್ರಗಳೂ ಉಳಿಯುತ್ತವೆ. ಒಮ್ಮೆ ಇಲ್ಲಿ ನಷ್ಟವಾದರೆ ಉಳಿದ ಕಡೆ ಇನ್ನು ಯಾವತ್ತೂ ಬರುವುದಿಲ್ಲ. ಈ ಕಾರಣದಿಂದ ನಾವು ಇದೇ ಪ್ರಥಮ ಬಾರಿಗೆ ವಿಧಾನ ಸಭಾ ಚುನಾವಣೆ ಅಖಾಡಕ್ಕೆ ಇಳಿದಿದ್ದೇವೆ.
 ಹೆಸರು ಬಯಸದ ಆರ್‌ಎಸ್‌ಎಸ್‌ ಹಿರಿಯ ಪ್ರಮುಖ

ಕಾಂಗ್ರೆಸ್‌ ಟಿಕೆಟ್‌ ಮೇಲೆ ತ್ರಿಕೋನ ಸ್ಪರ್ಧೆಯಲ್ಲಿ ಗೆಲುವು ನಿಂತಿದೆ. ಶಿರಸಿ ಕ್ಷೇತ್ರದಷ್ಟು ಕುತೂಹಲ ಬೇರೆ ಕಡೆ ಇಲ್ಲ. ಇಲ್ಲಿ ಬಿದ್ದರೂ ಗೆದ್ದರೂ ಸಾವಿರ ಮತಗಳೊಳಗೆ…
 ಜಿ.ಎನ್‌.ನಾಯ್ಕ, ಮತದಾರ

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next