Advertisement

ಬಂಡೀಪುರದಲ್ಲಿ ಸ್ವಯಂ ಸೇವಕರ ಸೇವೆ ಅನಗತ್ಯ

11:23 PM Apr 24, 2019 | Lakshmi GovindaRaju |

ಗುಂಡ್ಲುಪೇಟೆ: ಸ್ವಯಂ ಸೇವಕರು ಎಂಬ ಹೆಸರಿನಲ್ಲಿ ಅರಣ್ಯದೊಳಗೆ ಪ್ರವೇಶಿಸಿ, ಸೆಲ್ಫಿ ತೆಗೆದು ಹೊರಜಗತ್ತಿಗೆ ತಪ್ಪು ಮಾಹಿತಿ ನೀಡುತ್ತಿರುವ ಕಾರಣ, ಎಂತಹ ತುರ್ತು ಪರಿಸ್ಥಿತಿಯಲ್ಲೂ ಸ್ವಯಂ ಸೇವಕರ ಸೇವೆ ಅನಗತ್ಯ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಂಡೀಪುರ ಹುಲಿ ಯೋಜನೆಯ ಹಿಮವದ್‌ ಗೋಪಾಲಸ್ವಾಮಿ ಅರಣ್ಯ ವಲಯದಲ್ಲಿ ಕಳೆದ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಿನಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಲಂಟಾನಾ ಪೊದೆಗಳು, ಭೂಮಿಯಲ್ಲಿ ತೆವಳುವ ಸಣ್ಣ ಪ್ರಾಣಿಗಳು ಮತ್ತು ಅಲ್ಪ ಪ್ರಮಾಣದ ಹುಲ್ಲು, ಒಣಗಿ ನಿಂತ ದೊಡ್ಡ ಮರಗಳು ಮತ್ತು ಒಣ ಹುಲ್ಲು ಬೆಂಕಿಯಲ್ಲಿ ಸುಟ್ಟುಹೋಗಿದ್ದವು. ಸ್ವಲ್ಪ ಕಾಲದ ನಂತರ ಅವು ಮತ್ತೆ ಬೆಳೆಯುತ್ತವೆ.

ಆದರೆ, ಹಸಿರು ಹೊದ್ದಿದ್ದ ಯಾವುದೇ ಮರಗಳೂ ಸುಟ್ಟಿರಲಿಲ್ಲ. ಆದರೆ, ಕೆಲವು ದುಷ್ಕರ್ಮಿಗಳು ಕೆಲವು ದಿನಗಳಿಂದ ಬಂಡೀಪುರ ಬೆಂಕಿ ಆಕಸ್ಮಿಕದಲ್ಲಿ ಹಲವಾರು ಪ್ರಾಣಿಗಳು ಮೃತಪಟ್ಟಿದ್ದು, ಹಲವಾರು ಮರಗಳು ಸುಟ್ಟುಹೋಗಿವೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಅಲ್ಲದೆ, ಬಂಡೀಪುರ ಅರಣ್ಯ ಪ್ರದೇಶವನ್ನು ಪುನರುಜ್ಜೀವನಗೊಳಿಸಲು ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಆದರೆ, ಬಂಡೀಪುರದ ಪುನರುತ್ಥಾನಕ್ಕಾಗಿ ಯಾವುದೇ ರೀತಿಯ ಹಣ ಸಹಾಯ ಬೇಡ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next