Advertisement

ವಿವೇಕಾನಂದರ ಬದುಕು-ಭಾವಗಳ ಅಭಿವ್ಯಕ್ತಿ ವೀರಸಂನ್ಯಾಸಿ 

06:00 AM Nov 16, 2018 | |

ಐತಿಹಾಸಿಕ ವ್ಯಕ್ತಿ- ಘಟನೆಗಳನ್ನು ನೃತ್ಯಕ್ಕೆ ಅಳವಡಿಸುವಾಗ ವೇಷಭೂಷಣ, ವಾಸ್ತವಿಕತೆಯ ಚಿತ್ರಣ, ದ್ವಂದ್ವಗಳ ನಿರ್ವಹಣೆ ಹೀಗೆ ಹಲವಾರು ಸವಾಲುಗಳು ಎದುರಾಗುತ್ತವೆ. ಇತಿಹಾಸದ ಕುರಿತಾದ ಸ್ಪಷ್ಟತೆ ಮತ್ತು ಅಧ್ಯಯನಶೀಲತೆ ಇದ್ದಾಗ ಮಾತ್ರ ಸುಂದರ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಅಭಿವ್ಯಕ್ತಿಯ ಮೂಲ ಆಶಯ ದಿಕ್ಕುತಪ್ಪುವ ಸಾಧ್ಯತೆ ಅಧಿಕ.

Advertisement

ಮರೆಯಾಗಿ ಶತಮಾನ ಕಳೆದ ಮೇಲೂ ಕೋಟಿ ಭಾರತೀಯ ಮನಸ್ಸುಗಳಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡವರು ಸ್ವಾಮಿ ವಿವೇಕಾನಂದರು. ಇಂತಹ ಆದರ್ಶಪ್ರಾಯರ ಸಿರಿಕಂಠದಲ್ಲಿ ಮೊಳಗಿದ ಶಿಕಾಗೊ ಭಾಷಣಕ್ಕೆ 125 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ವಿವೇಕರ ಬದುಕು- ಚಿಂತನೆಗಳಿಗೆ ನಾಟ್ಯದ ಸ್ಪರ್ಶವನ್ನು ನೀಡಿದ ವೀರಸಂನ್ಯಾಸಿ ನೃತ್ಯರೂಪಕವು ರಾಮನಗರದ ಶ್ರೀ ಶಾರದೋತ್ಸವದ ವೇದಿಕೆಯಲ್ಲಿ ಉಪ್ಪಿನಂಗಡಿಯ ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆಯ ಮೂಲಕ ಪ್ರಸ್ತುತಿಗೊಂಡಿತು. ನೃತ್ಯ ಕ್ಷೇತ್ರದ ಮಟ್ಟಿಗೆ ಇದೊಂದು ವಿನೂತನವಾದ ಪ್ರಯೋಗವೆಂದೇ ಹೇಳಬಹುದು. ವಿ| ಮಂಜುನಾಥ್‌ ಎನ್‌. ಪುತ್ತೂರು ಮತ್ತು ದೀಪ್ತಿ ಮಂಜುನಾಥ್‌ ತಮ್ಮ ನೃತ್ಯ ವಿದ್ಯಾರ್ಥಿಗಳ ಮೂಲಕ ಈ ಪ್ರಯೋಗವನ್ನು ಸಮರ್ಥವಾಗಿಯೇ ನಿಭಾಯಿಸಿ ಯಶಸ್ವಿಗೊಳಿಸಿದರು ಎನ್ನುವುದರಲ್ಲಿ ಎರಡು ಮಾತಿಲ್ಲ. 

ಬಾಲ್ಯ ಮತ್ತು ಯೌವ್ವನದಲ್ಲಿ ನಡೆದ ಹಲವು ಘಟನೆಗಳ ಮೂಲಕ ಸ್ವಾಮಿ ವಿವೇಕಾನಂದರ ಪ್ರೌಢ ವ್ಯಕ್ತಿತ್ವದ ಹಿಂದಿನ ಬೌದ್ಧಿಕ ಪ್ರೇರಣೆಗಳನ್ನು ನೃತ್ಯರೂಪಕವು ಮನದಟ್ಟು ಮಾಡುತ್ತದೆ. ರಾಮಕೃಷ್ಣ ಪರಮಹಂಸರ ಮರಣದ ನಂತರದ ವಿವೇಕರ ಚಿತ್ರಣವನ್ನು ಅತ್ಯಂತ ಪರಿಣಾಮಕಾರಿಯಾಗಿ ತರಲಾಗಿತ್ತು. ವಿವೇಕಾನಂದರ ಪ್ರಮುಖ ಮೂರು ಚಿಂತನೆಗಳನ್ನೂ ಕೂಡಾ ತರಲಾಗಿದ್ದು, ಹೊಸ ಬಗೆಯಲ್ಲಿ ಸಹೃದಯರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಐತಿಹಾಸಿಕ ವ್ಯಕ್ತಿ- ಘಟನೆಗಳನ್ನು ನೃತ್ಯಕ್ಕೆ ಅಳವಡಿಸುವಂತಹ ಸಂದರ್ಭದಲ್ಲಿ ವೇಷಭೂಷಣ, ವಾಸ್ತವಿಕತೆಯ ಚಿತ್ರಣ, ದ್ವಂದ್ವಗಳ ನಿರ್ವಹಣೆ… ಹೀಗೆ ಹಲವಾರು ಸವಾಲುಗಳು ಎದುರಾಗುತ್ತವೆ. ಇತಿಹಾಸದ ಕುರಿತಾದ ಸ್ಪಷ್ಟತೆ ಮತ್ತು ಅಧ್ಯಯನಶೀಲತೆ ಇದ್ದಾಗ ಮಾತ್ರ ಸುಂದರ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಅಭಿವ್ಯಕ್ತಿಯ ಮೂಲ ಆಶಯ ದಿಕ್ಕುತಪ್ಪುವ ಸಾಧ್ಯತೆ ಐತಿಹಾಸಿಕ ನೃತ್ಯರೂಪಕಗಳ ಸಂದರ್ಭದಲ್ಲಿ ಅಧಿಕ. ಆದರೆ ವೀರಸಂನ್ಯಾಸಿ ನೃತ್ಯರೂಪಕವು ಚಿನ್ನದ ಹೂವಿಗೆ ಪರಿಮಳ ಬಂದಂತೆ ಸ್ವಾಮಿ ವಿವೇಕಾನಂದರ ಪರಿಶುದ್ಧ ವ್ಯಕ್ತಿತ್ವಕ್ಕೆ ಮತ್ತಷ್ಟು ಹೆಚ್ಚಿನ ಶೋಭೆಯನ್ನು ತಂದುಕೊಟ್ಟಿತು ಎನ್ನುವುದು ಸಂತಸದ ವಿಚಾರ. ಸ್ವಾಮಿ ವಿವೇಕಾನಂದರಾಗಿ ಕಾಣಿಸಿಕೊಂಡ ವಿ| ಮಂಜುನಾಥ್‌ ಅವರ ಪ್ರಯತ್ನ ಈ ದಿಶೆಯಲ್ಲಿ ಗಮನಾರ್ಹವೆನಿಸಿತು. ಈ ಐತಿಹಾಸಿಕ ನೃತ್ಯರೂಪಕದ ಕೆಲವೊಂದು ಪಾತ್ರಗಳಿಗೆ(ರಾಜ ಮಂಗಲ್‌ಸಿಂಗ್‌, ಅಮೆರಿಕದ ಮಹಿಳೆ, ಸರ್ಪ) ಸೂಕ್ತವಾದ ಜತಿಯನ್ನು ಸಂಯೋಜಿಸಿದ್ದು ಮತ್ತಷ್ಟು ಮುದ ನೀಡಿತು. 

ಈ ನೃತ್ಯರೂಪಕ ಪ್ರದರ್ಶನವು ನಿರೂಪಣೆಯ ನೆಲೆಯಿಂದ ಹೊಸ ಮಾದರಿಯೊಂದನ್ನು ರೂಪಿಸಿಕೊಟ್ಟಿತು. ಸಾಮಾನ್ಯವಾಗಿ ಉಳಿದ ನೃತ್ಯರೂಪಕ ಪ್ರದರ್ಶನಗಳಲ್ಲಿ ಒಟ್ಟು ಕಥೆಯನ್ನು ಆರಂಭದಲ್ಲಿಯೇ ಹೇಳಲಾಗುತ್ತದೆ. ಆ ಬಳಿಕ ಇಡೀ ನೃತ್ಯರೂಪಕವು ಸಂಪೂರ್ಣವಾಗಿ ಪ್ರದರ್ಶಿತಗೊಳ್ಳುತ್ತದೆ. ಆದರೆ ಈ ನೃತ್ಯರೂಪಕದಲ್ಲಿ ಪ್ರತಿಯೊಂದು ದೃಶ್ಯದ ಆರಂಭದಲ್ಲಿ ಸನ್ನಿವೇಶವನ್ನು ನಿರೂಪಿಸಿ, ಪ್ರಸ್ತುತಪಡಿಸಲಾಗಿತ್ತು. ಇದರಿಂದಾಗಿ ಪ್ರತಿಯೊಂದು ಪಾತ್ರ, ಸನ್ನಿವೇಶ, ಅಭಿನಯಗಳ ಸೂಕ್ಷ್ಮತೆಯನ್ನು ನೋಡುಗರು ಬಹುಸುಲಭವಾಗಿ ಅರ್ಥೈಸಿಕೊಳ್ಳುವಂತಾಯಿತು. ನೃತ್ಯರೂಪಕದ ಯಶಸ್ಸಿಗೆ ಇದೂ ಒಂದು ಪ್ರಧಾನ ಕಾರಣವಾಗಿದೆ.
ವಿಶ್ವನಾಥ ಎನ್‌. ನೇರಳಕಟ್ಟೆ ಇವರಿಂದ ರಚಿತವಾದ ಸಾಹಿತ್ಯಕ್ಕೆ ವಿ| ಸುದರ್ಶನ್‌ ಎಂ. ಎಲ್‌. ಭಟ್‌ ರಾಗ ಸಂಯೋಜಿಸಿದ್ದರು. ನಾಟ್ಯ- ಅಭಿನಯಗಳಿಗೆ ಪೂರಕವಾದ ಹಿಮ್ಮೇಳ ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚುಗೊಳಿಸಿತು. ಹಾಡುಗಾರಿಕೆ(ಶರಣ್ಯಾ ರಾವ್‌), ನಟುವಾಂಗ(ದೀಪ್ತಿ ಮಂಜುನಾಥ್‌), ಮೃದಂಗ(ವಿ| ಶ್ರೀಧರ ರೈ ಕಾಸರಗೋಡು), ಕೊಳಲು(ವಿ| ಸುರೇಂದ್ರ ಆಚಾರ್‌), ಕೀಬೋರ್ಡ್‌(ಡಾ| ದಿನೇಶ್‌ ರಾವ್‌ ಸುಳ್ಯ)ನಲ್ಲಿ ಸಹಕರಿಸಿದರು. ವಿಶ್ವನಾಥ ಎನ್‌. ನೇರಳಕಟ್ಟೆ ನಿರೂಪಿಸಿದರು.

  ಸಂಜನಾ ಕಾಮತ್‌ 

Advertisement
Advertisement

Udayavani is now on Telegram. Click here to join our channel and stay updated with the latest news.

Next